ಬೆಂಗಳೂರು: ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಸುದೀರ್ಘ ಸಿನಿಮಾ ಪಯಣದ ಹಲವು ಸಿಹಿ-ಕಹಿ ಘಟನೆಗಳು ಮತ್ತೆ ಚರ್ಚೆಗೆ ಬರುತ್ತಿವೆ. ತಮ್ಮ ಸರಳತೆ, ಸಜ್ಜನಿಕೆ ಹಾಗೂ ಮಿತಭಾಷಿ ಸ್ವಭಾವದಿಂದ ಗುರುತಿಸಿಕೊಂಡಿರುವ ಅನಂತ್ ನಾಗ್ ಅವರ ಬದುಕಿನಲ್ಲೂ ಒಮ್ಮೆ ಭೀಕರ ಹತ್ಯೆ ಯತ್ನ ನಡೆದಿತ್ತು. ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ನಡೆದ ಆ ದಾಳಿಯಲ್ಲಿ ಅನಂತ್ ನಾಗ್ ಅವರು ತೋರಿದ ಧೈರ್ಯದ ಘಟನೆ ಇಂದಿಗೂ ಗಮನ ಸೆಳೆಯುತ್ತದೆ.

1996ರ ಮಾರ್ಚ್ 14ರಂದು ಈ ಘಟನೆ ನಡೆದಿತ್ತು. ಆಗ ಅನಂತ್ ನಾಗ್ ಅವರು ಖ್ಯಾತ ನಟರಾಗಿರುವುದರ ಜೊತೆಗೆ ಸಕ್ರಿಯ ರಾಜಕಾರಣಿಯೂ ಆಗಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಅವರಿಗೆ ರಾಜಕೀಯ ವಿರೋಧವೂ ಎದುರಾಗಿತ್ತು.
ಅಂದು ಮುಂಜಾನೆ ಎಂದಿನಂತೆ ತಮ್ಮ ಪುತ್ರಿ ಅದಿತಿಯನ್ನು ಶಾಲೆಗೆ ಕರೆದೊಯ್ಯಲು ಅನಂತ್ ನಾಗ್ ಸಿದ್ಧರಾಗಿದ್ದರು. ಮಗಳನ್ನು ಕಾರಿನಲ್ಲಿ ಕೂರಿಸಿಕೊಂಡು ಕಾರು ಚಲಿಸಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಇಬ್ಬರು ಯುವಕರು ನಾಡಬಾಂಬ್ ಹಾಗೂ ಚಾಕು ಹಿಡಿದುಕೊಂಡು ಅವರ ಕಾರಿನ ಮೇಲೆ ದಾಳಿ ನಡೆಸಿದ್ದರು.
ಅದೃಷ್ಟವಶಾತ್ ದುಷ್ಕರ್ಮಿಗಳು ಎಸೆದ ನಾಡಬಾಂಬ್ ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸಲಿಲ್ಲ. ಆದರೆ ಕೈಯಲ್ಲಿ ಚಾಕು ಹಿಡಿದಿದ್ದ ದುಷ್ಕರ್ಮಿಗಳಿಂದ ಮಗಳಿಗೆ ಅಪಾಯವಾಗಬಹುದು ಎಂಬ ಆತಂಕ ಅನಂತ್ ನಾಗ್ ಅವರನ್ನು ಕಾಡಿತ್ತು. ತಕ್ಷಣ ಧೈರ್ಯದಿಂದ ಪ್ರತಿರೋಧಿಸಿದ ಅವರು ಒಬ್ಬನನ್ನು ಹೊಡೆದು ಕೆಳಗೆ ಬೀಳಿಸಿದರು.
ಇನ್ನೊಬ್ಬ ದುಷ್ಕರ್ಮಿ ಅಲ್ಲಿಂದ ತಪ್ಪಿಸಿಕೊಂಡು ಓಡಲು ಆರಂಭಿಸಿದ. ಆದರೆ ಅನಂತ್ ನಾಗ್ ಅಲ್ಲಿಗೇ ನಿಲ್ಲಲಿಲ್ಲ. ಆತನನ್ನು ಬೆನ್ನಟ್ಟಿ ಓಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸಿನಿಮಾ ಪರದೆಯಲ್ಲಿ ಅತಿಯಾದ ಹೀರೋಯಿಸಂ ತೋರಿಸದ ನಟ, ನಿಜ ಜೀವನದಲ್ಲಿ ತೋರಿದ ಈ ಧೈರ್ಯ ಅಂದು ಭಾರಿ ಸುದ್ದಿಯಾಗಿತ್ತು.

ಆದರೆ ಈ ಘಟನೆ ಅನಂತ್ ನಾಗ್ ಹಾಗೂ ಅವರ ಕುಟುಂಬದ ಮೇಲೆ ಆಳವಾದ ಪರಿಣಾಮ ಬೀರಿತ್ತು. ಹಲವು ವರ್ಷಗಳ ಬಳಿಕ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈ ಘಟನೆಯನ್ನು ನೆನಪಿಸಿಕೊಂಡಿದ್ದ ಅನಂತ್ ನಾಗ್, ದಾಳಿಯ ಬಳಿಕ ಕುಟುಂಬದ ಸುರಕ್ಷತೆ ಕುರಿತು ಸದಾ ಆತಂಕವಿರುತ್ತಿತ್ತು ಎಂದು ಹೇಳಿದ್ದರು.
ವಿಶೇಷವಾಗಿ ಮಗಳ ಸುರಕ್ಷತೆಯ ಬಗ್ಗೆ ಭಯ ಹೆಚ್ಚಾಗಿತ್ತು. ರಾತ್ರಿ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು, ಪತ್ನಿ ಹಾಗೂ ಮಗಳಿಗೆ ಪದೇಪದೇ ಕರೆ ಮಾಡಿ ಅವರ ಸುರಕ್ಷತೆಯನ್ನು ವಿಚಾರಿಸುವುದು ಅಭ್ಯಾಸವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.ಅನಂತ್ ನಾಗ್ ಅವರ ದೀರ್ಘ ಸಿನಿಮಾ ಪಯಣದಲ್ಲಿ ಪ್ರಶಂಸೆ, ಜನಪ್ರಿಯತೆ ಹಾಗೂ ಗೌರವಗಳ ಜೊತೆಗೆ ಇಂತಹ ಕಹಿ ಅನುಭವಗಳೂ ಸೇರಿಕೊಂಡಿವೆ. ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ದೊರೆತಿರುವ ಸಂದರ್ಭದಲ್ಲಿ ಅವರ ಕಲಾ ಪಯಣದ ಈ ಅಪರೂಪದ ಘಟನೆ ಕೂಡ ಮತ್ತೆ ನೆನಪಾಗುತ್ತಿದೆ.






