ಚಂದ್ರಶೇಖರ್ ಶೆಟ್ಟಿ, ಪತ್ರಕರ್ತರು….
ಬೆಂಗಳೂರು : 2010 ರಿಂದ 2014ರ ಅವಧಿಯಲ್ಲಿ ಭಾರತ ಮತ್ತು ಇರಾನ್ ನಡುವಿನ ತೈಲ ವ್ಯಾಪಾರವು ಜಾಗತಿಕ ರಾಜಕೀಯ ಒತ್ತಡಗಳ ನಡುವೆ ನಡೆದ ವಿಶಿಷ್ಟ ಆರ್ಥಿಕ ವ್ಯವಸ್ಥೆಯ ಉದಾಹರಣೆಯಾಗಿತ್ತು. ಆ ಸಮಯದಲ್ಲಿ “ಇರಾನ್ನ ಅಣು ಕಾರ್ಯಕ್ರಮ”ದ ಹಿನ್ನೆಲೆ ಅಮೆರಿಕ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಅದರ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದವು. ಇದರ ಪರಿಣಾಮವಾಗಿ ಇರಾನ್ ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡಾಲರ್ ಅಥವಾ ಯೂರೋ ಕರೆನ್ಸಿಯಲ್ಲಿ ಹಣ ಸ್ವೀಕರಿಸುವುದು ಬಹುತೇಕ ಅಸಾಧ್ಯವಾಗಿತ್ತು.

ಆದರೆ ಭಾರತಕ್ಕೆ ಇರಾನ್ನಿಂದ ಕಚ್ಚಾ ತೈಲ ಪೂರೈಕೆ ಅತ್ಯಂತ ಮಹತ್ವದ್ದಾಗಿದ್ದರಿಂದ ಈ ವ್ಯಾಪಾರವನ್ನು ಸಂಪೂರ್ಣ ನಿಲ್ಲಿಸುವುದು ಸಾಧ್ಯವಾಗಲಿಲ್ಲ. ಈ ಸವಾಲಿನ ಪರಿಸ್ಥಿತಿಯಲ್ಲಿ ಆಗಿನ ಪ್ರಧಾನಮಂತ್ರಿ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ನೇತೃತ್ವದ ಭಾರತ ಸರ್ಕಾರ ಒಂದು ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ರೂಪಿಸಿತು. ಅದೇ “ರೂಪಾಯಿ ಪಾವತಿ ವ್ಯವಸ್ಥೆ” (Rupee Payment Mechanism).
ಈ ವ್ಯವಸ್ಥೆಯಡಿ ಭಾರತೀಯ ತೈಲ ಕಂಪನಿಗಳು ಇರಾನ್ನಿಂದ ಖರೀದಿಸಿದ ತೈಲದ ಹಣವನ್ನು ಡಾಲರ್ನಲ್ಲಿ ವಿದೇಶಕ್ಕೆ ಕಳುಹಿಸುವ ಬದಲು ಭಾರತದಲ್ಲಿಯೇ ರೂಪಾಯಿ ಖಾತೆಗಳಲ್ಲಿ ಜಮಾ ಮಾಡತೊಡಗಿದವು. ಈ ಕಾರ್ಯಾಚರಣೆಗೆ ಸಾರ್ವಜನಿಕ ಕ್ಷೇತ್ರದ (UCO) ಬ್ಯಾಂಕ್ ಅನ್ನು ಆಯ್ಕೆ ಮಾಡಲಾಯಿತು. ಕಾರಣ, ಈ ಬ್ಯಾಂಕ್ಗೆ ಅಮೆರಿಕದ ಹಣಕಾಸು ವ್ಯವಸ್ಥೆಯೊಂದಿಗೆ ನೇರ ದೊಡ್ಡ ವ್ಯವಹಾರಿಕ ಸಂಪರ್ಕ ಕಡಿಮೆ ಇದ್ದುದರಿಂದ ನಿರ್ಬಂಧಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂಬ ಅಂದಾಜು ಇತ್ತು.

ಭಾರತೀಯ ಕಂಪನಿಗಳು ಪಾವತಿಸಿದ ಸಾವಿರಾರು ಕೋಟಿ ರೂಪಾಯಿಗಳು (UCO) ಬ್ಯಾಂಕ್ನಲ್ಲಿರುವ ಇರಾನ್ಗೆ ಸಂಬಂಧಿಸಿದ ಖಾತೆಗಳಲ್ಲಿ ಸಂಗ್ರಹವಾಗತೊಡಗಿದವು. ಈ ಹಣ ಸಂಪೂರ್ಣವಾಗಿ ಇರಾನ್ಗೆ ಸೇರಿದದ್ದೇ ಆಗಿದ್ದು, ಆರ್ಥಿಕ ನಿರ್ಬಂಧಗಳ ಕಾರಣದಿಂದ ಅದನ್ನು ತಕ್ಷಣವೇ ವಿದೇಶಗಳಿಗೆ ವರ್ಗಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇರಾನ್ ಈ ರೂಪಾಯಿ ನಿಧಿಗಳನ್ನು ಬಳಸಿ ಭಾರತದಿಂದ ಅಕ್ಕಿ, ಔಷಧಿ, ಕೃಷಿ ಉತ್ಪನ್ನಗಳು ಹಾಗೂ ಯಂತ್ರೋಪಕರಣಗಳನ್ನು ಖರೀದಿಸುತ್ತಿತ್ತು.
ಇದನ್ನೂ ಓದಿ : ಇರಾನ್-ಇಸ್ರೇಲ್ ಯುದ್ಧ: ಅಬುಧಾಬಿ ಏರ್ಪೋರ್ಟ್ನಲ್ಲಿ ಸಿಲುಕಿದ ಡ್ರೋನ್ ಪ್ರತಾಪ್ ಹೇಳಿದ್ದೇನು ?
ಈ ವ್ಯವಸ್ಥೆಯ ಪರಿಣಾಮವಾಗಿ ಯುಕೋ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಪ್ರಮಾಣದ ನಿಧಿಗಳು ದೀರ್ಘಕಾಲ ಉಳಿದಿದ್ದು, ಬ್ಯಾಂಕ್ಗೆ ಹಣದ ಲಭ್ಯತೆ ಹೆಚ್ಚುವಂತಾಯಿತು. ಬ್ಯಾಂಕ್ ತನ್ನ ಸಾಮಾನ್ಯ ಬ್ಯಾಂಕಿಂಗ್ ಚಟುವಟಿಕೆಗಳ ಮೂಲಕ ಈ ನಿಧಿಗಳನ್ನು ಬಳಸಿಕೊಂಡು ಆದಾಯ ಗಳಿಸಿತು ಮತ್ತು ಅದರ ಆರ್ಥಿಕ ಸ್ಥಿತಿಗೂ ಸಹಾಯಕವಾಯಿತು.
![]()
ಈ ರೂಪಾಯಿ ಪಾವತಿ ವ್ಯವಸ್ಥೆ ಭಾರತಕ್ಕೆ ತೈಲ ಸರಬರಾಜು ನಿರಂತರವಾಗಿರಲು ಸಹಾಯ ಮಾಡಿದ್ದು, ಜಾಗತಿಕ ನಿರ್ಬಂಧಗಳ ನಡುವೆಯೂ ಇರಾನ್ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಮುಂದುವರಿಸಲು ಸಾಧ್ಯವಾಗುವಂತೆ ಮಾಡಿತು. ಅಂದರೆ ಇದು ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ರಾಜತಾಂತ್ರಿಕ ಸಮತೋಲನ ಸಾಧಿಸಿದ ಪ್ರಾಯೋಗಿಕ ಪರಿಹಾರವಾಗಿತ್ತು.
ಹೀಗಾಗಿ ನಿರ್ಬಂಧಗಳ ಸಂಕೀರ್ಣ ಪರಿಸ್ಥಿತಿಯಲ್ಲಿಯೂ ಪರ್ಯಾಯ ಹಣಕಾಸು ವ್ಯವಸ್ಥೆ ರೂಪಿಸುವ ಮೂಲಕ ಭಾರತ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಂಡಿದ್ದ ಉದಾಹರಣೆಯಾಗಿ ಈ ವ್ಯವಸ್ಥೆ ಗಮನಾರ್ಹವಾಗುತ್ತದೆ.






