ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಜನೆವರಿ 14 ರಂದು ಕೂಡಲ ಸಂಗಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ ಮಾಡಬಹುದು ಎಂದು ಕೂಡಲ ಸಂಗಮದಲ್ಲಿ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, 2 ಎ ಮೀಸಲಾತಿ ಪಾದಯಾತ್ರೆ ಹೋರಾಟದ ವರ್ಷಾಚರಣೆ ನೆನೆಪಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಬೃಹತ್ ಹೋರಾಟದ ಕಾರ್ಯಕ್ರಮವನ್ನ ಮಾಡುತ್ತಿದ್ದೇವೆ. ಜನೆವರಿ 14 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಬಹುತೇಕ ಸಂಗಮನಾಥನ ಆಶೀರ್ವಾದದಿಂದ ಅವತ್ತೇ ಮೀಸಲಾತಿ ಘೋಷಣೆ ಮಾಡಿದ್ರೂ ಮಾಡಬಹುದು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಹೋರಾಟದ ಕಾವು ಮತ್ತು ಬಿಸಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಗುಲಿದೆ. ನಾವು ಚುನಾವಣೆ ರಾಜಕಾರಣ ಮತ್ತು ಮೀಸಲಾತಿ ಹೋರಾಟವನ್ನ ತಳುಕು ಹಾಕುವ ಪ್ರಯತ್ನ ಮಾಡಿಲ್ಲ. ಸಮಾಜ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿತ್ತು, ಆದ್ರೆ ಮೀಸಲಾತಿ ವಿಳಂಭ ಮಾಡಿದಕ್ಕೆ ಸರ್ಕಾರಕ್ಕೆ ಹಿನ್ನಡೆ ಆಗಿದೆ ಅನ್ನೋದನ್ನ ತಿಳಿಯಲಾಗುತ್ತಿದೆ ಎಂದರು. ಬೆಳಗಾವಿ ಲೋಕಸಭಾ, ಮಸ್ಕಿ ಚುನಾವಣೆ, ಹಾನಗಲ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಆಧಾರದ ಮೇಲೆ ಹೋರಾಟದ ಪರಿಣಾಮದ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ ಎಂದು ತಿಳಿಸಿದರು. ಸಮಾಜದ ಹೋರಾಟದ ಕಿಚ್ಚು ಪ್ರತಿಯೊಬ್ಬರ ಯುವಕರಲ್ಲಿ ಶಾಶ್ವತವಾಗಿ ಉಳಿದಿದೆ. ಆ ಕಾರಣಕ್ಕೆ ಮುಖ್ಯಮಂತ್ರಿಗಳು ಅವತ್ತೇ ಮೀಸಲಾತಿ ಘೋಷಣೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.