21ನೆಯ ಶತಮಾನದ ಮೂರನೆಯ ದಶಕದಲ್ಲಿ ಭಾರತ ಮತ್ತೊಂದು ವರ್ಷವನ್ನು ಹಿಂದಿಕ್ಕಿ ಮುನ್ನಡೆದಿದೆ. 2021ರ ಭಾರತವನ್ನು ಹೇಗೆ ಬಣ್ಣಿಸುವುದು? 2022ರ ಭಾರತವನ್ನು ಹೇಗೆ ಸ್ವಾಗತಿಸುವುದು? ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಕೆಲವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಭಾರತ ಮುನ್ನಡೆದಿದೆ ಎಂದು ಹೇಳುವುದಾದರೂ ಹೇಗೆ? ಮುನ್ನಡೆ ಎಂದರೆ ಕೇವಲ ಹಿಂದಿನದನ್ನು ಮರೆತು ಅಥವಾ ಅಲಕ್ಷಿಸಿ ಮುಂದಣ ಹೆಜ್ಜೆ ಇಡುವುದಲ್ಲ. ಇಟ್ಟ ಹೆಜ್ಜೆಗಳ ನಡುವೆ ಸಂಭವಿಸಿರಬಹುದಾದ ವ್ಯತ್ಯಯಗಳನ್ನು, ತರತಮಗಳನ್ನು, ಆಘಾತಗಳನ್ನು ಮತ್ತು ಪ್ರಮಾದಗಳನ್ನು ನೆನಪು ಮಾಡಿಕೊಳ್ಳುತ್ತಲೇ ಮುಂದಿನ ಹಾದಿಯಲ್ಲಿ ಭರವಸೆಯ ಕುಸುಮಗಳನ್ನು ಅರಳಿಸುವ ಪ್ರಯತ್ನ ಮಾಡುವುದು ಮುಖ್ಯ. ಇದಕ್ಕೆ ಆತ್ಮಾವಲೋಕನವೊಂದೇ ಮಾರ್ಗ.
ಈ ಆತ್ಮಾವಲೋಕನಕ್ಕೆ ಮುಂದಾಗಬೇಕಾದವರು ಯಾರು? ಭಾರತದ ಸಾಮಾನ್ಯ ಪ್ರಜೆಗಳೋ ಅಥವಾ ಈ ಪ್ರಜೆಗಳನ್ನು ಸಾಂವಿಧಾನಿಕವಾಗಿ ಪ್ರತಿನಿಧಿಸುವ ಆಳುವ ವರ್ಗದ ಪ್ರತಿನಿಧಿಗಳೋ? ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ”ಎಂಬ ಒಂದು ಘೋಷಣೆ ಸತತವಾಗಿ ಮೊಳಗುತ್ತಲೇ ಇದೆ. “ಎಲ್ಲರೊಡನೆ, ಎಲ್ಲರ ಪ್ರಗತಿಗಾಗಿ, ಎಲ್ಲರ ವಿಶ್ವಾಸದೊಂದಿಗೆ, ಎಲ್ಲರ ಶ್ರಮದೊಂದಿಗೆ” ಎನ್ನುವ ಈ ಆಶಯಪೂರ್ಣ ಘೋಷಣೆಯಲ್ಲಿ ಪದಗಳಷ್ಟೇ ಹೊಸತು. ತಾತ್ವಿಕವಾಗಿ ಇದರ ಮೂಲವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಕಾಣಬಹುದಲ್ಲವೇ? ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೇ ಸೇರಿದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಹಾದಿಯಲ್ಲಿ ಸಾಗುತ್ತಿರುವ ನವ ಭಾರತದಲ್ಲಿ ಈ ರಂಗುರಂಗಿನ ಪದಗಳು ಅರ್ಥಹೀನ ಎನಿಸುತ್ತವೆ.
2021ರ ಆರಂಭವಾದದ್ದೇ ಪ್ರಜಾಸತ್ತಾತ್ಮಕ ಮೌಲ್ಯಗಳ ಅಪಮಾನದೊಂದಿಗೆ. ಕಳೆದ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಮುಷ್ಕರ ನಿರತರಾಗಿದ್ದ ರೈತರು ಹಮ್ಮಿಕೊಂಡಿದ್ದ ಟ್ರಾಕ್ಟರ್ ಮೆರವಣಿಗೆ ಮತ್ತು ದೆಹಲಿ ಚಲೋ ಕಾರ್ಯಕ್ರಮವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೈಗೊಂಡ ದಮನಕಾರಿ ಹೆಜ್ಜೆಗಳು “ಸಬ್ ಕಾ ಸಾಥ್,,,,” ಘೋಷಣೆಯನ್ನೇ ಅರ್ಥಹೀನ ಮಾಡಿಬಿಟ್ಟಿತ್ತು. ರೈತ ಮುಷ್ಕರವನ್ನು ಹತ್ತಿಕ್ಕಲು ಬಳಸಿದ ಮುಳ್ಳು ಬೇಲಿಗಳು, ತೋಡಿದ ಕಂದಕಗಳು, ನಿರ್ಮಿಸಿದ ಅಡ್ಡಗೋಡೆಗಳು ಮತ್ತು ಬಳಸಲಾದ ಜಲಫಿರಂಗಿ ಮುಂತಾದ ಅಸ್ತ್ರಗಳು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಂತರ್ಗತವಾಗಿದ್ದ ಕ್ರೌರ್ಯವನ್ನು ಒಮ್ಮೆಲೆ ಹೊರಹಾಕಿಬಿಟ್ಟಿತ್ತು. ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿದ ಪ್ರತಿಯೊಂದು ದನಿಯನ್ನೂ “ ದೇಶದ್ರೋಹಿ ” ಎಂದೇ ಪರಿಭಾವಿಸುವ ವಿಕೃತ ಧೋರಣೆಯಿಂದ ದಿಶಾ ರವಿಯಂತಹ ಯುವ ಪರಿಸರವಾದಿಯೂ ಸೆರೆವಾಸ ಅನುಭವಿಸಬೇಕಾಯಿತು.
ಕೋವಿಡ್- 19 ಎರಡನೆ ಅಲೆ ಭಾರತದ ಆರೋಗ್ಯ ವ್ಯವಸ್ಥೆಯ ದುರವಸ್ಥೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿತ್ತು. ವಿಶ್ವದ ಅಗ್ರಮಾನ್ಯ ಅರ್ಥವ್ಯವಸ್ಥೆಯಲ್ಲಿ ಒಂದಾದ ಭಾರತದಲ್ಲಿ ಮನುಷ್ಯನ ಜೀವರಕ್ಷಣೆಗಾಗಿ ಬೇಕಾದ ಆಮ್ಲಜನಕದ ಕೊರತೆ ಉಂಟಾಗಿದ್ದು ಶತಮಾನದ ದುರಂತವೇ ಸರಿ. ಕೋವಿದ್ ಮೊದಲನೆ ಅಲೆಯ ಸಂದರ್ಭದಲ್ಲೇ ನೀಡಿದ್ದ ಮುನ್ನೆಚ್ಚರಿಕೆಯ ಹೊರತಾಗಿಯೂ ಎರಡನೆ ಅಲೆಯ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯ, ಅಸಡ್ಡೆ ಮತ್ತು ಬೇಜವಾಬ್ದಾರಿಯುತ ನೀತಿಗಳು ನೂರಾರು ಸಾವುಗಳಿಗೆ ಕಾರಣವಾಯಿತು. ಆಸ್ಪತ್ರೆಗಳಲ್ಲಿ ಆಮ್ಲಜನಕ ಇಲ್ಲದೆ ಮಡಿದವರ ಸಂಖ್ಯೆಯನ್ನೂ ನಿಖರವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ನಿಷ್ಕ್ರಿಯ ಎಂದು ಅರ್ಥವಾಗುತ್ತದೆ. 2020ರಲ್ಲಿ ನೂರಾರು ವಲಸೆ ಕಾರ್ಮಿಕರು ರಸ್ತೆಗಳಲ್ಲಿ, ರೈಲು ಹಳಿಗಳ ಮೇಲೆ ಅನಾಥ ಶವಗಳಾದರೆ 2021ರಲ್ಲಿ ಇಂತಹುದೇ ಶವಗಳು ಗಂಗೆಯಲ್ಲಿ ತೇಲಿಬಂದವು. ಸಾಮಾನ್ಯ ಜನರ ಸಾವನ್ನು ಲೆಕ್ಕಿಸದ ಕ್ರೂರ ಅರ್ಥವ್ಯವಸ್ಥೆಯಲ್ಲಿ ಇದಾವುದೂ ಪರಿಗಣನೆಗೇ ಬರಲಿಲ್ಲ.

ಜಗತ್ತಿನ ಇತರ ರಾಷ್ಟ್ರಗಳಲ್ಲೂ ಪ್ರಜಾತಂತ್ರ ಮೌಲ್ಯಗಳು ಶಿಥಿಲವಾಗಿದ್ದು 2021ರ ವಿಶೇಷ. ಕೋವಿದ್ 19 ಹಿನ್ನೆಲೆಯಲ್ಲಿ ರಷ್ಯಾ, ಫ್ರಾನ್ಸ್, ಅಮೆರಿಕ, ಚೀನಾ ಮುಂತಾದ ದೇಶಗಳಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚಾಗಿ ಕಾಣಿಸುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮಗಳೇ ಅಧಿಕಾರಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು ಕಳೆದ ವರ್ಷ ವಿಶ್ವದಾದ್ಯಂತ 488 ಪತ್ರಕರ್ತರನ್ನು ಬಂಧಿಸಲಾಗಿದೆ. ಚೀನಾ, ಬೆಲಾರಸ್ ಮತ್ತು ಮ್ಯಾನ್ಮಾರ್ನಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ಆಕ್ರಮಣ ವರದಿಯಾಗಿದೆ. ಆರ್ಎಸ್ಎಫ್ ಎಂಬ ಸ್ವಾಯತ್ತ ಸಂಸ್ಥೆಯ ವರದಿಯನುಸಾರ ಮಾಧ್ಯಮದವರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಭಾರತ ಐದನೆಯ ಸ್ಥಾನ ಪಡೆದಿದೆ. ಮೆಕ್ಸಿಕೋ, ಆಫ್ಘಾನಿಸ್ತಾನ, ಯಮನ್ ಇತರ ರಾಷ್ಟ್ರಗಳಾಗಿವೆ. ಕಳೆದ ವರ್ಷ ನಾಲ್ವರು ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. ಭಾರತದಲ್ಲಿ ಏಳು ಪತ್ರಕರ್ತರನ್ನು ಬಂಧಿಸಲಾಗಿದ್ದು, ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಮುಂತಾದವರು ಇನ್ನೂ ಸೆರೆವಾಸದಲ್ಲೇ ಇದ್ದಾರೆ. ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ ಭಾರತ 142ನೆಯ ಸ್ಥಾನದಲ್ಲಿದೆ. ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಅವರ ದಾರುಣ ಸಾವು, ಕಳೆದ ವರ್ಷದ ಆಡಳಿತಾತ್ಮಕ ಕ್ರೌರ್ಯಕ್ಕೆ ಒಂದು ನಿದರ್ಶನವಾಗಿಯೇ ಉಳಿಯಲಿದೆ.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕಳೆದ ವರ್ಷದ 94ನೆಯ ಸ್ಥಾನದಿಂದ ಭಾರತ ಈ ವರ್ಷ 101ನೆಯ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಲಕ್ಕಿಂತಲೂ ಭಾರತ ಕಳಪೆ ಸಾಧನೆ ಮಾಡಿದೆ. ಕೋವಿದ್ 19 ಪರಿಣಾಮ ಮತ್ತು ನವ ಉದಾರವಾದದ ಕಾರ್ಪೋರೇಟ್ ಮಾರುಕಟ್ಟೆ ನೀತಿಗಳ ಪರಿಣಾಮ ದೇಶದ ಆರ್ಥಿಕ ಅಭಿವೃದ್ಧಿಯೂ ಕುಂಠಿತವಾಗಿದ್ದು, ನಿರುದ್ಯೋಗದ ಪ್ರಮಾಣವೂ ಹೆಚ್ಚಾಗಿದೆ. ದಾರಿದ್ರ್ಯ ಅನುಭವಿಸುತ್ತಿರುವ ಬಡ ಜನತೆಯ ಸಂಖ್ಯೆ ಶೇ 66ರಷ್ಟು ಹೆಚ್ಚಾಗಿದ್ದು 13.4 ಕೋಟಿ ತಲುಪಿದೆ. 23 ಕೋಟಿಗೂ ಹೆಚ್ಚು ಜನರು ಕನಿಷ್ಟ ವೇತನಕ್ಕಿಂತಲೂ ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಒಕ್ಕೂಟ ಸರ್ಕಾರ ಈ ಅಂಕಿಅಂಶಗಳನ್ನು ನಿರಾಕರಿಸಿದರೂ, ವಾಸ್ತವ ಸನ್ನಿವೇಶವನ್ನು ಬದಲಿಸಲಾಗುವುದಿಲ್ಲ. ಏಕೆಂದರೆ ಏಳು ದಶಕಗಳಿಂದ ಪೋಷಿಸಿಕೊಂಡು ಬಂದ ಸಾರ್ವಜನಿಕ ಉದ್ದಿಮೆಗಳನ್ನು, ಆಸ್ತಿಯನ್ನು ನಗದೀಕರಣಗೊಳಿಸುವ ಮೂಲಕ ಮೋದಿ ಸರ್ಕಾರ ಹೆಚ್ಚು ಹೆಚ್ಚು ಶ್ರಮಜೀವಿಗಳನ್ನು ಬಡತನದ ಕೂಪಕ್ಕೆ ತಳ್ಳುತ್ತಿವೆ. ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳು, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕ್ ಮತ್ತು ವಿಮಾ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಮೂಲಕ, ಕಾರ್ಪೋರೇಟ್ ಉದ್ಯಮಿಗಳಿಗೆ ಈ ಸಾರ್ವಜನಿಕ ಆಸ್ತಿಯನ್ನು ಗುತ್ತಿಗೆ ನೀಡುವ ಮೂಲಕ ಒಕ್ಕೂಟ ಸರ್ಕಾರ ಅಭಿವೃದ್ಧಿಯ ಹೊಸ ಆಯಾಮವನ್ನು ಅನುಸರಿಸಲಾರಂಭಿಸಿದ್ದು 2021ರ ವೈಶಿಷ್ಟ್ಯ.

ಒಕ್ಕೂಟ ಸರ್ಕಾರ ನವ ಉದಾರವಾದಿ ಆರ್ಥಿಕ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದಲೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಮತ್ತು ಕಾರ್ಮಿಕ ಸಂಹಿತೆಗಳನ್ನು ಮುಂದಿಟ್ಟಿತ್ತು. ಆದರೆ ಒಂದು ವರ್ಷದ ರೈತರ ಮುಷ್ಕರ ಪ್ರಜಾಪ್ರಭುತ್ವದ ನೈಜ ಅಂತಃಸತ್ವವನ್ನು ಆಳುವವರಿಗೆ ಪರಿಚಯಿಸುವುದರಲ್ಲಿ ಯಶಸ್ವಿಯಾಗಿದ್ದು 2021ರ ಹೆಮ್ಮೆಯ ವಿಚಾರಗಳಲ್ಲೊಂದು. ಜನಾಂದೋಲನಗಳು ಎಂತಹ ನಿರಂಕುಶ ಅಧಿಕಾರವನ್ನೂ ಮಣಿಸಬಹುದು ಎನ್ನುವುದನ್ನು 2021ರಲ್ಲಿ ನಿರೂಪಿಸಲಾಗಿದೆ. ಆದರೂ ಕಳೆದ ವರ್ಷದಲ್ಲಿ ಪ್ರಜಾಸತ್ತಾತ್ಮಕ ಭಾರತದ ಸಾಂವಿಧಾನಿಕ ಸಂಸ್ಥೆಗಳು ಶಿಥಿಲವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆಡಳಿತಾರೂಢ ಸರ್ಕಾರಗಳು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪರಂಪರೆ 2021ರಲ್ಲಿ ಇನ್ನೂ ಗಟ್ಟಿಯಾಗತೊಡಗಿದೆ. ಆದರೆ ನ್ಯಾಯಾಂಗದ ಸೂಕ್ಷ್ಮ ಸಂವೇದನೆ ಮತ್ತು ಸಮಾಜಮುಖಿ ಧೋರಣೆ ಮತ್ತೊಮ್ಮೆ ಭಾರತದ ಪ್ರಜಾತಂತ್ರದಲ್ಲಿ ಭರವಸೆಯ ಕಿರಣಗಳನ್ನು ಮೂಡಿಸಿದೆ.
ಆದರೂ 2021 ಕೆಲವು ಆತಂಕಕಾರಿ ವಿಚಾರಗಳಿಗೆ ಸಾಕ್ಷಿಯಾಗಿದೆ. ರೈತ ಮುಷ್ಕರದ ವೇಳೆ ಲಖೀಂಪುರದಲ್ಲಿ ನಡೆದ ಹತ್ಯೆ ಈ ದೇಶದ ಆಡಳಿತ ವ್ಯವಸ್ಥೆಯಲ್ಲೇ ಅಂತರ್ಗತವಾಗಿ, ಅಂಗೀಕೃತವಾಗಿರುವ ಹಿಂಸಾತ್ಮಕ ಧೋರಣೆಯ ಸಂಕೇತವಾಗಿಯೇ ಕಾಣುತ್ತದೆ. ಭಾರತದಲ್ಲಿ ಯಾವುದೇ ಅಪರಾಧಗಳ ಸಂಖ್ಯೆ ಕಡಿಮೆಯಾದರೂ, ದಲಿತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ,ಅತ್ಯಾಚಾರಗಳು ಕಡಿಮೆಯಾಗುವುದಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಪುರುಷಪ್ರಧಾನ ವ್ಯವಸ್ಥೆಯ ಅಟ್ಟಹಾಸಕ್ಕೆ 2021 ಸಹ ಹೊರತಾಗಿಲ್ಲ. ಕರ್ನಾಟಕದ ಕೊಪ್ಪಳದಲ್ಲಿ 8 ವರ್ಷದ ಹಸುಳೆ ದೇವಾಲಯ ಪ್ರವೇಶಿಸಿದ್ದಕ್ಕಾಗಿ ಮೇಲ್ಜಾತಿಯವರಿಮದ ಬಹಿಷ್ಕಾರಕ್ಕೊಳಗಾದ ಘಟನೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷ. ಮತ್ತೊಂದು ಘಟನೆಯಲ್ಲಿ ಒಬಿಸಿ ಹುಡುಗಿಯೊಡನೆ ಸಂಬಂಧ ಬೆಳೆಸಿದ ಕಾರಣಕ್ಕಾಗಿ ದಲಿತ ಯುವಕನ ಕಗ್ಗೊಲೆ ನಡೆದಿದೆ. ದಲಿತ ಸಮುದಾಯದ ವ್ಯಕ್ತಿ ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ 11 ಸಾವಿರ ರೂ ದಂಡ ವಿಧಿಸಲಾಗಿದೆ. ವರ್ಷಾಂತ್ಯದಲ್ಲಿ ಉಡುಪಿಯ ಬಳಿ ಕೊರಗ ಸಮುದಾಯದ ಮೇಲೆ ರಾಜ್ಯ ಪೊಲೀಸರು ನಡೆಸಿರುವ ದೌರ್ಜನ್ಯದೊಂದಿಗೆ 2021ಕ್ಕೆ ವಿಷಾದದಿಂದಲೇ ವಿದಾಯ ಹೇಳಬೇಕಿದೆ.
2021 ಕೆಲವು ಸಕಾರಾತ್ಮಕ ಬೆಳವಣಿಗೆಗಳಿಗೂ ಸಾಕ್ಷಿಯಾಗಿದೆ. ಕೋವಿದ್ ನಿಯಂತ್ರಣದಲ್ಲಿ ಸರ್ಕಾರಗಳು ಹೆಚ್ಚಿನ ಯಶಸ್ಸು ಸಾಧಿಸಿರುವುದೇ ಅಲ್ಲದೆ, ಕೋವಿದ್ ನಿರ್ಬಂಧಕ ಲಸಿಕೆ ನೀಡುವುದರಲ್ಲೂ ಭಾರತದ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಲ್ಲೊಂದಾಗಿರುವುದು ಹೆಮ್ಮೆಯ ವಿಚಾರ. ಇದು ಆರೋಗ್ಯ ಸೇವೆಯಲ್ಲಿ ತೊಡಗಿರುವ ಲಕ್ಷಾಂತರ ವೈದ್ಯರು ಮತ್ತು ಕಾರ್ಯಕರ್ತರಿಗೆ ಸಲ್ಲಬೇಕಾದ ಶ್ರೇಯ. ಆರ್ಥಿಕವಾಗಿಯೂ ಭಾರತದ ಮಾರುಕಟ್ಟೆಗಳು ಸುಧಾರಣೆ ಕಾಣುತ್ತಿದ್ದು ಈ ವರ್ಷದ ಜಿಡಿಪಿ ಕೊಂಚ ಹೆಚ್ಚಿನ ವೃದ್ಧಿ ಕಾಣಲಿರುವುದು ಆಶಾದಾಯಕ. ಆದರೆ ಈ ಯಶೋಗಾಥೆಯ ನಡುವೆಯೇ ದೇಶಾದ್ಯಂತ ಮುಷ್ಕರ, ಪ್ರತಿಭಟನೆಗಳ ಮಹಾಪೂರವೇ ಕಂಡುಬರುತ್ತಿರುವುದು ಚಿಂತೆಗೀಡುಮಾಡುವ ವಿಚಾರ. ವೈದ್ಯರು, ಶಿಕ್ಷಕರು, ಅತಿಥಿ ಉಪನ್ಯಾಸಕರು, ಕಾರ್ಖಾನೆಗಳ ನೌಕರರು, ಬ್ಯಾಂಕ್ ಮತ್ತು ವಿಮೆ ನೌಕರರು, ಅಂಗನವಾಡಿ-ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ವರ್ಷವಿಡೀ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರನಿರತಾಗಿದ್ದು, ಯಾವುದೇ ಸರ್ಕಾರಕ್ಕೆ ಶೋಭೆ ತರುವಂತಹುದಲ್ಲ.
ವರ್ಷಾರಂಭದಲ್ಲಿ ಆಡಳಿತ ವ್ಯವಸ್ಥೆಯ ಕ್ರೌರ್ಯವನ್ನು ಕಂಡ ಭಾರತ ವರ್ಷಾಂತ್ಯದಲ್ಲಿ ಮತಾಂಧರ ಜನಾಂಗೀಯ ದ್ವೇಷವನ್ನೂ ಕಂಡಿದೆ. ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ಹಲ್ಲೆಗಳು ಪರಾಕಾಷ್ಠೆ ತಲುಪಿರುವುದು, ಮತಾಂತರ ನಿಷೇಧ ನೆಪದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿರುವುದು ಮತ್ತು ಕರಾವಳಿಯಲ್ಲಿ ಮತಾಂಧರ ಉಪಟಳ ಹೆಚ್ಚಾಗಿರುವುದು ಆತಂಕಕಾರಿ ವಿಚಾರ. ಉತ್ತರಖಾಂಡದಲ್ಲಿ ನಡೆದ ಹಿಂದೂ ಧರ್ಮಸಂಸತ್ತಿನಲ್ಲಿ ಮೊಳಗಿದ ಘೋಷಣೆಗಳು ಬಹಿರಂಗವಾಗಿಯೇ ಜನಾಂಗೀಯ ಹತ್ಯೆಗೆ ಕರೆ ನೀಡಿದಂತಿದ್ದು, ಆಂತರಿಕ ಕಲಹದ ಸೂಚನೆಗಳು ಕಾಣುತ್ತಿವೆ ಎಂಬ ಆತಂಕವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ನೂರಾರು ಹಿರಿಯ ನಾಗರಿಕರು, ಚಿಂತಕರು, ನಿವೃತ್ತ ವರಿಷ್ಠ ಸೇನಾಧಿಕಾರಿಗಳು, ಧರ್ಮಸಂಸತ್ತಿನಲ್ಲಿ ವ್ಯಕ್ತವಾದ ಜನಾಂಗೀಯ ದ್ವೇಷದ ವಿಷಪೂರಿತ ಧ್ವನಿಯನ್ನು ಗುರುತಿಸಿದ್ದು ಇದು ಪ್ರಜಾಸತ್ತಾತ್ಮಕ ಭಾರತಕ್ಕೆ ಮಾರಕವಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮತಾಂಧತೆಯ ಕೂಗಿಗೆ ಪ್ರಧಾನಿ ಮೋದಿ ಮೌನ ವಹಿಸಿರುವುದೂ ಸಹ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.
ವರುಷಗಳೆಷ್ಟೇ ಉರುಳಿದರೂ ಭಾರತ ಆತ್ಮಾವಲೋಕನದ ಪರಿಕಲ್ಪನೆಯೇ ಇಲ್ಲದ ಒಂದು ದೇಶವಾಗಿಯೇ ಮುಂದುವರೆಯುತ್ತಿದೆ. ಜಾತಿ ವೈಷಮ್ಯ, ಜಾತಿ ದೌರ್ಜನ್ಯ, ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳು, ರಾಜಕೀಯ-ಸಾಂಸ್ಥಿಕ ಭ್ರಷ್ಟಾಚಾರ, ಅಧಿಕಾರ ರಾಜಕಾರಣದ ಕ್ರೌರ್ಯ ಮತ್ತು ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆಯ ನಡುವೆಯೇ ಭಾರತದ ಪ್ರಜಾಪ್ರಭುತ್ವ ಶಿಥಿಲವಾಗುತ್ತಿರುವ ಆತಂಕದೊಡನೆಯೇ 2021ಕ್ಕೆ ವಿದಾಯ ಹೇಳಬೇಕಿದೆ. ಕೋಮು ದ್ವೇಷದ ಬೀಜಗಳು ಜನಾಂಗೀಯ ದ್ವೇಷದ ಹೆಮ್ಮರಗಳಾಗಿ ಬೆಳೆದಿರುವ ಅಪಾಯಕಾರಿ ಸನ್ನಿವೇಶದೊಂದಿಗೆ 2022ಕ್ಕೆ ಸ್ವಾಗತ ಕೋರಬೇಕಿದೆ. ಸಾಂವಿಧಾನಿಕವಾಗಿ ಅಸ್ವಸ್ಥವಾಗಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಕಾಯಕಲ್ಪ ಒದಗಿಸಬೇಕಾದರೆ, ಈ ದೇಶದ ಪ್ರಜ್ಞಾವಂತ ಜನತೆ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಿ, ಮನುಜ ಸಂವೇದನೆಯ ಹೊಸ ಸಮಾಜದತ್ತ ಮುನ್ನಡೆಯಬೇಕಿದೆ. 2022ಕ್ಕೆ ಪ್ರವೇಶಿಸುವ ಮುನ್ನ ಈ ಜಾಗ್ರತೆ ಮತ್ತು ಜಾಗೃತಿ ನಮ್ಮೊಳಗಿದ್ದರೆ ಹೊಸ ವರ್ಷದ ಸಂತಸವೂ ಅರ್ಥಪೂರ್ಣವಾಗಿ ಕಾಣಬಹುದು.