2019ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಿದ್ದಕ್ಕಾಗಿ ದೇಶದ್ರೋಹದ ಪ್ರಕರಣದಡಿಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕ ಶಾರ್ಜೀಲ್ ಇಮಾಮ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಶನಿವಾರ, ನವೆಂಬರ್ 28ರಂದು ಜಾಮೀನು ನೀಡಿದೆ. ಅವರ ಮೇಲೆ ಐಪಿಸಿ ಸೆಕ್ಷನ್ 124A (ದೇಶದ್ರೋಹ), 153A (ಧರ್ಮ, ಜನಾಂಗದ ದ್ವೇಷ ಉತ್ತೇಜಿಸುವುದು), 153B (ಶಾಂತಿ ಭಂಗವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುವುದು) ಮತ್ತು 505(2) (ಆತಂಕಕಾರಿ ಹೇಳಿಕೆಗಳು, ತಪ್ಪು ಉದ್ದೇಶವನ್ನು ಸೃಷ್ಟಿಸುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ದೆಹಲಿ, ಮಣಿಪುರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲೂ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈಗಾಗಲೇ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಅಕ್ಟೋಬರ್ನಲ್ಲಿ ದೆಹಲಿಯ ನ್ಯಾಯಾಲಯವು ಆ ಭಾಷಣಕ್ಕಾಗಿ ಇಮಾಮ್ಗೆ ಜಾಮೀನು ನಿರಾಕರಿಸಿತ್ತು. “ಪ್ರಚೋದನಕಾರಿ ಭಾಷಣದ ಧ್ವನಿಯು ಸಾರ್ವಜನಿಕ ಶಾಂತಿ, ಸಮಾಜದ ಶಾಂತಿ ಮತ್ತು ಸಾಮರಸ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ” ಎಂದು ಜಾಮೀನು ನಿರಾಕರಣೆಗೆ ಕಾರಣ ನೀಡಿತ್ತು.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (UAPA) ಕಾಯಿದೆಯಡಿಯಲ್ಲೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನವೆಂಬರ್ 2 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಇಮಾಮ್ರ ಜಾಮೀನು ಅರ್ಜಿಯ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ.
ಇಮಾಮ್ ಅವರು ತಮ್ಮ ವಕೀಲರಾದ ಅಹ್ಮದ್ ಇಬ್ರಾಹಿಂ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಾವು ಶಾಂತಿ ಬಯಸುವ ಪ್ರಜೆಯಾಗಿದ್ದು ಯಾವ ಪ್ರತಿಭಟನೆಯ ಸಮಯದಲ್ಲೂ ಹಿಂಸಾಚಾರದಲ್ಲಿ ಭಾಗಿಯಾಗಲಿಲ್ಲ ಎಂದು ಹೇಳಿದ್ದಾರೆ. ಡಿಸೆಂಬರ್ 13 ರಂದು ಮಾಡಿದ ಭಾಷಣವೇ ಆಗಿರಲಿ ಅಥವಾ ತನ್ನ ಯಾವುದೇ ಭಾಷಣದಲ್ಲಿ ಆಗಿರಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ವಿರುದ್ಧ ಯಾವುದೇ ಅಸಮಾಧಾನವನ್ನು ಹರಡುವ ಅಥವಾ ಯಾವುದೇ ಸಮುದಾಯದ ವಿರುದ್ಧ ಹಿಂಸೆ ಅಥವಾ ಕೋಮುಭಾವನೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿಲ್ಲ ಎಂದು ಅವರು ವಾದಿಸಿದರು.

ಫೆಬ್ರವರಿ 2020 ರ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಪ್ರಕರಣಗಳು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡಿವೆ ಎಂದು ಈಗಾಗಲೇ ಹಲವಾರು ಮಾನವ ಹಕ್ಕುಗಳ ಹೋರಾಟಗಾರರು ಅಭಿಪ್ರಾಯ ಪಟ್ಟಿದ್ದಾರೆ. ತಿಂಗಳುಗಟ್ಟಲೆ ಶಾಂತಿಯುತವಾಗಿ ಆಂದೋಲನ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು ಬಹಿರಂಗವಾಗಿ ಪ್ರಚೋದನಕಾರಿ ಮತ್ತು ಬೆದರಿಕೆಯ ಭಾಷಣ ಮಾಡಿದ ಬಲಪಂಥೀಯ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಿಲ್ಲ ಎನ್ನುವ ದೂರುಗಳನ್ನೂ ಸಲ್ಲಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಸದ್ಯಕ್ಕೆ ಶಾರ್ಜಿಲ್ ಇಮಾಮ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರೂ ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಸೇರಿದಂತೆ ಅವರ ವಿರುದ್ಧದ ಇತರ ಪ್ರಕರಣಗಳು ಇನ್ನೂ ಬಾಕಿಯಿರುವುದರಿಂದ ಅವರು ಸದ್ಯಕ್ಕೆ ಜೈಲಿನಲ್ಲಿಯೇ ಇರಲಿದ್ದಾರೆ.