ತೆರಿಗೆ ಹಣ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್ ಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ನಾಲ್ಕೈದು ವರ್ಷಗಳಿಂದ ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಗಡುವು ನೀಡಿದರೂ ಡೋಂಟ್ ಕೇರ್.. ಮಂತ್ರಿ ಮಾಲ್ ಲಾಕ್.
ಬರೋಬ್ಬರಿ 27 ಕೋಟಿ ರೂಪಾಯಿ ತೆರಿಗೆ ಕಟ್ಟುವುದು ಬಾಕಿ ಇದೆ. ತೆರಿಗೆ ಕಟ್ಟಿ ಕ್ಲಿಯರ್ ಮಾಡಿ ಅಂತ ನೋಟೀಸ್ ಗಳು ಕೊಡಮಾಡಲಾಗಿತ್ತು. ಖುದ್ದು ಅಧಿಕಾರಿಗಳೇ ಬಂದು ವಾರ್ನಿಂಗ್ ಕೊಟ್ಟು ಹೋಗಿದ್ದರು. ಒಮ್ಮೆಲೆ ಕಟ್ಟಲು ಸಾಧ್ಯವಿಲ್ಲ ಎಂದಾದರೆ ಹಂತ ಹಂತವಾಗಿ ಕಟ್ಟಿ ಎಂದೂ ಹೇಳಿತ್ತು. ಆದರೆ ಯಾವುದಕ್ಕೂ ಸೊಪ್ಪೇ ಹಾಕದ ನಗರದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಈಗ ಸಂಕಷ್ಟ ಎದುರಾಗಿದೆ. ತೆರಿಗೆ ಕಟ್ಟಿ ಇಲ್ಲ ಮುಚ್ಚಿ ಎಂದಿರುವ ಬಿಬಿಎಂಪಿ ಇಂದು ಮಂತ್ರಿ ಮಾಲ್ಗೆ ಬೀಗ ಜಡಿದಿದ್ದಾರೆ. ಬೆಳಗ್ಗೆಯೇ ಆಗಮಿಸಿದ್ದ ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳು ಹಿಂದೆ ಮುಂದೆ ನೋಡದೆ ಮಂತ್ರಿ ಮಾಲ್ ಗೆ ಬೀಗ ಹಾಕಿ ಸೀಲ್ ಮಾಡಿದ್ದಾರೆ.
ಹೌದು, ಕಳೆದ ನಾಲ್ಕು ವರ್ಷಗಳಿಂದ ಮಂತ್ರಿಮಾಲ್ ಆಸ್ತಿ ತೆರಿಗೆ ಪಾವತಿಯನ್ನೇ ಮಾಡಿಲ್ಲ. ನಾಲ್ಕು ವರ್ಷದಿಂದ ಮಂತ್ರಿಮಾಲ್ 32 ಕೋಟಿ ಆಸ್ತಿ ತೆರಿಗೆ ಕಟ್ಟಬೇಕಿತ್ತು. ಅಕ್ಟೋಬರ್ ನಲ್ಲಿ ಬೀಗ ಹಾಕಿದಾಗ ತಾತ್ಕಾಲಿಕ 5 ಕೋಟಿ ಕಟ್ಟಿ ಮಂತ್ರಿ ಮಾಲ್ ತಪ್ಪಿಸಿಕೊಂಡಿತ್ತು. ಉಳಿದ ಬಾಕಿ 27 ಕೋಟಿಯನ್ನ ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋಕೆ ಡೆಡ್ ಲೈನ್ ಕೊಡಲಾಗಿತ್ತು. ಅಕ್ಟೋಬರ್ 31 ರ ಬಳಿಕ ಹಲವು ಬಾರಿ ಕೇಳಿದ್ರು ಬಾಕಿ ಪಾವತಿ ಮಾಡಿರಲಿಲ್ಲ. ಅಕ್ಟೋಬರ್ ಮುಗಿದ್ರೂ ತೆರಿಗೆ ಕಟ್ಟದೆ ಇದ್ದಿದ್ದಕ್ಕೆ ನವೆಂಬರ್ 15 ರಂದು ಮತ್ತೆ ಬೀಗ ಹಾಕೋಕೆ ಮುಂದಾಗಿತ್ತು ಪಾಲಿಕೆ. ಅದಾಗಿಯೂ ನವೆಂಬರ್ 15 ರಂದು ಮಂತ್ರಿಮಾಲ್ ಗೆ 15 ದಿನ ಕಾಲಾವಕಾಶ ಕೊಡಲಾಗಿತ್ತು. ಆದರೆ ನವೆಂಬರ್ ಕಳೆದು ಡಿಸೆಂಬರ್ ಬಂದರೂ ತೆರಿಗೆ ಕಟ್ಟದೆ ಮಂತ್ರಿ ಮಾಲ್ ತಪ್ಪಿಸಿಕೊಳ್ಳುತ್ತಿದೆ. ಹೀಗಾಗಿ ಇಂದು ಬಿಬಿಎಂಪಿ ಅಧಿಕಾರಿಗಳು ಸತತ ಮೂರನೇ ಬಾರಿಗೆ ಮಂತ್ರಿ ಮಾಲ್ ಗೆ ಬೀಗ ಜಡಿದು, ಉಳಿದ ತೆರಿಗೆ ಹಣ ಕಟ್ಟಿ ಎಂದು ವಾರ್ನಿಂಗ್ ಕೊಟ್ಟು ಬಂದಿದ್ದಾರೆ.

ಮಂತ್ರಿ ಮಾಲ್ ತೆರಿಗೆ ಬಾಕಿಯ ಹಿನ್ನೋಟ
– 2018-19 ರಲ್ಲಿ ಬಾಕಿ 6ಕೋಟಿ 77 ಲಕ್ಷ
– 2019-20 ರಲ್ಲಿ ಬಾಕಿ 6ಕೋಟಿ 77 ಲಕ್ಷ
– 2020-21 ರಲ್ಲಿ ಬಾಕಿ 6ಕೋಟಿ 77 ಲಕ್ಷ
– 2021-22 ರಲ್ಲಿ ಬಾಕಿ 6 ಕೋಟಿ 88 ಲಕ್ಷ
– ಒಟ್ಟು ತೆರಿಗೆ ಬಾಕಿ 27 ಕೋಟಿ 22 ಲಕ್ಷ
ಬಾಕಿ ತೆರಿಗೆ ಕಟ್ಟದಿದ್ದರೆ ಮುಟ್ಟುಗೋಲು ಎಚ್ಚರಿಕೆ ನೀಡಿದ ಬಿಬಿಎಂಪಿ.
ನಾಲ್ಕು ವರ್ಷದಿಂದ 27 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಎರಡು ಬಾರಿ ಹೀಗೆಯೇ ಬೀಗ ಹಾಕಿದಾಗ 5 ಕೋಟಿ ಕಟ್ಟಲಾಗಿತ್ತು. ನವೆಂಬರ್ ನಲ್ಲಿ ಬೀಗ ಹಾಕಿದಾಗ ಡಿಸೆಂಬರ್ 5ರ ವರೆಗೆ ಸಮಯವಕಾಶ ಕೊಡಲಾಗಿತ್ತು. ಹೀಗಾಗಿ ಇಂದು ಆರನೇ ತಾರೀಖು ಹೀಗಾಗಿ ಬೀಗ ಹಾಕಲಾಗಿದೆ. ಸಂಪೂರ್ಣ ತೆರಿಗೆ ಕಟ್ಟದಿದ್ದರೆ ಬೀಗ ಓಪನ್ ಮಾಡಲು ಬಿಡಲ್ಲ ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹೇಳಿದ್ದಾರೆ. ಅಲ್ಲದೆ ತೆರಿಗೆ ಕಟ್ಟದಿದ್ರೆ ಚರಾಸ್ಥಿ ಮುಟ್ಟುಗೋಲು ಹಾಕಲು ಪಾಲಿಕೆಗೆ ಅವಕಾಶವಿದೆ. ಏಕಾಏಕಿ ಮುಟ್ಟುಗೋಲು ಸರಿಯಲ್ಲ, ಹೀಗಾಗಿ ಬೀಗ ಹಾಕಿದ್ದೇವೆ. 27 ಕೋಟಿ ಕಂಪ್ಲೀಟ್ ಕಟ್ಟದಿದ್ರೆ ಓಪನ್ ಮಾಡಲು ಬಿಡುವುದಿಲ್ಲ. ಮತ್ತೆ ಅರ್ಧ ಕಟ್ಟಿ ಓಪನ್ ಮಾಡಲು ಅನುಮತಿ ಬೇಕು ಅಂದ್ರೆ ಅದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬಿಟ್ಟಿದ್ದು. ಅವರೇನು ತೀರ್ಮಾನ ತೆಗೆದುಕೊಳ್ತಾರೋ ಅವರಿಗೆ ಬಿಟ್ಟಿದ್ದು ಎಂದೂ ಹೇಳಿದ್ದಾರೆ.
ಒಟ್ಟಾರೆ ನಾಲ್ಕೈದು ವರ್ಷಗಳ ಕಾಲ ತೆರಿಗೆ ಹಣ ಕಟ್ಟದೆ ಪಾಲಿಕೆಗೆ ಉಂಡೇನಾಮ ಹಾಕಲು ಮುಂದಾಗಿದ್ದ ಮಂತ್ರಿ ಮಾಲ್ ವಿರುದ್ಧ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದುವರೆಗೂ ತಾಳ್ಮೆಯಿಂದ ಗಡುವು ನೀಡುತ್ತಾ ಬಂದಿದ್ದ ಬಿಬಿಎಂಪಿ ಇದೀಗ ಕಟ್ಟಲೇ ಬೇಕು ಎಂದು ಖಡಕ್ ನಿಲುವು ತಾಳಿದೆ. ಆದರೆ ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ.





