ಒಂದೆಡೆ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಠಕ್ಕರ್ ಕೊಡೋಕೆ ಜೆಡಿಎಸ್ ತಂತ್ರ ಹೆಣೆಯುತ್ತಿದೆ. ಇನ್ನೊಂದೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯನ್ನೇ ಇಕ್ಕಟ್ಟಿಗೆ ಸಿಲುಕಿಸಲು ವಿರೋಧಿಗಳು ಒಂದಾಗುತ್ತಿದ್ದಾರೆ. ಅದು ಕೇವಲ ಪರಿಷತ್ ಚುನಾವಣೆಗಂತೂ ಅಲ್ಲ, ಬದಲಾಗಿ ಮುಂದಿನ ವಿಧಾನಸಭಾ ಚುನಾಣೆಯಲ್ಲಿ ದಳಪತಿಯನ್ನ ಹಣಿಯಲು ಭಾರೀ ತಂತ್ರಗಾರಿಕೆ ಹೂಡಿದ್ದಾರೆ.
ಶತ್ರುವಿನ ಶತ್ರು ಮಿತ್ರ ಅನ್ನೋದು ಗಾದೆ ಮಾತು. ಆದರೆ, ಚನ್ನಪಟ್ಟಣದಲ್ಲಿ ಶತ್ರುವನ್ನೇ ಸೋಲಿಸಲು ಶತ್ರುಗಳಿಬ್ಬರು ಒಂದಾಗುತ್ತಿದ್ದಾರೆ. ಹೌದು, ರಾಜಕೀಯದಲ್ಲಿ ಬದ್ಧವೈರಿಗಳು ಎನಿಸಿಕೊಂಡ ಮಾಜಿ ಸಚಿವ ಸಿ.ಪಿ ಯೋಗೇಶ್ವರ ಮತ್ತು ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.
ಹೇಗಾದರೂ ಮಾಡಿ ತಮ್ಮ ರಾಜಕೀಯ ವೈರಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಚುನಾವಣಾ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಬೇಕು. ಸೋಲಿನ ರುಚಿ ತೋರಿಸಬೇಕು ಎಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕ ಹೆಚ್.ಸಿ ಬಾಲಕೃಷ್ಣ ಬಿಜೆಪಿಯ ಸೈನಿಕ ಸಿ.ಪಿ ಯೋಗೇಶ್ವರ್ಗೆ ಗಾಳ ಹಾಕಿದ್ದಾರಂತೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿಕೆ ಮಣಿಸಿ ಕೈ ಬಲ ವೃದ್ಧಿಗೆ ಬಾಲಣ್ಣ ಭಾರೀ ತಂತ್ರಗಾರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮಣಿಸಲು ಬಾಲಕೃಷ್ಣ ಪ್ಲಾನ್ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಚಿವ ಯೋಗೇಶ್ವರ್ ಜತೆ ಈ ಸಂಬಂಧ ಪ್ಲಾನ್ ಮಾಡಿದ್ದಾರೆ. ಇದರ ಸಲುವಾಗಿಯೇ ಖಾಸಗಿ ಕಾರ್ಯಕ್ರಮಕ್ಕೆ ಕರೆಸಿ ಸಿ.ಪಿ ಯೋಗೇಶ್ವರ್ಗೆ ಬಾಲಣ್ಣ ಗಾಳ ಹಾಕಿದ್ದಾರಂತೆ. ಈ ಕುರಿತು ಇಬ್ಬರ ನಡುವೆ ಸುದೀರ್ಘ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಈ ಮಾತುಕತೆಯಲ್ಲಿ ಯೋಗೇಶ್ವರ್ಗೆ ಬಾಲಕೃಷ್ಣ ಓಪನ್ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಕೆಲ ಹೊತ್ತು ನಾತುಕತೆ ನಡೆದಿದೆ. ಈ ವೇಳೆ ಹೇಗಾದರೂ ಕುಮಾರಸ್ವಾಮಿ ಅವರಿಗೆ ಠಕ್ಕರ್ ಕೊಡೋಕೆ ಇಬ್ಬರೂ ಕೈ ಜೋಡಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಚುನಾವಣಾ ಕಣದಲ್ಲಿ ಮಕಾಡೆ ಮಲಗಿಸೋಕೆ ಬದ್ಧವೈರಿಗಳು ಸಿದ್ಧರಾಗಿದ್ದಾರೆ.
ನೀವು ಕಾಂಗ್ರೆಸ್ಗೆ ಬಂದರೆ ಹೆಚ್ಚು ಅನುಕೂಲ. ಚನ್ನಪಟ್ಟಣದಲ್ಲಿ ಗೆಲ್ಲಬಹುದು, ಉತ್ತಮ ಭವಿಷ್ಯವೂ ಇದೆ. ಕಾಂಗ್ರೆಸ್ ನಾಯಕರ ಒಪ್ಪಿಸೋ ಹೊಣೆ ನಂದು. ನೀವು ಒಪ್ಪಿಗೆ ನೀಡಿದ್ರೆ, ನಾನು ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತೇನೆ. ಒಂದು ವೇಳೆ ನೀವು ಕಾಂಗ್ರೆಸ್ನಿಂದ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದರೆ ಗೆಲುವು ನಿಮ್ಮದೇ ಎಂದು ಯೋಗೀಶ್ವರ್ ಬಳಿ ಬಾಲಕೃಷ್ಣಾ ಮನವಿಯೊಂದು ಇಟ್ಟಿದ್ದಾರಂತೆ.
ಇದಕ್ಕೆ ಸದ್ಯಕ್ಕೆ ಇಂತಹ ಯಾವುದೇ ಆಲೋಚನೆ ಇಲ್ಲ. ಇದರ ಬಗ್ಗೆ ಈಗ ಮಾತಾಡೋದು ಬೇಡ. ನನ್ನದು ಮತ್ತು ನಿಮ್ಮ ಉದ್ದೇಶ ಒಂದೇ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಕುರಿತು ಏನಾದರೂ ಪ್ಲಾನ್ ಮಾಡೋಣ ಎಂದು ಬಾಲಕೃಷ್ಣಾ ಅವರಿಗೆ ಯೋಗೀಶ್ವರ್ ಹೇಳಿದ್ದಾರಂತೆ.
ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿ ಇದ್ದಂತೆ ವೈರಿಗಳು ಒಂದಾಗಿ ಹೆಚ್ಡಿಕೆ ಸೋಲಿಸಲು ಮಸಲತ್ತು ಮಾಡಿದ್ದಾರೆ ಎನ್ನಲಾಗಿದೆ. ಒಳಗೊಳಗೆ ದಳಪತಿಗೆ ಹೊಡೆತ ಕೊಡೋಕೆ ಸೈನಿಕ ಮತ್ತು ಬಾಲಣ್ಣ ಒಂದಾಗ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಈಗಿಂದಲೇ ಶಸ್ತ್ರಾಭ್ಯಾಸದಲ್ಲಿ ತೊಡಗಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಕಾರ್ಯಗಾರ ಮಾಡಿ ಅಲ್ಲಿ ಅಭ್ಯರ್ಥಿಗಳನ್ನ ಸಿದ್ಧಗೊಳಿಸ್ತಿದ್ದಾರೆ. ಹೀಗಾಗಿ ಇವರಿಬ್ಬರು ಬಿಡುವ ಬಾಣದಿಂದ ಬಚಾವ್ ಆಗಲು ಕುಮಾರಸ್ವಾಮಿ ಅದ್ಯಾವ ಗುರಾಣಿಯ ಮೊರೆ ಹೋಗುತ್ತಾರೋ ಕಾದು ನೋಡಬೇಕು.