ಸಾಮಾನ್ಯವಾಗಿ ದೇವಸ್ಥಾನಗಲ್ಲಿ ದೇವರಿಗೆ ನೈವೇದ್ಯ, ಪ್ರಸಾದ ರೂಪದಲ್ಲಿ ವಿವಿಧ ಆಹಾರಗಳನ್ನು ನೀಡಲಾಗುತ್ತದೆ. ದೇಶದ ವಿವಿಧ ಭಾಗದ ದೇವಸ್ಥಾನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಭಕ್ತರು ಸಹ ವಿವಿಧ ಬಗೆಯ ಖಾದ್ಯಗಳನ್ನ ದೇವರಿಗೆ ನೈವೇದ್ಯವಾಗಿ ಬಳಸುತ್ತಾರೆ. ಆದರೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾ ಮಠ ಬಹಳ ವಿಶಿಷ್ಟ ಆಚರಣೆಯ ಮೂಲಕ ಎಲ್ಲರ ಗಮನ ಸೆಳೆಯತ್ತದೆ. ಇಲ್ಲಿ ದೇವರಿಗೆ ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದದ ರೂಪದಲ್ಲಿ ಮದ್ಯವನ್ನೇ ನೀಡಲಾಗುತ್ತದೆ. ಮಹಿಳೆಯರು ಹಿರಿಯರು ಕಿರಿಯರು ಎಂದು ಬೇದ ಭಾವವಿಲ್ಲದೆ ಎಲ್ಲರೂ ಮದ್ಯವನ್ನು ತೀರ್ಥ ರೂಪದಲ್ಲಿ ಸ್ವೀಕರಿಸುತ್ತಾರೆ. ಈ ಆಚರಣೆ ವಿಚಿತ್ರ ಎನಿಸಿದರು ನಂಬಲೇಬೇಕಾದ ಸಂಗತಿಯಾಗಿದೆ. ಅಷ್ಟೇ ಅಲ್ಲ, ಈ ಬಬಲಾದಿ ಸದಾಶಿವ ಮುತ್ಯಾ ಜಾತ್ರೆಯ ವೇಳೆ ಖುದ್ದು ಅಬಕಾರಿ ಇಲಾಖೆಯೇ ತಾತ್ಕಾಲಿಕ ಟೆಂಟ್ ಹಾಕಿ ವಿವಿಧ ಬ್ರಾಂಡಿನ ಮದ್ಯ ಮಾರಾಟ ಮಾಡುತ್ತದೆ. ಈ ಮೂಲಕ ಸರ್ಕಾರಕ್ಕೆ ಲಕ್ಷ ಲಕ್ಷ ಆದಾಯ ತರುತ್ತದೆ.
ಕಾಲ ಜ್ಞಾನದ ಹೇಳಿಕೆ ಹಾಗೂ ವಿಶಿಷ್ಟ ಆಚರಣೆಯಿಂದ ಅಪಾರ ಭಕ್ತರಿನ್ನು ಹೊಂದಿರುವ ಮಠಕ್ಕೆ ಪ್ರತಿ ದಿನವೂ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಶಿವರಾತ್ರಿ ಸಮಯದಲ್ಲಿ ಐದು ದಿನಗಳ ಕಾಲ ನಡೆಯುವ ಜಾತ್ರೆಯ ವೇಳೆ ಮದ್ಯದ ಹೊಳೆಯ ಹರಿಯುತ್ತದೆ. ಲಕ್ಷಾಂತರ ಜನರು ದೇಶದ ವಿವಿಧ ಭಾಗಗಳಿಂದ ಜಾತ್ರೆಗೆ ಆಗಮಿಸುವವರ ತಮ್ಮ ತಮ್ಮ ಶಕ್ತಿಗೆ ಅನುಗುಣವಾಗಿ ವಿವಿಧ ಬ್ರ್ಯಾಂಡ್ ನ ಮದ್ಯವನ್ನು ತರುತ್ತಾರೆ. ಪ್ರತಿ ವರ್ಷ ಬಬಲಾದಿ ಗ್ರಾಮದಲ್ಲಿ ಸಿದ್ದಿ ಪುರುಷ, ಕಾಲಜ್ಞಾನಿ ಸದಾಶಿವ ಮುತ್ಯಾನವರ ಜಾತ್ರೆಯನ್ನ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತದೆ.
ಜಾತ್ರೆಗೆ ಬರುವ ಸಾವಿರಾರು ಭಕ್ತರು ತೆಂಗಿನಕಾಯಿ, ಹೂವಿನ ಜೊತೆಗೆ ಸಾರಾಯಿ ಬಾಟಲಿಗಳನ್ನ ಜೊತೆಗೆ ತಂದಿರ್ತಾರೆ. ಸರತಿ ಸಾಲಿನಲ್ಲಿ ನಿಂತು ತಮ್ಮ ಕೈಯಲ್ಲಿನ ಸಾರಾಯಿ ಬಾಟಲಿಗಳಿಂದ ಒಂದಿಷ್ಟು ಮಧ್ಯವನ್ನ ಸದಾಶಿವ ಮುತ್ಯಾ, ಹಾಗೂ ಶಕ್ತಿ ದೇವತೆ ಚಂದ್ರವ್ವ ತಾಯಿ ಗದ್ದುಗೆಯ ಎದುರಿಗಿಟ್ಟಿರುವ ಹಿತ್ತಾಳೆ ಪಾತ್ರೆಗೆ ಸುರಿಯುತ್ತಾರೆ. ಅಲ್ಲದೆ ಸಾರಾಯಿಯನ್ನೆ ಪ್ರಸಾದದ ರೂಪದಲ್ಲಿ ಸೇವಿಸುತ್ತಾರೆ. ಈ ಮೂಲಕ ತಮ್ಮ ಭಕ್ತಿಯನ್ನ ಸಲ್ಲಿಸುತ್ತಾರೆ.

ಇನ್ನು ಇಲ್ಲಿ ಬರುವ ಭಕ್ತರು ಹೀಗೆ ಸಾರಾಯಿಯನ್ನ ಪವಾಡ ಪುರುಷ, ಕಾಲಜ್ಞಾನಿ ಸದಾಶಿವ ಅಜ್ಜನವರಿಗೆ ನೈವೇಧ್ಯವಾಗಿ ಅರ್ಪಿಸೋದರ ಹಿಂದೆ ವಿಶಿಷ್ಠ ಹಿನ್ನಲೆ ಅಡಗಿದೆ. ಅದೇನಂದ್ರೆ ನೂರಾರು ವರ್ಷಗಳ ಹಿಂದೆ ಆಧ್ಯಾತ್ಮ ಸಾಧನಾಗಿದ್ದ ಸದಾಶಿವ ಮುತ್ಯಾ ಬಬಲಾದಿ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರು ಮುತ್ಯಾನ ವಾಸಕ್ಕೆ ಅಡ್ಡಿ ಪಡೆಸಿದ್ದರು. ಈ ವೇಳೆ ಸದಾಶಿವ ಮುತ್ಯನವರು ತಮ್ಮ ಬಳಿಯ ಅಗಾದ ಶಕ್ತಿಯಿಂದ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿಯ ನೀರನ್ನೆಲ್ಲ ಸಾರಾಯಿಯನ್ನಾಗಿ ಪರಿವರ್ತಿಸಿ ಪವಾಡ ಸೃಷ್ಠಿಸಿದ್ದಂತೆ. ಮುತ್ಯಾನ ಪವಾಡ ಕಂಡಿದ್ದ ಗ್ರಾಮಸ್ಥರು ಅಂದಿನಿಂದ ಸದಾಶಿವ ಮುತ್ಯಾನನ್ನ ಪೂಜಿಸಲು ಆರಂಭಿಸಿದ್ದರಂತೆ. ಹೀಗಾಗಿ ಜಾತ್ರೆಯಲ್ಲಿ ಭಕ್ತರು ಸಾರಾಯಿಯನ್ನೆ ಮುತ್ಯಾನ ಗದ್ದುಗೆಗೆ ಅರ್ಪಿಸುತ್ತಾರೆ.
ಪ್ರತಿವರ್ಷ ಇಲ್ಲಿ ನಡೆಯುವ ಲಕ್ಷಾಂತರ ರುಪಾಯಿ ಮೌಲ್ಯದ ಸಾರಾಯಿ ಮಾರಾಟವಾಗುತ್ತದೆ. ಜಾತ್ರೆಯ ಸಮಯದಲ್ಲಂತೂ ಪ್ರತಿದಿನಕ್ಕಿಂತಲೂ ನೂರು ಪಟ್ಟು ಅಧಿಕ ಮದ್ಯ ಮಾರಾಟವಾಗುತ್ತದೆ. ಈ ಹಿಂದೆ ಇದೇ ಜಾತ್ರೆಯಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ಮಾರಾಟವಾಗ್ತಿತ್ತು. ಇದಕ್ಕೆ ಕಡಿವಾಣ ಹಾಕಲು ದೃಷ್ಠಿಯಿಂದ ಅಬಕಾರಿ ಇಲಾಖೆಯೇ ಸಾರಾಯಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಖುದ್ದು ಇಲಾಖೆಯ ಅಧಿಕಾರಿಗಳು ಇಲ್ಲಿ ಟೆಂಟ್ ಹಾಕಿ ಜಾತ್ರೆಯ ಐದು ದಿನಗಳ ಕಾಲ ಮದ್ಯಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಜಾತ್ರೆಯ ದಿನದಲ್ಲಿ ಪ್ರತಿದಿನ 12 ರಿಂದ 15 ಲಕ್ಷ ರೂಪಾಯಿ ವಹಿವಾಟು ನಡೆಯುತ್ತದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷ ಲಕ್ಷ ಆದಾಯ ಬರುತ್ತದೆ. ಈ ಮೂಲಕ ಮಠದ ಆಚರಣೆ ಸರ್ಕಾರಕ್ಕೆ ಒಂದು ರೀತಿಯಲ್ಲಿ ಆದಾಯದ ಮೂಲವಾಗಿದೆ.