ಜೆಡಿಎಸ್ ಪಕ್ಷದ ಚಿಹ್ನೆ ತೆನೆಹೊತ್ತ ಮಹಿಳೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೀಗ ಮಹಿಳೆ ಹೊತ್ತ ತೆನೆಯ ಕಟ್ಟಿನಿಂದ ಬಿಡಿಬಿಡಿಯಾಗಿ ತೆನೆಗಳು ಉದುರುತ್ತ ಕಟ್ಟು (ಪಕ್ಷ) ಜಾಳ ಜಾಳವಾಗುತ್ತಿದೆಯೇ ಎಂಬ ಪ್ರಶ್ನೆ ರಾಜಕೀಯ (Politics) ಪಡಸಾಲೆಯಲ್ಲಿ ಚರ್ಚಿತವಾಗುತ್ತಿದೆ.
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಗಮನಿಸಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿದ್ದನ್ನು ಕಾಣಬಹುದು. ಆದರೆ ಜೆಡಿಎಸ್ ಸಾಧನೆ ಮಾತ್ರ ಗಣನೀಯವಾಗಿ ಕುಸಿತ ಕಂಡಿದೆ. ಇದಕ್ಕೆ ಕಾರಣ ಪಕ್ಷದ ಶಾಸಕರು, ಮುಖಂಡರ ಹಾಗೂ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯಗಳೇ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸತ್ಯ.
ಒಂದು ಸಮಯದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ (HD Kumaraswamy) ಆಪ್ತ ಎಂದು ಗುರುತಿಸಿಕೊಂಡಿದ್ದ ನವಲಗುಂದದ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ(Konareddy) ಅವರು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವ ಹಿನ್ನೆಲೆಯಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರ ಬೆನ್ನಲ್ಲೇ ಬೀದರ್ ದಕ್ಷಿಣ ಕೇತ್ರದ ಶಾಸಕ ಬಂಡೆಪ್ಪ ಕಾಶೆಂಪೂರ್ ಜೆಡಿಎಸ್ ತೊರೆಯಲಿದ್ದಾರೆ ಎನ್ನಲಾಗಿದೆ. ಹಾಗೆಯೇ ಜೆಡಿಎಸ್ ನಿಂದ ಹಲವು ಶಾಸಕರು ಈಗಾಗಲೇ ಒಂದು ಕಾಲು ಪಕ್ಷದ ಹೊರಗಿಟ್ಟಿದ್ದಾರೆ ಎನ್ನುವ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಹರಿದಾಡುತ್ತಿವೆ.
ಜೆಡಿಎಸ್ ಪಕ್ಷವು ಒಂದು ರಾಜಕೀಯ ಪಕ್ಷವಾಗಿ ಕಾಣುವುದಕ್ಕಿಂತ ಅದೊಂದು ಕುಟುಂಬ ಆದಾರಿತ ಪಕ್ಷವಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಇಡೀ ಕುಟುಂಬದ ಸದಸ್ಯರ ಕಪಿಮುಷ್ಟಿಯಲ್ಲಿ ರಾಜಕೀಯ ಹಿಡಿತ ಇದ್ದು, ಉಳಿದ ನಾಯಕರಿಗೆ ಸೂಕ್ತ ಸ್ಥಾನಮಾನ ದೊರಕಿಲ್ಲ ಎನ್ನುವ ಅಳಕು ಆ ಪಕ್ಷದ ನಾಯಕರಲ್ಲೇ ಇದೆ. ಈಗ ಉಳಿದ ನಾಯಕರ ಸಹನೆಯ ಕಟ್ಟೆಯೊಡೆದಿದ್ದು, ಪಕ್ಷದಿಂದ ಹೊರಬಂದು ಹೊಸ ರಾಜಕೀಯ ಜೀವನ ಕಟ್ಟಿಕೊಳ್ಳುವುದಕ್ಕೆ ಮುಂದಾಗಿರುವಂತೆ ಕಾಣುತ್ತಿದೆ.
ಮುಂಬೈ ಕರ್ನಾಟಕದಲ್ಲಿ ಕುಂದಿದ ಶಕ್ತಿ
ಮುಂಬೈ ಕರ್ನಾಟಕದಲ್ಲಿ ಜೆಡಿಎಸ್ ಅಸ್ತಿತ್ವ ಸಾರುತ್ತಿದ್ದ ಪ್ರಮುಖ ರಾಜಕಾರಣಿ ಕೋನರೆಡ್ಡಿಯಾಗಿದ್ದರು. ಆದರೀಗ ಅವರೇ ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಇತ್ತ ಮುಂಬೈ ಕರ್ನಾಟಕದಲ್ಲಿ ಬಸವರಾಜ ಹೊರಟ್ಟಿ ಜೆಡಿಎಸ್ ಕಟ್ಟಬಹುದು ಎನ್ನುವ ನಿರೀಕ್ಷೆ ಜೆಡಿಎಸ್ ನಾಯಕರ ಮೇಲಿದ್ದರೂ ವಾಸ್ತವದಲ್ಲಿ ಅದು ಸಾಧ್ಯವೇ ಎಂಬ ಪ್ರಶ್ನೆ ಕೂಡ ಇದೆ.
ಹೊರಟ್ಟಿಯವರು 9 ಸಲ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದಿಂದ MLC ಆಗಿದ್ದಾರೆ. ಜೊತೆಗೆ ಶಿಕ್ಷಣ ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದಾರೆ. ಈಗ BJPಯ ಜೊತೆಗೆ ಒಳ ಒಪ್ಪಂದದ ಮೂಲಕ ವಿಧಾನ ಪರಿಷತ್ಸಭಾಪತಿಯೂ ಆಗಿದ್ದಾರೆ. ಆದರೆ ಈ ಸುದೀರ್ಘ ರಾಜಕಾರಣದಲ್ಲಿ ಅವರು JDS ಸಂಘಟನೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ ಪಕ್ಷದಲ್ಲೇ ಇಲ್ಲ.
ಮುಂಬೈ ಕರ್ನಾಟಕ (Mumbai Karnataka) ಭಾಗದಲ್ಲಿ ಅಷ್ಟಿಷ್ಟು ಬೆಳೆಯಬಹುದಾಗಿದ್ದ ಜೆಡಿಎಸ್ ಪಕ್ಷವು ಹೊರಟ್ಟಿ ಅವರು ಯಾರ ವಿರೋಧ ಕಟ್ಟಿಕೊಳ್ಳದೇ ಸುಧೀರ್ಘ ಅವಧಿವರೆಗೂ ಅಧಿಕಾರ ಅನುಭವಿಸಿದ ಕಾರಣಕ್ಕೆ ಅದು ಬೆಳೆಯದೇ ಕಮರಿ ಹೋಯಿತಾ? ಸದಾ ಆ ಭಾಗದಲ್ಲಿ ರೈತ ಹೋರಾಟದ ಬಾವುಟ ಹಾರಿಸುತ್ತಿದ್ದ ಕೋನರೆಡ್ಡಿ ಕಾಂಗ್ರೆಸ್ ಸೇರಿದ್ದರಿಂದ ಇನ್ಮುಂದೆ ಅವರ ಕೈಯಲ್ಲಿ ಕಾಂಗ್ರೆಸ್ (Congress) ಬಾವುಟ ಇರಲಿದೆ.

ಹೈದರಾಬಾದ್ ಕರ್ನಾಟಕದಲ್ಲಿ ಹಿನ್ನಡೆ
ಇತ್ತ ಹೈದರಾಬಾದ್ ಕರ್ನಾಟಕ (Hyderabad Karnataka) ವಿಚಾರವಾಗಿ ಗಮನಿಸಿದಾಗ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ ಈಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ತವಕದಲ್ಲಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಜೆಡಿಎಸ್ ನೆಲೆ ವಿಸ್ತರಿಸಲು ತುಂಬ ಅವಕಾಶಗಳಿದ್ದವು. ಆದರೆ, ಅಲ್ಲಿ ಕಾಂಗ್ರೆಸ್ ದ್ವೇಷಿಸುತ್ತ, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಕಾರಣವೇ ಅದು ಈಗ ಪಕ್ಷಕ್ಕೆ ಮುಳುವಾಗಿದೆ ಎನ್ನಬಹುದು.
ಹೈದರಾಬಾದ್ ಕರ್ನಾಟಕದ ಮಾನ್ವಿಯ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಜೆಡಿಎಸ್ ನಿಂದ ಗೆದ್ದಿದ್ದಾರೆ. ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಕೂಡ ಜೆಡಿಎಸ್ನವರೇ. ಹೀಗಿದ್ದರೂ ಮಾನ್ವಿ ಮತ್ತು ಸಿಂಧನೂರಿನ ನಡುವಿನ ಮಸ್ಕಿಯ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಹಾಕಲಿಲ್ಲ. ಹಾಗೆಯೇ ಸಿಂಧಗಿಯಲ್ಲಿ ಕಾಂಗ್ರೆಸ್ ಗೆ ಲಾಭವಾಗುವುದನ್ನು ತಡೆಯಲು ಮುಸ್ಲಿಂ ಅಭ್ಯರ್ಥಿಯನ್ನು ಹಾಕಿ ಗೇಮ್ ಆಡಲು ಹೋದ ಕುಮಾರಸ್ವಾಮಿ ಮತದಾರರಿಂದ ಹೊಡೆಸಿಕೊಂಡರು. ಇತ್ತ ಹಾನಗಲ್ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಮುಸ್ಲಿಂ ಸಮುದಾಯದ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದನ್ನು ಗಮನಿಸಬಹುದು.
ಹಳೆ ಮೈಸೂರಲ್ಲೂ ಕುಸಿತ
ಹಳೆ ಮೈಸೂರು (Mysuru) ಭಾಗದಲ್ಲಿ ಒಕ್ಕಲಿಗ ಸಮುದಾಯದ ಬೆಂಬಲದಿಂದ ದಿಗ್ವಿಜಯ ಸಾಧಿಸುತ್ತಿದ್ದ ಜೆಡಿಎಸ್ ಈಗ ಅಲ್ಲೂ ಹಿನ್ನಡೆ ಅನುಭವಿಸುತ್ತಿದೆ. ಆ ಭಾಗದಲ್ಲೂ ಕೂಡ ಹೊರನಡೆಯಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ಅರಸಿಕೆರೆ ಶಾಸಕ ಶಿವಲಿಂಗೇಗೌಡ, ಕೋಲಾರ ಶಾಸಕ ಶ್ರೀನಿವಾಸಗೌಡ. ಚನ್ನರಾಯಪಟ್ಟಣ ಶಾಸಕ ಎಸ್.ಆರ್ ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಯಕೆಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಚಾಮರಾಜನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (siddaramaiah) ಅವರನ್ನು ಸೋಲಿಸಿದ ಜೆಡಿಎಸ್ನ ಜಿ.ಟಿ.ದೇವೇಗೌಡರು ಅಪ್ಪ-ಮಕ್ಕಳ ರಾಜಕಾರಣಕ್ಕೆ ಬೇಸತ್ತು ಪಕ್ಷದಿಂದ ಹೊರಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕುಟುಂಬದ ಕುಡಿಗಳು
ಎಚ್.ಡಿ ದೇವೇಗೌಡರು (HD.Devegowda) ರಾಜ್ಯಸಭಾ ಸದಸ್ಯರಾಗಿದ್ದರೆ, ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ಶಾಸಕರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಸಂಸದ, ಆತನ ತಮ್ಮ ಸೂರಜ್ ಈಗ ಎಂಎಲ್ಸಿ! ದೇವೇಗೌಡ ಕುಟುಂಬದ ಸಂಬಂಧಿಕರಾದ ಡಿ.ಸಿ.ತಮ್ಮಣ್ಣ ಮದ್ದೂರು ಎಂಎಲ್ಎ. ಹಾಗೆಯೇ ಸಿ.ಎನ್ ಬಾಲಕೃಷ್ಣ (ಜಯದೇವ್ ಆಸ್ಪತ್ರೆಯ ವೈದ್ಯ ಡಾ. ಸಿ.ಎನ್ ಮಂಜುನಾಥ್ ಸಹೋದರ) ಶ್ರವಣಬೆಳಗೋಳದ ಶಾಸಕ!
ಇನ್ನು, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ (Bangaluru Rural), ಹಾಸನ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಒಕ್ಕಲಿಗರು ಹಾಗೂ ಗೌಡರ ಸಂಬಂಧಿಕರೇ ಹೆಚ್ಚು ಎನ್ನುವ ಮಾತುಗಳು ಕೂಡ ಇವೆ.
ಒಟ್ಟಾರೆಯಾಗಿ ಎಂ ಎಲ್ ಸಿ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ತಳೆದ ನಿಲುವು ಈಗ ಜೆಡಿಎಸ್ ಶಾಸಕರಲ್ಲಿ ಆತಂಕ ಮೂಡಿಸಿದೆ. ಇನ್ನಷ್ಟು ಜನ ಶಾಸಕರು ಮತ್ತು ಮಾಜಿ ಶಾಸಕರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ಸಾಧ್ಯತಗಳು ದಟ್ಟವಾಗಿವೆ. ಕಾಂಗ್ರೆಸ್ (Congress) ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ದ್ವೇಷಿಸುತ್ತ ಬಿಜೆಪಿಗೆ ಸಹಾಯ ಮಾಡುವ ಕುಮಾರಸ್ವಾಮಿ ಗುಣವೇ ಈಗ ಪಕ್ಷಕ್ಕೆ ಮುಳುವಾಗಿದೆ.

ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲೂ ಸಾಟಿಯಲ್ಲದ ಕುಮಾರಸ್ವಾಮಿ, ಸಿದ್ದರಾಮಯ್ಯರನ್ನು ಟೀಕಿಸುವ ಭರದಲ್ಲಿ ತಮ್ಮ ಅವಕಾಶವಾದಿ ರಾಜಕಾರಣಕ್ಕೆ ಹೊಸ ಮಜಲನ್ನು ತೆಗೆದುಕೊಂಡರು. ಅದು ಬಿಜೆಪಿಗೆ ನೆರವಾಗುವ ಮೂಲಕ ತಮ್ಮ ಪಕ್ಷದ ಹಾನಿಗೆ ಅವರೇ ಕಾರಣರಾಗಿದ್ದಾರೆ.
ದೇವೆಗೌಡರು ಸಂಸತ್ತಿನ ಕಾರಿಡಾರ್ ಕೋಣೆಯಲ್ಲಿ ಮೋದಿಯವರನ್ನು ಭೇಟಿ ಮಾಡಿ ಮಾತನಾಡಿದ್ದಗಲೂ ಪರಿಷತ್ ಫಲಿತಾಂಶದಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಜೆಡಿಎಸ್ ಗೆ ಸಾಧ್ಯವಾಗಿದೆ. ಮುಂದೆ ಕೂಡ ಇಂಥ ಒಳ ಮೈತ್ರಿಯಿಂದ ಹಲವೆಡೆ ಜೆಡಿಎಸ್ ಶಾಸಕರಿಗೆ ಕ್ಷೇತ್ರಗಳೇ ಟಿಕೇಟ್ ತಪ್ಪುವ ಸಾಧ್ಯತೆ ಅರಿತ ಕೆಲವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ಕಸರತ್ತು ನಡೆಸಿದ್ದಾರೆ. ಅವರ ಮೊದಲ ಆಯ್ಕೆ ಕಾಂಗ್ರೆಸ್ ಎಂಬುದು ಗಮನಿಸಬೇಕಾದ ಸಂಗತಿ. ಒಟ್ಟಾರೆ 2023ರ ಚುನಾವಣೆ ಹೊತ್ತಿಗೆ ತೆನೆಗಳು ದಳದಳ ಉದುರುವ ಲಕ್ಷಣಗಳು ಕಾಣುತ್ತಿದ್ದು, ಅಲ್ಲಿಗೆ ಜೆಡಿಎಸ್ ಖೇಲ್ ಖತಂ, ದುಖಾನ್ ಬಂದ್ ಆಗುವ ಎಲ್ಲ ಸಾಧ್ಯತೆಯೂ ಗೋಚರಿಸುತ್ತಿದೆ.






