ಮೈಸೂರು: ಸಣ್ಣ ಪುಟ್ಟ ಅಸಮಾಧಾನದಿಂದಲೋ, ಉದಾಸೀನದಿಂದಲೋ ಸ್ವಲ್ಪ ಮೈಮರೆತರೂ ರಾಜ್ಯದಲ್ಲಿ ಮುಂದೆ ತಾಲಿಬಾನಿ ಸರ್ಕಾರ ಬರಲಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಇಲ್ಲಿನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಗುರುವಾರ ನಡೆದ ಪಕ್ಷದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ನಾವು ಕೆಲವೊಮ್ಮೆ ಕಾರ್ಯಕರ್ತರಿಗೆ ಸ್ಪಂದಿಸದಿರಲೂಬಹುದು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು. ರಾಷ್ಟ್ರವಾದಿ ಸರ್ಕಾರವನ್ನು ಮತ್ತೊಮ್ಮೆ ತರಲು ಶ್ರಮಿಸಬೇಕು ಎಂದು ಎಂದು ಮನವಿ ಮಾಡಿದರು.
2015ರಲ್ಲಿ ಇಲ್ಲಿ ರಾಜು ಕೊಲೆಯಾಯ್ತು. ಆರೋಪಿಯನ್ನು ಪೊಲೀಸರು ಬಂಧಿಸಿದರು. ಆದರೆ, ನಗರ ಪೊಲೀಸ್ ಆಯುಕ್ತರನ್ನು ಎರಡೇ ತಿಂಗಳಲ್ಲೇ ವರ್ಗಾಯಿಸಲಾಯಿತು. ಆರೋಪಿಗೆ ಶಿಕ್ಷೆಯೇ ಆಗಲಿಲ್ಲ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜು ಕುಟುಂಬದರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಕೆಎಫ್’ಡಿ, ಪಿಎಫ್’ಐ ಸಂಘಟನೆಯವರ ಮೇಲಿದ್ದ 175 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡು, ನಮ್ಮ ಎರಡು ಡಜನ್ ಕಾರ್ಯಕರ್ತರ ಸಾವಿಗೆ ಕಾರಣವಾದರು. ಅಂತಹ ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂದು ಹವಣಿಸುತ್ತಿದ್ದಾರೆ ಎಂದು ಟೀಕಿಸಿದರು.