
—–ನಾ ದಿವಾಕರ ——
ಮನದಾಳದಲ್ಲಿ ಜೀವಂತವಾಗಿರುವ ಚಿಕಿತ್ಸಕನ ಸ್ಮರಣೆ ಎಂದರೆ ಚಿಂತನೆಗಳ ಮರುಹುಟ್ಟು
“ ಆಯ್ಯೋ ಆಗಲೇ ಒಂದು ವರ್ಷ ಕಳೆದುಹೋಯಿತೇ ??????” ಈ ಉದ್ಗಾರಗಳಿಗೆ ಕೊನೆಯೇ ಇಲ್ಲದ ಹಾಗೆ ನಮ್ಮ ನಡುವಿನ ಬೌದ್ಧಿಕ ಆಸ್ತಿಗಳು ಒಂದೊಂದಾಗಿ ಕಳಚಿಹೋಗುತ್ತಲೇ ಇರುವುದು ಕಳೆದ ಒಂದು ವರ್ಷದ ಅವಧಿಯಲ್ಲಿ ಗುರುತಿಸಬಹುದಾದ ವಿಷಾದಕರ ವಿದ್ಯಮಾನ. ಇತ್ತೀಚೆಗೆ ಅಗಲಿದ ಸಂಗಾತಿ ಬಿ.ಸಿ. ಮಂಜುಳಾ ಅವರನ್ನೂ ಸೇರಿದಂತೆ, ಮೈಸೂರಿನಲ್ಲೇ ಎಷ್ಟು ಚೈತನ್ಯಶೀಲ ಜೀವಗಳು ನಮ್ಮನ್ನು ತೊರೆದಿವೆ. ಇದು ಮನುಷ್ಯನ ಬದುಕಿನ ಒಂದು ಭಾಗ ಎಂಬ ಆಧ್ಯಾತ್ಮಿಕ ಚಿಂತನೆಯಿಂದಾಚೆ ನೋಡಿದಾಗ, ಈ ಸಾವುಗಳು ಒಳಮನಸ್ಸನ್ನು ಕಲಕುತ್ತಲೇ ಇವೆ. ಇಂತಹ ಒಂದು ನೆನಪಿನ ಮೆರವಣಿಗೆಯಲ್ಲೇ ಏಪ್ರಿಲ್ 22 ಬಂದೇಬಿಟ್ಟಿತು. ಹೌದಲ್ಲವೇ ಕಳೆದ ವರ್ಷ ಇದೇ ದಿನ ಕಳೆದುಹೋಗಿದ್ದು, ವ್ಯಕ್ತಿಗತವಾಗಿ ನಾನು ಕಂಡಂತಹ ಒಂದು ಸೈದ್ಧಾಂತಿಕ ಗಣಿ, ಡಾ. ವಿ. ಲಕ್ಷ್ಮೀನಾರಾಯಣ್ (ಆತ್ಮೀಯವಾಗಿ : ಲಕ್ಷ್ಮಿ).
ಈ ಲಕ್ಷ್ಮಿಯನ್ನು ಹೇಗೆ ನೆನೆಯುವುದು ? ಅವರ ಯಾವ ಚಹರೆಯನ್ನು ಸ್ಮರಿಸುವುದು. ವಿಸ್ಮೃತಿಯ ಕಣದ ಕದ ತೆರೆದಾಗ ಅಲ್ಲಿ ಎದುರಾಗುವ ಒಂದು ದೊಡ್ಡ ದೇಹ ಹತ್ತಾರು ಚಹರೆಗಳನ್ನು ಹೊತ್ತಂತೆಯೇ ಕಾಣುತ್ತದೆ. ವೃತ್ತಿಪರ ವೈದ್ಯ, ಮಾರ್ಕ್ಸ್ವಾದದ ಪ್ರವರ್ತಕ, ಅಂಬೇಡ್ಕರ್ ಚಿಂತನೆಗಳ ವಿಮರ್ಶಾತ್ಮಕ ನಿರೂಪಕ, ವೈಜ್ಞಾನಿಕ ಚಿಂತನೆಗಳ ಪರಿಚಾರಕ, ವೈಚಾರಿಕತೆಯ ಸೇತುವೆ ಇಷ್ಟೆಲ್ಲಾ ಚಹರೆಗಳ ನಡುವೆ ವೈಯುಕ್ತಿಕವಾಗಿ ನನಗೆ ಎದುರಾಗುವ ಲಕ್ಷ್ಮಿ, ನನ್ನ ಖಾಸಗಿ ಬದುಕಿನ ಅತ್ಯಾಪ್ತ ಗೆಳೆಯ ಮತ್ತು ಧೃತಿಗೆಟ್ಟ ಸಂದರ್ಭಗಳಲ್ಲೆಲ್ಲಾ ಆತ್ಮವಿಶ್ವಾಸವನ್ನು ತುಂಬುತ್ತಿದ್ದ ಆತ್ಮೀಯ ಸಂಗಾತಿ. ಈ ಸಂಗಾತಿ ಎಂಬ ಪದ, ಕಾಮ್ರೇಡ್ ಪದದ ಸಂವಾದಿಯಾಗಿ ಮಾತ್ರವೇ ಅಲ್ಲ, ಮನೋಸ್ಥೈರ್ಯವನ್ನು ಹೆಚ್ಚಿಸುವ ಒಬ್ಬ ಒಡನಾಡಿಯಾಗಿಯೂ, ಸೋದರನಾಗಿಯೂ ಬಳಸುತ್ತೇನೆ.
ತಾತ್ವಿಕ ಮಾನವೀಯ ಅಲೆಯಲ್ಲಿ
ಹೌದು, ಲಕ್ಷ್ಮಿ ಎಂದರೆ ಅದು ಬಣ್ಣಿಸಲಾಗದಂತಹ ಒಂದು ಪ್ರೀತ್ಯಾದರಗಳ ಒಡಲು ಎಂದು ನನಗನ್ನಿಸಿರುವುದು ಸಹಜ. ಏಕೆಂದರೆ ಬದುಕಿನ ಏರಿಳಿತಗಳ ನಡುವೆ ಹೆಬ್ಬಂಡೆಗಳು, ಮುಳ್ಳು ಹಾದಿಗಳು ಎದುರಾದಾಗಲೆಲ್ಲಾ ಮೂಡುತ್ತಿದ್ದ ಅನಾಥ ಭಾವಕ್ಕೆ ತಂಪೆರೆದು “ಯೋಚನೆ ಮಾಡ್ಬೇಡ್ರೀ,,,,,,,” ಎಂದು ಧೈರ್ಯ ಹೇಳುತ್ತಿದ್ದ ವ್ಯಕ್ತಿ ಲಕ್ಷ್ಮಿ. ಅದು ದೇಹಾಲಸ್ಯವಾಗಲೀ, ಮನೋಘಾತವಾಗಲೀ ಅಥವಾ ಸಾಂಸಾರಿಕ ಸಿಕ್ಕುಗಳಾಗಲೀ, ನನ್ನ ಯಾತನೆ-ಚಿಂತೆಗಳನ್ನು ತಾಳ್ಮೆಯಿಂದ ಆಲಿಸಿ, ಧೈರ್ಯ ತುಂಬುತ್ತಿದ್ದ ಒಬ್ಬ ಸೋದರ-ಸಂಗಾತಿ ಲಕ್ಷ್ಮಿ. ಈ ಭಾವನಾತ್ಮಕ ಅಲೆಗಳು ಎದೆಯಾಳದ ಕಡಲಾಗಿ ಹೆಪ್ಪುಗಟ್ಟಲು ಪರಸ್ಪರ ಒಡನಾಟಕ್ಕೆ ಇಂತಿಷ್ಟು ಕಾಲಾವಧಿ ಇರಬೇಕಿಲ್ಲ ಎಂದು ನಿರೂಪಿಸಿದವರು ಈ ಸಂಗಾತಿ, ಲಕ್ಷ್ಮಿ.
ಏಕೆಂದರೆ ಲಕ್ಷ್ಮಿ ನನಗೆ ಪರಿಚಯವಾಗಿದ್ದೇ ನನ್ನ ಬದುಕಿನ ಎರಡನೆಯ ಪರ್ವದಲ್ಲಿ. ಆಗ ನನಗಿದ್ದ, ಈಗಲೂ ಇರುವ ಸಾಂತ್ವನದ ನೆಲೆ ಅನುಗಾಲದ ಗೆಳೆಯ ಕೋಲಾರದ ಶಾಸ್ತ್ರಿ ಮಾತ್ರ. ಮಾನವ ಹಕ್ಕು ಹೋರಾಟಗಾರರಾಗಿ 35 ವರ್ಷಗಳಿಗೂ ಮುನ್ನ ಮೊದಲು ಮುಖಾಮುಖಿಯಾದ ಲಕ್ಷ್ಮಿ, ಕ್ರಮೇಣವಾಗಿ ನನ್ನೊಳಗೆ ಸೈದ್ಧಾಂತಿಕ ಮಾರ್ಗದರ್ಶಕರಾಗಿ ಇಳಿಯಲಾರಂಭಿಸಿದ್ದು ಬಹುಶಃ ಈ ಶತಮಾನದ ಆರಂಭದಲ್ಲಿ, ನಾನು ಮೈಸೂರಿಗೆ ಬಂದ ನಂತರದಲ್ಲಿ. ಅವರೊಳಗಿದ್ದ ಮಾರ್ಕ್ಸ್ ಮತ್ತು ಅಂಬೇಡ್ಕರ್ ನನ್ನೊಳಗೂ ಆಳಕ್ಕಿಳಿಯಲು ಶುರುವಾದದ್ದು ಬಹುಶಃ ಅದೇ ಸಮಯದಲ್ಲಿ. ಓದು, ಚರ್ಚೆ, ಸಂವಾದ ಈ ಮೂರರಿಂದಾಚೆಗೆ ಯೋಚಿಸಿದವರೇ ಅಲ್ಲ ಈ ಚರ್ಮವೈದ್ಯ. “ ಬಹಳಷ್ಟು ಚರ್ಮ ರೋಗಗಳು ವಾಸಿಯಾಗೋದೇ ಇಲ್ಲ ಕಣ್ರೀ, ತಾತ್ಕಾಲಿಕ ಉಪಶಮನ ಮಾತ್ರ ಸಾಧ್ಯ ,,,,,” ಎಂದು ಸದಾ ಹೇಳುತ್ತಿದ್ದ ಲಕ್ಷ್ಮಿ ನೆನಪಾಗುವುದು ನಮ್ಮ ವರ್ತಮಾನದ ಸಾಮಾಜಿಕ ತಲ್ಲಣಗಳನ್ನು ನೋಡಿದಾಗ. ಜಾತಿ, ಧರ್ಮ ಮೊದಲಾದ ಅಸ್ಮಿತೆಗಳ ವ್ಯಸನಗಳಿಗೂ ಶಾಶ್ವತವಾದ ಮದ್ದೇ ಇಲ್ಲವೇ ಎನಿಸುವಷ್ಟು ಮಟ್ಟಿಗೆ ನಮ್ಮ ಸುತ್ತಲಿನ ವಿದ್ಯಮಾನಗಳು ಕಾಡುತ್ತಿವೆ.

ಈ ಹೊರ ಸಮಾಜದ ತಲ್ಲಣಗಳ ನಡುವೆಯೇ ನನ್ನ ಎದೆಯಾಳದಿಂದ ಹೊರಡುವುದು “ ಅಯ್ಯೋ ಆಗಲೇ ಒಂದು ವರ್ಷ ಕಳೆದುಹೋಯಿತೇ,,,, ” ಎಂಬ ಉದ್ಗಾರ. ಈಗಲೂ ಯಾವುದಾದರೂ ಚಿಂತನಶೀಲ ಪುಸ್ತಕಗಳು ಹೊಸದಾಗಿ ಪ್ರಕಟವಾಗಿರುವುದು ಕಂಡರೆ ಥಟ್ಟನೆ ನೆನಪಾಗುವುದು ಈ ಸಂಗಾತಿ. ಗೆಳೆಯ ಶಾಸ್ತ್ರಿ “ ನಮ್ಮ ಡಾಕ್ಟರ್ ಇದ್ದಿದ್ದರೆ ಈ ವೇಳೆಗೆ ತರಿಸಿಬಿಡುತ್ತಿದ್ದರು ಕಣಯ್ಯಾ,,,,,” ಎಂದು ಈ ಪುಸ್ತಕಗಳ ಬಗ್ಗೆ ಹೇಳುತ್ತಲೇ ಇರುತ್ತಾನೆ. ಅಂದರೆ ಓದು ಎಂದರೆ ಹೊಸ ಓದು, ಚರ್ಚೆ ಎಂದರೆ ಭಿನ್ನ ಚರ್ಚೆ, ಸಂವಾದ ಎಂದರೆ ಗಂಭೀರ ಸಂವಾದ ಹೀಗೆ ಓದು-ಅಧ್ಯಯನವನ್ನೇ ತಮ್ಮ ಬದುಕಿನ ಒಂದು ಭಾಗವಾಗಿ ಕಂಡಿದ್ದ ಸಂಗಾತಿ ಲಕ್ಷ್ಮಿ ನನ್ನ ಕಪಾಟಿನಲ್ಲಿರುವ ಅನೇಕ ಪುಸ್ತಕಗಳಿಗೆ ಬೌದ್ಧಿಕ ವಾರಸುದಾರ ಎಂದರೆ ಅತಿಶಯವೇನಲ್ಲ. ಈಗಲೂ ಹೊಸ ಪುಸ್ತಕ ತರಿಸಿದಾಗೆಲ್ಲಾ ಮೊದಲು ಎದೆಯೊಳಗೆ ಮೂಡುವ ಉದ್ಗಾರ ʼ ಛೆ ಲಕ್ಷ್ಮಿ ಇರಬಾರದಿತ್ತೇ ,,,,,,ʼ ಎಂದು.
ಆತ್ಮೀಯತೆ ಆಪ್ತತೆಯ ಹೂರಣ
ಈ ಹೊರ ಸಮಾಜದ ಬೌದ್ಧಿಕ ತಲ್ಲಣಗಳ ನಡುವೆಯೆ ನನಗೆ ಲಕ್ಷ್ಮಿಯ ಆಪ್ತತೆ ನೆನಪಾಗುವುದು, ನನ್ನ ಖಾಸಗಿ ಬದುಕಿನ ಕೆಲವು ಮರೆಯಲಾಗದ ಗಳಿಗೆಗಳ ನಡುವೆ. ನನ್ನ ಹಾದಿಯೇ ತಪ್ಪಾಗಿದೆಯೋ ಅಥವಾ ನನ್ನವರು ಎನಿಸಿಕೊಂಡವರು ನನ್ನನ್ನು ಅರ್ಥಮಾಡಿಕೊಂಡಿರುವುದರಲ್ಲಿ ತಪ್ಪಾಗಿದೆಯೋ ಎಂಬ ಜಿಜ್ಞಾಸೆಯಲ್ಲಿ ಹಲವು ಸನ್ನಿವೇಶಗಳಲ್ಲಿ,ಈ ಬದುಕು ಸಾಕಲ್ಲವೇ ಎನಿಸುವಷ್ಟು ಮಟ್ಟಿಗೆ, ಖಿನ್ನತೆಗೆ ಜಾರಿದ್ದೇನೆ. ಕಳೆದ ಐದಾರು ವರ್ಷಗಳಲ್ಲಿ ಇದು ಹೆಚ್ಚಾಗಿ ಕಾಡಿದ್ದೂ ಹೌದು. ಅಂತಹ ಖಿನ್ನತೆಗೊಳಗಾದ ಮನಸ್ಸಿಗೆ ದೂರವಾಣಿ ಮೂಲಕ ಧೈರ್ಯ ತುಂಬುತ್ತಿದ್ದ ಗೆಳೆಯ ಶಾಸ್ತ್ರಿ ಸಾಮಾನ್ಯವಾಗಿ ನೀಡುತ್ತಿದ್ದ ಸಲಹೆ ಎಂದರೆ ʼ ಡಾಕ್ಟರ್ ಹತ್ತಿರ ಮಾತಾಡಯ್ಯಾ, ನಿನ್ನ ಮನಸ್ಸಿಗೆ ಸಮಾಧಾನವಾಗುತ್ತೆ,,,,, ʼ ಎಂದು. ಈ ಡಾಕ್ಟರ್ ಫ್ಯಾಮಿಲಿ ಫಿಸಿಷಿಯನ್ ಅಲ್ಲ, ಕಳೆದ ವರ್ಷ ಹಠಾತ್ತನೆ ಅಗಲಿದ ಮಾನಸಿಕ ಜೀವ ಚಿಕಿತ್ಸಕ ಸಂಗಾತಿ ಲಕ್ಷ್ಮಿ.

“ ಲಕ್ಷ್ಮೀ ಮನಸ್ಸಿಗ್ಯಾಕೋ ಬೇಸರವಾಗಿದೆ ನಿಮ್ಮ ಬಳಿ ಮಾತನಾಡಬೇಕು ,,,, ” ಎಂದು ಕರೆಮಾಡಿದ ಕೂಡಲೇ ಥಟ್ಟನೆ ʼ Come down ́ ಮಾತಾಡೋಣ ಎನ್ನುತ್ತಿದ್ದ ಲಕ್ಷ್ಮಿ ನನ್ನ ಖಾಸಗಿ ಗೆಳೆಯ, ಸೈದ್ಧಾಂತಿಕ ಮಾರ್ಗದರ್ಶಕನಿಂದ, ಒಡಹುಟ್ಟಿದವರಾಗಿ ಬಡ್ತಿ ಪಡೆದದ್ದು ಇಂತಹ ಸನ್ನಿವೇಶಗಳಲ್ಲೇ. ಅಂತರಾಳದಲ್ಲಿ ಲಕ್ಷ್ಮಿ ಮತ್ತು ರತಿ ಸ್ವಂತ ಅಣ್ಣ ಅತ್ತಿಗೆಯಂತೆ ಕಾಣತೊಡಗಿದ್ದು, ಆಕಸ್ಮಿಕವೋ ಅಥವಾ ಭಾವಾತಿರೇಕವೋ ಅಲ್ಲ, ಮಾನಸಿಕವಾಗಿ ಕುಸಿದು ಬಿಡುತ್ತೇನೆ ಎನಿಸಿದಾಗ, ಭೌತಿಕವಾಗಿ ಎತ್ತಿಹಿಡಿದ ಜೀವ ಅದು. (ಜೊತೆಗೆ ಸಾಂತ್ವನದ ಮಡಿಲಾಗಿ ಕಂಡಿದ್ದು ಅವರ ಸಂಗಾತಿ ರತಿರಾವ್ ಎಂದು ಹೇಳಲೇಬೇಕು.) ತಡರಾತ್ರಿ ಬಿ ಪಿ ಹೆಚ್ಚಾದರೆ, ಗ್ಲೂಕೋಸ್ ಪ್ರಮಾಣ ಕಡಿಮೆಯಾದರೆ ಕರೆ ಮಾಡಿದ ಕೂಡಲೇ “ Donʼt worry Relax ”ಎಂದು ಎರಡೇ ಪದಗಳಲ್ಲಿ ಧೈರ್ಯ ಹೇಳುತ್ತಿದ್ದ ಲಕ್ಷ್ಮಿ ವೃತ್ತಿಪರ ವೈದ್ಯರಾಗಿ ಕಾಣುತ್ತಿದ್ದ ಕ್ಷಣಗಳು , ಈಗಲೂ ಕಂಬನಿಗಳ ನಡುವೆ ನೆನಪಾಗುತ್ತವೆ. (ರತಿರಾವ್ ಅವರೊಡನೆ ಮೊಬೈಲ್ನಲ್ಲಿ ಸಂಭಾಷಿಸುವಾಗ ಒಂದೆರಡು ಹನಿ ಖಚಿತವಾಗಿ ಉದುರುತ್ತದೆ).
ಸೈದ್ಧಾಂತಿಕ ಚಿಂತನೆಯ ನೆಲೆಯಲ್ಲಿ
ಲಕ್ಷ್ಮಿ ತಮ್ಮೊಳಗಿನ ಸೈದ್ದಾಂತಿಕ ಚಿಂತನೆಗಳನ್ನು, ಮೂಲ ಸಿದ್ಧಾಂತಗಳ ನೆಲೆಯಲ್ಲಿ ಹಂಚಿಕೊಳ್ಳುವ ತವಕ ತೋರುತ್ತಿದ್ದುದುದು ಅವರ ವೈಶಿಷ್ಟ್ಯ. ಪುಸ್ತಕದ ಓದು, ಗುಂಪು ಓದು ಮತ್ತು ಸಂವಾದ, ಗಂಭೀರ ಸಮಕಾಲೀನ ಸಮಸ್ಯೆಗಳ ಚರ್ಚೆ ಇವುಗಳ ನಡುವೆಯೇ ಲಕ್ಷ್ಮಿ ಹುಟ್ಟುಹಾಕಿದ ಫ್ರೈಡೇ ಫೋರಂ ಎಂಬ ಚರ್ಚಾ ವೇದಿಕೆಗೆ ದಶಕ ತುಂಬಿದೆ. ಕೋವಿದ್ ನಂತರದಲ್ಲಿ ಆನ್ ಲೈನ್ ಆದ ಈ ವೇದಿಕೆ ಇಂದಿಗೂ ಜೀವಂತಿಕೆಯಿಂದಿರುವುದು ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ. ಅವರೇ ಹುಟ್ಟುಹಾಕಿದ Indian Institute of Marxist Studies (IIMS) ಎಂಬ ಅನೌಪಚಾರಿಕ ವೇದಿಕೆ ಸದ್ಯಕ್ಕೆ ನಿದ್ರಾವಸ್ಥೆಗೆ ಜಾರಿರುವುದು ವಿಷಾದಕರವಾದರೂ, ಅದನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ ಮಾಡುವುದು ಈ ಸಮಯದಲ್ಲಿ ನಮ್ಮ ಆದ್ಯತೆಯಾಗಬೇಕಿದೆ.

ಹೀಗೆ ನನ್ನ ಖಾಸಗಿ ಬದುಕಿನ ಮಾನಸಿಕ ನೋವಿಗೆ ಸದಾ ಸ್ಪಂದಿಸುತ್ತಿದ್ದ, ಬೌದ್ಧಿಕ ಪಯಣದ ಮಾರ್ಗದರ್ಶಿಯಾಗಿದ್ದ, ನನ್ನ ಜಿಜ್ಞಾಸೆಗಳಿಗೆ ಉತ್ತರವಾಗುತ್ತಿದ್ದ ಸಂಗಾತಿ ಲಕ್ಷ್ಮಿ ಹೆಚ್ಚು ನೆನಪಾಗುವುದು, ಈಗಲೂ ತಲ್ಲಣಗೊಳಿಸುವ ಕ್ಷಣಗಳಲ್ಲಿ, ಹೊಸ ಓದಿನ ಸಮಯದಲ್ಲಿ. ಛೇ ! ಲಕ್ಷ್ಮಿ ಇರಬೇಕಿತ್ತು ! ಎಂಬ ಆಲೋಚನೆ ಮೂಡಿದಾಗಲೆಲ್ಲಾ ಒಂದೆರಡು ಹನಿ ತೊಟ್ಟಿಕ್ಕುತ್ತದೆ. ಒಡಹುಟ್ಟಿದ ಮೂವರೂ ಸೋದರರನ್ನು ಕಳೆದುಕೊಂಡಿದ್ದ ನನಗೆ, ಮಾನಸ ಸೋದರನಾಗಿದ್ದ ಲಕ್ಷ್ಮಿ ಈಗ ನಮ್ಮ ನಡುವೆ ಭೌತಿಕವಾಗಿ ಇಲ್ಲವಾಗಿರುವುದನ್ನು ಎದೆಯಾಳದ ನೋವು ನುಂಗಿಕೊಂಡೇ ಒಪ್ಪಿಕೊಳ್ಳಬೇಕಿದೆ. ಭಾವಚಿತ್ರದಲ್ಲಿರುವ ಲಕ್ಷ್ಮಿ ಮತ್ತು ಅವರ ಅಟ್ಟಹಾಸದ ನಗೆ ಸದಾ ಸ್ಮರಣೆಯಲ್ಲಿ ಉಳಿಯುವಂತಹ ಬದುಕಿನ ಒಂದು ಭಾಗವಾಗಿ ಹೋಗಿದೆ. ವೃತ್ತಿಪರ ವೈದ್ಯನಾಗಿ, ಸಾಮಾಜಿಕ ಚಿಕಿತ್ಸಕನಾಗಿ, ಸಾಂಸ್ಕೃತಿಕ ಮೇಷ್ಟ್ರಾಗಿ ನಮ್ಮ ನಡುವೆ ಇದ್ದ ಲಕ್ಷ್ಮಿ ಕಳೆದ ವರ್ಷ ಏಪ್ರಿಲ್ 22ರ ನಡುರಾತ್ರಿ ಇಲ್ಲವಾದಾಗ ಪಟ್ಟ ಸಂಕಟ ಎಂದಿಗೂ ತೀರದ ಒಂದು ಅಂತರ್ಭಾವ.
ಇನ್ನೇನು ಹೇಳಲಿ ? ಹೇಳುವುದು ಬೆಟ್ಟದಷ್ಟಿದೆ. ಸದ್ಯಕ್ಕೆ ಕಣ್ಣು ಮಂಜಾಗುತ್ತಿದೆ. ಸಾಕೆನಿಸುತ್ತದೆ. ಸಂಗಾತಿ ಲಕ್ಷ್ಮಿ ಸದಾ ಹಸಿರಾಗಿ ಮನದಾಳದಲ್ಲಿ ಉಳಿದಿರುತ್ತಾರೆ.
ರೆಡ್ ಸೆಲ್ಯೂಟ್ ಕಾಮ್ರೇಡ್ ಲಕ್ಷ್ಮಿ !!!!
-೦-೦-೦-೦-