ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಟೀಂ ಕ್ರೌರ್ಯಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ನರಳಿ ನರಳಿ ಪ್ರಾಣ ಬಿಟ್ಟಿರುವುದಾಗಿ ಫಾರೆನ್ಸಿಕ್ ಪರೀಕ್ಷೆಯಲ್ಲಿ ಬಯಲಾಗಿದೆ.
ಮೃತನ ಮರಣೋತ್ತರ ಪರೀಕ್ಷೆ ಇಂದು ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಗಾಯಗಳಿರುವುದು ಪತ್ತೆಯಾಗಿದೆ. ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯಾಗಳಾಗಿವೆ. ರಾಡ್ ಮತ್ತು ಕಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪರಿಣಾಮ ರೇಣುಕಾಸ್ವಾಮಿ ನರಳಿ ನರಳಿ ಸತ್ತಿರುವುದಾಗಿ ಫಾರೆನ್ಸಿಕ್ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ರೇಣುಕಾಸ್ವಾಮಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಪವಿತ್ರಾ ಗೌಡಗೆ (Pavithra Gowda) ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್ ಖಾತೆ ತೆರೆದು, ಖಾತೆಯ ಮೂಲಕ ರೇಣುಕಾಸ್ವಾಮಿ ಜೊತೆ ದರ್ಶನ್ ಟೀಂ ಸಂವಹನ ನಡೆಸುತ್ತಿತ್ತು.
ಅದರಂತೆ ಶನಿವಾರ ಮಾತನಾಡಲು ಇದೆ ಮನೆಯಿಂದ ಹೊರಗಡೆ ಬಾ ಎಂದು ಖಾತೆಯಿಂದ ಮಸೇಜ್ ಕಳುಹಿಸಲಾಗಿತ್ತು. ಈ ಮಸೇಜ್ಗೆ ಒಪ್ಪಿ ಆತನ ಮನೆಯಿಂದ ಹೊರಗೆ ಬಂದಿದ್ದ. ಆನಂತರ ಆತನನ್ನು ಅಪಹರಿಸಲಾಗಿತ್ತು.
ಹಲ್ಲೆ ನಡೆಸುವ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ. ದರ್ಶನ್ ಹೊಡೆದ ನಂತರ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಉಳಿದ ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.