ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿ ವಿಜಯಪುರ ಹಿಂದಿನಿಂದಲೂ ಗುರುತಿಸಿಕೊಂಡಿದೆ. ಅದರಲ್ಲೂ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಹೇಳ ತೀರದು. ಈ ಭಾಗದಲ್ಲಿ ಜನರು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಹೆಚ್ಚಾಗಿ ಗುಳೆ ಹೋಗುವುದರಿಂದ ಇಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜೊತೆಗೆ ಇಲ್ಲಿರುವ ಮಕ್ಕಳು ಸಹ ಸರಿಯಾಗಿ ಶಾಲೆಗೆ ಬರುವುದಿಲ್ಲ. ಇದನ್ನೆಲ್ಲ ಅರಿತ ಶಿಕ್ಷರೊಬ್ಬರು ಈ ಸಮಸ್ಯೆಗಳನ್ನು ದೂರ ಮಾಡಲು ಪಣತೊಟ್ಟು ನಿಂತಿದ್ದಾರೆ.
ಹೌದು, ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಯ ಕಡೆ ಮುಖಮಾಡಿಸಲು ವಿಶಿಷ್ಟ ಕಾರ್ಯಯೋಜನೆ ಹಾಕಿಕೊಂಡು ಈಗ ಮಾದರಿ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ.
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಮಹಾರಾಷ್ಟ್ರ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಘೋಣಸಗಿ ಎಲ್.ಟಿ.1 ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಪರಮೇಶ್ವರ ಎಸ್ ಗದ್ಯಾಳ ಈ ವಿಶಿಷ್ಟವಾದ ಕೆಲಸ ಮಾಡಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಶಾಲೆಗೆ ಹೊಸ ಭೌತಿಕ ರೂಪ
ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡಲು ಶಿಕ್ಷಕರೊಬ್ಬರು ತಾವು ಕರ್ತವ್ಯ ನಿರ್ವಹಿಸುವ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು ಶಾಲೆ ಅಂದವಾಗಿಸಲು 1 ಲಕ್ಷ ಖರ್ಚು ಮಾಡಿ ಶಾಲಾ ವಾತಾವರಣವನ್ನು ಅಂದವಾಗಿಸಿದ್ದಾರೆ.
ಭಾಷಾ ಸಮಸ್ಯೆಯಿಂದ ಕೂಡಿದ ಲಂಬಾಣಿ ತಾಂಡಾ ಜನವಸತಿ ಪ್ರದೇಶವಾಗಿರುವ ಘೋಣಸಗಿ ತಾಂಡಾದ ಶಾಲೆಯ ವಿದ್ಯಾರ್ಥಿಗಳು ಇದೀಗ ಖುಷಿಯಾಗಿದ್ದಾರೆ. ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ಉದ್ದೇಶದಿಂದ ಶಿಕ್ಷಕ ಪರಮೇಶ್ವರ ಗದ್ಯಾಳ್, ಉತ್ತಮ ಗುಣಮಟ್ಟದ ಪೇಂಟ್ ಬಳಕೆ ಮಾಡಿ ವರ್ಗ ಕೋಣೆಗಳನ್ನು ಗೋಡೆ ಬರಹ ಮತ್ತು ಚಿತ್ತಾರಗಳಿಂದ ಆಕರ್ಷಣಿಯ ಮಾಡಿದ್ದಾರೆ. ಕೋಣೆಯಲ್ಲಿ ಪ್ರತಿಯೊಂದು ಗೋಡೆಯ ಮೇಲೆ ಒಂದೊಂದು ವಿಷಯದ ಕಲಿಕಾ ಬರವಣಿಗೆ ಮತ್ತು ಚಿತ್ರಗಳನ್ನು ಮೂಡಿಸಿದ್ದಾರೆ.
![](https://pratidhvani.com/wp-content/uploads/2021/12/WhatsApp-Image-2021-12-28-at-4.05.30-PM-1.jpeg)
ಮೂಲಾಕ್ಷರಗಳು, ಗುಣಿತಾಕ್ಷರಗಳು, ಪ್ರಾಣಿಗಳು, ಪಕ್ಷಿಗಳು, ಹೂವಿನ ವಿಧಗಳು, ಪರಿಸರ ಕಲ್ಪನೆ, ಹಬ್ಬಗಳು, ಇಂಗ್ಲೀಷ ಅಕ್ಷರಗಳ ಪರಿಚಯ, ಕುಟುಂಬ ಕಲ್ಪನೆ, ಅಂಕಿಗಳ, ಮೂಲಕ್ರೀಯೆಗಳ ಕಲ್ಪನೆ, ತೂಕ, ಹಣ, ನೋಟು, ನೀರಿನ ಮೂಲಗಳು, ಶರೀರದ ಭಾಗಗಳು, ಸಸ್ಯಗಳ ಮಾಹಿತಿ, ಪೋಷಕಾಂಶಗಳು, ವ್ಯಾಕರಣ, ಸೌರವ್ಯೂಹ, ಚಂದ್ರಗ್ರಹಣ, ಸೂರ್ಯಗ್ರಹಣ, ಧಾನ್ಯಗಳ, ಸಸ್ಯಗಳ ಮಾಹಿತಿ ಹಾಗೂ ಹೊರಗಡೆ ತಾಲ್ಲೂಕ, ಜಿಲ್ಲೆ, ರಾಜ್ಯ, ರಾಷ್ಟ್ರ ನಕ್ಷೆ ಇತರೆ ಎಲ್ಲ ಮಾಹಿತಿಗಳನ್ನು ಮಗುವಿನ ಕಲಿಕೆಗೆ ನೈಜವಾಗಿ ಕಲ್ಪಿಸುವಂತೆ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಕಂಪ್ಯೂಟರ್ ಕಲಿಕೆಗೆ ಒತ್ತು ನೀಡುವುದಕ್ಕಾಗಿ ವಿದ್ಯುತ್ ಸೌಲಭ್ಯ, ಶಾಲಾ ಮೇಲ್ಛಾವಣಿಯ ರಿಪೇರಿ, ಶೌಚಾಲಯ, ಅಡುಗೆ ಕೋಣೆಯ ರಿಪೇರಿ ಶಾಲೆಯ ಭೌತಿಕ ಸೌಲಭ್ಯಗಳ ಎಲ್ಲ ಸಣ್ಣ ಪುಟ್ಟ ರಿಪೇರಿ ಮಾಡಿಸಿ ಶಾಲೆಗೆ ಒಂದು ರೂಪ ಕೊಟ್ಟಿದ್ದಾರೆ.
ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳ ಕಲಿಕೆ ಹಿಂದುಳಿದಿದೆ. ಗಡಿ ಭಾಗ, ಹಿಂದುಳಿದ ಪ್ರದೇಶ, ಬಡತನ ಕುಟುಂಬದಲ್ಲಿರುವ ಮಕ್ಕಳ ಕಲಿಕೆಗೆ ಅನೂಕೂಲವಾಗಲಿ ಅಂತಾ ಲಾಕಡೌನ ಸಮಯದಲ್ಲಿ ಕೆಲಸ ಆರಂಭಿಸಿ ಈಗ ಶಾಲೆಯಲ್ಲಿ ಕಲಿಕಾ ವಾತಾವರಣ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರೇರಣೆ
2019 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಂದಿನ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಈ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಕಾಳಜಿ ತೋರಬೇಕು ಎಂದು ಸಲಹೆ ನೀಡಿದ್ದರು. ಅವರಿಂದ ಪ್ರಭಾವಿತರಾಗಿ ಶಾಲೆಗೆ ಏನಾದರೂ ಹೊಸದೊಂದು ಕಾರ್ಯ ಮಾಡಬೇಕು ಎಂಬ ಹಂಬಲದಿಂದ ಮಕ್ಕಳ ಕಲಿಕೆಗೆ ಅನೂಕೂಲವಾಗಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ ಶಿಕ್ಷಕ ಪರಮೇಶ್ವರ ಗದ್ಯಾಳ.