“ಸಂಸತ್ತು ˌ ವಿಧಾನಸಭೆ ಮುಂತಾದ ಶಾಸನ ಸಭೆಗಳಿಗೆ ಹೋಗಬೇಕೆಂದು ಹಂಬಲಿಸುವ ಗಾಣಿಕˌ ಕಬ್ಬಲಿಗˌ ಕುರುಬˌ ಸಮಗಾರˌ ಪಾಟಿದಾರ ಮುಂತಾದ ಶೂದ್ರರು ಅಲ್ಲಿ ಹೋಗಿ ನೇಗಿಲು ಹೂಡುತ್ತಾರೆಯೆ ?”
~ಬಾಲ ಗಂಗಾಧರ ತಿಲಕ್
ಈ ಜನಾಂಗ ನಿಂದನೆಯ ಮತ್ತು ಜಾತಿ ಶ್ರೇಷ್ಟತೆಯ ಹೇಳಿಕೆಯನ್ನು ಬಾಲಗಂಗಾಧರನಾಥ ತಿಲಕ್ ಅವರು ೧೯೧೮ ರಲ್ಲಿ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ನೀಡಿದ್ದರು. ಆದರೆ ಇಂದಿನ ತನಕ ತಿಲಕರ ಅನೇಕ ವಿಚಾರಗಳನ್ನು ಮತ್ತು ಕೆಲವು ಘೋಷಣೆಗಳನ್ನು ತಮಗೆ ಅನುಕೂಲ ಬಂದಂತೆ ತಿರುಚಿ ದೇಶಭಕ್ತಿಯ ಘೋಷಣೆಯಾಗಿ ಮಾರ್ಪಡಿಸುವ ಮೂಲಕ ಶಿಕ್ಷಣದ ವಿವಿಧ ಪಠ್ಯಗಳಲ್ಲಿ ನಮ್ಮ ಮಕ್ಕಳಿಗೆ ಭೋದಿಸಲಾಗುತ್ತಿದೆ. “ಸ್ವರಾಜ್ಯವೆ ನಮ್ಮ ಜನ್ಮಸಿದ್ಧ ಹಕ್ಕು” ಎನ್ನುವ ತಿಲಕರ ಘೋಷಣೆ ಕೂಡ ಜನಪ್ರೀಯಗೊಳಿಸಲಾಗಿದೆ. ಯಾರ ಸ್ವರಾಜ್ಯ ಎನ್ನುವ ಪ್ರಶ್ನೆಗೆ ಉತ್ತರ ಹಾಗೆಯೆ ಉಳಿದುಬಿಡುತ್ತದೆ.
ಪಂಢರಪೂರದಲ್ಲಿ ತಿಲಕರು ಹೇಳಿಕೆ ನೀಡಿದ ಈ ಸಭೆಯಲ್ಲಿ ರಾಷ್ಟ್ರಾಸಂತ ಗಾಡ್ಗೆ ಬಾಬಾ ಕೂಡ ಉಪಸ್ಥಿತರಿದ್ದರು, ಆದರೆ ತಿಲಕರಿಗೆ ವೇದಿಕೆಯ ಮೇಲಿದ್ದವರು ಸಂತ ಗಾಡ್ಗೆ ಬಾಬಾ ಎನ್ನುವ ಬಗ್ಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ವೇದಿಕೆಯ ಮೇಲಿದ್ದ ಸಂತ ಗಾಡ್ಗೆ ಬಾಬಾ ಅವರು ತಕ್ಷಣ ತಮ್ಮ ಆಸನದಿಂದ ಮೇಲೆದ್ದು ತಿಲಕರು ಮಾತನಾಡುತ್ತಿದ್ದಲ್ಲಿ ಧಾವಿಸುತ್ತಾರೆ. ತಿಲಕ್ ಅವರೆˌ ಮಹಾನುಭಾವರಾದ ತಾವು ನಮಗೆ ಮಾರ್ಗದರ್ಶನ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ. ಭಾರೀ ಜನಸಮೂಹದ ಮುಂದೆ ಸಂತ ಗಾಡ್ಗೆ ಬಾಬಾ ಅವರು ಮಾಡಿದ ಮನವಿಯನ್ನು ನಿರಾಕರಿಸಲು ತಿಲಕರಿಗೆ ಸಾಧ್ಯವಾಗುವುದಿಲ್ಲ. ಆಗ ಬಾಬಾ ಅವರು ತಿಲಕರ ಕೈಯಲ್ಲಿದ್ದ ಮೈಕನ್ನು ತಮ್ಮ ಕೈಗೆ ತೆಗೆದುಕೊಂಡು, “ತಿಲಕ್ ಅವರೆ, ತಪ್ಪು ನನ್ನದು, ನಾನು ಜಾತಿಯಲ್ಲಿ ಶೂದ್ರನಾದ ಅಗಸ, ಬಟ್ಟೆಯನ್ನು ತೊಳೆಯುವವ. ನಾನು ನಿಮ್ಮ ಬಟ್ಟೆಗಳನ್ನು ತಲೆಮಾರುಗಳಿಂದ ತೊಳೆದುಕೊಂಡು ಬಂದವ. ನಾನು ಹೇಗೆ ಈ ಅಮಾಯಕ ಜನರನ್ನು ಮಾರ್ಗದರ್ಶನ ಮಾಡಲಿ ಎನ್ನುವ ಮೂಲಕ ತಿಲಕರ ಮೈಯಲ್ಲಿ ಸಣ್ಣಗೆ ಬೆವರಿಳಿಯುವಂತೆ ಮಾಡುತ್ತಾರೆ.
ನಾನು ಹಾಗು ನನ್ನಂತೆ ಅನೇಕರು ಶತಶತಮಾನಗಳಿಂದ ನಿಮ್ಮವರ ಹೊಲಸನ್ನು ತೊಳೆಯುತ್ತ ಬದುಕು ಸಾಗಿಸಿದವರು ನಾವು ಮಡಿವಾಳರು. ನ್ಯಾಯೋಚಿತವಾಗಿ ನನಗೆ ಜನರನ್ನು ಮಾರ್ಗದರ್ಶನ ಮಾಡುವ ಅರ್ಹತೆ ಇಲ್ಲ. ಜನರನ್ನು ಮಾರ್ಗದರ್ಶನ ಮಾಡುವುದು ನನ್ನ ಜಾತಿಯ ಕೆಲಸವೂ ಅಲ್ಲ. ಮೈಬಗ್ಗಿಸಿˌ ಬೆವರು ಸುರಿಸಿ ದುಡಿಯುವುದನ್ನಷ್ಟೆ ನಾನು ಮತ್ತು ನನ್ನ ಶೂದ್ರ ಜನಾಂಗ ಬಲ್ಲೆವು. ನಾನು ಹೇಗೆ ಮಾರ್ಗದರ್ಶನ ಮಾಡಲಿ ಎಂದು ಪ್ರಶ್ನಿಸುತ್ತಾರೆ. ಶಾಲೆಗೂ ಹೋಗದ ಸಂತ ಗಾಡ್ಗೆ ಬಾಬಾ ಅವರಿಗೆ ಮೇಲ್ವರ್ಗದ ತಿಲಕರಂತವರ ಮನಸ್ಸಿನಲ್ಲಿರುವ ಜಾತಿವಾದದ ವಿಷ ಮತ್ತು ಕುಠಿಲ ಹುನ್ನಾರ ಅರ್ಥವಾಗುತ್ತಿತ್ತು. ಆದರೆ ದುರಂತದ ಸಂಗತಿ ಏನೆಂದರೆ ಇಂದು ಪಿಎಚ್ಡಿ ತನಕ ಉನ್ನತ ಶಿಕ್ಷಣ ಪಡೆದ ಶೂದ್ರರಿಗೆ ಮೇಲ್ವರ್ಗದವರು ಮಾಡುವ ಹುನ್ನಾರಗಳು ಅರ್ಥವಾಗದಿರುವುದು ದುರಂತ.
ಮುಂದುವರೆದುˌ ಸಂತ ಗಾಡ್ಗೆ ಬಾಬಾ ಅವರು ತಿಲಕರಿಗೆ: “ತಿಲಕ್ ಮಹಾರಾಜ್ˌ ನೀವು ಏನು ಬೇಕಾದರೂ ಮಾಡಿ, ಮೊದಲು ನಮ್ಮನ್ನು ಬಾಹ್ಮಣರನ್ನಾಗಿ ಮಾಡಿ” ಎಂದು ವಿನಂತಿಸುತ್ತಾರೆ. ಈ ಮಾತು ತಿಲಕರ ಮುಖಕ್ಕೆ ರಪ್ಪನೆ ಬಡೆತಂತಾಗುತ್ತದೆ. ರಾಷ್ಟ್ರಸಂತ ಗಾಡ್ಗೆ ಬಾಬಾ ಅವರು ಈ ಮಾತನ್ನು ಹೇಳುವುದರ ಹಿಂದೆ ಬಹುದೊಡ್ಡ ಅರ್ಥ ಅಡಗಿತ್ತು. ಬ್ರಾಹ್ಮಣರನ್ನು ಹೊರತುಪಡಿಸಿ ಶೂದ್ರರು ಯಾರೂ ಶಾಸನ ಸಭೆಗಳಿಗೆ ಹೋಗುವ ಅರ್ಹತೆ ಹೊಂದಿಲ್ಲ ಎನ್ನುವ ಜಾತಿ ವಿಷ ತುಂಬಿದ ತಿಲಕರ ಮಾತಿಗೆ ಬಾಬಾ ವೇದಿಕೆಯ ಮೇಲಿಂದಲೇ ಪ್ರತ್ಯುತ್ತರ ನೀಡಿದ್ದರು. ಶೂದ್ರರಾದ ನಾವೆಲ್ಲ ಶಾಸನ ಸಭೆಗಳಿಗೆ ಹೋಗುವ ಅರ್ಹತೆ ಹೊಂದಿಲ್ಲ ಎಂದಾದರೆ ನಮ್ಮನ್ನೆಲ್ಲ ಬ್ರಾಹ್ಮಣರನ್ನಾಗಿ ಮಾಡಿರಿ ಪುಣ್ಯ ಕಟ್ಟಿಕೊಳ್ಳಿ. ಬ್ರಾಹ್ಮಣೇತರರು ಶಾಸಸ ಸಭೆಗಳಿಗೆ ಹೋಗುವುದನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದ ತಿಲಕರ ಮುಖದಲ್ಲಿ ಸಂತ ಗಾಡ್ಗೆ ಬಾಬಾರವರ ಮಾತುಗಳನ್ನು ಕೇಳಿ ಬೆವರಿಳಿಯಲಾಭಿಸಿತ್ತು. ಗಾಡ್ಗೆ ಬಾಬಾರವರ ಸಾವಾಲು ದಾಟಿಯ ಮಾತುಗಳನ್ನು ಯಾವತ್ತೂ ನಿರೀಕ್ಷಿಸದ ತಿಲಕ್ ವೇದಿಕೆಯ ಮೇಲೆ ನಿರುತ್ತರರಾಗಿ ನಿಲ್ಲಬೇಕಾಗುತ್ತದೆ.
ತಿಲಕರ ಈ ತರಹದ ಕುಹಕˌ ಹಾಗು ಜಾತಿ ಶ್ರೇಷ್ಠತೆಯ ಮಾತುಗಳು ಇದೇ ಮೊದಲೇನಾಗಿರಲಿಲ್ಲ. ಅವರು ಬ್ರಿಟೀಷರು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದಾಗಲು ಕೂಡ ಶೂದ್ರ ಮತ್ತು ಸ್ತ್ರೀಯರಿಗೆ ಏತಕ್ಕೆ ಶಿಕ್ಷಣ ಎಂದು ಪ್ರಶ್ನಿಸಿದ್ದರು. ಸ್ತ್ರೀಯರು ಶಿಕ್ಷಣ ಪಡೆದರೆ ಮನೆ ಕೆಲಸ ಯಾರು ಮಾಡುವವರು ಎನ್ನುವುದು ತಿಲಕರ ವಾದವಾಗಿತ್ತು. ಬ್ರಿಟೀಷರ ಶಿಕ್ಷಣದ ಸಾರ್ವತ್ರೀಚರಣದಿಂದ ತಿಲಕರು ತೀವ್ರವಾಗಿ ಕ್ಷೋಬೆಗೊಳಗಾಗಿದ್ದರು. ಈ ನೆಲದ ಶೂದ್ರ ವರ್ಗಕ್ಕೆ ಶಿಕ್ಷಣ ಕೈಗೆಟುಕುವಂತಾಗಿದ್ದು ತಿಲಕರು ಮತ್ತವರ ಕುಲಬಾಂಧವರಿಗೆ ತಾಳಿಕೊಳ್ಳಲು ಆಗಲಿಲ್ಲ. ಬ್ರಿಟೀಷರು ಗುರುಕುಲ ಶಿಕ್ಷಣವನ್ನು ಹಾಳು ಮಾಡಿದರುˌ ಹಿಂದೂಗಳ ಮೇಲೆ ಕ್ರೈಸ್ತ ಮತವನ್ನು ಹೇರುತ್ತಿದ್ದಾರೆ ಎಂದು ಇವರು ಅಪಪ್ರಚಾರದಲ್ಲಿ ತೊಡಗಿದ್ದರು. ತಿಲಕರು ಮೇಲ್ನೋಟಕ್ಕೆ ತಾವೊಬ್ಬ ವಿದ್ಯಾವಂತರಂತೆ ಕಾಣುತ್ತಿದ್ದರಾದರೂ ಅವರೊಬ್ಬ ತೀವ್ರ ಸನಾತನವಾದಿ ಆಗಿದ್ದರು ಎನ್ನುವುದು ಅವರ ಅನೇಕ ಹೇಳಿಕೆಗಳಿಂದ ಊಹಿಸಬಹುದಾಗಿದೆ.
ಮಹಾತ್ಮಾ ಗಾಂಧಿಯವರು ತಿಲಕರ ಈ ಫ್ಯಾಸಿಷ್ಟ್ ಗುಣವನ್ನು ನೋಡಿಯೇ ಸ್ವತಂತ್ರ ಚಳುವಳಿಯಲ್ಲಿ ಅವರಿಂದ ಅಂತರ ಕಾಯ್ದುಕೊಂಡಿದ್ದರು ಮತ್ತು ತಿಲಕರನ್ನು ಸಾಕಷ್ಟು ದೂರ ಇಟ್ಟಿದ್ದರು. ಮಹಾರಾಷ್ಟ್ರದಲ್ಲಿ ಸನಾತನಿಗಳು ತಿಲಕರನ್ನು ಮಹಾನ್ ದೇಶಭಕ್ತರೆಂದು ಬಿಂಬಿಸುವ ಕೆಲಸ ಆಗಿನಿಂದಲೇ ಮಾಡಿಕೊಂಡು ಬಂದಿದ್ದಾರೆ. ಶಿವಾಜಿ ಮಾಹಾರಾಜರ ಜಯಂತಿಯನ್ನು ಮೊದಲು ಆರಂಭಿಸಿದ್ದು ತಿಲಕರು ಎನ್ನುವ ಸುಳ್ಳು ಸುದ್ಧಿಯನ್ನು ಕೂಡ ಅಲ್ಲಿನ ಸನಾತನಿಗಸು ತೇಲಿ ಬಿಟ್ಟಿದ್ದರು. ಆದರೆ ಮಹಾತ್ಮ ಜ್ಯೋತಿಬಾ ಫುಲೆಯವರು ಮೊದಲ ಬಾರಿ ಶಿವಾಜಿ ಜಯಂತಿ ಐದು ದಿನಗಳ ವರೆಗೆ ಆಚರಿಸಲು ಆರಂಭಿಸಿದ್ದರು. ಅದನ್ನು ವಿರೋಧಿಸುವ ಉದ್ದೇಶದಿಂದ ತಿಲಕರು ಐದು ದಿನ ಸಾರ್ವಜನಿಕ ಗಣೇಶ ಉತ್ಸವವನ್ನು ಆರಂಭಿಸಿದರು ಎನ್ನುವ ಸಂಗತಿ ಬಹಳ ಜನರಿಗೆ ತಿಳಿದಿಲ್ಲ. ಆದರೆ ಸನಾತನಿಗಳು ತಿಲಕರನ್ನು ಒಬ್ಬ ಅಪ್ಪಟ ದೇಶಭಕ್ತರನ್ನಾಗಿ ವೈಭವೀಕರಿಸಿರುವ ಕುರಿತು ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಇಂದಿನ ಉತ್ತರ ಕರ್ನಾಟಕ ಭಾಗ ಭಾಷಾವಾರು ಪ್ರಾಂತ್ಯಗಳ ಪುನಃರಚನೆಗೆ ಮುಂಚೆ ಅಂದು ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ರಾವಬಹಾದ್ದೂರ ಅರಟಾಳ್ ರುದ್ರಗೌಡರು ತುಂಬಾ ದಕ್ಷ ಮತ್ತು ನಿಷ್ಟುರವಾದ ಅಧಿಕಾರಿಯಾಗಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮೇಲ್ವರ್ಗದ ದೇಶಪಾಂಡೆˌ ಮಹಾಜನ್ ಮುಂತಾದವರ ಒಂದು ತಂಡ ಬಡ ರೈತರನ್ನು ಸರಕಾರಿ ಕೆಲಸ ಮಾಡಿಸಿ ಕೊಡುವುದಾಗಿ ಸುಲಿಗೆ ಮಾಡುತ್ತಿದ್ದರು. ಈ ಸಂಗತಿ ಅರಟಾಳ್ ರುದ್ರಗೌಡರ ಕಿವಿಗೆ ಬಿತ್ತು. ಮುಂದೆ ಅರಟಾಳ್ ರುದ್ರಗೌಡರು ಈ ದೇಶಪಾಂಡೆ ಪಟಾಲಂನ ಆಟ ನಡೆಯಂತೆ ರೈತರಿಗೆ ನೇರವಾಗಿ ಭೇಟಿ ಆಗುತ್ತ ಅವರ ಸಮಸ್ಯೆಗಳನ್ನು ಬಗೆಹರಿಸತೊಡಗಿದರು. ಇದರಿಂದ ಸಿಟ್ಟಿಗೆದ್ದ ಈ ಪಟಾಲಂ ತಮ್ಮ ಕುಲಬಾಂಧವರಾಗಿದ್ದ ತಿಲಕರ ಹತ್ತಿರ ಹೋಗಿ ರುದ್ರಗೌಡರು ಜಾತಿವಾದಿˌ ಜನರ ಕೆಲಸ ಸರಿಯಾಗಿ ಮಾಡುವುದಿಲ್ಲ ಮುಂತಾಗಿ ಚಾಡಿ ಹೇಳಿ ಅದನ್ನು ತಿಲಕ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಕೇಸರಿ ಮತ್ತು ಮರಾಠ ಪತ್ರಿಕೆಯಲ್ಲಿ ಕಂತುಗಳಲ್ಲಿ ಸುದ್ಧಿ ಬರುವಂತೆ ನೋಡಿಕೊಳ್ಳುತ್ತಾರೆ.
ಅದಕ್ಕೆ ಪ್ರತಿಯಾಗಿ ದೇಶಪಾಂಡೆ ಪಟಾಲಂ ತಿಲಕರ ಪತ್ರಿಕೆಗೆ ಚಂದಾ ಸಂಗ್ರಹ ಮತ್ತು ತಿಲಕರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ಅರಟಾಳ ರುದ್ರಗೌಡರ ಚರಿತ್ರೆ ಎನ್ನುವ ಪುಸ್ತಕದಲ್ಲಿ ಗೌಡರ ಸಮಕಾಲೀನರಾದ ಬಸವಯ್ಯ ಸ್ವಾಮಿಯವರು ದಾಖಲಿಸಿದ್ದಾರೆ. ಈ ಪುಸ್ತಕವನ್ನು ಕೆಎಲ್ ಇ ಸಂಸ್ಥೆಯ ಪ್ರಸಾರಾಂಗವು ಪ್ರಕಟಿಸಿದೆ. ಆ ಪುಸ್ತಕದಲ್ಲಿ ‘ತಿಲಕರ ಇನ್ನೊಂದು ಮುಖ’ ಎನ್ನುವ ಒಂದು ವಿಭಾಗವನ್ನೆ ಮಾಡಿರುವ ಬಸವಯ್ಯ ಸ್ವಾಮಿಗಳು ರುದ್ರಗೌಡರು ದಕ್ಷ ಅಧಿಕಾರಿಯಾಗಿದ್ದು ಅವರ ಮೇಲೆ ದೂರು ಹೇಳಿದವರು ದಗಲ್ಬಾಜಿಗಳು ಎಂದು ಅನೇಕ ಜನರು ತಿಲಕರಿಗೆ ಪತ್ರ ಬರೆದರೂ ಕಿವಿಗೆ ಹಾಕಿಕೊಳ್ಳದ ತಿಲಕರು ಗೌಡರ ಬಗ್ಗೆ ಕಂತಿನಲ್ಲಿ ಮಾನಹಾನಿಕರ ಸುಳ್ಳು ಸುದ್ದಿಯನ್ನು ಬರೆದಿದ್ದರು ಎಂದು ನಮೂದಿಸಿದ್ದಾರೆ. ಮುಂದೆ ತಿಲಕರ ಪತ್ರಿಕೆಯಲ್ಲಿ ಬಂದ ಸುಳ್ಳು ಸುದ್ದಿಯನ್ನು ಪಿರ್ಯಾದು ಆಗಿ ಸ್ವೀಕರಿಸಿದ ಬ್ರಿಟೀಷ್ ಸರಕಾರ ರುದ್ರಗೌಡರ ಮೇಲೆ ಸ್ವಯಂಪ್ರೇರಿತ ಇಲಾಖಾ ವಿಚಾರಣೆಯನ್ನು ಸಡೆಸಿ ಗೌಡರ ಮೇಲೆ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಘೋಷಿಸಿದ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ತಿಲಕರು ಸ್ವಜಾತಿ ಬಾಂಧವರ ಹಿತಾಸಕ್ತಿ ಮತ್ತು ಅವರು ಕೊಡಮಾಡುವ ಹಣˌ ಅಗತ್ಯ ವಸ್ತು ಮತ್ತು ಪತ್ರಿಕೆಯ ಚಂದಾ ಆಶೆಗೆ ಬಿದ್ದು ಸುಳ್ಳು ಸುದ್ದಿ ಬರೆದಿದ್ದರು ಎನ್ನುವ ಮಾತು ರುದ್ರಗೌಡರ ಚರಿತ್ರೆ ಎನ್ನುವ ಪುಸ್ತಕದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ತಿಲಕರು ಸ್ವತಂತ್ರ ಹೋರಾಟಕ್ಕಾಗಿ ಜೈಲಿಗೆ ಹೋಗದೆ ಈ ತರ ಸುಳ್ಳು ಸುದ್ದಿ ಬರೆದು ಮಾನಹಾನಿ ಕೇಸಿನಲ್ಲಿ ಜೈಲಿಗೆ ಹೋಗಿಬಂದು ಸ್ವತಂತ್ರಕ್ಕಾಗಿ ಜೈಲಿಗೆ ಹೋದವರು ಎಂದು ಹೇಳಿಕೊಂಡರು ಅಂತಲೂ ಆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಬಾಲಗಂಗಾಧರನಾಥ ತಿಲಕರು ಒಟ್ಟಾರೆಯಾಗಿ ತಮ್ಮ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಿಸುತ್ತಿದ್ದರುˌ ಜಾತಿಯ ಶ್ರೇಷ್ಠತೆಯಿಂದ ಶೂದ್ರರು ಮತ್ತು ಸ್ತ್ರೀಯರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದರು ಎನ್ನುವ ಮಾತು ಒಂದೆರಡು ಪುಸ್ತಕಗಳಲಲ್ಲದೆ ಅನೇಕ ಜನರು ತಮ್ಮ ಪುಸ್ತಕಗಳಲ್ಲಿ ಬರೆದದ್ದಾರೆ. ಹಾಗಾದರೆ ತಿಲಕರನ್ನು ಸ್ವತಂತ್ರ ಹೋರಾಟಗಾರರಾಗಿ ಬಿಂಬಿಸಿದ್ದು ಜಾತಿ ಕಾರಣಕ್ಕಾಗಿಯೆ ಎನ್ನುವ ಪ್ರಶ್ನೆ ಮತ್ತು ಸಂಶಯ ಜನರಲ್ಲಿ ಮೂಡುವುದು ಸಹಜ ಅಲ್ಲವೆ !
~ ಡಾ. ಜೆ ಎಸ್ ಪಾಟೀಲ.