ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಪ್ರತಿಪಾದಿಸಿರುವ ಟ್ವೀಟ್ ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಅಜಯ್ ದೇವಗನ್ ವಿರುದ್ದ ಕರ್ನಾಟಕದ ರಾಜಕೀಯ ನಾಯಕರು, ದೊಡ್ಡ ಸಿನಿಮಾ ನಟರು, ಪ್ರಗತಿಪರರು, ಕನ್ನಡಿಗರ ದಂಡೇ ಮುಗುಬೀಳುತ್ತಿದ್ದಾರೆ.
ಈ ವಿಚಾರವಾಗಿ ಹಾಲಿ, ಮಾಜಿ ಸಿಎಂಗಳು, ಸಚಿವರು ಹಾಗೂ ಶಾಸಕರು ಪ್ರತಿಕ್ರಿಯಿಸಿದ್ದು ಅಜಯ್ ದೇವಗನ್ರನ್ನು ಕಟುವಾಗಿ ಟೀಕಿಸಿದ್ದಾರೆ ಮತ್ತು ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ನಟ ಸುದೀಪ್ ಹೇಳಿರುವುದು ಸರಿಯಿದೆ ರಾಜ್ಯದಲ್ಲಿ ಮಾತೃ ಭಾಷೆಗಳು ಪ್ರಾಮುಖ್ಯತೆ ಪಡೆದಿರುತ್ತವೆ. ಪ್ರತಿಯೊಬ್ಬರು ಇದನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಹಿಂದಿ ಎಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಲ್ಲ ಮತ್ತು ರಾಷ್ಟ್ರೀಯ ಭಾಷೆಯಾಗುವುದಿಲ್ಲ ಮತ್ತು ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಟ ಅಜಯ್ ದೇವಗನ್ ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಬಿಜೆಪಿಯ ಪರಿಕಲ್ಪನೆಯನ್ನು ಅಜಯ್ ದೇವಗನ್ ಜನತೆ ಮುಂದೆ ತೆರೆದಿಡುತ್ತಿದ್ದಾರೆ. ಕನ್ನಡ ಸಿನಿಮಾಗಳ ಏಳಿಗೆಯನ್ನು ನೋಡಿ ಬಾಲಿವುಡ್ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಅಜಯ್ ದೇವಗನ್ರವರೇ ವರ್ಷಕ್ಕೆ ಒಮ್ಮೆಯಾದರೂ ಸಂವಿಧಾನವನ್ನು ಓದಲು ಸ್ವಲ್ಪ ಸಮಯ ಕಳೆಯಿರಿ ನಿಮ್ಮ ಅಜ್ಞಾನ ಆಗಲಾದರೂ ದೂರವಾಗುತ್ತದೆ. ಭಾರತದಲ್ಲಿ ಯಾವುದೇ ರಾಷ್ಟ್ರ ಭಾಷೆಯಿಲ್ಲ ಸಂವಿಧಾನಲ್ಲಿ ಎಲ್ಲಾ ಭಾಷೆಗಳಿಗೆ ಮಹತ್ವವಿದೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭಾರತದಲ್ಲಿ ಸರಿಸುಮಾರು 19,500 ಮಾತೃಭಾಷೆಗಳಿವೆ. ಭಾರತದೆಡೆಗಿನ ಪ್ರೀತಿ ಪ್ರತಿಯೊಂದು ಭಾಷೆಯಲ್ಲಿಯೂ ಏಕರೀತಿಯಲ್ಲಿ ವ್ಯಕ್ತವಾಗುತ್ತದೆ. ಯಾವುದೇ ಭಾಷೆಯು ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸದಂತೆ ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ಹೆಮ್ಮೆಯ ಕನ್ನಡಿಗನಾಗಿ ಮತ್ತು ಕಾಂಗ್ರೆಸ್ಸಿಗನಾಗಿ ನೆನಪಿಸಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಕುರಿತು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನಟ ಸತೀಶ್ ನೀನಾಸಂ, ನಾವು ನಿಮ್ಮನ್ನು ಗೌರವಿಸಿದ ಹಾಗೆ ನೀವು ನಮ್ಮನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಇನ್ನು ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ, ಈ ಕುರಿತು ಟ್ವೀಟ್ ಮಾಡಿದ್ದು ಹಿಂದಿ ರಾಷ್ಟ್ರದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ ಆದರೆ, ರಾಷ್ಟ್ರೀಯ ಭಾಷೆಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.