ರಾಜಸ್ಥಾನ ಕಾಂಗ್ರೆಸ್ನಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದಿದ್ದು ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಚರ್ಚಿಸಲು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗಿಯಾಗಿರುವುದು ಸಿಎಂ ಅಶೋಕ್ ಗೆಹ್ಲೋಟ್ ಕಣ್ಣು ಕೆಂಪಾಗಿಸಿದೆ.
ಈ ಕುರಿತು ಮಾತನಾಡಿರುವ ಅಶೋಕ್ ಒಬ್ಬ ದ್ರೋಹಿ ರಾಜಸ್ಥಾನದ ಮುಖ್ಯಮಂತ್ರಿಯಾಲು ಸಾಧ್ಯವಿಲ್ಲ ಕನಿಷ್ಠ 10 ಶಾಸಕರ ಬೆಂಬಲ ಇಲ್ಲದಿರುವ ವ್ಯಕ್ತಿಯನ್ನು ಹೈಕಮಾಂಡ್ ಹೇಗೆ ಸಿಎಂ ಮಾಡುತ್ತದೆ ಮತ್ತು ಪಕ್ಷ ದ್ರೋಹ ಎಸಗಿದವರಿಗೆ ಹೇಗೆ ಉನ್ನತ ಸ್ಥಾನ ಕೊಡಲು ಸಾದ್ಯ ಎಂದು ಪ್ರಶ್ನಿಸಿದ್ದಾರೆ.
![](https://pratidhvani.com/wp-content/uploads/2022/11/thequint_2021-11_-1024x576.jpg)
ಒಬ್ಬ ಪಕ್ಷದ ಅಧ್ಯಕ್ಷ ತಮ್ಮದೇ ಪಕ್ಷದ ಸರ್ಕಾರವನ್ನ ಉರುಳಿಸಲು ಯತ್ನಿಸಿರುವ ಉದಾಹರಣೆ ಎಲ್ಲೂ ನಡೆದಿಲ್ಲ. ಆದರೆ, ಗೃಹ ಸಚಿವ ಅಮಿತ್ ಶಾ ಆದೇಶದ ಮೇರೆಗೆ ಸಚಿನ್ ಪೈಲಟ್ ಪಕ್ಷದ ಹಿತಾಸಕ್ತಿಯನ್ನು ಬದಿಗಿಟ್ಟು 19 ಶಾಸಕರ ಜೊತೆಗೆ ದೆಹಲಿ ಬಳಿಯ ರೆಸಾರ್ಟ್ ಒಂದಕ್ಕೆ ಹೋಗಿ ದಂಗೆ ಎದ್ದಿದ್ದರು ಎಂದು ಆರೋಪಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಪೈಲಟ್ ಬಣದ ಶಾಸಕರಿಗೆ ತಲಾ 5-10 ಕೋಟಿ ರೂಪಾಯಿ ಹಣ ನೀಡಿರುವ ಬಗ್ಗೆ ನನ್ನ ಬಳಿ ಪುರಾವೆ ಇದೆ ಮತ್ತು ಸಚಿನ್ ಪೈಲಟ್ ನನ್ನ ವಿರುದ್ದ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದ ಮಾತು ಮತ್ತು ಹೈಕಮಾಂಡ್ ಅಧಿಕಾರ ಹಂಚಿಕೆ ಮಾಡುವಾಗ 50-50 ಸೂತ್ರದ ಬಗ್ಗೆ ಎಲ್ಲಿಯೂ ಸಹ ಮಾತನಾಡಿಲ್ಲ ಎಂದು ಸಚಿನ್ ಪೈಲಟ್ ವಿರುದ್ದ ಸರಣಿ ಆರೋಪಗಳನ್ನ ಮಾಡಿದ್ದಾರೆ.