~ಡಾ. ಜೆ ಎಸ್ ಪಾಟೀಲ.
ಕಾಂಗ್ರೆಸ್ ಪಕ್ಷ ಅನೇಕ ಸಂದರ್ಭಗಳಲ್ಲಿ ರಿಪೇರಿಯಾಗದಂತ ತಪ್ಪುಗಳಗನ್ನು ಮಾಡುತ್ತದೆ. ೧೯೯೯ ರಲ್ಲಿ ಅಧಿಕಾರಕ್ಕೆ ಬಂದ ಎಂ ಎಸ್ ಕೃಷ್ಣರ ದುರಾಡಳಿತದಿಂದ ಕಾಂಗ್ರೆಸ್ ಕರ್ನಾಟಕದಲ್ಲಿ ಸಂಪೂರ್ಣ ಅಳಿವಿನಂಚಿಗೆ ತಲುಪಿತ್ತು. ಅದೇ ಸಂದರ್ಭದಲ್ಲಿ ದೇವೇಗೌಡರ ಕುಟುಂಬ ಪ್ರೇಮವನ್ನು ಪ್ರತಿಭಟಿಸಿ ಸಿದ್ಧರಾಮಯ್ಯ ಜೆಡಿಎಸ್ ತೊರೆದು ಪ್ರಗತಿಪರ ಜನತಾ ದಳ ಸ್ಥಾಪಿಸಿದ್ದರು. ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಅವರು ಆ ಪಕ್ಷವನ್ನು ಮುನ್ನಡೆಸಲು ಆಗದೆಂದು ಯೋಚಿಸಿ ಕಾಂಗ್ರೆಸ್ ಸೇರಿದರು. ಆಗ ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ದೋಣಿಯಂತೆ ಮುಳುಗುತ್ತಲಿತ್ತು. ಸಿದ್ದರಾಮಯ್ಯ ಸೇರ್ಪಡೆಯಿಂದ ಕಾಂಗ್ರೆಸ್ ರಾಜ್ಯದಲ್ಲಿ ಪುನಃ ಅಧಿಕಾರಕ್ಕೇರುವಷ್ಟು ಸದೃಢವಾಗಿ ಬೆಳೆದದ್ದು ಈಗ ಇತಿಹಾಸ.

ಐದು ವರ್ಷಗಳ ಸಿದ್ದರಾಮಯ್ಯ ಆಡಳಿತದಿಂದ ಅವರಿಗೆ ಸಿಗುತ್ತಿದ್ದ ಜನಮನ್ನಣೆಯನ್ನು ಕಂಡು ಬಿಜೆಪಿಯವರಿಗಿಂತ ಮೂಲ ಕಾಂಗ್ರೆಸ್ಸಿಗರು ಹೆಚ್ಚು ಕಂಗಾಲಾಗಿದ್ದರು. ಸಿದ್ದರಾಮಯ್ಯ ಜನಪ್ರೀಯತೆಯನ್ನು ಸಹಿಸದ ಮೂಲ ಕಾಂಗ್ರೆಸ್ಸಿಗರು ಲಿಂಗಾಯತ ಧರ್ಮ ಮಾನ್ಯತೆಯಿಂದ ಪಕ್ಷಕ್ಕೆ ಹಿನ್ನೆಡೆಯಾಯಿತೆಂದು ಬಿಂಬಿಸಿ ಆ ತಪ್ಪನ್ನು ಸಿದ್ದರಾಮಯ್ಯ ತಲೆಗೆ ಶಾಸ್ವತವಾಗಿ ಕಟ್ಟಲು ಸಾಂಘಿಕವಾಗಿ ೨೦೧೮ ರಲ್ಲಿ ಸ್ವಪಕ್ಷವನ್ನೇ ಸೋಲಿಸುವಲ್ಲಿ ಯಶಸ್ವಿಯಾದರು. ಸಿದ್ಧರಾಮಯ್ಯ ತರಲಿಚ್ಚಿಸಿದ ಮೌಢ್ಯ ನಿಷೇಧ ಕಾನೂನನ್ನು ಬಿಜೆಪಿಗರಿಗಿಂತ ಡಿಕೆಶಿˌ ಪರಮೇಶ್ವರˌ ದೇಶಪಾಂಡೆಯಂತ ಕಾಂಗ್ರೆಸ್ಸಿಗರೆ ಆಂತರಿಕವಾಗಿ ಹೆಚ್ಚು ವಿರೋಧಿಸಿದರು. ಲಿಂಗಾಯತ ಧರ್ಮಕ್ಕೆ ಮಾನ್ಯತೆಯ ವಿಷಯದಲ್ಲೂ ಇವರು ಇದನ್ನೇ ಮಾಡಿದರು. ಡಿಕೆಶಿಯಂತವರಿಗೆ ಸಿದ್ದರಾಮಯ್ಯನವರ ಜನಪ್ರೀಯತೆ ಸಹಿಸದಂತಾಗಿತ್ತು. ಸಿದ್ಧರಾಮಯ್ಯನವರನ್ನು ಹಣಿಯಲು ಸದಾ ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಮಠಾಧೀಶರೊಂದಿಗೆ ಡಿಕೆಶಿ ಹುನ್ನಾರಗಳನ್ನು ಮಾಡುತ್ತಲೆ ಬಂದರು.

ಅಹ್ಮದ್ ಪಟೇಲ್ ರನ್ನು ರಾಜ್ಯಸಭೆಗೆ ಕಳುಹಿಸುವ ಸದರ್ಭದಲ್ಲಿ ಮೋದಿ-ಷಾ ಜೋಡಿಯ ಚುನಾವಣಾ ಗೋಲ್ಮಾಲ್ ಗಳನ್ನು ತಡೆದಿದ್ದ ಡಿಕೆಶಿ ಇವರಿಬ್ಬರ ಕೆಂಗಣ್ಣಿಗೆ ಗುರಿಯಾಗಿದ್ದರು. ಡಿಕೆಶಿಯ ಘೋಷಿತ ಆಸ್ತಿ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗುತ್ತಲೆ ಇತ್ತು ˌ ಅದೂ ಬಿಜೆಪಿ ಆಡಳಿತ ಕಾಲದಲ್ಲಿ ಅನ್ನುವುದು ಇನ್ನೂ ಗಮನಾರ್ಹ ಸಂಗತಿ. ಇದೆಲ್ಲವನ್ನು ಗಮನಿಸಿದ ಕೇಂದ್ರದ ಖಿಲಾಡಿ ಗುಜರಾತಿ ಜೋಡಿಗಳು ಡಿಕೆಶಿಗೆ ವಿಚಾರಣಾ ನೆಪದಲ್ಲಿ ಖೆಡ್ಡಾ ತೋಡಿದರು. ಅದ್ದರಿಂದ ಡಿಕೆಶಿ ತಿಹಾರ್ ಜೈಲಿನಲ್ಲಿ ಒಂದಷ್ಟು ದಿನ ಮುದ್ದೆ ಮುರಿಯಬೇಕಾಯಿತು. ಆದರೂ ಅದಕ್ಕೆ ಜಗ್ಗದ ಡಿಕೆಶಿ ಬಿಜೆಪಿ ಸೇರದೆ ಪಕ್ಷನಿಷ್ಟೆ ಮೆರೆದರು ಎಂದು ಅವರ ಅನುಯಾಯಿಗಳು ವಾದಿಸುತ್ತಾರೆ. ಇಂದಿಗೂ ಡಿಕೆಶಿಯ ಮೇಲೆ ಅನೇಕ ಆರ್ಥಿಕ ಹಗರಣಗಳ ಗುರುತರ ಆರೋಪಗಳು ವಿಚಾರಣೆಯ ಹಂತದಲ್ಲಿವೆ. ಕರ್ನಾಟಕದಲ್ಲಿಯೂ ಕೂಡ ಎಸ್ ಆರ್ ಹಿರೇಮಠ್ ಅವರು ಡಿಕೆಶಿಯ ಮೇಲೆ ಅಪಾರ ಮಟ್ಟದ ಭೂ ಹಗರಣಗಳ ಆರೋಪ ಮಾಡಿದ್ದಿದೆ. ಹೀಗಾಗಿ ಡಿಕೆಶಿ ಬಿಜೆಪಿಗೆ ಹೇಗೆ ಒಂದು ಕಾಲದಲ್ಲಿ ಬಳ್ಳಾರಿಯ ಜನಾರ್ಧನ ರೆಡ್ಡಿ ಇದ್ದನೊ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಪನ್ಮೂಲಗಳ ಖಜಾನೆ ಆಗಿರಬಹುದೆ ಹೊರತು ಸಂವಾಧಿನಿಕ ಉನ್ನತ ಹುದ್ದೆ ಹೊಂದಲು ಸೂಕ್ತ ವ್ಯಕ್ತಿ ಅಲ್ಲವೆಂದೇ ಇಂದಿನ ಬಿಜೆಪಿಯ ದ್ವೇಷ ರಾಜಕಾರಣದ ಸಂದರ್ಭದಲ್ಲಿ ಹೇಳಬೇಕಿದೆ.

ಇನ್ನು ಡಿಕೆಶಿಯ ಪೂರ್ವಾಪರ ಹಿನ್ನೆಲೆ ಅಷ್ಟೊಂದು ಪಾರದರ್ಶಕ ಮತ್ತು ಸ್ವಚ್ಛವಾಗಿಲ್ಲ ಎನ್ನುವ ಸಂಗತಿ ಜನಜನಿತವಾಗಿದೆ. ಕೃಷ್ಣ ಸರಕಾರದಲ್ಲಿ ವಿಶೇಷವಾಗಿ ರಾಜಕುಮಾರ್ ಅಪಹರಣವಾದ ಸಂಬರ್ಭದಲ್ಲಿ ಡಿಕೆಶಿ ಮತ್ತು ಕೃಷ್ಣರ ಅಳಿಯ ಸಿದ್ಧಾಂರ್ಥ ಸೇರಿ ವೀರಪ್ಪನ ಹೆಸರಿನಲ್ಲಿ ಈಡಿಗ ಸಮುದಾಯದ ಅಬಕಾರಿ ಗುತ್ತಿಗೆದಾರರಿಂದ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ ಬಗ್ಗೆ ಅಂದು ಅಪಾದನೆಗಳು ಕೇಳಿ ಬಂದಿದ್ದವುˌ ಹಾಗು ಪತ್ರಿಕೆಗಳಲ್ಲೂ ವರದಿಗಳಾಗಿದ್ದವು. ಕೃಷ್ಣ ಅವರಿಗೆ ದೇವೇಗೌಡರ ಕುಟುಂಬವನ್ನು ಎದುರಿಸಲು ಅವರದೇ ಲೇವಲ್ಲಿನ ಒಬ್ಬ ವ್ಯಕ್ತಿಯ ಅಗತ್ಯವಿತ್ತು. ಅದನ್ನು ಕೃಷ್ಣ ಅವರು ಡಿಕೆಶಿಯಲ್ಲಿ ಕಂಡುಕೊಂಡಿದ್ದರು ಮತ್ತು ಆತನನ್ನು ಆ ಕಾರಣಕ್ಕೆ ಚೆನ್ನಾಗಿ ಬಳಸಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು. ಡಿಕೆಶಿಯನ್ನು ಮೊದಲು ಮಂತ್ರಿ ಮಾಡಿದ್ದು ಎಸ್ ಬಂಗಾರಪ್ಪನವರುˌ ಅದೂ ಬಂಧಿಖಾನೆ ಮಂತ್ರಿಯನ್ನಾಗಿ. ಇದನ್ನು ಕೂಡ ನಾವೆಲ್ಲ ಗಮನಿಸಬೇಕಿದೆ.
೨೦೧೮ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದು ಸಿದ್ದರಾಮಯ್ಯ ವಿರೋಧಿ ಕಾಂಗ್ರೆಸ್ಸಿಗರೆ ಹೊರತು ಬಿಜೆಪಿ ಅಲ್ಲ ಅನ್ನುವುದನ್ನು ನಾವು ಗಮನಿಸಬೇಕು. ಸಿದ್ಧರಾಮಯ್ಯ ಸರಕಾರದ ಅನೇಕ ಆಡಳಿತಾತ್ಮಕ ನಿರ್ಧಾರಗಳನ್ನು ಬಹಿರಂಗವಾಗಿ ವಿರೋಧಿಸಿದವರಲ್ಲಿ ಶಾಮನೂರು ಶಿವಶಂಕರಪ್ಪ ಕೂಡ ಒಬ್ಬರು. ಇವರು ತಮ್ಮ ಜಿಲ್ಲೆಯಲ್ಲಿ ತಾನು ಮತ್ತು ತಮ್ಮ ಮಗನ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದಕಡೆ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ಸಿಗರೆ ಮಾತನಾಡಿಕೊಳ್ಳುತ್ತಾರೆ. ಈ ರೀತಿಯ ಅನೇಕ ಉದಾಹರಣೆಗಳು ಕಾಂಗ್ರೆಸ್ ಪಕ್ಷದಲ್ಲಿ ಕಾಣಸಿಗುತ್ತವೆ. ಡಿಕೆಶಿ ಕುರಿತಾದ ಇಂತಹ ಸೂಕ್ಷ್ಮಗಳನ್ನು ಗಮನಿಸುವ ಗೋಜಿಗೆ ಹೋಗದ ಕಾಂಗ್ರೆಸ್ ಹೈಕಮಾಂಡ್ ಅನೇಕ ತಪ್ಪುಗಳನ್ನು ಮಾಡುತ್ತ ಬಂದಿದೆ. ಆ ಎಲ್ಲ ತಪ್ಪುಗಳ ಪರಿಣಾಮವೆ ಇಂದು ಪಕ್ಷ ಸಂಪೂರ್ಣ ಬಹುಮತ ಪಡದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆರಿಸುವಲ್ಲಿ ಈ ಮಟ್ಟದ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಕಾಂಗ್ರೆಸ್ ಹೈಕಮಾಂಡ್ ಮಾಡಿದ ಸರಣಿ ತಪ್ಪುಗಳು ಈ ಕೆಳಗಿನಂತಿವೆ:
೧. ಸಿದ್ಧರಾಮಯ್ಯನವರಂತ ಮಾಸ್ ಲೀಡರ್ ರಾಜಕೀಯವಾಗಿ ಇನ್ನೂ ಕ್ರೀಯಾಶೀಲವಾಗಿ ಇರುವಾಗಲೇ ಕೆಪಿಸಿಸಿಗೆ ಒಬ್ಬ ಡಮ್ಮಿ ಅದ್ಯಕ್ಷನನ್ನು ನೇಮಿಸದೆˌ ಅಪರಾಧಿಕ ಹಿನ್ನೆಲೆಯ ಆರೋಪಿಯಾಗಿರುವ ಡಿಕೆಶಿಯನ್ನು ಕೂಡಿಸಿದ್ದು ಕಾಂಗ್ರೆಸ್ ಹೈಕಮಾಂಡ್ ಮಾಡಿದ ಮೊದಲನೇ ತಪ್ಪು.
೨. ಡಿಕೆಶಿಯನ್ನು ೨೦೦೪ ರಲ್ಲಿ ಧರ್ಮಸಿಂಗ್ ಸಂಪುಟದಿಂದ ಹೊರಗಿಡಲಾಗಿತ್ತು. ಅದು ಏಕೆˌ ಎನ್ನುವ ಕುರಿತು ಕಾಂಗ್ರೆಸ್ ವರಿಷ್ಟರು ಎಂದೂ ಚಿಂತಿಸಲಿಲ್ಲ. ಹಾಗೆಯೆ ೨೦೧೩ ರಲ್ಲಿ ಸಿದ್ಧರಾಮಯ್ಯ ಸಂಪುಟದಿಂದಲೂ ಹೊರಗಿಡುವಂತೆ ನಾಡಿನ ಪ್ರಗತಿಪರರು ದೊಡ್ಡ ಮಟ್ಟದ ಧ್ವನಿ ಎತ್ತಿದ್ದರು. ಆಗ ಆರಂಭಿಕ ಅವಧಿಯಲ್ಲಿ ಸಿದ್ದರಾಮಯ್ಯ ಆತನನ್ನು ದೂರವೆ ಇಟ್ಟಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಆತನ ಒತ್ತಡ ತಂತ್ರಗಳಿಗೆ ಮಣಿದು ಸಂಪುಟಕ್ಕೆ ಸೇರಿಸಲು ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದು ಎರಡನೇ ದೊಡ್ಡ ತಪ್ಪು.

೩. ಯಾರದೊ ಮಾತು ಕೇಳಿ ರಾಹುಲ್ ಗಾಂಧಿ ತರಾತುರಿಯಲ್ಲಿ ೨೦೧೮ ರಲ್ಲಿ ಜೆಡಿಎಸ್ ನ್ನು ಬೆಂಬಲಿಸುವ ನಿರ್ಧಾರ ಪ್ರಕಟಿದ್ದು ಮೂರನೇ ದೊಡ್ಡ ತಪ್ಪು. ಆಗ ಬಿಜೆಪಿ ಮತ್ತು ಜೆಡಿಎಸ್ ಕೂಡಿ ಸರಕಾರ ಮಾಡಲು ಬಿಟ್ಟು ಕಾದು ನೋಡುವ ಸಿದ್ಧರಾಮಯ್ಯ ಸಲಹೆಯನ್ನು ವರಿಷ್ಟರು ಪರಿಗಣಿಸಲಿಲ್ಲ.
೪. ಬಿಜೆಪಿಯನ್ನು ಸೋಲಿಸಬೇಕೆನ್ನುವ ಏಕೈಕ ಉದ್ದೇಶದಿಂದ ಜೆಡಿಎಸ್ ಎಂಬ ಅವಕಾಶವಾದಿ ಪಕ್ಷದೊಂದಿಗೆ ಸರಕಾರ ಮಾಡಿ ೨೦೧೯ ರ ಸಂಸತ್ ಚುನಾವಣೆಯಲ್ಲಿ ಗೌಡರು ಕೇಳಿದಷ್ಟು ಸೀಟುಗಳನ್ನು ಕೊಟ್ಟು ಇಡೀ ಕರ್ನಾಟಕದಲ್ಲಿ ೨೮ ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಯಿತು.

ಇಂದು ಕಾಂಗ್ರೆಸ್ ನನ್ನಿಂದಲೆ ಗೆದ್ದಿದೆ ಹಾಗು ವಕ್ಕಲಿಗರ ಓಟುಗಳು ನನ್ನಿಂದಲೆ ಬಂದಿವೆ ಎಂದು ವಾದಿಸುವ ಡಿಕೆಶಿ ೨೦೧೮ ರ ವಿಧಾನಸಭಾ ಮತ್ತು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಈ ಸಾಧನೆ ಯಾಕೆ ಮಾಡಲಿಲ್ಲ ಎನ್ನುವ ಕುರಿತು ಹೈಕಮಾಂಡ್ ಯೋಚಿಸಬೇಕು.
೫. ಡಿಕೆಶಿಯನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದ ಮೇಲೂ ಆತನ ಮೇಲಿನ ಆರೊಪಗಳುˌ ವಿಚಾರಣೆ ಮುಂತಾದ ಸದಿಗ್ಧ ಪ್ರಕರಣಗನ್ನು ಗಮನದಲ್ಲಿರಿಸಿ ಆತನನ್ನು ಹೈಕಮಾಂಡ ಹದ್ದು ಬಸ್ತಿನಲ್ಲಿಡುವ ಪ್ರಯತ್ನ ಮಾಡಲಿಲ್ಲ. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮದ ಕುರಿತು ಡಿಕೆಶಿ ಎತ್ತಿದ ಅಪಸ್ವರ ಮುಂದೆ ವಿಫಲ ಯತ್ನವಾಯಿತು. ಕಾರ್ಯಕ್ರಮ ನಿರೀಕ್ಷೆಗಿಂದ ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಯಿತು. ಆದರೆ ಅಂದು ಆ ಕಾರ್ಯಕ್ರಮದಲ್ಲಿ ಸೇರಿದ ಜನಸಂಧಣಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮತ್ತು ಸಿದ್ಧರಾಮಯ್ಯ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಮಾಸ್ ಲೀಡರ್ ಎನ್ನುವುದನ್ನು ಸ್ಪಷ್ಟಪಡಿಸಿತ್ತು.

೬. ಈ ಎಲ್ಲ ಸಂಗತಿಗಳನ್ನು ಗಮನಿಸದೆ ಕಾಂಗ್ರೆಸ್ ವರಿಷ್ಟರು ಡಿಕೆಶಿಯನ್ನು ಕೆಪಿಸಿಸಿ ಅದ್ಯಕ್ಷ ಮಾಡುವ ಮೂಲಕ ಎರಡು ಅಧಿಕಾರದ ಶಕ್ತಿ ಕೇಂದ್ರಗಳನ್ನು ಸೃಷ್ಟಿಸಿ ಬಹಳ ದೊಡ್ಡ ತಪ್ಪು ಮಾಡಿದ್ದು ಅದರ ಪರಿಣಾಮ ಈಗ ಅನುಭವಿಸುತ್ತಿದೆ ಅಷ್ಟೆ.
ಯಾವ ಸೈದ್ಧಾಂತಿಕ ಹಾಗು ಹೋರಾಟದ ಹಿನ್ನೆಲೆಯೂ ಹೊಂದಿರದ ಡಿಕೆಶಿ ಮುಂದೊಂದು ದಿನ ಕರ್ನಾಟಕದ ಏಕನಾಥ್ ಸಿಂಧೆ ಆಗಬಹುದು ಎನ್ನುವ ಸಂಶಯವನ್ನು ಅನೇಕ ಜನರು ಮೊದಲಿನಿಂದ ವ್ಯಕ್ತ ಪಡಿಸುತ್ತಲೆ ಬಂದಿದ್ದಾರೆ. ಮುಂದಿನ ದಿನಗಳಲ್ಲೂ ಆ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅದೆಲ್ಲ ಇದ್ದಾಗ್ಯೂ ಕಾಂಗ್ರೆಸ್ ವರಿಷ್ಟರು ದೂರಾಲೋಚನೆ ಮಾಡದೆ ಆತನ ಒತ್ತಡಗಳಿಗೆ ಮಣಿದು ಆತನನ್ನು ಮತ್ತೆ ಉಪ ಮುಖ್ಯಮಂತ್ರಿ ಮಾಡಿದ್ದು ಮತ್ತು ಆತನಿಂದ ಪಕ್ಷದ ಘನತೆಗೆ ಆಗಿರುವ ಹಾಗು ಆಗಬಹುದಾಗಿರುವ ಚ್ಯುತಿಯ ಕುರಿತು ಚಿಂತಿಸದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ.
~ಡಾ. ಜೆ ಎಸ್ ಪಾಟೀಲ.