ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದೇವೆ. ಘೋಷಣೆಗಳೊಂದಿಗೆ, ಭರವಸೆಗಳೊಂದಿಗೆ, ಆಶಾವಾದದ ಕಿರಣಗಳೊಂದಿಗೆ ಸಮಾಜ ಮತ್ತು ಸರ್ಕಾರ ಸಮಸ್ತ ಮಹಿಳೆಯರಿಗೆ ವಿಮೋಚನೆಯ ಹಾದಿಗಳನ್ನು ತೋರಿಸಲೆತ್ನಿಸುತ್ತಿದೆ. ಬಹುಮುಖಿ ಸಂಸ್ಕೃತಿಯೊಂದಿಗೆ ಅನುಸಂಧಾನ ನಡೆಸುತ್ತಲೇ ಭಾರತದ ಮಹಿಳೆಯರು ಎದುರಿಸುತ್ತಿರುವ ಬಹು ಆಯಾಮಗಳ ಆಕ್ರಮಣಗಳಿಗೆ ಮುಖಾಮುಖಿಯಾಗುತ್ತಿದ್ದಾರೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ನಿರಂತರ ದಾಳಿ ಮತ್ತು ವಂಚನೆಯನ್ನು ಎದುರಿಸುತ್ತಲೇ ಇರುವ ಮಹಿಳೆಗೆ ಈ ಬಾರಿಯ ಮಹಿಳಾ ದಿನದ ಸಂದರ್ಭದಲ್ಲಿ ಶೈಕ್ಷಣಿಕ ದಾಳಿ ಪ್ರಧಾನವಾಗಿ ಕಾಣುತ್ತಿದೆ. ಒಂದು ಮತ ಶ್ರದ್ಧೆ, ಒಂದು ಧಾರ್ಮಿಕ ಚಿಹ್ನೆ ಮತ್ತು ಇದಕ್ಕೆ ಪ್ರತಿಯಾಗಿ ಎದ್ದುನಿಂತಿರುವ ಪ್ರತಿರೋಧ, ಹಿಜಾಬ್ ಎನ್ನಲಾಗುವ ತುಂಡು ವಸ್ತ್ರದ ಮುಖೇನ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಉಂಟುಮಾಡುತ್ತಿದೆ.
ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಎಷ್ಟೇ ಉದಾತ್ತತೆಯಿಂದ ಮಾತನಾಡಿದರೂ, ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಜೋತುಬಿದ್ದ ಒಂದು ಸಾಂಪ್ರದಾಯಿಕ ಸಮಾಜ ಮಹಿಳೆಯನ್ನು ತನ್ನ ನಿರ್ಬಂಧಗಳಿಂದ ಸಡಿಲಗೊಳಿಸಲಿಚ್ಚಿಸುವುದಿಲ್ಲ. ಬೌದ್ಧಿಕವಾಗಿ ಎಲ್ಲ ರೀತಿಯ ಭೌತಿಕ ತಡೆಗೋಡೆಗಳನ್ನೂ ಕೆಡವಿಹಾಕಿರುವ ಈ ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ತನ್ನದೇ ಆದ ಶಾಸ್ತ್ರ ನಿಯಮಗಳ ಮೂಲಕ, ಸಂಹಿತೆಗಳ ಮೂಲಕ ಮತ್ತು ಸಾಂಪ್ರದಾಯಿಕ ಆಚರಣೆಗಳ ಮೂಲಕ ಮಹಿಳಾ ಸಮುದಾಯವನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸುವ ಪ್ರಯತ್ನವನ್ನು ಧಾರ್ಮಿಕ ಮೂಲಭೂತವಾದಿಗಳು ಮಾಡುತ್ತಲೇ ಇದ್ದಾರೆ. ತಮ್ಮ ಬದುಕಿನ ಪಯಣವನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಅರಿವಿನ ಪಯಣವನ್ನು ವಿಸ್ತರಿಸಿಕೊಳ್ಳುತ್ತಲೇ ನಡೆದಿರುವ ಮಹಿಳಾ ಸಮೂಹಕ್ಕೆ, ಜಾತಿ, ಧರ್ಮ, ಆಚಾರ, ಆಚರಣೆ ಮತ್ತು ನಂಬಿಕೆಗಳ ಅಡ್ಡಬೇಲಿಗಳನ್ನು ನಿರ್ಮಿಸುವ ಮೂಲಕ ಧರ್ಮ ಪ್ರಚಾರಕರು ಮತ್ತು ಸಂಸ್ಕೃತಿ ನಿರೂಪಕರು ಪುರುಷಾಧಿಪತ್ಯದ ನೆಲೆಗಳನ್ನು ಭದ್ರಪಡಿಸುತ್ತಿದ್ದಾರೆ. ಈ ಒಂದು ಪ್ರಕ್ರಿಯೆಯನ್ನು ಈಗ ತೀವ್ರಗೊಳ್ಳುತ್ತಿರುವ ಹಿಜಾಬ್ ಪ್ರಕರಣದಲ್ಲೂ ಕಾಣಬಹುದು.
ಸ್ತ್ರೀ ದ್ವೇಷಿ ಮನೋಭಾವ ಮತ್ತು ಪುರುಷಾಧಿಪತ್ಯದ ಧೋರಣೆ ಎರಡನ್ನೂ ಮೇಳೈಸಿಕೊಂಡಿರುವ ಒಂದು ತಾತ್ವಿಕ ಭೂಮಿಕೆಯ ಮೇಲೆ ಭಾರತದ ಸಾಂಸ್ಕೃತಿಕ ರಾಜಕಾರಣವೂ ರೂಪುಗೊಳ್ಳುತ್ತಿದೆ. ಈ ರಾಜಕಾರಣದ ಗುತ್ತಿಗೆ ಹಿಡಿದಿರುವ ಹಿಂದುತ್ವದ ಶಕ್ತಿಗಳು, ಸಮಾಜ ಪಾಲಿಸಬೇಕಾದ ಮನುವಾದ ಪ್ರೇರಿತ ನಿರ್ದೇಶನ ಸೂತ್ರಗಳನ್ನು ಆಗಿಂದಾಗ್ಗೆ ಪ್ರಚುರಪಡಿಸುತ್ತಲೇ ಇವೆ. ಮಹಿಳೆಯರು ತೊಡಬೇಕಾದ ಉಡುಪು, ಅವರ ವಸ್ತ್ರ ವಿನ್ಯಾಸ, ದೇಹಾಲಂಕಾರದ ವಸ್ತುಗಳು ಮತ್ತು ನಿರ್ವಹಿಸಬೇಕಾದ ದುಡಿಮೆ ಇವೆಲ್ಲವೂ ಪುರುಷ ಸಮಾಜದ ಈ ಸೂತ್ರಗಳನುಸಾರವೇ ನಡೆಯುವಂತಹ ಒಂದು ಸನ್ನಿವೇಶವನ್ನು ಹಿಂದುತ್ವ ರಾಜಕಾರಣ, ಕಾರ್ಪೋರೇಟ್ ಮಾರುಕಟ್ಟೆಯ ನೆರವಿನೊಂದಿಗೆ ಸೃಷ್ಟಿಸುತ್ತಿದೆ. ಹಾಗಾಗಿಯೇ ಮಾರುಕಟ್ಟೆಗೆ ಅತ್ಯವಶ್ಯವಾದ ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಮಹಿಳೆಗೆ ಇಲ್ಲದ ನಿರ್ಬಂಧ ಮತ್ತು ಅಪವಾದಗಳು ಸಾರ್ವಜನಿಕ ಬದುಕಿನಲ್ಲಿ ಎದುರಾಗುತ್ತಿವೆ.
ಮಾರುಕಟ್ಟೆ ಆರ್ಥಿಕತೆ ಮೂಲತಃ ಮನುಷ್ಯನನ್ನೇ ಒಂದು ವಿನಿಮಯ ಯೋಗ್ಯ ಸರಕಿನಂತೆ ಪರಿಗಣಿಸುತ್ತದೆ. ಈ ಆರ್ಥಿಕತೆಯನ್ನು ನಿಯಂತ್ರಿಸುವ ಬಂಡವಾಳಶಾಹಿ ವ್ಯವಸ್ಥೆ ಮನುಷ್ಯನ ಶ್ರಮವನ್ನೂ ವಿನಿಮಯಕ್ಕೊಳಗಾಗುವ ಸರಕು ಎಂದೇ ಪರಿಗಣಿಸುತ್ತದೆ. ಸ್ಪರ್ಧೆ ಮತ್ತು ಪೈಪೋಟಿಯ ನಡುವೆಯೇ ನಿಷ್ಕರ್ಷೆಯಾಗುವ ಅರ್ಹತೆಯ ಮಾನದಂಡಗಳು ಬಂಡವಾಳ ಹೂಡಿಕೆಗೆ ಅನುಗುಣವಾಗಿ, ಬಂಡವಾಳಗಾರರ ಲಾಭಾಂಶವನ್ನಾಧರಿಸಿಯೇ ನಿರ್ಧಾರವಾಗುತ್ತದೆ. ಈ ಮಾರುಕಟ್ಟೆ ವ್ಯವಸ್ಥೆಯಲ್ಲೇ ಭಾರತದ ಮಹಿಳೆ ತನ್ನ ಆರ್ಥಿಕ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಹೋರಾಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ರೈತ ಕೂಲಿ ಮಹಿಳೆಯಿಂದ ಅತ್ಯುನ್ನತ ಅಧಿಕಾರಯುತ ಸ್ಥಾನದವರೆಗೂ ಮಹಿಳೆಯರು ಈ ಪೈಪೋಟಿಯ ಬೇಲಿಗಳನ್ನು ದಾಟುತ್ತಾ ತಮ್ಮ ಬದುಕಿನ ಪಯಣವನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ. ಅನಕ್ಷರಸ್ಥ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿ ಅನುಭವಿಸಬೇಕಾದ ಅಸಮಾನತೆಯ ಆಯಾಮಗಳನ್ನು ಗಮನಿಸಿದಾಗ, “ ಅತಿ ಕಡಿಮೆ ವೇತನ-ಕೂಲಿಗಾಗಿ ಅತಿ ಹೆಚ್ಚು ದುಡಿಮೆ ಮಾಡುವ ” ಅನಿವಾರ್ಯತೆಗಳನ್ನೆದುರಿಸುತ್ತಿರುವುದು ಕಂಡುಬರುತ್ತದೆ.

ಸಮಾನ ದುಡಿಮೆಗೆ ಸಮಾನ ಕೂಲಿ ಎಂಬ ಅಂತಾರಾಷ್ಟ್ರೀಯ ಸಂಹಿತೆಯನ್ನೂ ಲೆಕ್ಕಿಸದೆ ಭಾರತದ ಔದ್ಯೋಗಿಕ ಮತ್ತು ಔದ್ಯಮಿಕ ವಲಯದಲ್ಲಿ ಮಹಿಳೆಯರ ದುಡಿಮೆಯ ಬೆಲೆಯನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಮಾರುಕಟ್ಟೆ ವ್ಯವಸ್ಥೆ ರೂಪಿಸುತ್ತಿರುವ ಹೊರಗುತ್ತಿಗೆ ಆಧಾರಿತ ಔದ್ಯೋಗಿಕ ವಲಯದಲ್ಲಿ ಮಹಿಳೆಯೇ ಸುಲಭ ತುತ್ತಾಗುತ್ತಿದ್ದಾಳೆ. ನಿರ್ಮಲೀಕರಣ ಕ್ಷೇತ್ರ, ಸ್ವಚ್ಚತಾ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಿದ್ಧ ಉಡುಪು ತಯಾರಿಕೆ, ಸಣ್ಣ ಮತ್ತು ಅತಿ ಸಣ್ಣ ಗ್ರಾಮೀಣ ಕೈಗಾರಿಕೆ, ಆರೋಗ್ಯ ಕ್ಷೇತ್ರದ ಮಹಿಳಾ ಕಾರ್ಮಿಕರು ಅತಿ ಹೆಚ್ಚಿನ ದುಡಿಮೆಯಲ್ಲಿ ತೊಡಗಿದ್ದರೂ ಅಭದ್ರತೆಯ ನೆರಳಲ್ಲೇ ತಮ್ಮ ಬದುಕನ್ನು ಸವೆಸುವಂತಾಗಿದೆ. ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣದ ಪರಿಣಾಮ, ಗುತ್ತಿಗೆ ಆಧಾರಿತ ಬೋಧಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಪದ್ಧತಿ ಅಧಿಕೃತವಾಗಿಯೇ ಜಾರಿಯಲ್ಲಿದ್ದು, ಇಲ್ಲಿಯೂ ಸಹ ಹೆಣ್ಣುಮಕ್ಕಳು ಕಡಿಮೆ ಕೂಲಿಗೆ ಹೆಚ್ಚಿನ ದುಡಿಮೆ ಮಾಡುತ್ತಿರುವುದನ್ನು ಗಮನಿಸಬಹುದು.
ಈ ಹೊತ್ತಿನಲ್ಲಿ ಭಾರತದ ಮಹಿಳೆಗೆ ಅತ್ಯವಶ್ಯವಾಗಿರುವುದು ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣ. ಕೌಟುಂಬಿಕ ನೆಲೆಯಲ್ಲಿ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳಿಗೆ ಮೊರೆಹೋಗಬೇಕಾಗಿರುವ ಮಹಿಳಾ ಸಮುದಾಯ ಶಿಕ್ಷಣ ಪಡೆಯಲು ಮಾರುಕಟ್ಟೆಯ ಮೊರೆ ಹೋಗಬೇಕಿದೆ. ಭಾರತೀಯ ಸಮಾಜದ ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳನ್ನು ಲೆಕ್ಕಿಸದೆ, ಪ್ರಭುತ್ವ ಮತ್ತು ಸರ್ಕಾರಗಳು ರೂಪಿಸುತ್ತಿರುವ ಶಿಕ್ಷಣ ನೀತಿಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೇ ಸಂಚಕಾರ ಉಂಟುಮಾಡುವ ಸಾಧ್ಯತೆಗಳು ನಿಚ್ಛಳವಾಗುತ್ತಿವೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಅಧ್ಯಯನದ ಹಂತದವರೆಗೆ ಶಿಕ್ಷಣವನ್ನು ಕಾರ್ಪೋರೇಟೀಕರಣಕ್ಕೊಳಪಡಿಸುತ್ತಿರುವ ಸರ್ಕಾರಗಳು ಗ್ರಾಮೀಣ ಪ್ರದೇಶದ ಕೋಟ್ಯಂತರ ಮಹಿಳೆಯರಿಗೆ ಶಿಕ್ಷಣವನ್ನು ಮರೀಚಿಕೆಯಾಗಿಸುತ್ತಿವೆ. ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣವನ್ನು ಸಾಧಿಸುವ ಸರ್ಕಾರದ ಉದಾತ್ತ ಯೋಜನೆಗಳಿಗೆ ವ್ಯತಿರಿಕ್ತವಾಗಿ, ಪ್ರಾಥಮಿಕ ಶಿಕ್ಷಣವೂ ಸಹ ಬಡ ಹೆಣ್ಣುಮಕ್ಕಳ ಪಾಲಿಗೆ ಗಗನಕುಸುಮವಾಗು ದಿನಗಳು ಸನ್ನಿಹಿತವಾಗುತ್ತಿದೆ.
ಶೋಷಿತ, ದಮನಿತ, ತುಳಿತಕ್ಕೊಳಗಾದ, ಅವಕಾಶವಂಚಿತ ಸಮುದಾಯಗಳ ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಆಶ್ರಯಿಸುವ ಸರ್ಕಾರಿ ಶಾಲೆಗಳನ್ನು ಖಾಸಗಿ ಉದ್ಯಮಿಗಳಿಗೆ ಒಪ್ಪಿಸುವ ಮೂಲಕ ಶಿಕ್ಷಣ ಎಂಬ ಸರಕನ್ನು ಮಾರಾಟ ಮಾಡಲು ಮುಂದಾಗಿರುವ ಭಾರತ ಸರ್ಕಾರ ಈ ಹೆಣ್ಣುಮಕ್ಕಳ ಭವಿಷ್ಯವನ್ನೂ ಅಂಧಕಾರಕ್ಕೆ ತಳ್ಳುತ್ತಿದೆ. ಮುಸ್ಲಿಂ ಸಮುದಾಯದ ಬಡ ಹೆಣ್ಣುಮಕ್ಕಳು ಹೆಚ್ಚಾಗಿ ಆಶ್ರಯಿಸುವ ಸರ್ಕಾರಿ ಶಾಲೆಗಳಲ್ಲೇ ಹಿಜಾಬ್ನಂತಹ ವಿವಾದಗಳನ್ನೂ ಸೃಷ್ಟಿಸುವ ಮೂಲಕ ಹಿಂದುತ್ವ ರಾಜಕಾರಣದ ವಾರಸುದಾರರು, ಈ ಹೆಣ್ಣುಮಕ್ಕಳ ಶೈಕ್ಷಣಿಕ ಮುನ್ನಡೆಗೆ ತಡೆಗೋಡೆಗಳನ್ನು ನಿರ್ಮಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಖಾಸಗಿ ಶಾಲಾ ಕಾಲೇಜುಗಳಿಗೆ ಅನ್ವಯಿಸದ ವಸ್ತ್ರ ಸಂಹಿತೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಹೇರುವ ಮೂಲಕ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳನ್ನು ಖಾಸಗಿ ಶಿಕ್ಷಣದ ಮಾರುಕಟ್ಟೆಗೆ ಮೊರೆಹೋಗುವಂತೆ ಮಾಡಲಾಗುತ್ತಿದೆ.
ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಹೆಣ್ಣುಮಕ್ಕಳು ಎದುರಿಸುತ್ತಿರುವ ಭೌತಿಕ ಸಮಸ್ಯೆಗಳತ್ತ ಗಮನಹರಿಸಬೇಕಾದ ಇಡೀ ಸಮಾಜ ಇಂದು ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಒಂದು ತುಂಡು ವಸ್ತ್ರವನ್ನು ಕೇಂದ್ರೀಕರಿಸಿ ತನ್ನದೇ ಆದ ನಿಯಮಾವಳಿಗಳನ್ನು ರೂಪಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ಶೌಚಾಲಯ ವ್ಯವಸ್ಥೆ, ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಹೆಣ್ಣುಮಕ್ಕಳಿಗೆ ಅಗತ್ಯವಾಗುವ ಸ್ಯಾನಿಟರಿ ಪ್ಯಾಡ್ ಪೂರೈಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನೀಗಿಸಿಕೊಳ್ಳುವ ವೈದ್ಯಕೀಯ ಸೌಲಭ್ಯಗಳು ಈ ಮೂಲಭೂತ ಪರಿಕರಗಳು ಇಂದಿನ ಚರ್ಚೆಯ ವಿಷಯವಾಗಬೇಕಿತ್ತಲ್ಲವೇ ? ಭಾರತದ ಪುರುಷಪ್ರಧಾನ ಸಮಾಜ ಎಷ್ಟು ಅಸೂಕ್ಷ್ಮ ಮತ್ತು ಕ್ರೂರವಾಗಿದೆ ಎಂದರೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಒಂದು ಹಿಜಾಬ್ ಇವರ ಶೈಕ್ಷಣಿಕ ಮುನ್ನಡೆಗೇ ತೊಡಕಾಗಿ ಕಾಣುತ್ತದೆ. ಹಿಜಾಬ್ ವಿರೋಧಿ ದನಿಗಳು ಮೂಲತಃ ಹಿಂದೂ ಪುರುಷ ಸಮಾಜದ ದನಿಗಳು ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಈ ಪುರುಷ ಸಮಾಜವೇ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣದ ವಾರಸುದಾರಿಕೆಯನ್ನೂ ವಹಿಸಿಕೊಂಡಿವೆ. ಕೇಸರಿ ಶಾಲುಗಳನ್ನು ಹೊದ್ದು ತಮ್ಮ ಪ್ರತಿರೋಧ ವ್ಯಕ್ತಪಡಿಸುವ ಹಿಂದೂ ಸಮುದಾಯದ ಬಾಲಕರು ಮೂಲತಃ ಈ ಸಾಂಸ್ಕøತಿಕ ದಾಳಿಯ ಕಾಲಾಳುಗಳೇ ಆಗಿದ್ದಾರೆ.
ಇದಕ್ಕೆ ಪ್ರತಿಯಾಗಿ ರೂಪುಗೊಳ್ಳುತ್ತಿರುವ ವಿರೋಧಿ ನೆಲೆಗಳನ್ನು ಗಮನಿಸಿದರೂ, ಮುಸ್ಲಿಂ ಸಮುದಾಯದ ಪುರುಷ ಸಮೂಹವೇ ನಿರ್ಣಾಯಕವಾಗುತ್ತಿದೆ. ಹಿಜಾಬ್ ವಿವಾದದಲ್ಲಿ ಮುಸ್ಲಿಂ ಬಾಲಕಿಯರು ದಿಟ್ಟತನದಿಂದ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದ್ದರೂ, ವ್ಯಾಪಕ ನೆಲೆಯಲ್ಲಿ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವನ್ನೇ ನೀಡದಂತೆ ಪುರುಷ ಸಮಾಜ ತನ್ನ ಸಾಂಸ್ಕೃತಿಕ ನಿರ್ಬಂಧಗಳನ್ನು ಹೇರಲು ಯತ್ನಿಸುತ್ತಿರುವುದನ್ನು ಗಮನಿಸಬೇಕಿದೆ. ಮುಸ್ಲಿಂ ಮಹಿಳೆ ಹಿಜಾಬ್ ಧರಿಸಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕು ಪುರುಷ ಸಮಾಜದ ಅಧೀನಕ್ಕೊಳಪಟ್ಟಿರುವವರೆಗೂ, ಆ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯವೂ ನಿಯಂತ್ರಿಸಲ್ಪಡುತ್ತದೆ.

ಸಂಪ್ರದಾಯ, ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆ-ಆಚರಣೆಗಳನ್ನು ನಿಯಂತ್ರಿಸುವ ಪುರುಷ ಸಮಾಜವೇ, ಮಹಿಳೆ ಅನುಸರಿಸಬೇಕಾದ ಹೆಜ್ಜೆಗಳನ್ನೂ ನಿಯಂತ್ರಿಸುವುದು, ಮಹಿಳಾ ವಿಮೋಚನೆಯ ಹಾದಿಗೆ ಕಂಟಕಪ್ರಾಯವಾಗುತ್ತದೆ. ಈ ತಾತ್ವಿಕ ದ್ವಂದ್ವದ ನಡುವೆಯೇ ಭಾರತದ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಡಬೇಕಿದೆ. ತಾವು ಪರಿಭಾವಿಸುವ ಸಂಸ್ಕೃತಿ ಅಥವಾ ಧರ್ಮದ ರಕ್ಷಣೆಗಾಗಿ ಮಹಿಳೆಯನ್ನು ಗುರಾಣಿಯಂತೆ ಬಳಸುವ ಪುರುಷಾಧಿಪತ್ಯದ ಧೋರಣೆ ಎಲ್ಲ ಮತಾಚರಣೆಗಳಲ್ಲೂ ಕಂಡುಬರುವ ಸಮಾನ ಅಂಶ. ಈ ಪುರುಷಾಧಿಪತ್ಯದ ವಿರುದ್ಧ ಮಹಿಳೆ ದನಿಎತ್ತಬೇಕಿದೆ. ಈ ಪಿತೃಪ್ರಾಧಾನ್ಯತೆಯ ವಿರುದ್ಧ ಮಹಿಳಾ ಸಮೂಹ ಹೋರಾಡಬೇಕಿದೆ.
ಮಾರುಕಟ್ಟೆ ಮತ್ತು ಭಾರತೀಯ ಸಮಾಜ ಪೋಷಿಸುತ್ತಲೇ ಬಂದಿರುವ ಈ ಪುರುಷ ಪ್ರಧಾನ ವ್ಯವಸ್ಥೆಯನ್ನು ಕೊನೆಗೊಳಿಸುವ ಮೂಲಕವೇ, ಹಿಂದೂ, ಮುಸ್ಲಿಂ, ಕ್ರೈಸ್ತ ಮತಾಚರಣೆಗಳ ದಾಸ್ಯದ ಸಂಕೋಲೆಗಳನ್ನು ಕಿತ್ತೊಗೆಯಲು ಸಂಕಲ್ಪ ಮಾಡುವ ಮೂಲಕ 2022ರ ಅಂತರರಾಷ್ಟ್ರೀಯ ಮಹಿಳಾ ದಿನದ ಸ್ಫೂರ್ತಿಯನ್ನು ಬೆಳೆಸೋಣ.