ಕರೋನಾ ಸಾವಿನ ಭೀತಿ ಮತ್ತು ಅದರೊಂದಿಗೇ ಬಂದ ಲಾಕ್ ಡೌನ್ ತಂದ ಬದುಕಿನ ಸಂಕಷ್ಟದ ಭೀತಿಯ ನಡುವೆ ಜನಸಾಮಾನ್ಯರು ಹೈರಾಣಾಗಿದ್ದರೆ, ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಜನರ ಸಾವು-ನೋವುಗಳನ್ನೇ ಬಂಡವಾಳ ಮಾಡಿಕೊಂಡ ನೂರಾರು ಘಟನೆಗಳು ಕಳೆದ ಎರಡು ಒಂದೂವರೆ ವರ್ಷದಲ್ಲಿ ನಡೆದುಹೋಗಿವೆ.
ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿ ಶಂಕರ್ ಅಂತಹದ್ದೇ ಸಾವಿನ ಮನೆಯ ಜಂತಿ ಎಣಿಸುವ ಕೆಲಸವನ್ನು ಮಾಡಿರುವುದು ಆರ್ ಟಿ ಐ ಕಾರ್ಯಕರ್ತರೊಬ್ಬರು ಹೊರತೆಗೆದಿರುವ ಮಾಹಿತಿಯಿಂದ ಬಯಲಾಗಿದೆ.
ಕರೋನಾ ಮಹಾಮಾರಿಯ ಹೊತ್ತಲ್ಲಿ ಜನರ ಸಂಕಷ್ಟಕ್ಕೆ ಹೆಗಲಾಗಬೇಕಾಗಿದ್ದ, ಜನರ ಜೊತೆ ನಿಲ್ಲಬೇಕಿದ್ದ ಜನಪ್ರತಿನಿಧಿಗಳು ಕೋವಿಡ್ ಕೇರ್ ಸೆಂಟರಿನ ಟಾಯ್ಲೆಟ್ಟಿನ ಚೊಂಬಿನಿಂದ ಹಿಡಿದು ವೆಂಟಿಲೇರಿನ ತನಕ ಎಲ್ಲದರಲ್ಲೂ ಮನುಷ್ಯತ್ವ ಮರೆತು ಕಮೀಷನ್ ದಂಧೆಗೆ ಇಳಿದರು. ಜನರ ತೆರಿಗೆ ಹಣವನ್ನು ಅದೇ ಜನರ ಸಾವು-ನೋವಿನ ಹೆಸರಲ್ಲಿ ಲೂಟಿ ಹೊಡೆದರು. ಆಸ್ಪತ್ರೆಯ ಹಾಸಿಗೆ ಬುಕಿಂಗ್ ದಂಧೆಯಿಂದ ಕೋವಿಡ್ ಲಸಿಕೆ ಬುಕಿಂಗ್ ವರೆಗೆ ಪ್ರತಿ ವಿಷಯದಲ್ಲೂ ದುಡ್ಡು, ರಾಜಕೀಯ ಲಾಭದ ಭರ್ಜರಿ ಫಸಲು ಕೊಯ್ದರು. ಜನ ಬೀದಿ ಬೀದಿಯಲ್ಲಿ ಪ್ರಾಣ ಬಿಡುತ್ತಿರುವಾಗ ಶವಗಳ ಸಂಸ್ಕಾರದ ಹೆಸರಲ್ಲೂ ಸ್ಮಶಾನದ ಕಾಸಿಗೂ ಬಾಯಿ ಹಾಕಿ ಬಾಚಿಕೊಂಡರು.
ಅಂತಹದ್ದೇ ನಿರ್ಲಜ್ಜ ವ್ಯವಹಾರವೊಂದು ತಡವಾಗಿ ಬೆಳಕಿಗೆ ಬಂದಿದ್ದು, ತುಮಕೂರು ಗ್ರಾಮಾಂತರ ಶಾಸಕರು ಖಾಸಗಿಯಾಗಿ ಕೋವಿಡ್ ಲಸಿಕೆ ನೀಡುವುದಾಗಿ ಹೇಳಿ ಅತ್ತ ಸರ್ಕಾರಕ್ಕೂ, ಇತ್ತ ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೂ ವಂಚನೆ ಎಸಗಿದ್ದಾರೆ. ಅವರು ಸುಮಾರು 10 ಸಾವಿರ ಮಂದಿಗೆ ನೀಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಅದು ಸಂಪೂರ್ಣ ಸುಳ್ಳು ಮತ್ತು ಜನರಿಗೆ ನೀಡಿದ ಲಸಿಕೆ ನಿಜವಾಗಿಯೂ ಲಸಿಕೆಯೇ ಅಥವಾ ಬರೀ ನೀರೇ ಎಂಬ ಅನುಮಾನ ಮೂಡಿದೆ. ಹಾಗಾಗಿ ಕೂಡಲೇ ಆ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆರ್ ಟಿ ಐ ಕಾರ್ಯಕರ್ತ ಗಿರೀಶ್ ಎಂಬುವರು ದಾಖಲೆ ಸಹಿತ ದೂರು ನೀಡಿದ್ದಾರೆ!
ಶಾಸಕ ಡಿ ಸಿ ಗೌರಿಶಂಕರ್ ಅವರು ಕಳೆದ ಆಗಸ್ಟ್ ನಲ್ಲಿ(1 ಆಗಸ್ಟ್ 2021) ತುಮಕೂರಿನ ಬಳಗೆರೆ ಗ್ರಾಮದ ಹೆಬ್ಬೂರಿನ ತಮ್ಮ ನಿವಾಸದಲ್ಲಿ ಉಚಿತ ಲಸಿಕೆ ಕಾರ್ಯಕ್ರಮ ನಡೆಸಿದ್ದರು. 2500 ಮಂದಿಗೆ ಲಸಿಕೆ ನೀಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್ ಒ) ಮನವಿ ಮಾಡಿದ್ದ, ಶಾಸಕರು, ಆ ಲಸಿಕಾ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ನಡೆಸಿ, ಜಾಹೀರಾತು ನೀಡಿ ಪ್ರಚಾರ ಮಾಡಿದ್ದರು. ಅಭಿಯಾನದ ದಿನ ಸಾವಿರಾರು ಮಂದಿ ಅವರ ಮನೆಯಲ್ಲಿ ನೆರೆದಿದ್ದರು ಮತ್ತು ಸ್ವತಃ ಶಾಸಕರೇ ತಾವು ಅಂದು ಅಲ್ಲಿ ಬರೋಬ್ಬರಿ 10 ಸಾವಿರ ಮಂದಿಗೆ ಲಸಿಕೆ ನೀಡಿರುವುದಾಗಿ ಮಾಧ್ಯಮ ಹೇಳಿಕೆಯನ್ನೂ ನೀಡಿದ್ದರು.
ಆದರೆ, ಇದೀಗ ಆರ್ ಟಿಐ ಕಾರ್ಯಕರ್ತ ಗಿರೀಶ್ ಕೆ ಸಿ ಅವರು ಮಾಹಿತಿ ಹಕ್ಕಿನಡಿ ವಿವಿಧ ಮೂಲಗಳಲ್ಲಿ ಪಡೆದಿರುವ ಆ ಲಸಿಕಾ ಅಭಿಯಾನದ ಕುರಿತ ದಾಖಲೆಗಳು ಶಾಸಕ ಗೌರಿ ಶಂಕರ್ ಅವರ ಆ ಚುನಾವಣಾ ರಾಜಕಾರಣದ ಗುರಿಯ ಲಸಿಕಾ ಅಭಿಯಾನವೇ ನಕಲಿ ಎಂಬುದನ್ನು ಸಾರಿ ಹೇಳುತ್ತಿದೆ.
ಜೊತೆಗೆ ಅಂತಹ ಪ್ರಚಾರದ ಹುಚ್ಚಿನ, ರಾಜಕೀಯ ಲಾಭದ ಅಭಿಯಾನದಲ್ಲಿ ಲಸಿಕೆ ಪಡೆದ ಜನರಿಗೆ ನೀಡಲಾದ ಲಸಿಕೆಯ ಮೂಲ ಯಾವುದು? ಅದು ನಿಜವಾಗಿಯೂ ಲಸಿಕೆಯೇ? ಅಥವಾ ಲಸಿಕೆಯ ಹೆಸರಲ್ಲಿ ಇನ್ನೇನೋ ಚುಚ್ಚಿ ಪ್ರಚಾರ ಪಡೆಯಲಾಯಿತೆ? ಖಾಸಗಿ ವ್ಯಕ್ತಿಯೊಬ್ಬರು, ಖಾಸಗೀ ಜಾಗದಲ್ಲಿ ಲಸಿಕಾ ಅಭಿಯಾನ ನಡೆಸಲು ವಿಪತ್ತು ನಿರ್ವಹಣಾ ಕಾಯ್ದೆ-2005ರ ಅಡಿ ಅವಕಾಶವೇ ಇಲ್ಲ. ಜೊತೆಗೆ ಲಸಿಕೆ ಸಂಗ್ರಹ, ನೀಡಿಕೆಯ ಜಾಗದ ವಿಷಯದಲ್ಲಿ ಕೂಡ ವಿಪತ್ತು ನಿರ್ವಹಣಾ ಕಾಯ್ದೆ, ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಶಿಕ್ಷಾರ್ಹ ಗಂಭೀರ ಅಪರಾಧ. ಆ ಹಿನ್ನೆಲೆಯಲ್ಲಿ ಶಾಸಕ ಡಿ ಸಿ ಗೌರಿಶಂಕರ್, ಅವರಿಗೆ ಲಸಿಕಾ ಅಭಿಯಾನ ನಡೆಸಲು ನಿಯಮ ಉಲ್ಲಂಘಿಸಿ ಅನುಮತಿ ನೀಡಿದ ಡಿಎಚ್ ಒ, ಡಿಎಸ್ ಒ, ಆರ್ ಸಿಎಚ್ ಒ ಮತ್ತು ಡಿಐಒ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಮತ್ತು ಅಭಿಯಾನದಲ್ಲಿ ನಮೂದಿಸಿರುವ ಖಾಸಗಿ ಸಕರಿಯಾ ಹೆಲ್ತ್ ಕೇರ್ ಮತ್ತು ಲೈಫ್ ಸ್ಟ್ಐಲ್ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ತನಿಖೆ ನಡೆಸಬೇಕು ಎಂದು ಗಿರೀಶ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಗಿರೀಶ್ ತಮ್ಮ ದೂರಿನಲ್ಲಿ ಅಡಕ ಮಾಡಿರುವ ಮಾಹಿತಿಗಳನ್ನು ಗಮನಿಸಿದರೆ, ಶಾಸಕರು ಸ್ವತಃ ಹೇಳಿಕೊಂಡಂತೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬರೋಬ್ಬರಿ ಹತ್ತು ಸಾವಿರ ಮಂದಿಗೆ ನೀಡಲಾದ ಲಸಿಕೆಯ ನೈಜತೆಯೇ ಅನುಮಾನಕ್ಕೆ ಎಡೆ ಮಾಡಿದ್ದು, ಇಡೀ ಲಸಿಕಾ ಅಭಿಯಾನವೇ ಒಂದು ಬೋಗಸ್ ಪ್ರಹಸನ ಎಂಬ ಶಂಕೆ ಹುಟ್ಟಿಸಿದೆ.
ಲಸಿಕಾ ಅಭಿಯಾನಕ್ಕೆ ಖಾಸಗಿ ವ್ಯಕ್ತಿಯಾದ ಶಾಸಕರಿಗೆ, ಅವರ ಖಾಸಗಿ ಮನೆಯಲ್ಲಿ ಸಾವಿರಾರು ಮಂದಿಗೆ ಲಸಿಕೆ ನೀಡಲು ಅನುಮತಿ ನೀಡಿದ ತುಮಕೂರು ಡಿಎಚ್ ಒ ಕ್ರಮದಿಂದ ಹಿಡಿದು, ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ನಮೂದಿಸಿ, ಆ ಸಂಬಂಧ ಲಸಿಕಾ ವೆಚ್ಚವನ್ನು ಭರಿಸುವ ಕುರಿತ ನಿಯಮಗಳು, ಲಸಿಕೆ ಸಾಗಣೆ ಮತ್ತು ಸಂಗ್ರಹದ ಮಾರ್ಗಸೂಚಿಗಳು, ಲಸಿಕಾ ಜಾಗದಲ್ಲಿ ವಹಿಸಬೇಕಾದ ಕ್ರಮಗಳು ಮತ್ತು ಇರಬೇಕಾದ ಸೌಲಭ್ಯಗಳು, ಸೇರಿದಂತೆ ಪ್ರತಿ ಹಂತದಲ್ಲಿಯೂ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದನ್ನು ದಾಖಲೆ ಸಹಿತ ಗಿರೀಶ್ ಅವರು ದೂರಿನಲ್ಲಿ ವಿವರಿಸಿದ್ದಾರೆ.
ನಿಯಮಗಳ ಪ್ರಕಾರ, ಲಸಿಕೆ ನೀಡಲು ಸರ್ಕಾರಿ ಆರೋಗ್ಯ ವ್ಯವಸ್ಥೆ ಅಥವಾ ಖಾಸಗೀ ಆಸ್ಪತ್ರೆಗಳಿಗೆ ಮಾತ್ರ ಅವಕಾಶವಿದೆ. ಸ್ವಂತ ಆಸ್ಪತ್ರೆ ಹೊಂದಿರುವ ಅಥವಾ ಲಸಿಕೆ ನೀಡಲು ಭಾರತ ಸರ್ಕಾರದ ಅನುಮೋದನೆ ಪಡೆದಿರುವ ಎಂಪನೆಲ್ಡ್ ಆಸ್ಪತ್ರೆಗಳೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಂಡ ಖಾಸಗೀ ಕೈಗಾರಿಕಾ ಸಂಸ್ಥೆಗಳು ಮತ್ತು ಕಂಪನಿಗಳು ಕೂಡ ಲಸಿಕಾ ಅಭಿಯಾನ ನಡೆಸಬಹುದು. ಆದರೆ, ಆ ಆಸ್ಪತ್ರೆಗಳು ಲಸಿಕೆಯ ವಿವರಗಳನ್ನು ಜಿಲ್ಲಾ ಆರ್ ಸಿಎಚ್ ಒಗೆ ನೀಡಿ, ಅವರ ಅನುಮೋದನೆ ಪಡೆಯುವುದು ಕಡ್ಡಾಯ. ತಮ್ಮದೇ ಸ್ವಂತ ಆಸ್ಪತ್ರೆ ಹೊಂದಿರುವ ಸಂಸ್ಥೆಗಳು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಲು ಅವಕಾಶವಿದೆ. ಹಾಗೇ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ತಯಾರಕರಿಂದಲೇ ಲಸಿಕೆ ಖರೀದಿಸಬಹುದು. ಆದರೆ, ಆ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಮತ್ತು ಅದನ್ನು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ವರ್ಗಾವಣೆ ಮೂಲಕವೇ ಮಾಡಬೇಕು ವಿನಃ ಖಾತೆಗೆ ನೇರವಾಗಿ ನಗದು ಜಮಾ ಮಾಡುವಂತಿಲ್ಲ.
ಆದರೆ, ಶಾಸಕ ಗೌರಿಶಂಕರ್ ತಮ್ಮ ಮನೆಯಲ್ಲಿ ಲಸಿಕಾ ಅಭಿಯಾನ ನಡೆಸುವುದಾಗಿ ಹೇಳಿ ಅನುಮತಿ ಕೋರಿ ಡಿಎಚ್ ಒ ಗೆ ಸಲ್ಲಿಸಿದ ಮನವಿ ಪತ್ರದಲ್ಲಿ(30 ಜುಲೈ 2021ರಂದು) ಖಾಸಗೀ ಆಸ್ಪತ್ರೆಯ ಸಹಯೋಗದಲ್ಲಿ ನಡೆಸುವುದಾಗಿ ಹೇಳಿದ್ದರೂ, ಆಸ್ಪತ್ರೆಯ ಹೆಸರು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ, ಬೆಂಗಳೂರಿನ ಎಚ್ ಬಿಆರ್ ಲೇಔಟ್ ವಿಳಾಸದ ಸಕರಿಯಾ ಆಸ್ಪತ್ರೆಯ ಹೆಸರಿನಲ್ಲಿ ಲಸಿಕೆಯ ಸರಕು ಪಟ್ಟಿ(SAK/VACCINE-O124) ಪಡೆದು ಡಿಎಚ್ ಒಗೆ ಸಲ್ಲಿಸಿದ್ದಾರೆ. ಆ ಪಟ್ಟಿಯ ಪ್ರಕಾರ ಲಸಿಕೆಗಾಗಿ ಪ್ರತಿ ಡೋಸ್ ಗೆ 710 ರೂ. ದರದಲ್ಲಿ ಒಟ್ಟು 17,50,000 ರೂ. ಪಾವತಿ ಮಾಡಲಾಗಿದೆ(ಬ್ಯಾಚ್ ನಂಬರ್-4121Z110/MFG ದಿನಾಂಕ: 06-06-2021 ಎಕ್ಸಪ್ 05-03-2022 COVISHIELD). ಆ ಮಾಹಿತಿ ಮೇರೆಗೆ ಡಿಎಚ್ ಒ, ಕೋವಿನ್ ಪೋರ್ಟಲ್ ನಲ್ಲಿ ಡಿ ಸಿ ಗೌರಿ ಶಂಕರ್, ಶಾಸಕರ ಕಚೇರಿ, ಹೆಬ್ಬೂರು, ತುಮಕೂರು ಎಂಬ ವಿಳಾಸ ನೀಡಿ, CVC ID W818792 ಎಂಬ ಐಡಿ ನಿರ್ಮಿಸಿದ್ದಾರೆ ಎಂದು ಗಿರೀಶ್ ಅವರ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ 2021ರ ಆಗಸ್ಟ್ 1ರಂದು ಹೆಬ್ಬೂರಿನ ತಮ್ಮ ನಿವಾಸಲದಲ್ಲಿ ಲಸಿಕಾ ಅಭಿಯಾನ ನಡೆಸಿದ್ದಾರೆ. ಡಿಎಚ್ ಒ ಅನುಮತಿ ಪಡೆಯುವಾಗ 200-2500 ಮಂದಿಗೆ ಲಸಿಕೆ ನೀಡುವುದಾಗಿ ಹೇಳಿದ್ದರೂ, ಸ್ವತಃ ಶಾಸಕರು ಬಳಿಕ ನೀಡಿದ ಪತ್ರಿಖಾ ಹೇಳಿಕೆಯಲ್ಲಿ ಅಂದು 10 ಸಾವಿರ ಮಂದಿಗೆ ಲಸಿಕೆ ನೀಡಿರುವುದಾಗಿ ಹೇಳಿದ್ದಾರೆ. ಆ ಕುರಿತು ವೀಡಿಯೋ, ಫೋಟೋ ಹಾಗೂ ಪತ್ರಿಕಾ ಹೇಳಿಕೆಗಳನ್ನು ದೂರಿನಲ್ಲಿ ಅಡಕ ಮಾಡಲಾಗಿದೆ ಎಂದೂ ಗಿರೀಶ್ ಹೇಳಿದ್ದಾರೆ.
ಆದರೆ, ನಿಯಮಗಳ ಪ್ರಕಾರ ಖಾಸಗಿ ವ್ಯಕ್ತಿ ಲಸಿಕಾ ಅಭಿಯಾನ ನಡೆಸಲು ಅವಕಾಶವೇ ಇಲ್ಲ. ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲು ಅವಕಾಶವಿದ್ದರೂ, ಖಾಸಗಿ ವ್ಯಕ್ತಿಗಳ ನಿವಾಸದಲ್ಲಿ ಲಸಿಕಾ ಕೇಂದ್ರ ತೆರೆಯಲು ಅವಕಾಶವಿಲ್ಲ. ಲಸಿಕೆ ಖರೀದಿಗೆ ಸಕರಿಯಾ ಆಸ್ಪತ್ರೆಯ ವತಿಯಿಂದ ನರಸಿಂಹಮೂರ್ತಿ ಎನ್ ಎಂಬುವರ ಹೆಸರಲ್ಲಿ 17,50,000 ಮೊತ್ತವನ್ನು ಜಿಎಸ್ ಟಿ ರಹಿತವಾಗಿ ಪಾವತಿಸಲಾಗಿದೆ. ಜೊತೆಗೆ ಆ ಸರಕು ಪಟ್ಟಿಯಲ್ಲಿ ಗೌರಿ ಶಂಕರ್ ಹೆಸರು ಇಲ್ಲದೇ ಇದ್ದರೂ ಕೋವಿನ್ ಪೋರ್ಟಲ್ ನಲ್ಲಿ ಸಿವಿಸಿ ಐಡಿ ಮಾಡುವಾಗ ಡಿಎಚ್ ಒ ಶಾಸಕರ ಹೆಸರನ್ನು ಸೇರಿಸಿದ್ದಾರೆ.
ಹಾಗೆಯೇ ಲಸಿಕಾ ಮಾರ್ಗಸೂಚಿ ಪ್ರಕಾರ ಸಿವಿಸಿಗಳಾಗಿ(ಕೋವಿಡ್ ಲಸಿಕಾ ಕೇಂದ್ರ) ಕಾರ್ಯನಿರ್ವಹಿಸುವ ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್ ಗೆ 250 ರೂ. ಮಾತ್ರ ಪಡೆಯಬೇಕು. ಲಸಿಕೆಯ ಖಾಸಗಿ ಆಸ್ಪತ್ರೆಗೆ ಹಸ್ತಾಂತರಿಸುತ್ತಲೇ ಕೂಡಲೇ ಲಸಿಕೆ ವೆಚ್ಚ 150 ರೂಗಳನ್ನು ವಿದ್ಯುನ್ಮಾನ ಪಾವತಿ ಮೂಲಕ ಎನ್ ಎಚ್ ಎ ಖಾತೆಗೆ ಜಮಾ ಮಾಡಬೇಕು. ಆದರೆ, ಸಕರಿಯಾ ಆಸ್ಪತ್ರೆ ಅಂತಹ ಯಾವುದೇ ಠೇವಣಿ ಮಾಡಿಲ್ಲ. ಅದಕ್ಕೆ ವಿರುದ್ಧವಾಗಿ ಸರಕು ಪಟ್ಟಿಯ ಪ್ರಕಾರ ಅವರು ಪ್ರತಿ ಡೋಸ್ ಗೆ 710 ರೂ. ಸಂಗ್ರಹಿಸಿದ್ದಾರೆ. ಇದು ಕಾನೂನು ಬಾಹರ ಎಂಬುದು ಗಿರೀಶ್ ವಾದ. ಜೊತೆಗೆ ಸರಕುಪಟ್ಟಿ ಪ್ರಕಾರ ಪ್ರತಿ ಡೋಸ್ ಗೆ 710 ರೂ. ಲೆಕ್ಕದಲ್ಲಿ 17,50,000 ರೂ. ಪಾವತಿಸಲಾಗಿದೆ. ಅಂದರೆ ಸುಮಾರು 2450 ಲಸಿಕೆಗಳಿಗೆ ಮಾತ್ರ ಪಾವತಿ ಮಾಡಲಾಗಿದೆ. ಆದರೆ, ಶಾಸಕರ ಗೌರಿಶಂಕರ್ ಅವರು ಲಸಿಕಾ ಅಭಿಯಾನದ ಕುರಿತು ನೀಡಿದ ಮಾಧ್ಯಮ ಹೇಳಿಕೆಗಳಲ್ಲಿ 10 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ ಎಂದಿರುವುದು ವರದಿಯಾಗಿದೆ. ಹಾಗಾದರೆ ಯಾವುದು ನಿಜ?
ಹೀಗೆ ಪ್ರತಿ ಹಂತದಲ್ಲೂ ಶಾಸಕ ಗೌರಿಶಂಕರ್ ನಡೆಸಿದ ಲಸಿಕಾ ಅಭಿಯಾನದ ಮೂಲಕ ಒಂದು ಕಡೆ ಕಾನೂನು ಉಲ್ಲಂಘನೆ ಮಾಡಿದ್ದರೆ, ಮತ್ತೊಂದು ಕಡೆ ತಪ್ಪು ಮಾಹಿತಿ ಮತ್ತು ಸುಳ್ಳುಗಳ ಮೂಲಕ ಜನರನ್ನೂ ಸರ್ಕಾರವನ್ನೂ ವಂಚಿಸಲಾಗಿದೆ. ಹಾಗಾಗಿ ಗಂಭೀರ ಅನುಮಾನಗಳಿಗೆ ಎಡೆ ಮಾಡಿದೆ ಮತ್ತು ನಿಯಮ ಉಲ್ಲಂಘಿಸಿ ಸಾವಿರಾರು ಜನರ ಜೀವದೊಂದಿಗೆ ಆಟವಾಡಿರುವ ಶಾಸಕ ಗೌರಿಶಂಕರ್ ಮತ್ತು ಅವರೊಂದಿಗೆ ಅಕ್ರಮಕ್ಕೆ ಕೈಜೋಡಿಸಿರುವ ಡಿಎಚ್ ಒ ಸೇರಿದಂತೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ಹೂಡಿ ತನಿಖೆ ನಡೆಸಬೇಕು ಮತ್ತು ಇಡೀ ಪ್ರಕರಣದ ವಾಸ್ತವಾಂಶಗಳು ಹೊರಬರಬೇಕು ಎಂಬುದು ದೂರದಾರರ ಆಗ್ರಹ.
ಮುಂದುವರೆಯಲಿದೆ………