ಧನ್ವೀರ್ ಮತ್ತು ರೀಷ್ಮಾ ನಾಣಯ್ಯ ಅಭಿನಯದ ‘ವಾಮನ’ ಸಿನಿಮಾದ ಟೀಸರ್ ಗುರುವಾರ (ಆಗಸ್ಟ್ 17) ಬಿಡುಗಡೆಯಾಗಿದೆ.
ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಲನಚಿತ್ರದ ನಿರ್ದೇಶಕರಾದಿಯಾಗಿ ಬಹುತೇಕರು ಹಾಜರಿದ್ದರು. ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಜನರ ಮೆಚ್ಚುಗೆ ಪಡೆದಿವೆ.
ಕಾರ್ಯಕ್ರಮದಲ್ಲಿ ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, “ಇದೊಂದು ಸಾಹಸ ಪ್ರಧಾನ ಚಿತ್ರವಾಗಿದೆ. ಚಿತ್ರದಲ್ಲಿ ಸಾಹಸ ದೃಶ್ಯಗಳು ಹೇಗಿರುತ್ತವೆ ಎಂದು ತೋರಿಸುವುದಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೇವೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಸಾಹಸ ಸನ್ನಿವೇಶಗಳಿವೆ. ಮೂರು ಸಾಹಸ ದೃಶ್ಯಗಳಿಗೆ ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನೊಂದರಲ್ಲಿ ಸಾಹಸ ಸನ್ನಿವೇಶ ಕಥೆ ಜೊತೆಯಾಗಿ ಸಾಗುತ್ತದೆ. ಇದು ಪ್ರೇಕ್ಷಕರಿಗೆ ಬೇರೆ ತರಹದ ಅನುಭವ ಕೊಡುತ್ತವೆ ಎಂಬ ನಂಬಿಕೆ ನನಗಿದೆ. ಈ ಸಾಹಸ ದೃಶ್ಯವನ್ನು ವಿಕ್ರಮ್ ಮೋರ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಜ್ ಮತ್ತು ವಿಕ್ರಮ್ ಮೋರ್ ಜೊತೆಗೆ ಜಾಲಿ ಬಾಸ್ಟಿನ್ ಅವರ ನೆರವು ಮತ್ತು ಮಾರ್ಗದರ್ಶನವಿದೆ. ಈ ಮೂವರೂ ಸಾಹಸ ನಿರ್ದೇಶಕರಿಗೆ ನಮ್ಮ ಚಿತ್ರತಂಡದಿಂದ ಧನ್ಯವಾದಗಳು” ಎಂದು ಹೇಳಿದರು.
ವಾಮನ ಚಿತ್ರವನ್ನು ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಧನ್ವೀರ್ ಅವರ ಚಿತ್ರ ಬಿಡುಗಡೆಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬದ ರೀತಿ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ವಾಮನ ಅಂದರೆ ದಶಾವತಾರದಲ್ಲಿ ಬರುವ ಐದನೇ ಅವತಾರ. ದುಷ್ಟತನವೇ ಸರ್ವಸ್ವ ಎನ್ನುವ ಜನರ ವಿರುದ್ಧ ವಾಮನ ಹೇಗೆ ಹೋರಾಡುತ್ತಾನೆ ಎಂಬುದು ಚಿತ್ರದ ಕಥೆ. ಇಲ್ಲಿ ರೌಡಿಸಂ, ಭೂಗತಲೋಕ ಮತ್ತು ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಈ ಚಿತ್ರದ ಹೈಲೈಟ್ ಅಂದರೆ ಸೆಂಟಿಮೆಂಟ್ ದೃಶ್ಯಗಳು. ಈ ಚಿತ್ರದಲ್ಲಿ ಒಂದು ಅದ್ಭುತವಾದ ಸಂದೇಶವಿದೆ ಎಂದು ಮಾಹಿತಿ ನೀಡಿದರು.
“ಈ ಚಿತ್ರದಲ್ಲಿ ನನ್ನದು ಎರಡು ತರಹದ ಶೇಡ್ ಇರುವ ಪಾತ್ರ. ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ನಿರ್ದೇಶಕರು ಮೂಲತಃ ಒಳ್ಳೆಯ ಬರಹಗಾರರು. ಅವರೊಂದು ಎಳೆಯನ್ನು ಹೇಳಿದ್ದರು. ಬಹಳ ಇಷ್ಟವಾಗಿ, ಅದನ್ನು ಮತ್ತಷ್ಟು ಬೆಳೆಸಿ ಎಂದು ಹೇಳಿದ್ದೆ. ಆ ಎಳೆ ಚಿತ್ರವಾಗಿ ರೂಪುಗೊಂಡು ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ. ಇಂದು ಗಣ್ಯರ ಸಮ್ಮುಖದಲ್ಲಿ ಮೈಸೂರಿನಲ್ಲಿ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಸೇರಿದಂತೆ ಬೇರೆ ಊರುಗಳಲ್ಲಿ ಸಹ ಚಿತ್ರದ ಪ್ರಮೋಷನ್ ಮಾಡುತ್ತೇವೆ” ಎಂದು ನಾಯಕ ನಟ ಧನ್ವೀರ್ ಸಂತಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ‘ತತ್ಸಮ ತದ್ಭವ’ ಚಿತ್ರದಿಂದ ʼದೂರಿ ಲಾಲಿʼ ಚಾಲೆಂಜ್
“ಈ ಚಿತ್ರದಲ್ಲಿ ನನ್ನದು ಬಹಳ ಮುದ್ದಾದ ಮತ್ತು ಅಷ್ಟೇ ಸರಳವಾದ ಪಾತ್ರ. ನನಗಂತೂ ಬಹಳ ಇಷ್ಟವಾದ ಪಾತ್ರ ಇದು. ಚಿತ್ರ ನೋಡಿದ ಜನರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ” ಎಂದು ನಾಯಕಿ ರೀಷ್ಮಾ ನಾಣಯ್ಯ ತಿಳಿಸಿದರು.
ಸಮಾರಂಭದಲ್ಲಿ ಹುಣಸೂರು ಶಾಸಕ ಹರೀಶ್ ಗೌಡ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಾಮನ ಚಿತ್ರ ಸೆಪ್ಟೆಂಬರ್ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.