ಹೆಂಡತಿಯೊಂದಿಗೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಅಣ್ಣ ಹಾಗೂ ಸೋದರಳಿಯನನ್ನು ಮಾಜಿ ಸೈನಿಕನೊಬ್ಬ ಗುಂಡಿಕ್ಕಿ ಕೊಂದ ಘಟನೆ ಮಧ್ಯಪ್ರದೇಶ ಸಾಗ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ (ಸೆಪ್ಟೆಂಬರ್ 2) ತಿಳಿಸಿದ್ದಾರೆ.
“ಈ ಘಟನೆ ಲಾಲೇಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಆರೋಪಿ ರಾಮಧ ತಿವಾರಿಯನ್ನು ಬಂಧಿಸಲಾಗಿದೆ. ಜಗಳದಲ್ಲಿ ಮಧ್ಯಪ್ರವೇಶಿಸಿದ್ದ ಮಗಳು ಗಾಯಗೊಂಡಿದ್ದಾಳೆ” ಎಂದು ಸನೋಧಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ಪಿ.ದುಬೆ ಹೇಳಿದ್ದಾರೆ.
ರಾಮಧರ್ ಅವರು ತಮ್ಮ ಪತ್ನಿ ಸಂಧ್ಯಾ ಅವರೊಂದಿಗೆ ಜಗಳವಾಡುತ್ತಿದ್ದರು. ಈ ಸಂದರ್ಭ ರಾಮಧರ್ ಅವರ ಅಣ್ಣ ರಾಮ್ಮಿಲನ್ ಹಾಗೂ ಸೋದರಳಿಯ ಅಜ್ಜು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ್ದಾರೆ. ಆಗ ಆರೋಪಿಯು ತಮ್ಮ ಅಣ್ಣ, ಸೋದರಳಿಯ, ಮಗಳು ವರ್ಷಾ ಮೇಲೆ ಗುಂಡು ಹಾರಿಸಿದ್ದಾನೆ’ ಎಂದರು.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನಾದರೂ, ಕೆಲವು ಗಂಟೆಗಳ ಬಳಿಕ ಆತನನ್ನು ಬಂಧಿಸಲಾಯಿತು. ಗುಂಡೇಟಿನಿಂದ ಗಾಯಗೊಂಡಿದ್ದ ರಾಮ್ಮಿಲನ್, ಅಜ್ಜು, ವರ್ಷಾ ಅವರನ್ನು ಬುಂದೇಲಖಂಡ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಾಮ್ ಮಿಲನ್ ಮತ್ತು ಅಜ್ಜು ಮೃತಪಟ್ಟಿದ್ದಾರೆ. ವರ್ಷಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.