ಭಾರತದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ಕ್ರೂರ ಸಾಮಾಜಿಕ ಪರಿಣಾಮಗಳ ಬಗ್ಗೆ ಅಂಬೇಡ್ಕರ್ ಅವರು ತೀವ್ರ ಘಾಸಿಗೊಂಡಿದ್ದರು. ಈ ಸಮಸ್ಯೆಯನ್ನು ಅಂಬೇಡ್ಕರರು ವಿಶ್ವಸಂಸ್ಥೆಯ ಮುಂದೆ ಕೊಂಡೊಯ್ಯಲು ಪ್ರಯತ್ನಿಸಿದ್ದರು. ಅವರ ಆ ಪ್ರಯತ್ನ ಭಾರತಕ್ಕೆ ಪಾಠ ಕಲಿಸಿತ್ತು. ಅಂಬೇಡ್ಕರ್ ಅವರು ಭಾರತದಲ್ಲಿನ ಜಾತಿ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಕಾಳಜಿಯ ವಿಷಯವನ್ನಾಗಿ ಮಾಡಲು ಬದ್ಧರಾಗಿದ್ದರು. ದಲಿತರಿಗೆ ನ್ಯಾಯ ದೊರಕಿಸಲು ಇದೊಂದೇ ಮಾರ್ಗವೆಂದು ಅವರು ತಿಳಿದಿದ್ದರು ಎಂದು ಸೂರಜ್ ಯೆಂಗ್ಡೆ ಅವರು
೧೪ ಏಪ್ರಿಲ್, ೨೦೨೨ ರ ‘ದಿ ಪ್ರಿಂಟ್’ ವೆಬ್ ಜರ್ನಲ್ಲಿನ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ಕೆ.ರಾಜು ಅವರು ಸಂಪಾದಿಸಿರುವ ‘ದಲಿತ್ ಟ್ರೂತ್: ದಿ ಬ್ಯಾಟಲ್ಸ್ ಫಾರ್ ರಿಯಲೈಸಿಂಗ್ ಅಂಬೇಡ್ಕರ್’ಸ್ ವಿಷನ್’ ಗ್ರಂಥದಲ್ಲಿ ಸೂರಜ್ ಯೆಂಗ್ಡೆ ಅವರು ಬರೆದ ಪ್ರಬಂಧದ ಈ ಆಯ್ದ ಭಾಗವನ್ನು ಪೆಂಗ್ವಿನ್ ರಾಂಡಮ್ ಹೌಸ್ ಅನುಮತಿಯೊಂದಿಗೆ ‘ದಿ ಪ್ರಿಂಟ್’ ವೆಬ್ ಜರ್ನಲ್ ಪ್ರಕಟಿಸಿದೆ. ನಾನು ಆ ಅಂಕಣದಲ್ಲಿ ಚರ್ಚಿಸಲಾದ ಸಂಗತಿಗಳನ್ನು ಇಲ್ಲಿ ವಿಮರ್ಶಿಸಿದ್ದೇನೆ.
ಸೂರಜ್ ಅವರು ಭಾರತದಲ್ಲಿನ ಜಾತಿ ವ್ಯವಸ್ಥೆಯ ವಿಷಯದಲ್ಲಿ ಅಂಬೇಡ್ಕರ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಬ್ರಿಟೀಷ್ ವಸಾಹತುಶಾಹಿ ಸರಕಾರವು ತನ್ನ ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ದಲಿತರಿಗೆ ಒಂದಷ್ಟು ಸಹಾಯ ಮಾಡಿದ್ದರೂ, ಭಾರತದ ರಾಜಕೀಯದಲ್ಲಿ ತನ್ನ ಸ್ವಯಂ ಪ್ರತಿಷ್ಠಾಪನೆಗೆ ಮತ್ತು ಬ್ರಾಹ್ಮಣ ಹಿತಾಸಕ್ತಿಗಳ ಅಗಾಧ ನಿಯಂತ್ರಣದಿಂದ ದಲಿತರ ವಿಮೋಚನೆಯ ಬ್ರಿಟೀಷ್ ಸರಕಾರದ ಒಟ್ಟಾರೆ ಗುರಿಯು ಸೀಮಿತವಾಗಿತ್ತು. ದಲಿತ ಅಸ್ಪೃಶ್ಯರನ್ನು ಕ್ರೂರ ಹಿಂದೂ ಆಚರಣೆಗಳ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬ ಅಂಬೇಡ್ಕರ್ ಅವರ ಬೇಡಿಕೆಗಳು ಕಾಂಗ್ರೆಸ್ ಪಕ್ಷದಲ್ಲಿನ ಮೇಲ್ವರ್ಗದ ನಾಯಕರೊಂದಿಗೆ ಮನಸ್ತಾಪ ಮೂಡಿಸಿತು. ೧೯೩೨ ರ ಪೂನಾ ಒಪ್ಪಂದ ಮತ್ತು ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಸರಕಾರದೊಂದಿಗೆ ವ್ಯವಹರಿಸುವಾಗ ಅಂಬೇಡ್ಕರ್ ಮತ್ತು ಗಾಂಧಿ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಯಿತು ಎನ್ನುತ್ತಾರೆ ಸೂರಜ್ ಅವರು. ಸ್ವಾತಂತ್ರ್ಯಾನಂತರದ ಕಾಲದಲ್ಲೂ ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲಲಿಲ್ಲವೆಂದು ಸೂರಜ್ ಅಭಿಪ್ರಾಯ ಪಟ್ಟಿದ್ದಾರೆ.
ಸೂರಜ್ ಅವರು ನೆಹರುರವರ ಜಾಗತಿಕ ಮಾನವ ಘನತೆಯ ಬಗೆಗಿನ ಕಾಳಜಿಯ ಕುರಿತು ಬರೆಯುತ್ತಾ ಸ್ವಾತಂತ್ರಪೂರ್ವ ಹಾಗು ಸ್ವಾತಂತ್ರಾ ನಂತರದಲ್ಲಿ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಭಾಯಿಸಿದ ಭಾರತೀಯ ಸರಕಾರದ ದ್ವಂದ್ವಾರ್ಥದ ಕಾರ್ಯಸೂಚಿಯನ್ನು ವಿವರಿಸುತ್ತಾರೆ. ನೆಹರುರವರು ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯ ವಿರುದ್ಧ ವಿಶ್ವಸಂಸ್ಥೆಯ ಮಟ್ಟದ ಹೋರಾಟವನ್ನು ಕೈಗೊಂಡು ದಕ್ಷಿಣ ಆಫ್ರಿಕಾದ ಮೇಲೆ ನಿರ್ಬಂಧಗಳನ್ನು ಹೇರುವ ನಿರ್ಣಯಗಳನ್ನು ಪ್ರಾಯೋಜಿಸಿದ್ದರ ಬಗ್ಗೆ ಹಾಗು ದಕ್ಷಿಣ ಆಫ್ರಿಕಾದ ಕ್ರಾಂತಿಕಾರಿಗಳಾದ ಆಲಿವರ್ ಟಾಂಬೊ ಮತ್ತು ಯೂಸುಫ್ ದಾದೂ ಅವರಿಗೆ ಭಾರತೀಯ ಪ್ರಯಾಣದ ದಾಖಲೆಗಳನ್ನು ಕೂಡ ನೀಡಿದ್ದರಂತೆ. ಇದು ನೆಹರೂ ವಿಶ್ವಾದಾದ್ಯಂತ ಸಂರಕ್ಷಿಸಲು ಬಯಸಿದ ವಸಾಹತುಶಾಹಿ ವಿರೋಧಿ ಆದರ್ಶ ಪರಂಪರೆಯಾಗಿತ್ತು ಎನ್ನುವ ಸೂರಜ್ ಅವರು ಆದಾಗ್ಯೂ, ನೆಹರುರವರು ಯಾವುದೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದಲ್ಲಿನ ಜಾತಿ ಸಮಸ್ಯೆಯ ಕುರಿತು ಪ್ರಸ್ತಾಪಿಸಲಿಲ್ಲ ಎನ್ನುತ್ತಾರೆ. ಭಾರತದಲ್ಲಿನ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಉಲ್ಲೇಖಿಸಿ, ಡಾ. ಅಂಬೇಡ್ಕರ್ ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವರ್ಣಭೇದ ನೀತಿಯು ಪ್ರತಿ ಭಾರತೀಯ ಹಳ್ಳಿಯಲ್ಲೂ ಪ್ರತಿದಿನ ಪುನರಾವರ್ತನೆಯಾಗುತ್ತದೆ ಎಂದಿರುವ ಬಗ್ಗೆ ಸೂರಜ್ ಗಮನ ಸೆಳೆಯುತ್ತಾರೆ.
ಅಂದು ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟವು ೧೯೪೭ ರಲ್ಲಿ ಡಾ. ಅಂಬೇಡ್ಕರ್ ಅವರು ಸಿದ್ಧಪಡಿಸಿದ ಜ್ಞಾಪಕ ಪತ್ರವನ್ನು ಅಂಗೀಕರಿಸಿತು, ಅದರಲ್ಲಿ ದಲಿತರ ಮೇಲಿನ ಮೇಲ್ವರ್ಗದ ಹಿಂದೂಗಳ ನಿರಂತರ ದೌರ್ಜನ್ಯ ಹಾಗು ನಾಚಿಕೆಯಿಲ್ಲದ ಹಿಂಸಾಚಾರವು ಪರಿಶಿಷ್ಟರ ಸ್ಥಾನವು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಸ್ಥಾನಮಾನಕ್ಕಿಂತ ಕೆಟ್ಟದಾಗಿದೆ ಎಂದು ಹೇಳಲಾಗಿತ್ತಂತೆ. ದಕ್ಷಿಣ ಆಫ್ರಿಕಾದ ಕರಿಯರ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ನೆಹರು ಎತ್ತಿದ ಧ್ವನಿಯನ್ನು ಆಕ್ಷೇಪಿಸಿದ್ದ ದಕ್ಷಿಣ ಆಫ್ರಿಕಾದ ಪ್ರಧಾನಿ ಡಿ.ಎಫ್. ಮಲಾನ್ ಅವರು ಭಾರತದ ಅಸ್ಪೃಶ್ಯರನ್ನು ನಡೆಸಿಕೊಳ್ಳುವುದರ ಬಗ್ಗೆ ನೆಹರೂ ಸರ್ಕಾರಕ್ಕೆ ಸವಾಲು ಹಾಕುವ ಮಟ್ಟಕ್ಕೆ ಹೋಗಿದ್ದರಂತೆ. ದಕ್ಷಿಣ ಆಫ್ರಿಕಾದ ಕರಿಯರ ಪರಿಸ್ಥಿತಿ ಉಲ್ಲೇಖಿಸಿ, ಮಲಾನ್ ಅವರು ಆಫ್ರಿಕಾದ ಕರಿಯರು ಕನಿಷ್ಠಪಕ್ಷ ಅಮೆರಿಕ ಕರಿಯರ ಹಾಗೂ ಭಾರತದಲ್ಲಿನ ಅಸ್ಪೃಶ್ಯರಿಗಿಂತ ಉತ್ತಮವಾಗಿದೆ ಎಂದು ನೆಹರುರವರಿಗೆ ಸವಾಲು ಹಾಕಿದ ಬಗ್ಗೆ ಸೂರಜ್ ಅವರು ವಿವರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚರಗೊಂಡ ಭಾರತ ಸರಕಾರವು ಜಾತಿ ತಾರತಮ್ಯದ ಸಂಗತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತುವ ಮೂಲಕ ಸರಕಾರವನ್ನು ಮುಜುಗರಕ್ಕೆ ದೂಡದಂತೆ ನೋಡಿಕೊಂಡಿತಂತೆ.
ಬ್ರಿಟೀಷ್ ವಸಾಹತುಶಾಹಿ ಆಡಳಿತದಿಂದ ವಿಮೋಚನೆಗೊಂಡ ನಂತರ ದೇಶದ ಒಗ್ಗಟ್ಟಿನ ನೆಪದಲ್ಲಿ ವರ್ಣಭೇದ ನೀತಿಯ ವಿರುದ್ಧದ ತನ್ನ ಹೋರಾಟವು ಹಿಂಬಾಗಿಲಿನಿಂದ ಸರಕಾರದೊಂದಿದೆ ಒಪ್ಪಂದ ಮಾಡಿಕೊಳ್ಳುವ ಮಟ್ಟಕ್ಕೆ ಹೋಯಿತಂತೆ. ಇದು ಜಾಗತಿಕ ಮಟ್ಟದಲ್ಲಿ ಒಂದು ಪವಿತ್ರ ವಿದೇಶಾಂಗ ನೀತಿ ಆಯಿತಂತೆ. ವಿವಿಧ ಜಾತಿ ಹಾಗು ವರ್ಣಗಳಿಗೆ ಸೇರಿದ ನಂತರದ ಪ್ರಧಾನ ಮಂತ್ರಿಗಳು ಇದನ್ನು ಅನುಕ್ರಮವಾಗಿ ಮಂತ್ರವಾಗಿ ಅಳವಡಿಸಿಕೊಂಡು ದಲಿತರ ಮಾನವ ಹಕ್ಕುಗಳ ರಕ್ಷಣೆಯ ವಿರುದ್ಧ ಆಕ್ರಮಣಕಾರಿಯಾಗಿ ಕೆಲಸ ಮಾಡಿದ ಬಗ್ಗೆ ಸೂರಜ್ ಗಮನ ಸೆಳೆದಿದ್ದಾರೆ. ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಬ್ರಾಹ್ಮಣ್ಯವು ಕೇವಲ ಜಾತಿವಾದವಲ್ಲದೆ ಅದೊಂದು ವರ್ಣಭೇದವೂ ಆಗಿತ್ತು ˌ ಏಕೆಂದರೆ ಅದು ಆಫ್ರಿಕಾದ ಕರಿಯರಂತೆ ಕೆಳ ವರ್ಗದ ಭಾರತೀಯರನ್ನು ಶೋಷಿಸುತ್ತಿತ್ತು. ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಗಳು ಬಹುತೇಕ ಎಲ್ಲರು ಬ್ರಾಹ್ಮಣರು ಮತ್ತು ಇತರ ಮೇಲ್ವರ್ಗಕ್ಕೆ ಸೇರಿದವರಾಗಿದ್ದರು. ಹಾಗಾಗಿ ಪ್ರಬಲ ಜಾತಿಗಳ ಈ ಪ್ರಾಬಲ್ಯವು ಜಾತಿ ತಾರತಮ್ಯವನ್ನು ಅಸಹ್ಯಕರವಾಗಿ ಉಳಿಸಿಕೊಂಡು ಬರುವುದಲ್ಲದೆ ಅದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಯಾಗದಂತೆ ಖಚಿತಪಡಿಸಿಕೊಳ್ಳುತ್ತಿತ್ತು ಎನ್ನುತ್ತಾರೆ ಸೂರಜ್ ಅವರು.
ಅಂಬೇಡ್ಕರ್ ಅವರ ಸಂಯುಕ್ತ ರಾಷ್ಟ್ರ ಮಾರ್ಗ
ಭಾರತದಲ್ಲಿನ ಜಾತಿ ವ್ಯವಸ್ಥೆಯ ಕರಾಳತೆ ಕುರಿತ ಇಲ್ಲಿನ ಪ್ರಭುತ್ವದ ನಿಗೂಢ ಹಾಗು ಜಾಣ ಮೌನದಿಂದ ಬೇಸತ್ತು ಡಾ. ಅಂಬೇಡ್ಕರ್ ಅವರು ಇದನ್ನು ಅಂತಾರಾಷ್ಟ್ರೀಯ ಕಾಳಜಿಯ ವಿಷಯವನ್ನಾಗಿ ಮಾಡಲು ಬದ್ಧರಾಗಿದ್ದರಂತೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜಿನ್ನಾರ ಮುಸ್ಲಿಂ ಲೀಗ್ನೊಂದಿಗಿನ ಚೌಕಾಸಿಯ ನಂತರದಲ್ಲಿ ಕೊನೆಗೆ ದಲಿತ ಸಮುದಾಯಕ್ಕೆ ಅಗತ್ಯವಾದ ನ್ಯಾಯ ಪಡೆಯುವ ಏಕೈಕ ಮಾರ್ಗವೆಂದು ಅವರು ಕಂಡುಕೊಂಡರಂತೆ. ಲಾಹೋರ್ ನಿರ್ಣಯದವರೆಗೆ, ದಲಿತರು ಮತ್ತು ಮುಸ್ಲಿಮರ ನಡುವಿನ ಅಲ್ಪಸಂಖ್ಯಾತ ಮೈತ್ರಿಯು ಹಿಂದೂ ಬಹುಸಂಖ್ಯಾತ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಎರಡೂ ಗುಂಪುಗಳಿಗೆ ಸಹಾಯ ಮಾಡುತ್ತದೆ ಎಂದು ದಲಿತರು ವಿಶ್ವಾಸ ಹೊಂದಿದ್ದರು. ಆದಾಗ್ಯೂ, ಲಾಹೋರ್ ನಿರ್ಣಯದ ನಂತರ, ಈ ಮೈತ್ರಿಯು ಮುರಿದುಬಿತ್ತು. ಹೀಗಾಗಿ, ಡಾ. ಅಂಬೇಡ್ಕರ್ ಸಕ್ರಿಯವಾಗಿ ಅಂತರರಾಷ್ಟ್ರೀಯ ಮೈತ್ರಿಗಳನ್ನು ಹುಡುಕಲು ಪ್ರಾರಂಭಿಸಿದರು ಎನ್ನುತ್ತಾರೆ ಸೂರಜ್ ಅವರು.
ಇದರ ಅನುಸಾರವಾಗಿ, ಅಂಬೇಡ್ಕರ್ ಅವರು ಭಾರತದಲ್ಲಿ ಹೂಡಿಕೆ ಮಾಡಿದ ಬ್ರಿಟಿಷ್ ರಾಜಕೀಯ ವರ್ಗ ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರಂತೆ. ದಲಿತರಿಗೆ ಸಮಸ್ಯೆಗಳ ಅಂತರಾಷ್ಟ್ರೀಯ ಪರಿಹಾರಕ್ಕಾಗಿ ಹಕ್ಕನ್ನು ಪ್ರತಿಪಾದಿಸಲು ಅವರ ೧೯೪೬ ರ ಇಂಗ್ಲೆಂಡ್ ಪ್ರವಾಸವನ್ನು ಜೀಸಸ್ ಚೈರೆಜ್-ಗಾರ್ಜಾ ಅವರು ತಮ್ಮ ಪತ್ರಿಕೆಯಲ್ಲಿ ‘ಬಿ.ಆರ್. ಅಂಬೇಡ್ಕರ್, ವಿಭಜನೆ ಮತ್ತು ಅಸ್ಪೃಶ್ಯತೆಯ ಅಂತಾರಾಷ್ಟ್ರೀಕರಣ, ೧೯೩೪–೪೭’ ಎಂಬ ತಲೆಬರಹದಡಿಯಲ್ಲಿ ಬರೆದಿದ್ದರಂತೆ. ಬ್ರಿಟೀಷ್ ವಸಹಾತುಶಾಹಿ ಸರಕಾರದಿಂದ ದಲಿತರ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ವಿಫಲವಾದ ನಂತರ, ಡಾ. ಅಂಬೇಡ್ಕರ್ ಅವರು ಬ್ರಿಟಿಷ್ ಸಂಸತ್ತಿನ ನಾಯಕರನ್ನು ಭೇಟಿಯಾಗಲು ಪ್ರಾರಂಭಿಸಿದರು ಎಂದು ಚೈರೆಜ್-ಗಾರ್ಜಾ ಬರೆದಿದ್ದರಂತೆ. ಅವರಲ್ಲಿ ಪ್ರಮುಖರೆಂದರೆ ಕನ್ಸರ್ವೇಟಿವ್ ಪಕ್ಷದ ನಾಯಕ ವಿನ್ಸ್ಟನ್ ಚರ್ಚಿಲ್ ಒಬ್ಬರಾಗಿದ್ದರು. ಅಂಬೇಡ್ಕರ್ ಅವರು ಲೇಬರ್ ಪಾರ್ಟಿ, ಕನ್ಸರ್ವೇಟಿವ್ ಪಾರ್ಟಿಯ ನಾಯಕರು ಮತ್ತು ಫ್ಯಾಬಿಯನ್ನ ಸಂಸದರಿಗೆ ಕೂಡ ಈ ಕುರಿತು ಮನವಿಯನ್ನು ಸಲ್ಲಿಸಿದ ಬಗ್ಗೆ ಸೂರಜ್ ಗಮನಸೆಳೆದಿದ್ದಾರೆ.
ಡಾ. ಅಂಬೇಡ್ಕರ್ ಅವರ ರಾಜತಾಂತ್ರಿಕ ನಡೆಗೆ ಅಂತರರಾಷ್ಟ್ರೀಯ ಬೆಂಬಲ ಸಿಗುತ್ತಿದೆಯಲ್ಲ ಎಂಬ ಬೇಸರದಿಂದ ಗಾಂಧಿಯವರು ಅಂಬೇಡ್ಕರ್ ಅವರೊಂದಿಗೆ ಮಾತುಕತೆ ಮಾಡದಿರಲು ಆದ್ಯತೆ ನೀಡಿದರಂತೆ. ಹೀಗಾಗಿ, ಪ್ರತಿಪಕ್ಷಗಳು ಮತ್ತು ಸರಕಾರದಿಂದ ಸಾಕಷ್ಟು ಬೆಂಬಲವನ್ನು ಪಡೆಯುವಲ್ಲಿ ವಿಫಲವಾದ ನಂತರ ಡಾ. ಅಂಬೇಡ್ಕರ್ ಅವರು ಯುಎನ್ ಅನ್ನು ಸಂಪರ್ಕಿಸಲು ನಿರ್ಧರಿಸಿದರಂತೆ. ಆಗˌ ವಲ್ಲಭಭಾಯಿ ಪಟೇಲ್ ಅವರು ಇತರ ಕಾಂಗ್ರೆಸ್ ನಾಯಕರೊಂದಿಗೆ ಅಂಬೇಡ್ಕರ್ ಅವರೊಂದಿಗೆ ಸಂಧಾನಕ್ಕೆ ಪ್ರಯತ್ನಿಸಿದರಂತೆ. ಗಾಂಧಿಯವರು ಅಂಬೇಡ್ಕರ್ ಅವರ ಪ್ರಯತ್ನಗಳಲ್ಲಿ ಅಪನಂಬಿಕೆಯನ್ನು ಮುಂದುವರೆಸಿದರಂತೆ. ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದ ಭಾರತೀಯ ಸಮನ್ವಯ ಗುಂಪಿನ ಸದಸ್ಯ ಕಾರ್ಲ್ ಹೀತ್ ಅಂಬೇಡ್ಕರ್ ಅವರ ದಲಿತ ಹೋರಾಟವನ್ನು ಅಂತರರಾಷ್ಟ್ರೀಯಗೊಳಿಸುವ ಮನವಿಗೆ ಸಹಾನುಭೂತಿ ತೋರಿಸಲಿಲ್ಲ ಎನ್ನುವ ಕುರಿತು ಸೂರಜ್ ಬೆಳಕು ಚೆಲ್ಲಿದ್ದಾರೆ.
ಆದಾಗ್ಯೂ, ಅಂಬೇಡ್ಕರರ ಬೇಡಿಕೆಯನ್ನು ಚರ್ಚಿಲ್ ಮತ್ತು ದಕ್ಷಿಣ ಆಫ್ರಿಕಾದ ಪ್ರಧಾನ ಮಂತ್ರಿ ಜಾನ್ ಸ್ಮಟ್ಸ್ ಅವರು ಅಂತರರಾಷ್ಟ್ರೀಯ ಸಭೆಗಳು ಮತ್ತು ವಿಶ್ವಸಂಸ್ಥೆಯಲ್ಲಿ ಪ್ರತಿಧ್ವನಿಸಿದರು. ವಿಶ್ವಸಂಸ್ಥೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಹಕ್ಕುಗಳಿಗಾಗಿ ಒತ್ತಾಯಿಸಿದ ಬಾಂಬೆಯ ಮಾಜಿ ಗವರ್ನರ್ ಮಹಾರಾಜ್ ಸಿಂಗ್ ನೇತೃತ್ವದ ಭಾರತ ಸರಕಾರದ ಕಪಟ ನಿಯೋಗವನ್ನು ನಿರುತ್ತರಗೊಳಿಸಲು ಸ್ಮಟ್ಸ್ ಅಸ್ಪೃಶ್ಯತೆಯ ಸಮಸ್ಯೆಯನ್ನು ಬಳಸಿದನಂತೆ. ವಸಾಹತುಶಾಹಿ ಸೇನಾಧಿಪತಿಗಳಾದ ಚರ್ಚಿಲ್ ಮತ್ತು ಸ್ಮಟ್ಸ್ ಇಬ್ಬರೂ ಭಾರತೀಯ ದಲಿತರ ಅಸ್ಪೃಶ್ಯತೆ ಸಮಸ್ಯೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರಂತೆ. ಆದಾಗ್ಯೂ, ಅಸ್ಪೃಶ್ಯರು ತಮ್ಮ ರಾಜಕೀಯ ಅಸ್ತಿತ್ವದ ಹೊರತಾಗಿಯೂ, ನಿಗ್ರಹಿಸಲ್ಪಟ್ಟ ಪ್ರಜೆಗಳಾಗಿಯೇ ಉಳಿದರು. ಡಾ. ಅಂಬೇಡ್ಕರ್ ಅವರು ಕಾನೂನು ಸಚಿವರಾಗಿ ನೆಹರೂ ಅವರ ಮೊದಲ ಸಂಪುಟದಲ್ಲಿ ಸ್ಥಾನ ಪಡೆದರು ಆದರೆ ಅವರು ನಿರೀಕ್ಷಿಸಿದ ಪ್ರಮುಖ ಖಾತೆಗಳನ್ನು ಅವರಿಗೆ ದೊರೆಯಲಿಲ್ಲ. ಡಾ. ಅಂಬೇಡ್ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ಅದಕ್ಕೆ ಕಾರಣವಾದ ವಿವಿಧ ಸಂಗತಿಗಳನ್ನು ವಿವರಿಸಿದ್ದರು. ಡಾ. ಅಂಬೇಡ್ಕರ್ ಅವರಿಗೆ ಸಂಪುಟದಲ್ಲಿ ಯಾವುದೇ ಮಹತ್ವದ ಅಧಿಕಾರವನ್ನು ನೀಡದೆ ಆಡಳಿತದಲ್ಲಿ ಬಳಸಿಕೊಳ್ಳಲಾಯಿತು ಎನ್ನುತ್ತಾರೆ ಸೂರಜ್ ಅವರು.
ಡಾ. ಅಂಬೇಡ್ಕರ್ ಅವರು ೧೯೪೭ ರಲ್ಲಿ ಅಸ್ಪೃಶ್ಯರ ಪ್ರಕರಣವನ್ನು ಯುಎನ್ಗೆ ತೆಗೆದುಕೊಂಡು ಹೋಗಿರಲಿಲ್ಲ. ಅವರ ತರ್ಕವು ಸಂವಿಧಾನ ಸಭೆ ಮತ್ತು ಭವಿಷ್ಯದ ಭಾರತದ ಸಂಸತ್ತಿನ ನಂಬಿಕೆಯ ಮೇಲೆ ಆಧಾರಿತವಾಗಿತ್ತು. ಸರಕಾರವು ಅಸ್ಪೃಶ್ಯರಿಗೆ ಅಗತ್ಯವಾದ ಹಕ್ಕುಗಳನ್ನು ನೀಡುತ್ತದೆ ಎಂದು ಅವರು ಆಶಿಸಿದರು. ಅವರ ನಿರಿಕ್ಷೆ ತಪ್ಪಾಗಿತ್ತು, ಹೀಗಾಗಿ ಅವರಿಗೆ ಭಾರತೀಯ ಆಡಳಿತದ ಕುರಿತು ಕಹಿತನ ಬೆಳೆಯಿತು. ಡಾ. ಅಂಬೇಡ್ಕರ್ ಅವರು ಬಹುಶಃ ಯುಎನ್ ಗೆ ಹೋಗುವ ತಮ್ಮ ನಿರ್ಧಾರವನ್ನು ಆಕ್ರಮಣಕಾರಿಯಾಗಿ ಅನುಸರಿಸಲಿಲ್ಲ, ಏಕೆಂದರೆ ಅವರು ಕಾನ್ಸ್ಟಿಟ್ಯೂಯಂಟ್ ಅಸೆಂಬ್ಲಿಗೆ ಪ್ರವೇಶಿಸಲು ಆಶಿಸುತ್ತಿದ್ದರು ಆದ್ದರಿಂದ ಅವರು ಸಂವಿಧಾನವನ್ನು ಈ ಗುರಿಯತ್ತ ಹರಿಸಿದರು. ಆದಾಗ್ಯೂ, ಪರಿಶಿಷ್ಟ ಜಾತಿಗಳಿಗೆ ಸಂವಿಧಾನದಲ್ಲಿ ಮಾಡಲಾದ ನಿಬಂಧನೆಗಳಿಂದ ಅವರು ತೃಪ್ತರಾಗಲಿಲ್ಲ. ರಾಜೀನಾಮೆ ಪತ್ರದಲ್ಲಿ ಅವರು ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ: “….ಪರಿಶಿಷ್ಟ ಜಾತಿಗಳ ಸ್ಥಾನವನ್ನು ಕಾಪಾಡಲು ಸಂವಿಧಾನದಲ್ಲಿ ಮಾಡಲಾದ ನಿಬಂಧನೆಗಳು ನನಗೆ ತೃಪ್ತಿ ತಂದಿಲ್ಲ. ಆದಾಗ್ಯೂ, ಅವುಗಳನ್ನು ಪರಿಣಾಮಕಾರಿಯಾಗಿ ಮಾಡಲು ಸರ್ಕಾರವು ಕೆಲವು ಸಂಕಲ್ಪವನ್ನು ತೋರಿಸುತ್ತದೆ ಎಂದು ಆಶಿಸುತ್ತಾ ನಾನು ಅವುಗಳನ್ನು ಮೌಲ್ಯಯುತವಾಗಿ ಸ್ವೀಕರಿಸಿದ್ದೆ. ಇಂದು ಪರಿಶಿಷ್ಟ ಜಾತಿಗಳ ಸ್ಥಾನವೇನು? ನಾನು ನೋಡುವಂತೆ ಅದು ಮೊದಲಿನಂತೆಯೇ ಇದ್ದು ಯಾವುದೇ ಬದಲಾವಣೆ ಕಂಡಿಲ್ಲ. ಅದೇ ಹಳೆಯ ದೌರ್ಜನ್ಯ, ದಬ್ಬಾಳಿಕೆ, ಹಿಂದೆ ಇದ್ದ ಅದೇ ಹಳೆಯ ತಾರತಮ್ಯ ಈಗಲೂ ಅಸ್ತಿತ್ವದಲ್ಲಿದೆ ಮತ್ತು ಬಹುಶಃ ಅದು ಇನ್ನೂ ಕೆಟ್ಟ ರೂಪಕ್ಕೆ ತಿರುಗಿದೆ.”
ಡಾ. ಅಂಬೇಡ್ಕರ್ ಅವರ ಈ ಪ್ರಯತ್ನವನ್ನು ಸೂರಜ್ ಅವರು ಬ್ರಾಹ್ಮಣ-ಬನಿಯಾ ಆಳ್ವಿಕೆಯ ಸ್ವತಂತ್ರ ಭಾರತದಲ್ಲಿ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಆಶಿಸಿದ ಪರಿಶಿಷ್ಟ ಜಾತಿಯ ನಾಯಕನ ಖಂಡನೀಯ ಸ್ವಯಂ ದೋಷಾರೋಪವಾಗಿದೆ ಎನ್ನುತ್ತಾರೆ. ಡಾ. ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಸೇರಿಸುವುದರಲ್ಲಿ ಅಂಬೇಡ್ಕರ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರಸ್ಪರ ಲಾಭವಿತ್ತು. ಆದಾಗ್ಯೂ, ಅಂಬೇಡ್ಕರ್ ಅವರ ಬೇಡಿಕೆಗಳನ್ನು ದಮನಿಸಲಾಯಿತು. ಭಾರತೀಯ ದಲಿತರ ಸಮಸ್ಯೆಯ ಅಂತರಾಷ್ಟ್ರೀಕರಣ ಮತ್ತು ಜಾತಿ ವ್ಯವಸ್ಥೆಯ ವಿಚಾರದಲ್ಲಿ ಯುಎನ್ನ ಮಧ್ಯಸ್ಥಿಕೆ ಭಾರತಕ್ಕೆ ಮುಜುಗರ ತರುವಂತಿತ್ತು. ಸ್ವತಂತ್ರ ಭಾರತದ ಮೇಲ್ವರ್ಗದ ಹಿಂದೂ ನಾಯಕತ್ವವನ್ನು ಮುಜುಗರಕ್ಕೆ ಸಿಕ್ಕಿಸಲು ದಲಿತರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕರೆದೊಯ್ಯುವುದಾಗಿ ಡಾ. ಅಂಬೇಡ್ಕರ್ ಬೆದರಿಕೆ ಹಾಕಿದಾಗ ಬಹುಶಃ ಕಾಂಗ್ರೆಸ್ ಮತ್ತು ಅಂಬೇಡ್ಕರ್ ನಡುವೆ ಕೆಲವು ಅಲಿಖಿತ, ಮೌನ ಒಪ್ಪಂದಗಳಾದವು. ಇದರರ್ಥˌ ಆ ಮೂಲಕ ತೃತೀಯ ಜಗತ್ತಿನ ನಾಯಕ ನೆಹರೂರವರ ಗೆಲುವನ್ನು ರಕ್ಷಿಸಲಾಯಿತೆ ಎನ್ನುವ ಈ ಪ್ರಶ್ನೆಗಳು ನಮ್ಮಲ್ಲಿ ಉಳಿದು ಬಿಟ್ಟಿವೆˌ ಆದರೆ ಜಾತಿ ವ್ಯವಸ್ಥೆಯ ನಿರ್ಮೂಲನೆ ಕುರಿತ ಯುಎನ್ನ ಅಸಡ್ಡೆ ಇಂದಿಗೂ ಮುಂದುವರಿಯುತ್ತಿದೆ ಎನ್ನುತ್ತಾರೆ ಸೂರಜ್ ಯೆಂಗ್ಡೆಯವರು.