ಎನ್ಡಿಟಿವಿಯನ್ನು ಅದಾನಿ ಸಮೂಹ ಖರೀದಿ ಬಳಿಕ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿ ಬಿಟ್ಟು ನಿರ್ಗಮಿಸಿರುವ ಬೆನ್ನಲ್ಲೇ ಅದಾನಿ-ಅಂಬಾನಿಗಳ ಕೊಳ್ಳುಬಾಕತನಗಳ ಕುರಿತು ಜೋರಾಗಿಯೇ ಚರ್ಚೆ ನಡೆಯುತ್ತಿದೆ.
ಈ ನಡುವೆ ಖ್ಯಾತ ಸಿನೆಮಾ ಗೀತೆ ರಚನೆಕಾರ ಕವಿರಾಜ್ ಪರೋಕ್ಷವಾಗಿ ಅದಾನಿ ಅಂಬಾನಿಯವರ ಕೊಳ್ಳುಬಾಕತನಗಳ ಬಗ್ಗೆ ತಮ್ಮ ತೀಕ್ಷ್ಣ ಬರೆಹದ ಮೂಲಕ ಎಚ್ಚರಿಸಿದ್ದಾರೆ.
ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ ಎಂದ ಕವಿರಾಜ್, ʼವಿಮಾನ ನಿಲ್ದಾಣಗಳಿಂದ ಹಿಡಿದು ಬಂದರು , ರೈಲು, ವಿದ್ಯುತ್ , ನೀರು ಸರಬರಾಜು , ಸಂಪರ್ಕ ಜಾಲ , ಎಲ್ಲಾ ಪತ್ರಿಕೆ , ಟೀವಿ ಚಾನೆಲ್ ಸಹಿತ ತರಕಾರಿ ಮಾರಾಟ ಕೂಡಾ ಅವರದ್ದೇ. ಎಲ್ಲವೂ ಅವರ ನಿಯಂತ್ರಣದಲ್ಲಿರುತ್ತದೆ. ಬೆಲೆಯೇರಿಸಿದರೆ ಮುಂದಿನ ಚುನಾವಣೆಯಲ್ಲಿ ಮತದಾರರು ಮನೆದಾರಿ ತೋರಿಸಬಹುದೆಂಬ ಭಯ ಅವರಿಗಿರುವುದಿಲ್ಲ. ಕಾರಣ ಅವರೇನು ಚುನಾವಣೆಗೆ ನಿಂತು ಮತ ಬಿಕ್ಷೆ ಬೇಡುವವರಲ್ಲ. ಅವರಿಗೆ ಬೇಕಿರೋದು ಹೂಡಿದ ಹಣದ ಹಲವಾರು ಪಟ್ಟು ಲಾಭದ ಹರಿವಷ್ಟೇʼ ಎಂದು ಬರೆದಿದ್ದಾರೆ.
ಮುಂದುವರೆದು, ʼಲಕ್ಷ ಲಕ್ಷ ಕೋಟಿ ಸಂಪತ್ತಿನ ಒಡೆಯರಿಗೆ ತಮಗೆ ಬೇಕಾದ ಜನಾಭಿಪ್ರಾಯ ರೂಪಿಸಿ ಅವರ ಆಜ್ಞಾಪಾಲಕ ಸರ್ಕಾರ ಸ್ಥಾಪಿಸಲು ಖರ್ಚಾಗುವುದು ಅವರಿಗೆ ಕೇವಲ ‘ಪೀ ನಟ್’ ( ಕಡಲೆಕಾಯಿ ) ಎನ್ನಬಹುದಾದ ಕೆಲವು ಸಾವಿರ ಕೋಟಿಗಳಷ್ಟೇ. ಇದರ ಪ್ರಯೋಗ ಈಗಾಗಲೇ ಯಶಸ್ವಿಯಾಗಿ ನಡೆದಾಗಿದೆ. ಅದರಾಚೆ ಇವನು ಮಾತು ಕೇಳದಿದ್ದರೆ ಮುಲಾಜಿಲ್ಲದೆ ಎತ್ತಿ ಬಿಸಾಕಿ ಅವನನ್ನು ಉತ್ಸವ ಮೂರ್ತಿಯಾಗಿಸಿ ಕೂರಿಸುವುದು ಅವರಿಗೆ ಕಿರು ಬೆರಳಿನ ಕೆಲಸ. ಮುಂದಿನ ದಿನಗಳ ವಿಪ್ಲವಗಳು ಹೇಗಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ.ʼ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
