ಕಾಶ್ಮೀರ ಫೈಲ್ಸ್ ಎನ್ನುವ ಅಪಪ್ರಚಾರದ ಕಥಾವಸ್ತು ಹೊಂದಿರುವ ಚಲನ ಚಿತ್ರ ಮಾಡುತ್ತಿರುವ ಗದ್ದಲದ ನಡುವೆ ಈ ಇಡೀ ಘಟನೆಯ ದೊಡ್ಡ ಪಾತ್ರಧಾರಿ ಎಲ್ಕೆ ಅಡ್ವಾಣಿ ಕಾಶ್ಮೀರ ವಿಷಯದ ಬಗ್ಗೆ ಏನು ಯೋಚಿಸುತ್ತಿರಬಹುದು ಎಂದು ಯೋಚಿಸಲಾರಂಭಿಸಿದೆ. ಅಡ್ವಾಣಿಯವರು ತಮ್ಮ ಆತ್ಮಕಥೆಯಲ್ಲಿ ಕಾಶ್ಮೀರದ ಬಗ್ಗೆ ಬರೆದಿರುವುದಕ್ಕೂ ಹಾಗು ಇಂದು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೂ ತಾಳೆಯಾಗುವುದಿಲ್ಲ ˌ ಅಷ್ಟೇ ಅಲ್ಲದೆ ಅಡ್ವಾಣಿ ಅನಿಸಿಕೆ ಸಂಪೂರ್ಣ ತದ್ವಿರುದ್ದವಾಗಿದೆ.
370 ನೇ ವಿಧಿಯನ್ನು ತೆಗೆದುಹಾಕುವಾಗ, ಸಂಸತ್ತಿನಲ್ಲಿ ಬಿಜೆಪಿ ಸರ್ಕಾರದ ಮಂತ್ರಿಗಳು ಇದಕ್ಕಾಗಿ ಆಗಿನ ಪ್ರಧಾನಿ ಪಂಡಿತ್ ನೆಹರು ಅವರನ್ನು ಸಾಮೂಹಿಕವಾಗಿ ಹೊಣೆಗಾರರನ್ನಾಗಿ ಬಿಂಬಿಸುವ ಪ್ರಯತ್ನ ಮಾಡಿದರು. ಆದರೆ ಅಂದಿನ ಸಂವಿಧಾನ ಸಭೆಯಲ್ಲಿ 370ನೇ ವಿಧಿ ಅಂಗೀಕಾರವಾದ ದಿನ ಪಂಡಿತ್ ನೆಹರೂ ವಿದೇಶದಲ್ಲಿದ್ದರು ಎಂದು ಅಡ್ವಾಣಿ ತಮ್ಮ ಆತ್ಮಕಥನ ‘ಮೈ ಕಂಟ್ರಿ ಮೈ ಲೈಫ್’ನಲ್ಲಿ ಬರೆದುಕೊಂಡಿದ್ದಾರೆ.
ಸಂಪೂರ್ಣ ಕಾಂಗ್ರೆಸ್ ಪಕ್ಷವೇ 370ನೇ ವಿಧಿಯ ವಿರುದ್ಧವಿತ್ತು ಎಂದು ಅಡ್ವಾಣಿಯವರು ಈ ಇಡೀ ಬೆಳವಣಿಗೆಯ ಕುರಿತು ಸುದೀರ್ಘ ವಿವರಣೆ ನೀಡಿದ್ದಾರೆ. ಈ ವಿಷಯ ಚರ್ಚಿಸಲು ಸರ್ದಾರ್ ಪಟೇಲ್ ಕಾಂಗ್ರೆಸ್ ನಾಯಕರ ಸಭೆ ಕರೆದಿರುತ್ತಾರೆ. ಈ ವೇಳೆ ಸಭೆಯಲ್ಲಿ ಭಾರೀ ಗದ್ದಲ ಉಂಟಾಗುತ್ತದೆ. ಮೌಲಾನಾ ಆಜಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ಸಿಗರಿಗೆ 370 ನೇ ವಿಧಿಯ ಬಗ್ಗೆ ಮನವರಿಕೆ ಮಾಡಲು ಪಟೇಲರಿಗೆ ಸಾಧ್ಯವಾಗಲಿಲ್ಲ.

ಅಂತಿಮವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 370 ನೇ ವಿಧಿಯ ಪ್ರಾಯೋಗಿಕ ಅಂಶ ಮತ್ತು ಅಂತರರಾಷ್ಟ್ರೀಯ ಸಂಕೀರ್ಣತೆಗಳನ್ನು ವಿವರಿಸುತ್ತಾರೆ. ಅಂತಿಮವಾಗಿ ಕಾಂಗ್ರೆಸ್ ಪಕ್ಷವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಇಚ್ಛೆಗೆ ಮಣಿಯುತ್ತದೆ ಮತ್ತು 370 ನೇ ವಿಧಿಯನ್ನು ಸಂವಿಧಾನ ಸಭೆಯಲ್ಲಿ ಪರಿಚಯಿಸಿದಾಗ ಬಹುತೇಕ ಅದು ಚರ್ಚೆಯಿಲ್ಲದೆ ಅಂಗೀಕರಿಸಲಾಗುತ್ತದೆ.
ಸರ್ದಾರ್ ಪಟೇಲ ಅವರು ನೆಹರೂ ಅನುಪಸ್ಥಿತಿಯಲ್ಲಿ ಅದನ್ನು ಏಕೆ ಬೆಂಬಲಿಸಿದರು ಎನ್ನುವುದು ಇಂದಿಗೂ ನಿಘೂಡವಾಗಿದೆ ಎಂದು ಅಡ್ವಾಣಿ ಬರೆದಿದ್ದಾರೆ. ನಂತರ ಸರ್ದಾರ್ ಪಟೇಲ್ ಅವರ ಆಪ್ತ ಕಾರ್ಯದರ್ಶಿ ವಿ ಶಂಕರ್ ಅವರು ಆರ್ಟಿಕಲ್ 370 ಅನ್ನು ಸರ್ದಾರ್ ಪಟೇಲ್ ಅವರ ಸಾಧನೆ ಎಂದು ಬಣ್ಣಿಸಿದ ಕುರಿತು ಕೂಡ ಅಡ್ವಾಣಿಯವರು ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ.