ಮುಂಬೈನ ಐಕಾನಿಕ್ ಶಿವಾಜಿ ಪಾರ್ಕ್ನಲ್ಲಿ ದಸರಾ ರ್ಯಾಲಿ ಆಯೋಜಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡುವುದರೊಂದಿಗೆ ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಕ್ಷಿದಾರರ (ಶಿವಸೇನೆಯ ಮೇಲಿನ) ಹಕ್ಕು ವಿವಾದ ಇತ್ಯರ್ಥವಾಗುವವರೆಗೆ ಅರ್ಜಿಯ ಕುರಿತು ತೀರ್ಮಾನಿಸದಂತೆ ಶಿಂಧೆ ಬಣದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ಮುಂಬೈ ಪೊಲೀಸರು ಎತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕಾಳಜಿಯ ಆಧಾರದ ಮೇಲೆ ಐಕಾನಿಕ್ ಶಿವಾಜಿ ಪಾರ್ಕ್ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈ ಹಿಂದೆ ಅನುಮತಿ ನಿರಾಕರಿಸಿತ್ತು. ಠಾಕ್ರೆ ಬಣವು BMC ನಿರ್ಧಾರವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು, ಶಿಂಧೆ ಬಣವು ಮಧ್ಯಪ್ರವೇಶಿಸುವಂತೆ ಮನವಿ ಮಾಡಿತು.
BMC ಆದೇಶವು “ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ” ಎಂದು ನ್ಯಾಯಾಲಯ ಹೇಳಿದೆ.
ಶಿಂಧೆ ಬಣದ ಭಾಗವಾಗಿರುವ ದಾದರ್ ಶಾಸಕ ಸದಾ ಸರ್ವಾಂಕರ್, ಪ್ರಸ್ತುತ ಅರ್ಜಿಯ ಅಡಿಯಲ್ಲಿ ಅರ್ಜಿದಾರರು (ಠಾಕ್ರೆ ನೇತೃತ್ವದ ಶಿವಸೇನೆ) ಪಕ್ಷದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದರು.
ಠಾಕ್ರೆ ನೇತೃತ್ವದ ಶಿವಸೇನೆ ಈ ನಿರ್ಧಾರವನ್ನು ಸ್ವಾಗತಿಸಿದ್ದು, ನ್ಯಾಯಾಂಗದ ಮೇಲಿನ ನಂಬಿಕೆಯು ಸಾಬೀತಾಗಿದೆ ಎಂದು ಹೇಳಿದೆ. ಪಕ್ಷದ ವಕ್ತಾರ ಮನಿಶಾ ಕಾಯಂದೆ ಮಾತನಾಡಿ, ಈ ಬಾರಿಯ ರ್ಯಾಲಿ ಅದ್ಧೂರಿಯಾಗಿ ನಡೆಯಲಿದೆ ಎಂದರು.
ಅನುಮತಿ ನಿರಾಕರಿಸಿದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೇಲೆ (ಸರ್ಕಾರದ) ಸ್ವಲ್ಪ ಒತ್ತಡವಿರಬೇಕು ಎಂದು ಅವರು ಹೇಳಿದ್ದಾರೆ.
“ನ್ಯಾಯಾಂಗದ ಮೇಲಿನ ನಮ್ಮ ನಂಬಿಕೆಯು ಸಾಬೀತಾಗಿದೆ. ಕಳೆದ ಹಲವು ವರ್ಷಗಳಿಂದ, ದಸರಾ ರ್ಯಾಲಿಯು ‘ಶಿವ-ತೀರ್ಥ’ದಲ್ಲಿ ನಡೆಯುತ್ತಿದೆ (ಸೇನೆಯು ಶಿವಾಜಿ ಪಾರ್ಕ್ ಅನ್ನು ‘ಶಿವ-ತೀರ್ಥʼ ಎಂದು ಉಲ್ಲೇಖಿಸುತ್ತದೆ), ಆದರೆ ಈ ಬಾರಿ ಶಿಂಧೆ ಬಣ ಮತ್ತು ಬಿಜೆಪಿಯ ಮೂಲಕ ಅಡೆತಡೆಗಳನ್ನು ಸೃಷ್ಟಿಸಿತು, ಅದೃಷ್ಟವಶಾತ್, ನ್ಯಾಯಾಲಯ ಅದನ್ನು ತಿರಸ್ಕರಿಸಿತು,” ಎಂದು ಶಿವಸೇನಾ ಕಾರ್ಯದರ್ಶಿ ವಿನಾಯಕ್ ರಾವುತ್ ಹೇಳಿದ್ದಾರೆ.
ಶಿವಸೇನೆಯು 1966 ರಿಂದ ಪ್ರತಿ ವರ್ಷ ದಸರಾದಂದು ರ್ಯಾಲಿಯನ್ನು ನಡೆಸುತ್ತಿದೆ. ಶಿವಸೇನೆಯು ಎರಡು ಬಣಗಳಾಗಿ ವಿಭಜನೆಯಾದ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021 ರಲ್ಲಿ ರ್ಯಾಲಿಯನ್ನು ನಡೆಸಲಾಗಿಲ್ಲದ್ದರಿಂದ ಈ ವರ್ಷ ಈ ಕಾರ್ಯಕ್ರಮವು ಮಹತ್ವದ್ದಾಗಿದೆ.
ಉದ್ಧವ್ ಠಾಕ್ರೆ ಅವರು ಆಗಸ್ಟ್ನಲ್ಲಿ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು, ಏನೇ ಆಗಲಿ ಶಿವಾಜಿ ಪಾರ್ಕ್ನಲ್ಲಿ ದಸರಾ ರ್ಯಾಲಿ ನಡೆಸುವುದಾಗಿ ಠಾಕ್ರೆ ಹೇಳಿದ್ದರು.
“ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಶಿವಸೇನೆಯ ದಸರಾ ರ್ಯಾಲಿ ನಡೆಯಲಿದೆ. ಈ ರ್ಯಾಲಿಗೆ ರಾಜ್ಯದೆಲ್ಲೆಡೆಯಿಂದ ಶಿವಸೈನಿಕರು ಆಗಮಿಸುತ್ತಾರೆ.ಸರಕಾರ ಅನುಮತಿ ನೀಡುತ್ತದೋ ಇಲ್ಲವೋ ಈ ತಾಂತ್ರಿಕ ವಿಷಯಗಳು ನಮಗೆ ತಿಳಿದಿಲ್ಲ. ರ್ಯಾಲಿ ನಡೆಸುತ್ತೇವೆ. ಇತರರು ರ್ಯಾಲಿಗಳನ್ನು ನಡೆಸುತ್ತಾರೋ ಇಲ್ಲವೋ ಎಂಬುದು ನಮಗೆ ಮುಖ್ಯವಲ್ಲ. ಶಿವಸೇನೆ ಬೆಳೆದಿರುವುದು ದೇಶದ್ರೋಹಿಗಳಿಂದಲ್ಲ, ಶಿವಸೈನಿಕರ ರಕ್ತದಿಂದ” ಎಂದು ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು. ಅಕ್ಟೋಬರ್ 5 ರಂದು ನಡೆಯಲಿರುವ ರ್ಯಾಲಿಯಲ್ಲಿ ಅವರು ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ದೊಡ್ಡ ಭಾಷಣ ಮಾಡುವ ನಿರೀಕ್ಷೆಯಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ನೇತೃತ್ವದ ಬಂಡಾಯ ಶಿಬಿರವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ರ್ಯಾಲಿಗೆ ಈಗಾಗಲೇ ಅನುಮತಿ ಪಡೆದಿದೆ.