ಜಾತ್ಯತೀತ ಮೌಲ್ಯಗಳ ಪ್ರತಿಪಾದಕರು ಹಿಂದೂ ಮತ್ತು ಹಿಂದುತ್ವವಾದಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಬೌದ್ಧಿಕ ವಲಯದಲ್ಲಿ ಸಂಚಲನ ಉಂಟಾಗುತ್ತಿದೆ. ಈ ಸೂಕ್ಷ್ಮ ಆಧ್ಯಾತ್ಮಿಕ ವ್ಯತ್ಯಾಸಗ್ರಹಿಕೆಗಳು ವಾಸ್ತವಿಕ ನೆಲೆಯಲ್ಲಿ ಹೇಗೆ ಅಪ್ರಸ್ತುತವೆನಿಸುತ್ತದೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ತೊಡಗಿರುವ ಹಿಂದೂ ಸಮುದಾಯದ ಮೇಲ್ಪದರದ ಗಣ್ಯ ಬುದ್ಧಿಜೀವಿಗಳೇ ಮತ್ತೊಂದು ನೆಲೆಯಲ್ಲಿ ನಿಂತು ಇಸ್ಲಾಂ ಮತವನ್ನು ಇಸ್ಲಾಂವಾದದಿಂದ ಬೇರೆಯಾಗಿಯೇ ನೋಡಬೇಕು ಎಂದು ವಾದಿಸುತ್ತಾರೆ. ಅಷ್ಟೇ ಅಲ್ಲದೆ ಭಾರತದ ಮೇಲೆ ಆಕ್ರಮಣ ಮಾಡಿದವರನ್ನು ಪರ್ಷಿಯನೀಕರಣಗೊಂಡ ತುರುಕರು ಎಂದು ಪರಿಗಣಿಸಬೇಕೇ ಹೊರತು ಮುಸ್ಲಿಂ ಸೇನಾನಿಗಳು ಎಂದು ಭಾವಿಸಬಾರದು ಎಂದೂ ವಾದಿಸುತ್ತಾರೆ.
ಮತ ಅಥವಾ ಧರ್ಮ ಎನ್ನುವ ಪದವು ಹೆಚ್ಚು ಜನಪ್ರಿಯತೆ ಗಳಿಸಿದ್ದು 19ನೆಯ ಶತಮಾನದಲ್ಲಿ. ಏಕದೈವವಾದದ ಪೌರಾಣಿಕ ನೆಲೆಯಲ್ಲಿ, ವಿಜ್ಞಾನದ ಪ್ರಭಾವ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೂ ಸಹ ದೈವತ್ವವನ್ನು ವಾಸ್ತವ ಎಂದು ಒಪ್ಪಿಕೊಳ್ಳುವ ಒಂದು ಮನಸ್ಥಿತಿಯನ್ನು ಮತ ಎಂದು ವ್ಯಾಖ್ಯಾನಿಸಲಾಗಿತ್ತು. ಬಹುಪಾಲು ವಸಾಹತು ದಾಳಿಕೋರರಿಗೆ ಇದ್ದುದು ಒಂದೇ ಮತ- ಅವರ ದೃಷ್ಟಿಕೋನದ ಕ್ರೈಸ್ತ, ಕ್ಯಾಥೊಲಿಕ್ ಅಥವಾ ಪ್ರೊಟೆಸ್ಟಂಟ್ ಮತ. ಯಹೂದ್ಯ ಮತವನ್ನು ಗತಕಾಲದ ಮತ ಎಂದೇ ಪರಿಭಾವಿಸಿದ ವಸಾಹತು ಶಕ್ತಿಗಳು ಇಸ್ಲಾಂ ಮತವನ್ನು , ಸಮಾನ ಬೇರುಗಳನ್ನು ಹೊಂದಿದ್ದರೂ ಸಹ, ಪಾಷಂಡ ಮತ ಎಂದೇ ಭಾವಿಸಿದ್ದರು. ವಸಾಹತು ದಾಳಿಕೋರರು ವಸಾಹತೀಕರಣಗೊಳಿಸಿದ ಭೌಗೋಳಿಕ ರಾಷ್ಟ್ರಗಳಲ್ಲಿನ ಜನತೆಯ ನಂಬಿಕೆ ಮತ್ತು ಶ್ರದ್ಧೆಯನ್ನು ವಿಗ್ರಹಾರಾಧನೆ ಎಂದೋ ಅಥವಾ ಅಧಾರ್ಮಿಕ ಅಥವಾ ನಾಸ್ತಿಕತೆ ಎಂದೇ ಪರಿಗಣಿಸುತ್ತಿದ್ದರು. ಹಾಗಾಗಿ ಈ ಶ್ರದ್ಧಾನಂಬಿಕೆಗಳಿಗೆ ಮಾನ್ಯತೆಯನ್ನೇ ನೀಡದೆ, ಮೂಢನಂಬಿಕೆಗಳೆಂದು ಪರಿಗಣಿಸುತ್ತಿದ್ದರೇ ಹೊರತು ಮತ ಅಥವಾ ಧರ್ಮ ಎಂದು ಪರಿಗಣಿಸುತ್ತಿರಲಿಲ್ಲ.
ಆದರೆ ಈ ಸಂದರ್ಭದಲ್ಲಿ ಜಪಾನಿನ ಮಾರುಕಟ್ಟೆಗಳು ಮಿಷನರಿ ಚಟುವಟಿಕೆಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿರಲಿಲ್ಲವಾಗಿ ಈ ಮಾರುಕಟ್ಟೆಗಳನ್ನು ತಲುಪುವುದು ವಸಾಹತು ಶಕ್ತಿಗಳಿಗೆ ಕಷ್ಟವಾಗತೊಡಗಿತ್ತು. ಈ ಸಂದರ್ಭದಲ್ಲೇ “ ಇತರ ಜನಸಮುದಾಯಗಳ ಮತಗಳನ್ನು ಗೌರವಿಸುವ ” ಚಿಂತನೆಯೂ ರಾಜಕೀಯವಾಗಿ ಪ್ರಚಲಿತವಾಗಿ ಮಾನ್ಯತೆ ಪಡೆದಿತ್ತು. ಅಂದರೆ, 19ನೆಯ ಶತಮಾನದಲ್ಲಿ ಮಾರುಕಟ್ಟೆಯ ಅನಿವಾರ್ಯತೆಗಳ ಕಾರಣದಿಂದಲೇ ಯೂರೋಪಿನ ವಸಾಹತುಶಾಹಿಗಳು ಬಹುವಿಧದ ಮತಗಳ ಔಚಿತ್ಯವನ್ನು ಮಾನ್ಯ ಮಾಡಬೇಕಾಗಿತ್ತು.

ಭಾರತದ ಅಸ್ಮಿತೆ
ಹಾಗಾಗಿ, ಇದೇ ಕಾಲಘಟ್ಟದಲ್ಲಿ ಯೂರೋಪ್ ಖಂಡವು ಬುದ್ಧನನ್ನು ಶೋಧಿಸಿದ್ದೇ ಅಲ್ಲದೆ ವ್ಯಾಪಕವಾಗಿ ಸ್ವೀಕರಿಸಿದ್ದು ಕಾಕತಾಳೀಯ ಎನಿಸುವುದಿಲ್ಲ. ಭಾರತದಲ್ಲಿನ ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಸಮರ್ಥವಾಗಿ ಎದುರಿಸಲು ಭಾರತದಲ್ಲೇ ಉಗಮಿಸಿದ ಒಂದು ಅದ್ಭುತ ಪ್ರತಿ ಚಿಂತನೆ ಬೌದ್ಧ ಧಮ್ಮ ಎಂದು ಭಾರತೀಯರಿಗೆ ಅರ್ಥಮಾಡಿಸಲಾಯಿತು. ಈ ಸಂದರ್ಭದಲ್ಲೇ ಹಿಂದೂ ಧರ್ಮ ಮತ್ತು ಹಿಂದುತ್ವ ಎಂಬ ಪದಗಳೂ ಉದ್ಭವಿಸಿದವು. ಹಿಂದೂ ಧರ್ಮ ಪದವನ್ನು ಸಮಾಜ ಸುಧಾರಣೆಯಲ್ಲಿ ವಿಶ್ವಾಸ ಹೊಂದಿದ್ದ ರಾಜಾರಾಮ್ ಮೋಹನ್ ರಾಯ್ 19ನೆಯ ಶತಮಾನದ ಆರಂಭದಲ್ಲೇ ಬಳಸಲಾರಂಭಿಸಿದ್ದರು. ಹಿಂದುತ್ವ ಪದವನ್ನು 19ನೆಯ ಶತಮಾನದ ಅಂತ್ಯದ ವೇಳೆಗೆ , ಸಮಾಜ ಸುಧಾರಣೆಯನ್ನು ವಿರೋಧಿಸುತ್ತಿದ್ದ ಚಂದ್ರನಾಥ ಬಸು ಬಳಸಲಾರಂಭಿಸಿದ್ದರು.
ಈ ಅವಧಿಗೂ ಮುನ್ನ ಭಾರತದಲ್ಲಿ ಅಸ್ಮಿತೆಗಳು ಜಾತಿ, ಬುಡಕಟ್ಟು ಮತ್ತು ಪ್ರಾಂತ್ಯಗಳನ್ನು ಆಧರಿಸಿದ್ದವು. ಮೀನುಗಾರರನ್ನು ಮೀನುಗಾರ ಜಾತಿಗೆ ಸೇರಿದವರೆಂದೇ ಗುರುತಿಸಲಾಗುತ್ತಿತ್ತು. ಈ ಜಾತಿಯ ಜನರು ಯಾರನ್ನು ಆರಾಧಿಸುತ್ತಿದ್ದರು ಎನ್ನುವುದು ಅಪ್ರಸ್ತುತವಾಗಿತ್ತು. ಭೂಮಾಲೀಕರನ್ನು ಮುಸ್ಲಿಮರು, ರಜಪೂತರು, ಬ್ರಾಹ್ಮಣರು, ಠಾಕೂರರು, ಕಾಯಸ್ಥರು ಹೀಗೆ ಜಾತಿ ಆಧಾರಿತ ಭೂಮಾಲೀಕರಾಗಿಯೇ ಕಾಣಲಾಗುತ್ತಿತ್ತು. ಈ ಸಂದರ್ಭದಲ್ಲೇ ಬ್ರಿಟೀಷರು ಜನಗಣತಿಯ ಸಾಧನವನ್ನು ಬಳಸಿಕೊಳ್ಳುವ ಮೂಲಕ ಮತ ಅಥವಾ ಧರ್ಮವನ್ನು ವಿಧ್ಯುಕ್ತವಾಗಿ ವರ್ಗೀಕರಿಸುವುದರಲ್ಲಿ ಯಶಸ್ವಿಯಾಗಿದ್ದರು. ಬ್ರಿಟೀಷರು ಹೇಳುವವರೆಗೂ ಹಿಂದೂಗಳಿಗೆ ಒಂದು ಕೇಂದ್ರೀಕೃತ ಸಾಂಸ್ಥಿಕ ಮತ ಎನ್ನುವುದು ಇರಲಿಲ್ಲ.
ಕ್ರೈಸ್ತ ಮತದಲ್ಲಿ ಪಾದ್ರಿಗಳು ಮತ್ತು ಪ್ರವಾದಿಗಳು ದೈವೀಕ ನಿಯಮಗಳನ್ನು ಹೇರಿದಂತೆಯೇ ಬ್ರಾಹ್ಮಣರು ಜಾತಿ ಶ್ರೇಣೀಕರಣವನ್ನು ಹೇರಲು ಹಿಂದೂ ಧರ್ಮವನ್ನು ಬಳಸಿಕೊಂಡರು ಎಂದು ಅರ್ಥಮಾಡಿಸಲಾಯಿತು. ಮತ ಅಥವಾ ಧರ್ಮದ ಬಗ್ಗೆ ಬ್ರಿಟೀಷರು ಬಳಸಿದ ಈ ಪರಿಭಾಷೆಯೇ ಅವರಿಗೆ ಭಾರತದಲ್ಲಿ ವಸಾಹತು ಆಳ್ವಿಕೆಯನ್ನು ಸಮರ್ಥಿಸಿಕೊಳ್ಳಲು ನೆರವಾಯಿತು. ಹಾಗೆಯೇ ಹಿಂದೂಗಳನ್ನು ಮುಸಲ್ಮಾನರಿಂದ ರಕ್ಷಿಸುವ, ಕೆಳಜಾತಿಯ ಹಿಂದೂಗಳನ್ನು ಮೇಲ್ಜಾತಿಯ ಹಿಂದೂಗಳಿಂದ ರಕ್ಷಿಸುವ ಒಂದು ಸಾಧನವಾಗಿ ಈ ಪರಿಭಾಷೆಯನ್ನು ಬಳಸಲಾಯಿತು. ನಂತರದ ಕಾಲಘಟ್ಟದಲ್ಲಿ ಮುಸ್ಲಿಮರನ್ನು ಬಲಿಷ್ಠ ಹಿಂದೂ ಮೇಲ್ಪದರದ ಗಣ್ಯರಿಂದ ಸಂರಕ್ಷಿಸುವ ಸಲುವಾಗಿ ಮೇಲ್ಪದರದ ಗಣ್ಯ ಮುಸಲ್ಮಾನರು ಭಾರತವನ್ನು ವಿಭಜಿಸಲೂ ಇದು ನೆರವಾಯಿತು. ಇದೇ ಪರಿಭಾಷೆಯನ್ನು ಬಳಸುವ ಮೂಲಕವೇ ಇಂದು ಮಾರ್ಕ್ಸ್ ವಾದಿಗಳು ಮತ್ತು ಜಾತಿ ವಿರೋಧಿ ಗುಂಪುಗಳು ಹಿಂದೂಗಳನ್ನು ವಿಭಜಿಸಲು ಅಥವಾ ಭಾರತವನ್ನೇ ವಿಭಜಿಸಲು ಯತ್ನಿಸುತ್ತಿದ್ದಾರೆ, ಇವರಿಂದ ಭಾರತವನ್ನು ರಕ್ಷಿಸಿ ಐಕ್ಯತೆಯನ್ನು ಸಾಧಿಸಬೇಕು ಎಂದು ಹೇಳಲಾಗುತ್ತಿದೆ.
(ಮೂಲ : From cult to culture- Hindutva’s caste masterstroke ದೇವ್ದತ್ ಪಟ್ಟನಾಯಕ್- ದ ಹಿಂದೂ)









