ಕಳೆದ ಸುಮಾರು ಹತ್ತು ದಿನಗಳಿಂದ ಅಸ್ಸಾಂ ಹಾಗೂ ಮಿಜೊರಾಂ ನಡುವೆ ನಡೆಯುತ್ತಿದ್ದ ಘರ್ಷಣೆಗೆ ಕೊನೆಗೂ ತೆರೆ ಬಿದ್ದಿದೆ. ಎರಡೂ ರಾಜ್ಯಗಳ ಪ್ರತಿನಿಧಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಭಯ ರಾಜ್ಯಗಳ ನಡುವೆ ಇರುವಂತಹ ಹಲವು ದಶಕಗಳ ಹಿಂದಿನ ಗಡಿ ಸಮಸ್ಯೆಯನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಲು ಎರಡೂ ರಾಜ್ಯಗಳ ಸಿಎಂಗಳು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಅಸ್ಸಾಂ-ಮಿಜೋರಾಂ ಗಡಿ ಪ್ರದೇಶದ ಜನರು ಸಮಾಧಾನದಿಂದ ಉಸಿರಾಡುವಂತಾಗಿದೆ.
ಐಜ್ವಾಲ್’ನಲ್ಲಿ ನಡೆದಂತಹ ಈ ಸಭೆಯಲ್ಲಿ, ಎರಡೂ ರಾಜ್ಯಗಳ ಸಂಪುಟ ದರ್ಜೆ ಸಚಿವರು ಭಾಗಿಯಾಗಿದ್ದರು. ಘರ್ಷಣೆಯಲ್ಲಿ ಸಾವನ್ನಪ್ಪಿದ್ದ ಆರು ಜನ ಅಸ್ಸಾಂ ಪೊಲೀಸರಿಗೆ ಮಿಜೋರಾಂ ಪರವಾಗಿ ಅಧಿಕೃತ ಸಂತಾಪವನ್ನು ಸೂಚಿಸಲಾಯಿತು.
ಕೇಂದ್ರ ಗೃಹ ಇಲಾಖೆಯು ನಿರ್ಧರಿಸಿದಂತೆ ವಿವಾದಿತ ಗಡಿ ಭಾಗದಲ್ಲಿ ಕೇವಲ ತಟಸ್ಥ ಭದ್ರತಾ ಪಡೆಗಳು ಮಾತ್ರ ಕಾರ್ಯಚರಿಸಲಿವೆ. ಗಡಿ ಭಾಗದ ಜಿಲ್ಲೆಗಳಾದ ಕಾಚರ್, ಕರೀಮ್ ಗಂಜ್, ಹೈಲಾಕಂಡಿ, ಮಾಮಿತ್ ಮತ್ತು ಕೋಲಾಸಿಬ್’ಗಳಲ್ಲಿ ಅಸ್ಸಾಂ ಅಥವಾ ಮಿಜೋರಾಂನ ಪೊಲೀಸ್ ಪಡೆ ಮತ್ತು ಅರಣ್ಯ ಅಧಿಕಾರಿಗಳ ಪಡೆಯು ಗಸ್ತು ತಿರುಗುವಂತಿಲ್ಲ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
ಈ ಒಪ್ಪಂದದ ಬಳಿಕ ಎರಡೂ ರಾಜ್ಯಗಳು ಜಂಟಿಯಾಗಿ ಅಧಿಕೃತ ಹೇಳಿಕೆ ನೀಡಿದ್ದು, ಕೇಂದ್ರ ಗೃಹ ಇಲಾಖೆ ಹಾಗೂ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಿರ್ಧಾರವನ್ನು ಸ್ವಾಗತಿಸಲಾಗುವುದು, ಎಂದು ಹೇಳಲಾಗಿದೆ.

“ಇತ್ತೀಚಿಗೆ ಘರ್ಷಣೆ ಉಂಟಾದ ಪ್ರದೇಶಗಳಲ್ಲಿ ಎರಡೂ ರಾಜ್ಯಗಳ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಪಡೆಗಳು ಗಸ್ತು ತಿರುಗುವುದು, ಪ್ರಾಬಲ್ಯ ಸಾಧಿಸುವುದು ಅಥವಾ ಹೊಸದಾಗಿ ತುಕಡಿಗಳನ್ನು ನಿಯೋಜಿಸುವುದು ನಿರ್ಬಂಧಿಸಲಾಗಿದೆ,” ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಸ್ಸಾಂ ಗಡಿ ಅಭಿವೃದ್ದಿ ಖಾತೆಯ ಸಚಿವರಾದ ಅತುಲ್ ಬೋರಾ ಅವರು, ಇದು ಕೇವಲ ಆರಂಭವಷ್ಟೇ. ಅರ್ಥಪೂರ್ಣವಾದ ಮಾತುಕತೆಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಆದರೆ, ಇದಕ್ಕೆ ಕಾಲಾವಕಾಶದ ಅಗತ್ಯವಿದೆ, ಎಂದು ಹೇಳಿದ್ದಾರೆ.
ಜುಲೈ 26ರಂದು ಎರಡೂ ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ಭೀಕರವಾದ ಘರ್ಷಣೆ ಉಂಟಾಗಿ ಆರು ಜನ ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದರು. ಇದಾದ ಬಳಿಕ, ಮಿಜೋರಾಂಗೆ ಅಗತ್ಯ ವಸ್ತುಗಳನ್ನು ಪೂರೈಸುವ ರಾಷ್ಟ್ರೀಯ ಹೆದ್ದಾರಿ 306ನ್ನು ಅಸ್ಸಾಂನಲ್ಲಿ ಬಂದ್ ಮಾಡಲಾಗಿತ್ತು. ಈ ಮುಖಾಂತರ ಮಿಜೋರಾಂ ಮೇಲೆ ಅಸ್ಸಾಂ ಅನಧಿಕೃತವಾದ ಆರ್ಥಿಕ ನಿರ್ಬಂಧವನ್ನು ಹೇರಲು ಯತ್ನಿಸಿತ್ತು. ಮಿಜೋರಾಂ ತಲುಪಬೇಕಿದ್ದ ನೂರಾರು ಟ್ರಕ್’ಗಳು ಅಸ್ಸಾಂ ಗಡಿ ಭಾಗದಲ್ಲಿ ತಡೆಯಲ್ಪಟ್ಟಿದ್ದವು.