ಕರ್ನಾಟಕದ ವಿವಿಧ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಮೂವರು ವೃತ್ತಿ ನಿರತ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 15 ಲಕ್ಷ ಮೌಲ್ಯದ
28ಓ ಗ್ರಾಂ ಚಿನ್ನಾಭರಣ ಮತ್ತು 2.4 ಕೆಜಿ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು. ಮೈಸೂರು ನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಹುಣಸೂರು ಪಟ್ಟಣದ ಮಾರುತಿ, ಮಂಜುನಾಥ ಬಡಾವಣೆಯಲ್ಲಿ ಮನೆ ಕಳವು ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಹುಣಸೂರು ಪಟ್ಟಣ ಪೊಲೀಸರು, ಹಾಸನ ಜಿಲ್ಲೆಯ ಚನ್ನರಾಯಪ್ಪಣ್ಣದ ಮಂಜುನಾಥ್ ಅಲಿಯಾಸ್ ಚೂಟಿ ಮಂಜು (೪೦), ಮುರುಗೇಶ್ ಅಲಿಯಾಸ್ ಕಪ್ಪೆ (೪೦), ಹುಣಸೂರಿನ ಗೋಪಿಕೃಷ್ಣ ಅಲಿಯಾಸ್ ಗೋಪಿ (೫೮) ಎಂಬ ವೃತ್ತಿನಿರತ ಖದೀಮರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹುಣಸೂರು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆ ಮತ್ತು ಮಂಜುನಾಥ ಬಡಾವಣೆಗಳಲ್ಲಿ ರಾತ್ರಿ ಕಳವು ಪ್ರಕರಣಗಳು ಆಗಿದ್ದವು, ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೇ ತಿಂಗಳಿನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡವು ಮೂರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ವಿರುದ್ಧ ಹುಣಸೂರು ಪಟ್ಟಣ ಠಾಣೆಯಲ್ಲಿ 5 ಪಿರಿಯಾಪಟ್ಟಣ ಠಾಣೆಯಲ್ಲಿ 1, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ 1, ಒಟ್ಟು ಮೈಸೂರು ಜಿಲ್ಲೆಯಲ್ಲಿ 9 ಪ್ರಕರಣಗಳು ಇವರ ವಿರುದ್ಧ ದಾಖಲಾಗಿರುವುದು ಕಂಡು ಬಂದಿದೆ ಎಂದರು.
ಬಂಧಿತರಿಂದ 18 ಲಕ್ಷದ ರೂ.ಮೌಲ್ಯದ 289 ಗ್ರಾಂ ಚಿನ್ನಾಭರಣ ಮತ್ತು 2.4 ಕೆಜಿ ಬೆಳ್ಳಿ ಪದಾರ್ಥಗಳು ಮತ್ತು ಮನೆಗಳ ಬಾಗಿಲ ಲಾಕ್ ಮುರಿಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಸ್ವತ್ತನ್ನು ಗಿರವಿ ಇಡಲು ಹೋಗುವ ವೇಳೆ ಇಬ್ಬರನ್ನು ಹುಣಸೂರಿನಲ್ಲಿ ಮತ್ತು ಒಬ್ಬರನ್ನು ಕೆ.ಆರ್. ನಗರದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ, ಹುಣಸೂರು ಉಪವಿಭಾಗ ಡಿಎಸ್ಪಿ ಎಂ.ಕೆ.ಮಹೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಎಂ. ದೇವೇಂದ್ರ, ಎಎಸ್ಐ ಪುಟ್ಟನಾಯಕ ಹಾಗೂ ಸಿಬ್ಬಂದಿ ಇದ್ದರು.