ಬೆಂಗಳೂರು: ಮಾ.22: ಐಟಿ, ಬಿಟಿ ಮೂಲಕ ಜಗದ್ವಿಖ್ಯಾತಿ ಆಗಿರುವ ಬೆಂಗಳೂರು ಮಹಾನಗರವನ್ನು ಬಿಜೆಪಿ ಸರಕಾರವು ಕೊಳ್ಳೆ ಹೊಡೆಯುವ ಎಟಿಎಂ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಬೆಂಗಳೂರಿನ ಹೆಬ್ಬಾಳದಲ್ಲಿ ರಾತ್ರಿ ಪಂಚರತ್ನ ರಥಯಾತ್ರೆ ನಡೆಸುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಸ ವಿಲೇವಾರಿಯಲ್ಲಿ ಅಕ್ರಮ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಅಕ್ರಮ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಅಕ್ರಮ ಎಸಗುತ್ತಿದೆ. ಯೋಜನೆಗಳ ಹೆಸರಿನಲ್ಲಿ ಈ ಸರಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ನಗರ ನೋಡಿದರೆ ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ದುಡ್ಡು ಮಾಡುವ ಎಟಿಎಂ ಆಗಿದೆ. ಇವರಿಗೆಲ್ಲ ಇಲ್ಲಿ ಒಳ್ಳೆಯ ಆದಾಯ ಬರ್ತಾ ಇದೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. ವಿಧಾನಸೌಧವು ಇವರ ಕೈಯ್ಯಲ್ಲಿ ಇದೆ, ಬಿಬಿಎಂಪಿ ಕೂಡ ಇವರ ಕೈಯ್ಯಲ್ಲೆಯೇ ಇದೆ. ಹೀಗಾಗಿ ಲೂಟಿ ಮಾಡಲು ಪೊಗದಸ್ತಾದ ಎಟಿಎಂ ಇವರಿಗೆ ಸಿಕ್ಕಿದೆ ಎಂದು ಹೆಚ್ ಡಿಕೆ ಟೀಕಾ ಪ್ರಹಾರ ನಡೆಸಿದರು.

ಪಂಚರತ್ನ ರಥಯಾತ್ರೆ ಮಾಡುತ್ತಾ ಹೆಬ್ಬಾಳ ಕ್ಷೇತ್ರದಲ್ಲಿ ನೋಡಿಕೊಂಡು ಬಂದೆ. ರಸ್ತೆಯಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಬಿಬಿಎಂಪಿ ಏನು ಮಾಡುತ್ತಿದೆ ಎನ್ನುವುದು ಇದರಿಂದ ಅರ್ಥ ಆಗುತ್ತದೆ ಎಂದು ಕಿಡಿಕಾರಿದರು.
ಪ್ರತಿಮೆ ರಾಜಕಾರಣ:

ಬಿಜೆಪಿ ಸರಕಾರ ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕೆಲವು ವಿಚಾರಗಳು ತಿರುಗುಬಾಣ ಅದ ಮೇಲೆ ಪುತ್ಥಳಿ ಅನಾವರಣದಲ್ಲಿ ರಾಜಕಾರಣ ಮಾಡುತ್ತಿದೆ. ಮಾಡಲಿ ಸಂತೋಷ, ಈಗ ಉರಿಗೌಡ ಮತ್ತು ನಂಜೇಗೌಡ ಅಂತ ಹೇಳ್ತಾ ಇದ್ದಾರೆ. ಹೀಗೆಯೇ ಮಾಡಿದ್ದಾರೆ ಜನ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆ. ಈ ಬಾರಿ ಬಿಜೆಪಿ ಸೋಲುವುದು ಖಚಿತ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಯುಗಾದಿ ಬಂದಿದೆ. ಕೆಳೆದ ಯುಗಾದಿಯಲ್ಲಿ ಬಿಜೆಪಿ ನಾಯಕರಿಗೆ ಅಪ್ಯಾಯಮಾನ ಆಗಿದ್ದ ಹಲಾಲ್ ಕಟ್, ಜಟ್ಕಾ ಕಟ್ ಬಗ್ಗೆ ಮತ್ತೆ ಪ್ರೀತಿ ಹುಟ್ಟಿದೆ. ಮತ್ತೆ ವಿವಾದವನ್ನು ಶುರು ಮಾಡಿಕೊಂಡಿದ್ದಾರೆ. ಆಹಾರ, ವ್ಯಾಪಾರದಲ್ಲಿ ಕೂಡ ಅವರು ಧರ್ಮ ಹುಡುಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಕಳೆದ ಯುಗಾದಿ ಮುಗಿದ ಮೇಲೆ ಇವರು ಯಾಕೆ ಸುಮ್ಮನಿದ್ದರು. ಈಗ ಯಾಕೆ ಮಾಡ್ತಾ ಇದಾರೆ. ಇವರಿಗೆ ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿ ಹೋಗಲು ವಿಷಯಗಳಿಲ್ಲ. ಜನ ಈ ಸಲ ಇವರನ್ನು ನಂಬಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೆಬ್ಬಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೈಯ್ಯದ್ ಮೋಹಿದ್ ಅಲ್ತಾಫ್, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಇದ್ದರು.