ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಿ.ಇಡಿ ಪದವಿ ಹೊಂದಿರುವವರು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಈ ಹಿಂದೆ ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.

ಈ ಕುರಿತು ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ನ್ಯಾಯಮೂರ್ತಿ ಸುಧಾಂಶು ದುಲಿಯಾ ಅವರನ್ನೊಳಗೊಂಡ ಪೀಠವು, ಭಾರತೀಯ ಸಂವಿಧಾನದ 21ಎ ಮತ್ತು ಶಿಕ್ಷಣ ಹಕ್ಕು ಕಾಯಿದೆ 2009ರ ಅಡಿಯಲ್ಲಿ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದರಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣವನ್ನು ಒಳಗೊಂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಆಗಸ್ಟ್ 15ರ ಬಳಿಕ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ.!?
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಿ.ಇಡಿ ಪದವಿ ಪಡೆದವರು ಪ್ರಾಥಮಿಕ ತರಗತಿಗಳಿಗೆ ಬೋಧನೆಗೆ ಅಗತ್ಯವಾದ ಮೂಲಭೂತ ಶಿಕ್ಷಣದ ಮಿತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.
ಈ ಹಿನ್ನಲೆಯಲ್ಲಿ ಬಿ.ಇಡಿ ಪದವೀಧರರು 1 ರಿಂದ 5ನೇ ತರಗತಿಗೆ ಬೋಧನೆ ಮಾಡಲು ಅರ್ಹರಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಾಥಮಿಕ ಹಂತದ ತರಗತಿಗಳಲ್ಲಿ ಕಲಿಸಲು ಬಿ.ಇಡಿ ಅರ್ಹತೆಯ ಅಗತ್ಯ ಇಲ್ಲ. ಈ ತರಗತಿಗಳಲ್ಲಿ ಕಲಿಸಲು ಭಿನ್ನವಾದ ಅರ್ಹತೆ ಅಗತ್ಯ ಇದೆ. ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಬಿ.ಇಡಿಯ ವಿದ್ಯಾರ್ಹತೆ ಇರುವವರು ಆಯ್ಕೆ ಆಗಿದ್ದರೆ ನೇಮಕವಾಗಿ ಎರಡು ವರ್ಷಗಳೊಳಗೆ ಬೋಧನೆಗೆ ಸಂಬಂಧಿಸಿದ ಕೋರ್ಸ್ ಒಂದನ್ನು ಪೂರ್ಣಗೊಳಿಸಬೇಕು ಎಂದು ಬೋಧನಾ ಶಿಕ್ಷಣ ರಾಷ್ಟ್ರೀಯ ಪರಿಷತ್ (ಎನ್ಸಿಟಿಇ) ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ.
ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡುವ ಮೂಲಕ ಸರ್ಕಾರವು ಸಂವಿಧಾನ ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ. ಶಿಕ್ಷಕರಿಗೆ ಸಂಬಂಧಿಸಿದಂತೆ ಬೋಧನಾ ಕೌಶಲವು ಅತ್ಯಂತ ಮಹತ್ವದ್ದಾಗಿದೆ ಎಂದು ಕೋರ್ಟ್ ಹೇಳಿದೆ.
ಬಿ.ಇಡಿ ಅನ್ನು ಅರ್ಹತೆಯಾಗಿ ನಿಗದಿ ಮಾಡಲು ಸರ್ಕಾರ ನೀಡಿರುವ ಒಂದೇ ಒಂದು ಸಮರ್ಥನೆ ಏನೆಂದರೆ, ಇದು “ಉನ್ನತ ಅರ್ಹತೆ’ ಎಂಬುದಾಗಿದೆ. ನೀತಿಗೆ ಸಂಬಂಧಿಸಿದ ನಿರ್ಧಾರ ಎಂದು ಪರಿಗಣಿಸಿದರೂ ಇದು ಸರಿಯಾದ ಕ್ರಮ ಅಲ್ಲ ಎಂದು ಕೋರ್ಟ್ ಹೇಳಿದೆ.
ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲು ಪ್ರಾಥಮಿಕ ಶಿಕ್ಷಣ ಡಿಪ್ಲೊಮಾವೇ (ಡಿ.ಎಡ್) ಅರ್ಹತೆಯೇ ಹೊರತು ಬಿ.ಇಡಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದ್ದಾಗಿಯೂ ಪೀಠ ತಿಳಿಸಿದೆ.