ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಮುನ್ನ 5 ಗ್ಯಾರಂಟಿಗಳನ್ನು ಕೊಟ್ಟಿತ್ತು. ಜೂನ್ 2ರಂದು ಭರ್ಜರಿಯಾಗಿ ಕೆಲವು ನಿಬಂಧನೆಗಳನ್ನು ಹಾಕಿ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ರಾಜ್ಯದ ಜನರೂ ಕೂಡ 5 ಗ್ಯಾರಂಟಿಗಳು ನಮಗೂ ಸಿಗುತ್ತೆ ಎನ್ನುವ ಕಾರಣಕ್ಕೆ ಹಿರಿ ಹಿರಿ ಹಿಗ್ಗಿದ್ದರು. ಗೃಹ ಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ವಿದ್ಯುತ್ ಕೊಡುವ ಬಗ್ಗೆ ಬಾಡಿಗೆದಾರರ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲವನ್ನು ನಿವಾರಣೆ ಮಾಡಲಾಗಿದೆ. ಆದರೆ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಯೋಜನೆಯಲ್ಲಿ ಸಣ್ಣದೊಂದು ಗೊಂದಲ ಉಳಿಸಿರುವ ರಾಜ್ಯ ಸರ್ಕಾರ, ನೋಟಿಫಿಕೇಷನ್ನಲ್ಲಿ ಸ್ಪಷ್ಟನೆ ನೀಡಿಲ್ಲ ಎನ್ನುವುದು ಬಹುತೇಕ ಜನರ ಗೊಂದಲಕ್ಕೆ ಕಾರಣವಾಗಿದೆ.
![](https://pratidhvani.com/wp-content/uploads/2023/06/pic-1-1.jpg)
ಗೃಹಲಕ್ಷ್ಮಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಅಂತ್ಯೋದಯ, BPL, APL ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ರೂಪಾಯಿ ಫಿಕ್ಸ್. ರೇಷನ್ ಕಾರ್ಡ್ನಲ್ಲಿ ಯಜಮಾನಿ ಎಂದು ನಮೂದು ಆಗಿರಬೇಕು. ಮನೆಯಲ್ಲಿ ಇಬ್ಬರು ಮಹಿಳೆ ಇದ್ದರೆ ಒಬ್ಬರಿಗಷ್ಟೇ ಹಣ. ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆಗಸ್ಟ್ 15ರಂದು ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ಜಮೆ ಮಾಡಲು ನಿರ್ಧಾರ ಮಾಡಲಾಗಿದೆ. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವುದು ಕಡ್ಡಾಯ. ಆದರೆ ಮನೆಯ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಹಾಗು ಯಜಮಾನಿ ಅಥವಾ ಪತಿ GST ರಿಟರ್ನ್ಸ್ ಸಲ್ಲಿಸುತ್ತಿದ್ದರೆ ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ಲಾಭ ಪಡೆಯಲು ಅರ್ಹರಲ್ಲ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ನೋಟಿಫಿಕೇಷನ್ನಲ್ಲಿ ಗೊಂದಲ ಏನಿದೆ..?
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಲ್ಲರಿಗೂ ಬ್ಯಾಂಕ್ ಅಕೌಂಟ್ ಎಂದು ಜನಧನ್ ಖಾತೆ ಮಾಡಿಸಿತ್ತು. ಆ ಬಳಿಕ ಟ್ಯಾಕ್ಸ್ ಸ್ಲಾಬ್ ಒಳಗೆ ಬಂದರೂ ಬಾರದಿದ್ದರೂ ಆದಾಯ ತೆರಿಗೆ (ITR) ಪಾವತಿಗೆ ಆದೇಶ ಮಾಡಿತ್ತು. ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬಾರದಿದ್ದರೆ ಕೇಂದ್ರ ಸರ್ಕಾರಕ್ಕೆ ಯಾವುದೇ ಆದಾಯ ತೆರಿಗೆ ಪಾವತಿ ಮಾಡುವಂತಿಲ್ಲ. ಎರಡ್ಮೂರು ಲಕ್ಷ ವೇತನ ಪಡೆಯುವ ವ್ಯಕ್ತಿ ಕೂಡ ಕಡ್ಡಾಯವಾಗಿ ITR ಸಲ್ಲಿಕೆ ಕಡ್ಡಾಯ ಮಾಡಿದ್ದಾರೆ. ಇದೀಗ ITR ಸಲ್ಲಿಕೆ ಮಾಡುವ ಎಲ್ಲರಿಗೂ 2 ಸಾವಿರ ಬರುವುದಿಲ್ಲವೋ..? ಅಥವಾ ಆದಾಯ ತೆರಿಗೆ ಕಟ್ಟುವ ಜನರಿಗೆ ಮಾತ್ರ ಸಿಗುವುದಿಲ್ಲವೋ ಅನ್ನೋ ಗೊಂದಲ ಸೃಷ್ಟಿಯಾಗಿದೆ.
ರಾಜ್ಯ ಸರ್ಕಾರದ ನೋಟಿಫಿಕೇಷನ್ನಲ್ಲಿರುವ 2ನೇ ಗೊಂದಲ..!
ಪ್ರತಿ ಮನೆಯಲ್ಲೂ ರೇಷನ್ ಕಾರ್ಡ್ ಇರುತ್ತದೆ. ಕೆಲವು ಮನೆಗಳಲ್ಲಿ ಮಾತ್ರ ರೇಷನ್ ಕಾರ್ಡ್ ಮಹಿಳೆಯರ ಹೆಸರಿನಲ್ಲಿ ಇರುತ್ತದೆ. ಬಹುತೇಕ ಮನೆಗಳ ರೇಷನ್ ಕಾರ್ಡ್ ಮನೆ ಮಾಲೀಕ ಯಾರು ಇರುತ್ತಾರೋ ಅವರ ಹೆಸರಿನಲ್ಲೇ ಇರುವುದು ಸರ್ವೇ ಸಾಮಾನ್ಯ. ಒಂದು ವೇಳೆ ರೇಷನ್ ಕಾರ್ಡ್ನಲ್ಲಿ ಮಹಿಳೆಯ ಹೆಸರು ಮನೆಯ ಮಾಲಕಿ ಅಂತಾ ನಮೂದು ಆಗದಿದ್ದರೆ ಈ ಯೋಜನೆಯ ಲಾಭ ಪಡೆಯುವುದು ಹೇಗೆ..? ರೇಷನ್ ಕಾರ್ಡ್ನಲ್ಲಿ ತಿದ್ದುಪಡಿಗೆ ಅವಕಾಶ ಕೊಡಲಾಗುತ್ತಾ..? ಅಥವಾ ಕೇವಲ ಮಹಿಳೆಯೇ ಯಜಮಾನಿ ಎಂದು ನಮೂದು ಮಾಡಿರುವ ಕಾರ್ಡ್ ಮಾಲೀಕರಿಗೆ ಮಾತ್ರವೇ ಲಾಭ ಸಿಗುತ್ತಾ ಅನ್ನೋ ಹೊಂದಲ ಮೂಡಿದೆ. ಈ ಬಗ್ಗೆ ಸರ್ಕಾರ ಉತ್ತರ ಕೊಡದೆ ನುಣುಚಿಕೊಲ್ಳುವ ಕೆಲಸ ಮಾಡುತ್ತಿದೆ.
ಉತ್ತರ ಕೇಳಿದಾಗ ಜಾರಿಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್..
ಗೃಹಲಕ್ಷ್ಮಿಯೋಜನೆ ಗ್ಯಾರಂಟಿಗೆ ಹಾಕಿರುವ ಷರತ್ತು ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಜಾರಿಕೊಳ್ಳೋ ಉತ್ತರ ನೀಡಿದ್ದಾರೆ. ಸರ್ಕಾರ ನಡೆಸೋರು ನಾವು, ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು. ಯಾರು ವೋಟರ್ ಲಿಸ್ಟ್ ಇಟ್ಟುಕೊಂಡಿದ್ದಾರೆ, ಯಾರು ವೋಟರ್, ಯಾರು ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಾರೆ, ಎಲ್ಲವನ್ನೂ ನೋಡಬೇಕು. ಅವರಿಗೆ ಬ್ಯಾಂಕ್ ಅಕೌಂಟ್ ಇರಬೇಕು. ಬೇರೆ ಅವರ ಅಕೌಂಟ್ ಕೊಡೋಕೆ ಆಗಲ್ಲ. ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಬೇಕು, ನಮ್ಮ ಬಳಿಯೂ ಎಲ್ಲಾ ದಾಖಲೆಗಳು ಇವೆ ಎಂದಿದ್ದಾರೆ. ಮನೆ ಸಂಸಾರ ಯಾರು ನಡೆಸುತ್ತಾರೆ ಅಂತ ಅವರೇ ಹೇಳಬೇಕು. ಅವರ ಮನೆ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದಿರುವ ಡಿಕೆ ಶಿವಕುಮಾರ್, ಒಂದು ಮನೆಗೆ ಒಂದು, ವೋಟ್ರ್ ಲಿಸ್ಟ್ನಲ್ಲಿ ಲೆಕ್ಕ ಇದೆ. ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ..? ಹೆಣ್ಣುಮಕ್ಕಳು ತೀರ್ಮಾನ ಮಾಡಬೇಕು ಎಂದಿದ್ದಾರೆ.
ಐಟಿ ಸಲ್ಲಿಕೆ ಮಾಡುವ ಜನರಿಗೆ ಬೇಕಿಲ್ಲ – ಡಿಕೆ ಶಿವಕುಮಾರ್
ಐಟಿ ಕಟ್ಟೋರಿಗೆ ಗ್ಯಾರಂಟಿ ಇಲ್ಲ ಎಂಬ ಆದೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಬಡವರಿಗೆ ಕೊಡಬೇಕು ಅಂತ ನಾವು ತೀರ್ಮಾನ ಮಾಡಿದ್ದು. ಐಟಿ ಕಟ್ಟೋರು ಯಾರು ಗ್ಯಾರಂಟಿ ಕೇಳಿಲ್ಲ. ಯಾರು ಬಂದು ಗ್ಯಾರಂಟಿ ಕೊಡಿ ಅಂತ ಕೇಳೋದಿಲ್ಲ. ಬಹಳ ಜನ ನಮಗೆ 2 ಸಾವಿರ ಬೇಡ ಎಂದು ಪತ್ರ ಬರೆದಿದ್ದಾರೆ. ಯಾರು ಪತ್ರ ಬರೆದಿದ್ದಾರೆ ಅಂತ ನಾನು ಹೇಳೋಕೆ ಅಗಲ್ಲ ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಇನ್ನು ಗ್ಯಾರಂಟಿ ಘೋಷಣೆ ಮಾಡುವಾಗ ಕಂಡಿಷನ್ ಇರಲಿಲ್ಲ, ಈಗ ಷರತ್ತುಗಳು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಿಕೆ ಶಿವಕುಮಾರ್, ಇದು ಸರ್ಕಾರ, ಸರ್ಕಾರ ನಡೆಸೋದು ನಾವು. ನಾವು ಏನ್ ಕೊಡಬೇಕು ಅಂತ ನಾವು ಹೇಳಿದ್ದೇವೆ. ಜನ ಕೇಳಿದ್ದಾರೆ ಅದನ್ನು ನಾವು ಕೊಡ್ತೇವೆ. ಐಟಿ ಕಟ್ಟೋರು ಯಾರು ನಮಗೆ ಬೇಕು ಅಂತ ಕೇಳಿಲ್ಲ. ಸರ್ಕಾರಿ ನೌಕರರಿಗೆ ಗ್ಯಾರಂಟಿ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ ನಮಗೆ ಅವೆಲ್ಲ ಗೊತ್ತಿದೆ ಬಿಡಿ ಎಂದು ಸಾಗ ಹಾಕಿದ್ದಾರೆ. ಒಟ್ಟಾರೆ ಒಂದೆರಡು ಗೊಂದಲಗಳನ್ನು ಪರಿಹರಿಸಿದರೆ ಸರ್ಕಾರದ ಗ್ಯಾರಂಟಿ ಜಾರಿಯಾಗೋದು ನಿಶ್ಚಿತ.
ಕೃಷ್ಣಮಣಿ