ಕೈಗಾರಿಕೆಗಳಿಗೆ ಬೇಕಿದ್ದ ಮೂಲಭೂತ ಸೌಕರ್ಯ ಸ್ಥಾಪಿಸೋಕೆ ಎಕರೆಗಟ್ಟಲೆ ಪ್ರದೇಶವನ್ನ ಸರ್ಕಾರ ಆಂಧ್ರ ಪ್ರದೇಶದ ಸಂಸ್ಥೆಗೆ ಲೀಸ್ ನೀಡಿತ್ತು. ಆದರೆ ಲೀಸ್ ಗೆ ನೀಡಿ 16 ವರ್ಷ ಕಳೆದ್ರೂ ಅಲ್ಲಿ ನಯಾಪೈಸೆ ಅಭಿವೃದ್ಧಿ ಕಂಡಿಲ್ಲ. ಇದೀಗ ಮತ್ತೆ ಆ ಜಾಗವನ್ನ ಲೀಸ್ ಪಡೆಯಲು ಅದೇ ಕಂಪನಿ ಮುಂದೆ ಬಂದಿರೋದು ವಿವಾದಕ್ಕೆ ಕಾರಣವಾಗಿದೆ.
ಹೌದು, ಸುತ್ತ ನೋಡಿದರೂ ಕಣ್ಣಿಗೆ ಕಾಣಿಸೋದು ಖಾಲಿ ಖಾಲಿ ಜಾಗಗಳೇ, ಪ್ರಾಣಿಗಳು ಮೇಯೋಕೆ ಹುಲ್ಲು ಬೆಳ್ಕೊಂಡಿದ್ದು ಬಿಟ್ಟರೆ ಬೇರೆ ರೀತಿಯ ಅಭಿವೃದ್ಧಿ ಕಾರ್ಯಗಳು ಈ ಪ್ರದೇಶದಲ್ಲಿ ಕಾಣಿಸೋಲ್ಲ. ಸ್ಥಳೀಯರಿಗೆ ಉದ್ಯಮ ಸಿಗಬೇಕು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಬಾಗಲಕೋಟೆ ಜಿಲ್ಲೆಯ ನವನಗರದ ಇಂಡಸ್ಟ್ರಿಯಲ್ ಏರಿಯಾದ 100 ಎಕರೆ ಪ್ರದೇಶವನ್ನ ಖಾಸಗಿ ಕಂಪನಿಗೆ ಲೀಸ್ ನೀಡಿತ್ತು. ಆದರೆಲೀಸ್ ನೀಡಿ 16 ವರ್ಷ ಕಳೆದರೂ ಸ್ಥಳೀಯರ ಉದ್ಯೋಗದ ಕನಸು ಈಡೇರಿಲ್ಲ.
ಆಂಧ್ರಪ್ರದೇಶ ಮೂಲದ ಆದಿಕೇಶವಲು ಎಂಬ ವ್ಯಕ್ತಿಯ ನೇತೃತ್ವದ ಗ್ರೀನ್ ಫುಡ್ ಪಾರ್ಕ್ ಸಂಸ್ಥೆಗೆ ಸರ್ಕಾರ ಭೂಮಿಯನ್ನ ಲೀಸ್ ನೀಡಿತ್ತು. ಎಕರೆಗೆ 1 ಲಕ್ಷ ರೂಪಾಯಿ ವೆಚ್ಚದಂತೆ ಭರ್ತಿ 100 ಎಕರೆಯನ್ನ 1 ಕೋಟಿ ರೂಪಾಯಿ ವೆಚ್ಚದಲ್ಲಿ 2೦೦5ರಲ್ಲಿ ಲೀಸ್ ಗೆ ನೀಡಲಾಗಿತ್ತು. ಲೀಸ್ ಒಪ್ಪಂದದ ಪ್ರಕಾರ 5 ವರ್ಷಗಳ ಅವಧಿಯಲ್ಲಿ ಮೀಸಲಿಟ್ಟ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಸಂಸ್ಥೆ ಕಲ್ಪಿಸಬೇಕಿತ್ತು. ಮೊದಲಿಗೆ 5 ವರ್ಷಗಳ ಕಾಲ ಲೀಸ್ ಹೆ ಪಡೆದ ಕಂಪನಿ, ಹಾಗೋ ಹೀಗೋ ಮಾಡಿ ಇಲ್ಲಿಯವರೆಗೂ ಈ ಜಾಗವನ್ನ ತಾನೇ ಲೀಸ್ ಪಡೆದುಕೊಳ್ತಾ ಬಂದಿದೆ. ಆದರೆ ಲೀಸ್ಗೆ ಪಡೆದ ಕಂಪನಿ 16 ವರ್ಷ ಕಳೆದ್ರೂ ಪುಡ್ ಪಾರ್ಕ್ ಜಾಗದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ನೀರಿನ ಸೌಕರ್ಯ ಸೇರಿದಂತೆ ಯಾವುದೇ ರೀತಿಯ ಮೂಲ ಸೌಲಭ್ಯ ಕಲ್ಪಿಸಿಲ್ಲ.
ಇನ್ನೊಂದೆಡೆ ಆದಿಕೇಶವಲು ಈ ಜಾಗದಲ್ಲಿ ಈಗಾಗಲೇ 40 ಎಕರೆ ಜಾಗವನ್ನು ಬೇರೆ ಬೇರೆ ಕೈಗಾರಿಕೆಗಳಿಗೆ ಎಕರೆಗೆ 20 ಲಕ್ಷದಿಂದ 50-60 ಲಕ್ಷ ರೂಪಾಯಿವರೆಗೂ ಉಪ ಗುತ್ತಿಗೆ ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬರ್ತಿವೆ. ಸದ್ಯ, ಲೀಸ್ ಅವಧಿ ಮುಕ್ತಾಯವಾಗಿದ್ದು, ಅದನ್ನು ಮತ್ತೆ ಲೀಸ್ಗೆ ಪಡೆದುಕೊಳ್ಳಲು ಗ್ರೀನ್ ಫುಡ್ ಪಾರ್ಕ್ ಕಂಪನಿ ಮುಂದಾಗಿದೆ. ಸೇಮ್ ಇದೇ ಕಂಪನಿಗೆ ಲೀಸ್ ಮುಂದುವರಿಸಬೇಕು ಅಂತಾ ಸರ್ಕಾರಕ್ಕೆ ಕೆಐಎಡಿಬಿ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಆದ್ರೆ, ಯಾವುದೇ ಕಾರಣಕ್ಕೂ ಲೀಜ್ ಮುಂದುವರೆಸಬಾರದು ಅಂತಾ ಅಂತಾ ಕರವೇ ಕಾರ್ಯಕರ್ತರು ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲು ಮುಂದಾಗಿದ್ದಾರೆ.
ಗ್ರೀನ್ ಫುಡ್ ಪಾರ್ಕ್ ಸಂಸ್ಥೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಬ್ಸಿಡಿ ಹಣ ಪಡೆದು ಯಾವುದೇ ಅಭಿವೃದ್ಧಿ ಪಡಿಸದೇ ವಂಚನೆ ಮಾಡ್ತಿದೆ ಎನ್ನುವ ಆರೋಪಗಳು ಇವೆ. ಈ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಳಿದರೆ, ಗ್ರೀನ್ ಪುಡ್ ಪಾರ್ಕ್ಗೆ ಲೀಸ್ ಮುಂದುವರೆಸಿಲ್ಲ. ಕರವೇ ಆರೋಪ ಸತ್ಯಕ್ಕೆ ದೂರವಾದದ್ದು ಅಂತಿದ್ದಾರೆ.
ಒಟ್ಟಿನಲ್ಲಿ ಸ್ಥಳಿಯರಿಗೆ ಉದ್ಯೋಗದ ಜೊತೆಗೆ ಕೈಗಾರಿಕೆ ಸ್ಥಾಪನೆಗೆ ಆಸರೆಯಾಗಬೇಕಿದ್ದ ಫುಡ್ ಪಾರ್ಕ್ ಪಾಳು ಬಿದ್ದಿದೆ. ಈಗ ಮತ್ತೆ ಅದೇ ಕಂಪನಿಗೆ ಲೀಸ್ ಅವಧಿ ವಿಸ್ತರಿಸಲು ಮುಂದಾಗಿರುವ ಕೆಐಎಡಿಬಿ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಕಾನೂನು ಹೋರಾಟದ ಎಚ್ಚರಿಕೆ ಕೂಡಾ ನೀಡಿದ್ದಾರೆ. ಸರ್ಕಾರ ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.