ಭಾರೀ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಸ್ಥಾನ ಗೆಲ್ಲುವ ಮೂಲಕ ತನ್ನ ಬಲವೃದ್ಧಿಸಿಕೊಂಡಿದ್ದರೆ, ಕೆಲವು ಸ್ಥಾನ ಕುಸಿತ ಕಂಡಿರುವ ಕಾಂಗ್ರೆಸ್ ಅಸ್ತಿತ್ವ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ. ಕಳೆದ ಬಾರಿಗಿಂತ ಅರ್ಧದಷ್ಟು ಸ್ಥಾನ ಮಾತ್ರ ಗೆದ್ದಿರುವ ಜೆಡಿಎಸ್ ಭಾರೀ ಹಿನ್ನಡೆ ಅನುಭವಿಸಿದೆ.
ಒಟ್ಟು 75 ಸ್ಥಾನಬಲದ ರಾಜ್ಯ ವಿಧಾನಪರಿಷತ್ ನಲ್ಲಿ ಸರಳ ಬಹುಮತ ಪಡೆಯಲು ಆಡಳಿತ ಪಕ್ಷ ಬಿಜೆಪಿಗೆ 13 ಸ್ಥಾನಗಳ ಅಗತ್ಯವಿತ್ತು. ಆದರೆ, 11 ಸ್ಥಾನಗಳನ್ನು ಪಡೆಯುವ ಮೂಲಕ ಇದೀಗ ಬಿಜೆಪಿ ಬಹುಮತದ ಸಮೀಪಕ್ಕೆ ಬಂದು ತಲುಪಿದೆ. ಆ ದೃಷ್ಟಿಯಿಂದ ಈ ಗೆಲುವು ಆಡಳಿತ ಪಕ್ಷದ ಪಾಲಿಗೆ ದೊಡ್ಡ ಬಲ ತಂದಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಆಡಳಿತ ಪಕ್ಷ ಬಿಜೆಪಿಯಷ್ಟೇ ಸ್ಥಾನ ಗಳಿಸಿದ್ದರೂ, ಕಳೆದ 2015ರಲ್ಲಿ ಇದೇ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನ ಗೆದ್ದು ಮೇಲುಗೈ ಸಾಧಿಸಿದ್ದ ಕಾಂಗ್ರೆಸ್ಸಿಗೆ ಈ ಬಾರಿಯ ಮೂರು ಸ್ಥಾನಗಳ ನಷ್ಟ ದೊಡ್ಡ ಮಟ್ಟದ ಹಿನ್ನಡೆ ತರಲಿದೆ.
ಆ ಹಿನ್ನೆಲೆಯಲ್ಲಿ ಕಾಯ್ದೆ-ಕಾನೂನುಗಳ ಅನುಮೋದನೆಯ ವಿಷಯದಲ್ಲಿ ಬಿಜೆಪಿಯ ಪಾಲಿಗೆ ತೊಡಕಾಗಿದ್ದ ವಿಧಾನ ಪರಿಷತ್ ಬಹುಮತದ ಕೊರತೆಯ ಅಡ್ಡಗಾಲನ್ನು ದಾಟುವ ನಿಟ್ಟಿನಲ್ಲಿ ಈ ಫಲಿತಾಂಶ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಅನುಕೂಲಕರವಾಗಲಿದೆ. ಕಾಂಗ್ರೆಸ್ ಗೆ ಕುಗ್ಗಿದ ಬಲ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಹಿನ್ನಡೆ ತರಲಿದೆ. ಆ ಕಾರಣದಿಂದ ಈ ಬಾರಿಯ ವಿಧಾನಪರಿಷತ್ ಫಲಿತಾಂಶ ಗಮನಾರ್ಹ.
ತಾನು ಕಣಕ್ಕಿಳಿದಿದ್ದ 20 ಸ್ಥಾನಗಳ ಪೈಕಿ ಕನಿಷ್ಟ 15 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳಿತ್ತು. ಇದೀಗ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಒಟ್ಟಾರೆ ಪರಿಷತ್ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದಿದೆ. ಆದರೆ, ಬಹುಮತದ 38 ಸ್ಥಾನಗಳಿಗೆ ಇನ್ನೂ ಎರಡು ಸ್ಥಾನಗಳು ಅದಕ್ಕೆ ಕೊರತೆಬಿದ್ದಿದೆ. ಆದರೆ, 2015ರ ಚುನಾವಣೆಯಲ್ಲಿ ಈ 25 ಸ್ಥಾನಗಳ ಪೈಕಿ 6 ಸ್ಥಾನ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 11 ಸ್ಥಾನ ಪಡೆದುಕೊಂಡಿದ್ದು, ಹೆಚ್ಚುವರಿಯಾಗಿ ಐದು ಸ್ಥಾನ ಗೆದ್ದುಕೊಂಡಿದೆ.

ಕಾಂಗ್ರೆಸ್ ವಿಷಯದಲ್ಲಿ ಮಾತ್ರ ಈ ಬಾರಿಯ ಚುನಾವಣಾ ಫಲಿತಾಂಶ ಹಿನ್ನಡೆ ತಂದಿದ್ದರೂ, ಒಟ್ಟಾರೆ ಕಳೆದುಕೊಂಡ ಸ್ಥಾನಗಳ ಸಂಖ್ಯೆಯ ದೃಷ್ಟಿಯಿಂದ ಅದು ದೊಡ್ಡ ಹಿನ್ನಡೆಯಲ್ಲದಿದ್ದರೂ ಪರಿಷತ್ ನಲ್ಲಿ ಆಡಳಿತ ಪಕ್ಷದ ಓಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಜೆಪಿ ಪಾಲಿಗೆ ಇದು ದೊಡ್ಡ ಲಾಭ ತಂದುಕೊಡಲಿದೆ ಎಂಬುದು ನಿಶ್ಚಿತ. 2015ರಲ್ಲಿ ಈ 25 ಸ್ಥಾನಗಳ ಪೈಕಿ 14 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 3 ಸ್ಥಾನ ಕಳೆದುಕೊಂಡು, 11ಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ, ಬೆಳಗಾವಿ ಮತ್ತು ಮಂಗಳೂರಿನ ಆ ಪಕ್ಷದ ಗೆಲುವು ಸ್ಥಾನಗಳಿಕೆಯಲ್ಲಿ ಹಿಂದೆ ಬಿದ್ದಿರುವ ಹೊರತಾಗಿಯೂ ಅದಕ್ಕೆ ಹೊಸ ಹುಮ್ಮಸ್ಸು ತಂದಿದೆ.
ಹಾಗೆ ನೋಡಿದರೆ, ಈ ಬಾರಿಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ನಿಜವಾಗಿಯೂ ಎಚ್ಚರಿಕೆಯ ಘಂಟೆಯಾಗಿರುವುದು ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಪಾಲಿಗೆ. 2015ರಲ್ಲಿ ಈ 25 ಕ್ಷೇತ್ರಗಳ ಪೈಕಿ 4 ಸ್ಥಾನ ಪಡೆದುಕೊಂಡಿದ್ದ ಜೆಡಿಎಸ್ ಈ ಬಾರಿ ಕೇವಲ ಒಂದು ಸ್ಥಾನ ಪಡೆಯುವ ಮೂಲಕ ಮೂರನೇ ಎರಡರಷ್ಟು ಸ್ಥಾನ ಕಳೆದುಕೊಂಡಿದೆ. ಅದರಲ್ಲೂ ತನ್ನ ಭದ್ರಕೋಟೆ ಎಂದೇ ಬಿಂಬಿಸಿಕೊಂಡಿದ್ದ ಮೈಸೂರು, ತುಮಕೂರು ಮತ್ತು ಮಂಡ್ಯ ಭಾಗದಲ್ಲಿ ಆ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದ್ದು, ಜೆಡಿಎಸ್ ತನ್ನ ಮೂಲ ನೆಲೆಯಲ್ಲೇ ಕುಸಿಯುತ್ತಿದೆ ಎಂಬ ಸಂದೇಶವನ್ನು ಈ ಚುನಾವಣೆ ಮತ್ತೊಮ್ಮೆ ಸಾರಿ ಹೇಳಿದೆ.
ಆಡಳಿತ ಪಕ್ಷ ಬಿಜೆಪಿ ಕೊಡಗು, ಬೆಂಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ದಕ್ಷಿಣ ಕನ್ನಡ (ದಿ-ಸದಸ್ಯ ಕ್ಷೇತ್ರ), ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗೇ, ಕಾಂಗ್ರೆಸ್ ಪಕ್ಷ ಬೀದರ್, ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ), ದಕ್ಷಿಣ ಕನ್ನಡ (ದ್ವಿ-ಸದಸ್ಯ ಕ್ಷೇತ್ರ), ಕೋಲಾರ, ಬೆಂಗಳೂರು ಗ್ರಾಮಾಂತರ, ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಒಟ್ಟು 25 ಕ್ಷೇತ್ರಗಳ ಪೈಕಿ 6 ಕಡೆ ಮಾತ್ರ ಕಣಕ್ಕಿಳಿದಿದ್ದ ಜೆಡಿಎಸ್ ಹಾಸನದಲ್ಲಿ ಮಾತ್ರ ಗೆಲುವು ಪಡೆದಿದೆ. ಇನ್ನುಳಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಬೆಳಗಾವಿ ದ್ವಿಸದಸ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಜಯ ಗಳಿಸಿದ್ದಾರೆ.
ಬಿಜೆಪಿಯ ಟಿಕೆಟ್ ಗಾಗಿ ಪ್ರಯತ್ನಿಸಿ ಟಿಕೆಟ್ ಸಿಗದೇ ಅಂತಿಮ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿರುವ ಲಖನ್ ಜಾರಕಿಹೊಳಿಯ ಈ ಗೆಲುವು ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ನಾಂದಿ ಹಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿಯೂ ಈ ವಿಧಾನಪರಿಷತ್ ಚುನಾವಣಾ ಫಲಿತಾಂಶ ಮಹತ್ವ ಪಡೆದುಕೊಂಡಿದೆ.
ಈ ನಡುವೆ, ಹಿಂದೆಂದೂ ಕಂಡುಕೇಳರಿಯದ ಪ್ರಮಾಣದ ಹಣದ ಹರಿವು ಮತ್ತು ಆಣೆಪ್ರಮಾಣದ ರಾಜಕಾರಣದ ಪ್ರಭಾವ ಚುನಾವಣಾ ಕಣದಲ್ಲಿ ದೊಡ್ಡಮಟ್ಟದ ಪ್ರಭಾವ ಬೀರಿದೆ ಎಂಬುದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಮುಖ್ಯವಾಗಿ ಯಾವುದೇ ಪಕ್ಷದ ಚಿಹ್ನೆಯಿಂದ ಚುನಾವಣೆ ಎದುರಿಸದೆ ಇರುವ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಪಕ್ಷಗಳ ಚುನಾವಣಾ ವಿಪ್ ಅನ್ವಯವಾಗದೇ ಇರುವ ಹಿನ್ನೆಲೆಯಲ್ಲಿ ಅತಿ ದೊಡ್ಡ ಸಂಖ್ಯೆಯ ಮತದಾರರಾದ ಅವರನ್ನು ಗುರಿಯಾಗಿಸಿಕೊಂಡು ಭಾರೀ ಹಣ, ಚಿನ್ನಾಭರಣ ಮುಂತಾದ ಆಮಿಷ ಒಡ್ಡಲಾಗಿತ್ತು.

ಮುಖ್ಯವಾಹಿನಿ ಮಾಧ್ಯಮಗಳೇ ವರದಿ ಮಾಡಿದಂತೆ ಕೆಲವು ಪಂಚಾಯ್ತಿ ಸದಸ್ಯರಿಗೆ ಪಕ್ಷಗಳು ಮತಕ್ಕೆ 50-60 ಸಾವಿರ ರೂ. ಆಮಿಷವೊಡ್ಡಿದ್ದವು. ಪೈಪೋಟಿಯ ಮೇಲೆ ಆಡಳಿತ ಮತ್ತು ಪ್ರತಿಪಕ್ಷಗಳು ನಡೆಸಿದ ಈ ಹಣದ ಅಟ್ಟಹಾಸದ ಮುಂದೆ ಗ್ರಾಮೀಣ ಭಾಗದ ಮತದಾರರು ಸಹಜವಾಗೇ ಸೋತು ತಲೆಬಾಗಿದ್ದಾರೆ. ಹಾಗಾಗಿ ಈ ಬಾರಿಯ ಪರಿಷತ್ ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕದಂತಾಗಿತ್ತು. ಅಷ್ಟೇ ಅಲ್ಲ, ಬುದ್ಧಿವಂತರ ಮನೆ ಎಂದು ಹೇಳಲಾಗುವ ವಿಧಾನ ಪರಿಷತ್ ಗೆ ಸೈದ್ಧಾಂತಿಕ ಸ್ಪಷ್ಟತೆ, ಸಂಸದೀಯ ನಡವಳಿಕೆ, ಶಾಸಕಾಂಗದ ಹೊಣೆಗಾರಿಕೆ ಅರಿವು, ಜನ ಮತ್ತು ವ್ಯವಸ್ಥೆಯ ಕುರಿತು ಆಳ ಜ್ಞಾನದ ಆಧಾರದ ಮೇಲೆ ಚುನಾಯಿತರಾಗಬೇಕಿದ್ದ ಸದಸ್ಯರು ಕೇವಲ ಹಣಬಲ ಮತ್ತು ಪ್ರಭಾವ ಬಳಸಿ ಗೆದ್ದು ಮೇಲ್ಮನೆಗೆ ಕಾಲಿಟ್ಟರೆ, ಅಂತಹವರಿಂದ ಯಾವ ರೀತಿಯ ಮುತ್ಸದ್ಧಿತನವನ್ನು, ಮೌಲಿಕ ನಡೆನುಡಿಯನ್ನು ನಿರೀಕ್ಷಿಸಬಹುದು ? ಎಂಬ ಪ್ರಶ್ನೆಯನ್ನೂ ಈ ಚುನಾವಣೆ ಹುಟ್ಟು ಹಾಕಿದೆ.
ಅಷ್ಟೇ ಅಲ್ಲ; ಹಣ ಹಂಚಿಕೆ ಸೇರಿದಂತೆ ಮತದಾರರಿಗೆ ಭಾರೀ ಆಮಿಷವೊಡ್ಡುವ ವಿಷಯದಲ್ಲಿ ವಿಧಾನಪರಿಷತ್ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ಯಾವ ವ್ಯತ್ಯಾಸವೂ ಉಳಿದಿಲ್ಲ ಮತ್ತು ವಿಧಾನಸಭೆಗಿಂತ ಸೀಮಿತ ಸಂಖ್ಯೆಯ ಮತದಾರರಿರುವ ಕಾರಣಕ್ಕೆ ಹಣ ಹಂಚಿ ಗೆಲ್ಲುವುದು ಪರಿಷತ್ ಚುನಾವಣೆಯಲ್ಲಿ ನೀರು ಕುಡಿದಷ್ಟೇ ಸಲೀಸು ಎಂಬುದನ್ನು ಈ ಬಾರಿಯ ಚುನಾವಣೆ ಸಾಬೀತು ಮಾಡಿದೆ. ಹಾಗಾಗಿ, ಮೂಲಭೂತವಾಗಿ ಇಂತಹ ಹೀನಾಯ ರೀತಿಯಲ್ಲಿ ಚುನಾವಣೆ ನಡೆಸುವುದೇ ಆದರೆ, ವಿಧಾನಪರಿಷತ್ ಎಂಬುದೊಂದು ಅಗತ್ಯವಿದೆಯೇ ? ಎಂಬ ಗಂಭೀರ ಪ್ರಶ್ನೆಯನ್ನೂ ಈ ಚುನಾವಣೆ ಹುಟ್ಟುಹಾಕಿದೆ.






