ಸಂಸತ್ತು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಚಾರ ಗದ್ದಲ ಸೃಷ್ಟಿಸುತ್ತಿದೆ. ಮಣಿಪುರ ವಿಚಾರಕ್ಕೆ ಪ್ರತಿಪಕ್ಷಗಳು ಎಬ್ಬಿಸಿದ ಗದ್ದಲದಿಂದ ಲೋಕಸಭೆ ಹಾಗೂ ರಾಜ್ಯಸಭೆಗಳ ಸೋಮವಾರದ (ಜು.31) ಕಲಾಪ ಮಂಗಳವಾರ (ಆಗಸ್ಟ್ 1) ಮುಂದೂಡಿಕೆಯಾಗಿದೆ.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಉಭಯ ಸದನಗಳ ಸಂಸತ್ತು ಮುಂಗಾರು ಅಧಿವೇಶನ ಕಲಾಪ ಮಣಿಪುರ ವಿಚಾರದ ಗದ್ದಲದಲ್ಲಿ ಅಂತ್ಯವಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಎರಡು ಸದನಗಳ ಕಲಾಪ ಮುಂದೂಡಿಕೆಯಾಗಿದೆ.
ಸಂಸತ್ತು ಮುಂಗಾರು ಅಧಿವೇಶನ ಲೋಕಸಭೆ ಕಲಾಪ ಬೆಳಿಗ್ಗೆ 11 ಗಂಟೆಗೆ ಆರಂಭವಾದ ನಂತರ ಮಣಿಪುರದ ವಿಚಾರವಾಗಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು. ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದವು. ಇದರಿಂದ ಸಭಾಧ್ಯಕ್ಷ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿದರು.
ಮಧ್ಯಾಹ್ನ ಮತ್ತೆ ಅರಂಭವಾದ ಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷಗಳು ಅಡ್ಡಿ ಮಾಡಿದವು. ಮಣಿಪುರ ವಿಚಾರವಾಗಿ ಗದ್ದಲ ಎಬ್ಬಿಸಿದವು. ಇದರಿಂದ ಕಲಾಪವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಮುಂದೂಡಲಾಯಿತು.
ರಾಜ್ಯಸಭೆಯ ಕಲಾಪ ಬೆಳಿಗ್ಗೆ 11ಕ್ಕೆ ಆರಂಭವಾಗಿ ಪ್ರತಿಪಕ್ಷಗಳ ಗದ್ದಲಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷಗಳ ಗದ್ದಲದಿಂದ ದಿನದಲ್ಲಿ ಕಲಾಪ ಮೂರು ಬಾರಿ ಮುಂದೂಡಿಕೆಯಾಯಿತು. ರಾಜ್ಯಸಭೆಯ ಬಿಜೆಪಿ ಸಂಸದ ಮತ್ತು ನಾಯಕ ಪೀಯೂಷ್ ಗೋಯಲ್ ಮಧ್ಯಾಹ್ನ 2 ಗಂಟೆಗೆ ಮಣಿಪುರ ವಿಚಾರವನ್ನು ಸರ್ಕಾರ ಚರ್ಚಿಸಲು ಸಿದ್ಧ ಎಂದು ಹೇಳಿದರು.
ಅಧಿವೇಶನದ ರಾಜ್ಯಸಭೆಯ ಕಲಾಪ ಮಧ್ಯಾಹ್ನ ಮತ್ತೆ ಆರಂಭವಾದಾಗ ಪ್ರತಿಪಕ್ಷಗಳು ಮತ್ತೆ ಪ್ರತಿಭಟನೆ ನಡೆಸಿದವು. ನಿಯಮ 267ರಡಿ ಮಣಿಪುರ ವಿಚಾರ ಚರ್ಚಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದವು. ಮತ್ತೆ ಕಲಾಪ 3.30ಕ್ಕೆ ಮುಂದೂಡಿಕೆಯಾಯಿತು.
ಮತ್ತೆ ಕಲಾಪ ಆರಂಭವಾದ ನಂತರ ಆಡಳಿತಾರೂಢ ಬಿಜೆಪಿ ಪಕ್ಷ ಮಣಿಪುರ ವಿಚಾರದ ಚರ್ಚೆಗೆ ಅಲ್ಪಾವಧಿ ಸಮಯ ನೀಡಿತು. ಇದರಿಂದ ಪ್ರತಿಪಕ್ಷಗಳ ಗದ್ದಲ ತೀವ್ರ ಸ್ವರೂಪ ಪಡೆಯಿತು. ಇದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಈ ನಿಯಮದ ಅನ್ವಯ ದೇಶದ ಪ್ರಮುಖ ವಿಷಯದ ಬಗ್ಗೆ ಚರ್ಚಿಸಲು ಕಲಾಪದಲ್ಲಿ ಪಟ್ಟಿ ಮಾಡಲಾದ ಇತರ ವಿಚಾರಗಳನ್ನು ರದ್ದುಪಡಿಸಲು ರಾಜ್ಯಸಭಾ ಸದಸ್ಯರು ಸಭಾಪತಿಗೆ ಲಿಖಿತ ಪತ್ರ ನೀಡಬೇಕು. ಪ್ರತಿಪಕ್ಷಗಳ ಸದಸ್ಯರು ಈ ನಿಯಮದಡಿ ಈಚೆಗೆ ರಾಜ್ಯಸಭೆಗೆ ಪತ್ರ ನೀಡಿದ್ದರು. ಇದನ್ನು ಸಭಾಪತಿ ಅಂಗೀಕರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮುಂಬೈ | ಬಾಂಬೆ ಐಐಟಿಯಲ್ಲಿ ಮಾಂಸಾಹಾರ ಸೇವಿಸಿದ ವಿದ್ಯಾರ್ಥಿಗೆ ಅವಮಾನ ; ವಿದ್ಯಾರ್ಥಿಗಳ ಆಕ್ರೋಶ
ಈ ವಾರದ ಅಧಿವೇಶನದಲ್ಲಿ ಎರಡು ಪ್ರಮುಖ ಘಟನೆಗಳು ಸಂಸತ್ತಿನಲ್ಲಿ ಘಟಿಸಲಿವೆ. ಆಡಳಿತಾರೂಢ ಬಿಜೆಪಿ ಪಕ್ಷ ದೆಹಲಿ ಸೇವಾ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ಒಕ್ಕೂಟ ʼಇಂಡಿಯಾʼ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಂಸತ್ತು ಮುಂಗಾರು ಅಧಿವೇಶನ ಜುಲೈ 20ಕ್ಕೆ ಆರಂಭವಾಗಿದ್ದು ಆಗಸ್ಟ್ 11ವರೆಗೆ ನಡೆಯಲಿದೆ.