ಬೆಳಗಾವಿ ಅಧಿವೇಶನಕ್ಕೂ ಮುನ್ನ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದ್ದ ಮತಾಂತರ ನಿಷೇಧ ಕಾಯ್ದೆ ಹಿನ್ನೆಲೆಯಲ್ಲಿ ಸರ್ಕಾರದ ಅಂಕಿ ಅಂಶಗಳನ್ನೇ ಗಮನಿಸಿದರೆ ಬಿಜೆಪಿಯ ನಾಯಕರ ಮತ್ತೊಂದು ಮುಖ ದರ್ಶನ ರಾಜ್ಯದ ಜನತೆಗೆ ತಿಳಿಯುತ್ತದೆ.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬಲವಂತದ ಮತಾಂತರ, ಆಮಿಷ ನೀಡಿ ಮತಾಂತರಗೊಳಿಸುವುದು ಹಾಗೂ ಅನೈತಿಕ ಮಾರ್ಗಗಳ ಮೂಲಕ ಮತಾಂತರ ನಡೆಯಲಾಗುತ್ತಿದೆ. ರಾಜ್ಯಾದ್ಯಂತ ಸಾಮೂಹಿಕ ಮತಾಂತರ ಕೃತ್ಯಗಳು ಸಾಕಷ್ಟು ನಡೆಯುತಿದ್ದು, ಇದನ್ನು ತಪ್ಪಿಸಲು ʼಮತಾಂತರ ನಿಷೇಧ ಕಾಯ್ದೆʼ ಜಾರಿ ತರಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸರ್ಕಾರದ ನಡೆಯನ್ನು ಈ ಹಿಂದೆ ಸಮರ್ಥಿಸಿಕೊಂಡಿದ್ದರು.
ಆದರೆ, ರಾಜ್ಯದ ವಸ್ತುಸ್ಥಿತಿ ಬೇರೆಯೇ ಇದೆ. ರಾಜ್ಯ ಸರ್ಕಾರವೇ ಬಿಂಬಿಸಿರುವ ರೀತಿಯಲ್ಲಿ ಕರ್ನಾಟಕದಲ್ಲಿ ಮತಾಂತರ ನಡೆದಿಲ್ಲ ಎನ್ನುವುದನ್ನು ಸರ್ಕಾರದ ಅಂಕಿ-ಅಂಶಗಳೇ ಸಾಭೀತು ಪಡಿಸುತ್ತಿವೆ. ಈ ಕುರಿತು ದಾಖಲೆ ಸಮೇತ ʼದಿ ಫೈಲ್ʼ ವರದಿ ಮಾಡಿದೆ.

ಕರ್ನಾಟಕದಲ್ಲಿ ನಾಲ್ಕು ವರ್ಷಗಳಲ್ಲಿ ( 2018, 2019, 2020, 2021) ಮತಾಂತರ ವಿಚಾರವಾಗಿ ೧೬ ಪ್ರಕರಣಗಳು ದಾಖಲಾಗಿವೆ. ಗಮನಾರ್ಹ ಸಂಗತಿ ಎಂದರೆ 2021 ರ ಫೆಬ್ರವರಿ ಅಧಿವೇಶನದಲ್ಲಿ ʼಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕʼ ಮಂಡಿಸಲು ಮುಂದಾದಾಗ ಹೊಸದುರ್ಗದ ಶಾಸಕ ಗೂಳಿಹಟ್ಟಿ ಚಂದ್ರಶೇಖರ್ ಅವರು ಪ್ರಶ್ನೆಗೆ ಅಂದಿನ ಗೃಹ ಸಚಿವ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ಉತ್ತರಿಸಿ ಈ ಅಂಕಿ ಅಂಶಗಳನ್ನು ಸದನದ ಗಮನಕ್ಕೆ ತಂದಿದ್ದರು.
ರಾಜ್ಯದಲ್ಲಿ 2018 ರಲ್ಲಿ ಮೂರು, 2019ರ್ಲಿ ಏಳು, 2020ರಲ್ಲಿ ಐದು ಹಾಗೂ 2021ರಲ್ಲಿ ಒಂದು ಪ್ರಕರಣ ದಾಖಲಾಗಿವೆ. ಅದರಲ್ಲೂ ರಾಜಧಾನಿಯಲ್ಲಿ 2018 ರಲ್ಲಿ ಒಂದು, 2019ರಲ್ಲಿ ಒಂದು, 2020ರಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಕೊಡಗು, ಮಂಗಳೂರು ಹಾಗೂ ಚಿಕ್ಕಮಗಳೂರಲ್ಲಿ ಮೂರು ವರ್ಷದಲ್ಲಿ ಕೇವಲ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಮಂಡ್ಯ ಜಿಲ್ಲೆಯಲ್ಲಿ 2019 ರಲ್ಲಿ 1, 2020 ರಲ್ಲಿ 2, 2021, ರಲ್ಲಿ1 ಹಾಗೂ ಮೈಸೂರು ಜಿಲ್ಲೆಯಲ್ಲಿ 2020 ರಲ್ಲಿ 1 ಪ್ರಕರಣ ದಾಖಲಾಗಿದೆ. ರಾಮನಗರದಲ್ಲಿ 2019 ರಲ್ಲಿ 2, ಹಾಸನ ಜಿಲ್ಲೆಯಲ್ಲಿ 2018 ರಲ್ಲಿ 2, ಧಾರವಾಡದಲ್ಲಿ 2019 ರಲ್ಲಿ 1, ಉಡುಪಿಯಲ್ಲಿ 2019 ರಲ್ಲಿ 1 ಪ್ರಕರಣ ದಾಖಲಾಗಿದೆ.