ಕಾರ್ಯಾಚರಣೆಗಳಲ್ಲಿ ಅರೆಸೇನಾ ಪಡೆಗಳ ಯೋಧರು ಮೃತಪಟ್ಟರೆ ಅವರ ಹತ್ತಿರದ ಸಂಬಂಧಿಗಳಿಗೆ ನೀಡಲಾಗುವ ಪರಿಹಾರ ಹಣವನ್ನು ಕೇಂದ್ರ ಸರ್ಕಾರ 35 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಗಮನಿಸಿಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಈ ಪರಿಹಾರ ಹಣ ಎಲ್ಲಾ ಅರೆಸೇನಾ ಪಡೆಗಳಿಗೆ ಸಮಾನವಾಗಿ ಅನ್ವಯ ಆಗಲಿದೆ. ಇದೇ ನವೆಂಬರ್ 1ರಿಂದ ಈ ಹೊಸ ಸೌಲಭ್ಯ ಅಳವಡಿಕೆ ಆಗಲಿದೆ. ಎಲ್ಲಾ ಪ್ಯಾರಾಮಿಲಿಟರಿ ಪಡೆಗಳ ಯೋಧರಿಗೆ ಸಮಾನ ಪರಿಹಾರ ನೀಡುವ ಸೌಲಭ್ಯವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಇದು ಎನ್ಕೌಂಟರ್, ಗುಂಡಿನ ಕಾಳಗ ಇತ್ಯಾದಿ ಸೇನಾ ಪಡೆ ಕಾರ್ಯಾಚರಣೆಗಳಲ್ಲಿ ಹುತಾತ್ಮರಾಗುವ ಅರೆಸೇನಾ ಪಡೆಗಳ ಯೋಧರಿಗೆ ಮಾತ್ರ 35 ಲಕ್ಷ ರೂ ಪರಿಹಾರ ಹಣದ ಸೌಲಭ್ಯ ಇರಲಿದೆ. ಬೇರೆ ಕಾರಣಗಳಿಂದ ಮೃತಪಡುವ ಯೋಧರಿಗೆ ಆಯಾ ಅರೆಸೇನಾ ಪಡೆಯ ಸಾಮಾನ್ಯ ಪರಿಹಾರ ಹಣ ಸಿಗುವುದು ಮುಂದುವರಿಯಲಿದೆ.
ವಿವಿಧ ಅರೆಸೇನಾ ಪಡೆಗಳಲ್ಲಿ ಪರಿಹಾರ ಹಣದಲ್ಲಿ ವ್ಯತ್ಯಾಸ ಇತ್ತು.!!
ಭಾರತದಲ್ಲಿ ಅರೆಸೇನಾ ಪಡೆಗಳು ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (Central Armed Police Forces) ಹಲವಿವೆ. ಅದರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರ ಔದ್ಯಮಿಕ ಭದ್ರತಾ ಪಡೆ (CISF), ಇಂಡೋ ಟೆಬೆಟನ್ ಬಾರ್ಡರ್ ಪೊಲೀಸ್ (ITBP) ಪಡೆಗಳು ಈ ಗುಂಪಿಗೆ ಸೇರುತ್ತವೆ. ಸಿಆರ್ಪಿಎಫ್ ಮತ್ತು ಐಟಿಬಿಪಿ ಪಡೆಗಳ ಯೋಧರು ಮೃತಪಟ್ಟರೆ ಅವರ ಕುಟುಂಬದವರಿಗೆ 25 ಲಕ್ಷ ರೂ ಪರಿಹಾರ ನೀಡಲಾಗುತ್ತಿತ್ತು. ಆದರೆ, ಏರ್ಪೋರ್ಟ್ ಇತ್ಯಾದಿ ಕಡೆ ನಿಯೋಜನೆ ಆಗುವ ಸಿಐಎಸ್ಎಫ್ ಪಡೆಗಳ ಯೋಧರಿಗೆ ಕೇವಲ 15 ಲಕ್ಷ ಮಾತ್ರ ಪರಿಹಾರ ಸಿಗುತ್ತಿತ್ತು.

ಪರಿಹಾರ ಹಣ ಕಡಿಮೆ ಆಯಿತು ಮತ್ತು ವಿವಿಧ ಪಡೆಗಳ ಮಧ್ಯೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಇದೆ ಎಂದು ಹುತಾತ್ಮ ಯೋಧರ ಕುಟುಂಬದವರು ಆಕ್ಷೇಪ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪರಿಹಾರ ಮೊತ್ತವನ್ನು 35 ಲಕ್ಷ ರೂಪಾಯಿಗೆ ಹೆಚ್ಚಿಸುವುದಲ್ಲದೇ ಎಲ್ಲಾ ಅರೆ ಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬದವರಿಗೆ ಸಮಾನವಾಗಿ ಪರಿಹಾರ ಹಣ ಹಂಚುವ ನಿರ್ಧಾರಕ್ಕೆ ಬಂದಿದೆ.
ಆರು ವರ್ಷಗಳಿಂದಲೂ ಪರಿಹಾರ ಹಣ ಮೊತ್ತ ಏರಿಕೆ.!!
ಕಳೆದ ಆರು ವರ್ಷಗಳಿಂದ ಎಲ್ಲಾ ಅರೆಸೇನಾ ಪಡೆಗಳಲ್ಲೂ ಈ ಪರಿಹಾರ ಹಣದ ಮೊತ್ತ ಸತತವಾಗಿ ಏರಿಕೆ ಆಗುತ್ತಾ ಬಂದಿದೆ. ಆದರೆ, ವಿವಿಧ ಅರೆಸೇನಾ ಪಡೆಗಳ ನಡುವೆ ವ್ಯತ್ಯಾಸ ಮಾತ್ರ ಮುಂದುವರಿದಿತ್ತು. ಈಗ ಪರಿಹಾರ ಹಣ ಹೆಚ್ಚಳದ ಜೊತೆ ಸಮಾನ ಪರಿಹಾರ ಬೇಕೆಂಬ ಬೇಡಿಕೆಯೂ ಈಡೇರುತ್ತಿದೆ. ಈ ಪರಿಹಾರ ಹಣಕ್ಕಾಗಿಯೇ ಪ್ರತ್ಯೇಕ ನಿಧಿ ಸ್ಥಾಪನೆ ಆಗಿದೆ. ಇದಷ್ಟೇ ಅಲ್ಲ, ಅರೆಸೇನಾ ಪಡೆಯ ಹುತಾತ್ಮ ಯೋಧರ ಕುಟುಂಬದವರಿಗೆ ಇನ್ನೂ ಹಲವು ಸೌಲಭ್ಯಗಳನ್ನ ಕೇಂದ್ರ ಸರಕಾರ ಒದಗಿಸುತ್ತದೆ. ಔದಾರ್ಯ ನಿಧಿ (Benevolent Fund), ಹುತಾತ್ಮರ ಮಕ್ಕಳ ಶಿಕ್ಷಣಕ್ಕೆ ಸ್ಕಾಲರ್ಶಿಪ್ ಇತ್ಯಾದಿ ನೆರವು, ಹುತಾತ್ಮರ ಮಗಳು ಅಥವಾ ಸಹೋದರಿಯ ವಿವಾಹವಿದ್ದರೆ ಅದಕ್ಕೆ ಹಣ ಇತ್ಯಾದಿ ನೆರವು ಒದಗಿಸಲಾಗುತ್ತದೆ.
ಭಾರತ್ ಕೆ ವೀರ್ ಫಂಡ್.!!
ಜೊತೆಗೆ, ಭಾರತ್ ಕೆ ವೀರ್ ಎಂಬ ವಿಶೇಷ ಯೋಜನೆಯನ್ನೂ ಕೈಗೊಳ್ಳಲಾಗಿದೆ. ಇದರಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಯಾವುದೇ ಸಿಬ್ಬಂದಿ ಮೃತಪಟ್ಟರೂ ಅವರ ಕುಟುಂಬದವರಿಗೆ ದಾನಿಗಳು ನೇರವಾಗಿ ಹಣ ನೀಡುವ ಅವಕಾಶವನ್ನೂ ಕಲ್ಪಿಸಲಾಗಿದೆ.












