
ತುಮಕೂರು: ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯೋದಕ್ಕೆ ನಾವು ಬಿಡೋದಿಲ್ಲ ಎಂದು ನಮ್ಮ ಸರ್ಕಾರ ಪ್ರಣಾಳಿಕೆಯಲ್ಲೇ ರಾಜ್ಯದ ಜನತೆಗೆ ಭರವಸೆ ಕೊಟ್ಟಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ ಹೇಳಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು.
ಎಲ್ಲಾ ಸಮುದಾಯಗಳು ಶಾಂತಿಯಿಂದ ಬದುಕಬೇಕು ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ವಿ. ಅದರಂತೆ ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಕೋಮುಗಲಭೆಗಳಾಗಲಿ, ಅಹಿತಕರ ಘಟನೆಗಳಾಗಲಿ ಅಂತಹ ಘಟನೆಗಳನ್ನ ನಡೆಯೋದಕ್ಕೆ ಸರ್ಕಾರ ವಿಶೇಷವಾಗಿ ಗೃಹ ಇಲಾಖೆ ಬಿಟ್ಟಿಲ್ಲ. ಜನರು ಸಹಕರಿಸಿದ್ದಾರೆ. ನಾನು ಅವರಿಗೆ ಅಭಿನಂದನೆ ಹೇಳೋದಕ್ಕೆ ಬಯಸುತ್ತೇನೆ ಎಂದರು.
ಇನ್ನು ಗಣೇಶೋತ್ಸವಕ್ಕೆ ಪೊಲೀಸ್ ಭದ್ರತೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಕಳೆದ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು.ಈ ಬಾರಿಯು ಕೂಡಾ ಸೆಪ್ಟೆಂಬರ್ 7 ರಂದು ಗಣಪತಿಯ ಉತ್ಸವ ಪ್ರಾರಂಭ ಆಗ್ತಾವೆ. ನಾನು ರಾಜ್ಯದ ಜನತೆಗೆ ಮನವಿ ಮಾಡಿಕೊಳ್ತೇನೆ.ಶಾಂತಿಯಿಂದ ಗಣೇಶೋತ್ಸವ ಆಚರಣೆ ಮಾಡೋಣ. ಅದಕ್ಕೆ ಬೇಕಾದಂತೆ ವಾತಾವರಣವನ್ನು ನಾವು ತಮಗೆ ನಿರ್ಮಿಸಿಕೊಡ್ತೇವೆ. ಎಲ್ಲರ ಸಹಕಾರ ಇರಲಿ. ಗಣೇಶನ ಹೆಸರೇಳಿಕೊಂಡು ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವಂತಹ ಕೆಲಸ ಮಾಡಬಾರದು. ಒಂದು ವೇಳೆ ಯಾರಾದರೂ ಅಂತಹ ಪ್ರಯತ್ನಗಳನ್ನು ಮಾಡಿದ್ರೆ ಕಾನೂನು ಕ್ರಮ ಆಗುತ್ತೆ. ನನಗೆ ವಿಶ್ವಾಸವಿದೆ ಕರ್ನಾಟಕದ ಜನತೆ ಶಾಂತಿ ಪ್ರಿಯರು. ಅಂತಹ ಘಟನೆಗಳು ನಡೆಯೋದಕ್ಕೆ ಬಿಡಲ್ಲ ಅಂತ ನನಗೆ ಭರವಸೆ ಇದೆ ಎಂದರು.