ಸದ್ಯ ಸ್ಯಾಂಡಲ್ವುಡ್ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆ ವಿಚಾರವೇ ಚಾಲ್ತಿಯಲ್ಲಿದೆ. ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ನಿನ್ನೆ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂ ಮಾಡಿಕೊಂಡಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದ ರಿಸೆಪ್ಶನ್ನಲ್ಲಿ ಚಿತ್ರರಂಗದ ಹಾಗೂ ರಾಜಕೀಯದ ಗಣ್ಯಾತಿಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.
ಬೆಂಗಳೂರಿನ ಮಾಣಿಕ್ಯಚಾಮರ ವಜ್ರದ ಕಲ್ಯಾಣ ಮಂಟಪದಲ್ಲಿ ಅವಿವಾ ಹಾಗೂ ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವೇಳೆ ನಟ ಸುದೀಪ್ , ಯಶ್ , ರಜನೀಕಾಂತ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದ್ದರು. ನಿನ್ನೆ ನಡೆದ ರಿಸೆಪ್ಶನ್ ಪ್ರೋಗ್ರಾಂನಲ್ಲಿಯೂ ತಾರೆಯರ ದಂಡೇ ಹರಿದು ಬಂದಿತ್ತು.
![](https://pratidhvani.com/wp-content/uploads/2023/06/2023-06-08-3.jpg)
ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ನಲ್ಲಿ ಆರತಕ್ಷತೆ ವೇದಿಕೆ ನಿರ್ಮಾಣ ಮಾಡಲಾಗಿತ್ತು. ದೆಹಲಿಯ ಮೊರಿದಾಬಾದ್ನಿಂದ ಈ ವಿನೂತನ ವಿನ್ಯಾಸದ ಸ್ಟೇಜ್ ನಿರ್ಮಾಣ ಮಾಡಲಾಗಿತ್ತು. ಈ ಹಿಂದೆ ಯಾವುದೇ ಸೆಲೆಬ್ರಿಟಿಗಳ ಆರತಕ್ಷತೆ ಕಾರ್ಯಕ್ರಮಕ್ಕೂ ಇಷ್ಟೊಂದು ಅದ್ದೂರಿಯಾದ ಸ್ಟೇಜ್ ತಯಾರಾಗಿರಲಿಲ್ಲ.ಹೀಗಾಗಿ ಅಭಿಷೇಕ್ ಹಾಗೂ ಅವಿವಾ ಆರತಕ್ಷತೆ ವೇದಿಕೆ ಕೂಡ ಅತ್ಯಂತ ವಿಭಿನ್ನವಾಗಿ ಎಲ್ಲರ ಮನಸೂರೆಗೊಳ್ಳುವಂತಿತ್ತು.
ಮದುವೆಯ ದಿನದಂದು ಸಖತ್ ಆಗಿ ರೆಡಿಯಾಗಿದ್ದ ಅಭಿಷೇಕ್ ಹಾಗೂ ಅವಿವಾ ಜೋಡಿ ಆರತಕ್ಷತೆ ಕಾರ್ಯಕ್ರಮದಲ್ಲಿಯೂ ಮಿಂಚಿದ್ರು. ಅವಿವಾ ಬಂಗಾರ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ ನಟ ಅಭಿಷೇಕ್ ಮುತ್ತಿನ ಬಣ್ಣದ ಶೆರವಾನಿ ಧರಿಸಿದ್ದರು.
![](https://pratidhvani.com/wp-content/uploads/2023/06/2023-06-08-1.jpg)
ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ, ಮೈಸೂರು ಮಹಾರಾಜ ಯದುವೀರ್ ಒಡೆಯರ್, ನಟಿ ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ದಂಪತಿ . ನಟಿ ಆಶಿಕಾ ರಂಗನಾಥ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಸೇರಿದಂತೆ ತಾರೆಯರ ದಂಡೇ ಹರಿದು ಬಂದಿತ್ತು. ಇನ್ನು ಅಂಬಿ ಕುಟುಂಬಕ್ಕೆ ರಾಜಕೀಯ ನಂಟು ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಹಿರಿಯ ನಾಯಕ ಎಸ್ಎಂ ಕೃಷ್ಣ, ಸಂಸದ ಪ್ರತಾಪ್ ಸಿಂಹ ಸೇರದಂತೆ ಅನೇಕರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಂಬರೀಶ್ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಷೇಕ್ – ಅವಿವಾ ಮದುವೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕಾಟೇರಾ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ದರ್ಶನ್ ಮದುವೆ ಕಾರ್ಯಕ್ರಮ್ಕೆ ಆಗಮಿಸದೇ ಇದ್ದದ್ದು ಡಿ ಬಾಸ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆದರೆ ನಿನ್ನೆ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಬಂದ ದರ್ಶನ್ ನವಜೋಡಿಗೆ ಶುಭ ಹಾರೈಸಿದ್ರು, ಡಿ ಬಾಸ್ ಎಂಟ್ರಿ ವೇಳೆ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗಿದ ದೃಶ್ಯಗಳು ಸಹ ಕಂಡು ಬಂದವು.
![](https://pratidhvani.com/wp-content/uploads/2023/06/2023-06-08-2.jpg)
ಜೂನ್ 12ರಂದು ಅಭಿಷೇಕ್ ಹಾಗೂ ಅವಿವಾ ಆರತಕ್ಷತೆ ಕಾರ್ಯಕ್ರಮ ಮಂಡ್ಯದಲ್ಲಿ ನಡೆಯಲಿದೆ. ಅಂಬಿ ಕುಟುಂಬ ಮಂಡ್ಯ ಜನತೆಗೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಸಕ್ಕರೆ ನಾಡಲ್ಲಿಯೂ ಆರತಕ್ಷತೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಿದ್ದಾರೆ. ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಂಬಿ ಕುಟುಂಬದ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.