2022ರ ಮಾರ್ಚ್ ಹೊತ್ತಿಗೆ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಚುನಾವಣೆ ನಡೆಯಲಿದೆ. ದೇಶದ ಇತರೆ ಎಲ್ಲಾ ರಾಜ್ಯಗಳಿಗೆ ಉತ್ತರ ಪ್ರದೇಶದ ಚುನಾವಣೆಗೆ ಫಲಿತಾಂಶದ ದಿಕ್ಕು ಎಂಬ ಮಾತು ರಾಷ್ಟ್ರ ರಾಜಕೀಯದ ಪಡಸಾಲೆಯಲ್ಲಿದೆ. ಹೀಗಾಗಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದಲ್ಲಿ ಸಾಲು ಸಾಲು ಯೋಜನೆಯ ಉದ್ಘಾಟನೆ ಹಾಗೂ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿದ್ದಾರೆ.
2019ರಲ್ಲಿ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಮಹತ್ವದ ಯೋಜನೆಯಾದ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ಕಾರಿಡರ್ ಯೋಜನೆಯ ಮೊದಲ ಹಂತವನ್ನು ಸೋಮವಾರ ಉದ್ಘಾಟಿಸಿದರು. ಕಾಶಿ ದೇವಾಲಯದ ಕಳೆದುಕೊಂಡ ವೈಭವವನ್ನು ಮರಳಿ ತರಲು 339 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾದ ಯೋಜನೆ ಇದಾಗಿದ್ದು, ಕಾಶಿ ದೇವಸ್ಥಾನದಿಂದ ಗಂಗಾ ಘಾಟ್ಗೆ ಒಂದೇ ಸ್ಟ್ರೆಚ್ನಲ್ಲಿ ಈ ಕಾರಿಡರ್ ಸಂಪರ್ಕ ಕಲ್ಪಿಸಲಿದೆ. ಇದು ಪ್ರಧಾನಿ ಮೋದಿಯ ಕನಸಿನ ಯೋಜನೆ ಎನ್ನಲಾಗಿದ್ದು, ಎರಡು ವರ್ಷಗಳಲ್ಲೇ ಬಹುತೇಕ ಕೆಲಸ ಪೂರ್ಣಗೊಂಡಿದೆ.
ಕಾಶಿ ಕಾರಿಡರ್ ಉದ್ಘಾಟನೆ ಹಿಂದೆ ಮೋದಿ ತನ್ನ ಪೊಲಿಟಿಕಲ್ ಸ್ಟ್ರಾಟಜಿ ನಡೆಸಿದ್ದು ಬರುವ ಉತ್ತರ ಪ್ರದೇಶದ ಚುನಾವಣೆಯನ್ನು ಗುರಿಯಾಗಿಸಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಗಂಗಾ ನದಿಗೆ ವಿಶೇಷ ಪೂಜೆ ಹಾಗೂ ಕಾಶಿ ದೇವಸ್ಥಾನದಲ್ಲಿ ಶಿವನಿಗೂ ವಿಶೇಷ ಪೂಜೆ ಸಲ್ಲಿಸಿ ಮುಂದಿನ ಚುನಾವಣೆಯತ್ತ ಗಮನಹರಿಸಿದ್ದಾರೆ. ಮೊನ್ನೆ ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ನೀರಾವಾರಿ ಯೋಜನೆಯ ಉದ್ಘಾಟಿಸಿದ್ದನ್ನು ಇಲ್ಲಿ ಗಮನಿಸಬಹುದು.
ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಪ್ರವಾಸದಲ್ಲಿರುವ ಮೋದಿ ಅವರಿಗೆ ನಗರ ನಿವಾಸಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು. ಉದ್ಘಾಟನೆಗೂ ಮುನ್ನ ಕಾಳ ಭೈರವ್ ದೇವಸ್ಥಾನದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
ಯುಪಿ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಅವರು ಮೋದಿ ಅವರನ್ನು ಬರಮಾಡಿಕೊಂಡು, “ಕಾಶಿ ವಿಶ್ವನಾಥ ದೇಗುಲವನ್ನು ರಾಷ್ಟ್ರ ಮತ್ತು ಜಗತ್ತಿಗೆ ಹೊಸ ‘ಧಾಮ’ವಾಗಿ ಪ್ರಸ್ತುತಪಡಿಸಲಾಗುವುದು” ಎಂದು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕಾಶಿ ವಿಶ್ವನಾಥ್ ಕಾರಿಡಾರ್ ವಿಚಾರವಾಗಿ ಮಾತನಾಡಿ, ಇದೆಲ್ಲ ಚುನಾವಣೆಯ ಗಿಮಿಕ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುತ್ತಿದೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ತಮ್ಮ ಸರ್ಕಾರದಿಂದ ಅನುಮೋದನೆ ದೊರೆತಿದೆ ಮತ್ತು ಅವರ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಪ್ರಶ್ನಿಸಿದ್ದಾರೆ.