ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿರುವ ಆರೋಪದ ಮೇಲೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ 10 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಸೂಚಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಮೇ ತಿಂಗಳಲ್ಲಿ, ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರ ದೂರಿನ ಆಧಾರದ ಮೇಲೆ ಗೋಸ್ವಾಮಿ ವಿರುದ್ಧ ಉದಯಪುರದ ಅಂಬಾಮಾತಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು.
ಅಲ್ವಾರ್ ಜಿಲ್ಲೆಯ ರಾಜ್ಗಢದಲ್ಲಿ ದೇವಸ್ಥಾನವನ್ನು ಕೆಡವಿದ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಹಿಂದಿ ಆವೃತ್ತಿಯಾದ ರಿಪಬ್ಲಿಕ್ ಭಾರತ್ನಲ್ಲಿ ಏಪ್ರಿಲ್ನಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಆರೋಪವನ್ನು ಗೋಸ್ವಾಮಿ ಎದುರಿಸುತ್ತಿದ್ದಾರೆ.
ಏಪ್ರಿಲ್ 17 ರಂದು ಎರಡು ದೇವಾಲಯಗಳು ಮತ್ತು ಕೆಲವು ಅಂಗಡಿಗಳನ್ನು ನಾಗರಿಕ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. NDTV ಪ್ರಕಾರ, ಅಲ್ವಾರ್ ಜಿಲ್ಲೆಯ ರಾಜ್ಗಢ್ದಲ್ಲಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಗೂ ಸರ್ಕಾರ ರಸ್ತೆ ಅಗಲೀಕರಣದ ಹೆಸರಿನಲ್ಲಿ ಪುರಾತನ ಹಿಂದೂ ದೇವಾಲಯಗಳನ್ನು ಕೆಡವಿತ್ತು. ರಾಜ್ಗಢ್ ಪುರಸಭೆಯೂ ಬಿಜೆಪಿ ಆಡಳಿತದಲ್ಲಿದೆ ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತವಿದೆ.
ಗೋಸ್ವಾಮಿ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರಿತ ಕೃತ್ಯಗಳು), 120B (ಕ್ರಿಮಿನಲ್ ಪಿತೂರಿ), 499 (ಮಾನನಷ್ಟ), 501 (ಮಾನಹಾನಿಕರ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಪ್ರಕರಣದ ಜೊತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯೂ ಆರೋಪ ಹೊರಿಸಲಾಗಿತ್ತು.
ಗೋಸ್ವಾಮಿ ಅವರು ಮೇ ತಿಂಗಳಲ್ಲಿ FIRಅನ್ನು ರದ್ದುಗೊಳಿಸುವಂತೆ ಕೋರಿದ್ದರು. ಗೋಸ್ವಾಮಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ದೂರು ರಾಜಕೀಯ ಪ್ರೇರಿತ ಎಂದು ಹೇಳಿದ್ದರು. ಮೇ 20 ರಂದು, ರಾಜಸ್ಥಾನ ಹೈಕೋರ್ಟ್ ಮುಂದಿನ ವಿಚಾರಣೆಯ ದಿನಾಂಕದವರೆಗೆ ಗೋಸ್ವಾಮಿಗೆ ಮಧ್ಯಂತರ ರಕ್ಷಣೆ ನೀಡಿತು ಎಂದು ಲೈವ್ ಲಾ ವರದಿ ಮಾಡಿದೆ.
“ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ ಮತ್ತು ಎಫ್ಐಆರ್ನಲ್ಲಿ ಮಾಡಲಾದ ಆರೋಪಗಳು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಸಂಬಂಧಿಸಿವೆ ಎಂದು ಪರಿಗಣಿಸಿ, ಅರ್ಜಿದಾರರ ತಕ್ಷಣದ ಮತ್ತು ತುರ್ತು ವಿಚಾರಣೆಗೆ ಒಳಪಡುವುದಿಲ್ಲ ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ವಿಶೇಷವಾಗಿ ಕಾರ್ಯಕ್ರಮದ ವಿವರಗಳಾಗಲಿ ಅಥವಾ ಯಾವುದೇ ನಿರ್ದಿಷ್ಟ ಘಟನೆಯಾಗಲಿ ಲಿಖಿತ ಮಾಹಿತಿಯಲ್ಲಿ ಸೂಚಿಸದಿರುವುದನ್ನು, “ನ್ಯಾಯಮೂರ್ತಿ ದಿನೇಶ್ ಮೆಹ್ತಾ ಗಮನಿಸಿದ್ದರು.
ಮಂಗಳವಾರ, ನ್ಯಾಯಮೂರ್ತಿ ಮೆಹ್ತಾ ಅವರು, ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದರು. ಗೋಸ್ವಾಮಿಗೆ ನೀಡಲಾದ ಮಧ್ಯಂತರ ರಕ್ಷಣೆ ಆದೇಶವು ಜುಲೈ 19ಕ್ಕೆ ವರೆಗೆ ಮುಂದುವರಿಸುವಂತೆ ಆದೇಶ ನೀಡಿದ್ದಾರೆ. ಜೊತೆಗೆ ಈ ಆರೋಪಗಳಿಗೆ 10 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಕೋರ್ಟ್ ಆದೇಶಿದೆ. ಆದರೆ ಗೋಸ್ವಾಮಿಯ ಮಧ್ಯಂತರ ರಕ್ಷಣೆಯನ್ನು ಹಿಂಪಡೆಯಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು.