ಬಿಟ್ ಕಾಯಿನ್ ಹಗರಣದ ಕುರಿತು ದಿನದಿಂದ ದಿನಕ್ಕೆ ರೋಚಕ ಮಾಧ್ಯಮ ವರದಿಗಳು ಹೊರಬರುತ್ತಿವೆ. ರಾಜ್ಯದ ಪ್ರತಿಪಕ್ಷಗಳು ಆಡಳಿತ ಪಕ್ಷ ಬಿಜೆಪಿ ಮತ್ತು ಮುಖ್ಯಮಂತ್ರಿ ವಿರುದ್ಧ ದಿನಕ್ಕೊಂದು ಗುರುತರ ಆರೋಪ ಮಾಡುತ್ತಿವೆ.
ಆದರೆ, ಹತ್ತಾರು ಸಾವಿರ ಕೋಟಿ ರೂಪಾಯಿ ಅಕ್ರಮ ವಹಿವಾಟಿನ, ವಂಚನೆಯ, ಸರ್ಕಾರಿ ಇಲಾಖೆಗಳ ಖಾತೆಗಳಿಂದಲೇ ಸಾವಿರಾರು ಕೋಟಿ ಸಾರ್ವಜನಿಕ ಹಣ ದೋಚಿದ ಆರೋಪಗಳಿರುವ ಈ ಪ್ರಕರಣದ ವಿಷಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ನಡೆದಿರುವ ಬೆಳವಣಿಗೆಗಳು ಭಾರೀ ತಮಾಷೆಗೆ, ಅಪಹಾಸ್ಯಕ್ಕೆ ಗುರಿಯಾಗಿವೆ.
ಬಿಟ ಕಾಯಿನ್ ಹಗರಣದ ಅಂತ ಹಾಸ್ಯಾಸ್ಪದ ಸಂಗತಿಗಳನ್ನು ಒಂದೊಂದಾಗಿ ನೋಡುವುದಾದರೆ;
ಮೊದಲನೇ ಜೋಕ್:
ದಿಢೀರ್ ದೆಹಲಿ ಭೇಟಿಯಿಂದ ವಾಪಸ್ಸಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ಭೇಟಿಗೂ ಬಿಟ್ ಕಾಯಿನ್ ಹಗರಣಕ್ಕೂ ಸಂಬಂಧವಿಲ್ಲ ಎಂಬುದನ್ನು ವಿವರಿಸುತ್ತಾ, “ಪ್ರಧಾನಿ ಮೋದಿಯವರು ಆ ವಿಷಯದ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಆದರೂ ತಾವೇ ಸ್ವಯಂ ಪ್ರಕರಣದಲ್ಲಿ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪ್ರಸ್ತಾಪಿಸಿದಾಗ, ಅದೊಂದು ವಿಷಯವೇ ಅಲ್ಲ, ಅದನ್ನು ನಿರ್ಲಕ್ಷಿಸಿ ಆಡಳಿತದ ಕಡೆ ಗಮನಕೊಡಿ” ಎಂದಿದ್ದಾರೆ.
ಅಂದರೆ, ಸ್ವತಃ ಪ್ರಧಾನಿ ಮೋದಿಯವರೇ ಬಿಟ್ ಕಾಯಿನ್ ಹಗರಣವನ್ನು ಅದೊಂದು ತಲೆಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ; ನಿರ್ಲಕ್ಷಿಸಿ ಎಂದಿದ್ದಾರೆ ಎಂದಾದರೆ, ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ(ಇಡಿ)ದಿಂದ ಪ್ರಕರಣದ ತನಿಖೆ ನಡೆಯುತ್ತಿದೆ ಎಂಬುದು ಕೇವಲ ಜೋಕೆ? ಏಕೆಂದರೆ, ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಮಂತ್ರಿಗಳೇ ಒಂದು ಹಗರಣದ ಕುರಿತು ಅದನ್ನು ನಿರ್ಲಕ್ಷಿಸಿ ಎಂದು ಹೇಳಿದರೆ, ಆ ಪ್ರಕರಣದ ತನಿಖಾ ನಡೆಸುವ ಏಜೆನ್ಸಿಗಳಿಗೆ ಆ ಮಾತು ನೀಡುವ ಸಂದೇಶ ಯಾವುದು ಎಂಬುದನ್ನು ವಿವರಿಸಬೇಕಿಲ್ಲ.
ಹಾಗಾಗಿ ಬಿಟ್ ಕಾಯಿನ್ ಹಗರಣವನ್ನು ಆಡಳಿತ ಪಕ್ಷ ಒಂದು ತಮಾಷೆಯ ಸಂಗತಿಯಾಗಿ ಪರಿಗಣಿಸಿದೆ. ಆದಾಗ್ಯೂ ಅದರ ಕುರಿತು ಇಡಿ ಮತ್ತು ಸಿಬಿಐ ಇಂಟರ್ ಪೋನ್ ತನಿಖೆ ನಡೆಸಲಾಗುತ್ತಿದೆ! ಎಂಬುದು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಹೇಳಿದ ಮಾತು. ಹಾಗಾದರೆ, ಹಗರಣದ ಒಂದು ತಲೆಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ ಎಂಬುದನ್ನು ಜನ ಪರಿಗಣಿಸಬೇಕೆ? ಅಥವಾ ಇಡಿ ಮತ್ತು ಸಿಬಿಐ ಇಂಟರ್ ಪೋಲ್ ತನಿಖೆ ನಡೆಸುವ ಮಟ್ಟಿಗೆ ಅದು ಗಂಭೀರ ಹಗರಣ ಎಂಬುದನ್ನು ಪರಿಗಣಿಸಬೇಕೆ ಎಂಬುದನ್ನು ಈಗ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಬೇಕು.

ಎರಡನೇ ಜೋಕ್:
ಒಂದು ಕಡೆ ಸ್ವತಃ ಸಿಎಂ ಬೊಮ್ಮಾಯಿ, ಪ್ರಕರಣದ ವಿಷಯದಲ್ಲಿ ಯಾರನ್ನೂ ಬಚಾವು ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಇಡಿ ಮತ್ತು ಸಿಬಿಐ ತನಿಖೆಗೆ ವಹಿಸಲಾಗಿದೆ ಎನ್ನುತ್ತಾರೆ. ಮತ್ತೊಂದು ಕಡೆ ಈಗಾಗಲೇ ಇಡಿ ತನಿಖೆ ಆರಂಭಿಸಿದೆ. ಜೊತೆಗೆ ಅಮೆರಿಕದ ಎಫ್ ಬಿಐ ಕೂಡ ಹಗರಣದ ಕುರಿತು ತನಿಖೆ ಆರಂಭಿಸಿದೆ. ಅಮೆರಿಕ ಭೇಟಿಯ ವೇಳೆ ಹಗರಣದ ಕುರಿತು ಸ್ವತಃ ಅಧ್ಯಕ್ಷ ಬಿಡೆನ್, ಪ್ರಧಾನಿ ಮೋದಿಯವರೊಂದಿಗೆ ಈ ಕುರಿತು ಚರ್ಚಿಸಿದ ಬಳಿಕವೇ ಇಲ್ಲಿ ತನಿಖೆ ಚುರುಕಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಆದರೆ, ಸರಿಸುಮಾರು 100 ಬಿಲಯನ್ ದೋಖಾದ ಈ ಬೃಹತ್ ಹಗರಣದ ಎ 1 ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮೊನ್ನೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿ ಸಾದಾಸೀದಾ ರೋಡ್ ರೋಮಿಯೋ ಥರ ಓಡಾಡಿಕೊಂಡಿದ್ದ! ನೂರಾರು ಬಿಲಿಯನ್ ಬಿಟ್ ಕಾಯಿನ್ ಹ್ಯಾಕಿಂಗ್ ವಂಚನೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾತೆಗಳಿಂದ ಸಾವಿರಾರು ಕೋಟಿ ದೋಚಿದ ಆರೋಪಿಯೊಬ್ಬ, ಆ ಪ್ರಕರಣಗಳ ಕುರಿತು ಇಡಿ, ಸಿಬಿಐ, ಸಿಸಿಬಿ ತನಿಖೆಗಳು ತೀವ್ರಗೊಂಡಿವೆ ಎಂಬ ಮಾತುಗಳ ನಡುವೆಯೂ ಹಾಗೆ ರಾಜಾರೋಷವಾಗಿ ಓಡಾಡಿಕೊಂಡಿದ್ದ! ಇದನ್ನು ಜೋಕ್ ಎನ್ನದೇ ಇನ್ನೇನು ಹೇಳಲು ಸಾಧ್ಯ?
ಮೂರನೇ ಜೋಕ್:
ಅಷ್ಟೊಂದು ಬೃಹತ್ ಮೊತ್ತದ ಹಗರಣದಲ್ಲಿ ಭಾಗಿಯಾಗಿರುವ ಆರೋಪಿ ನಂಬರ್ ಒನ್ ಆಗಿರುವ ಶ್ರೀಕಿ, ತನ್ನ ಮೇಲಿನ 2018ರ ಗಲಭೆ ಮತ್ತು ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ. ಬಳಿಕ ಕಳೆದ ವಾರ ಪಂಚತಾರಾ ಹೋಟೆಲ್ ಮ್ಯಾನೇಜರ್ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ. ಆದರೆ, ಆತನನ್ನು ಒಂದೇ ದಿನದಲ್ಲಿ ಜಾಮೀನು ನೀಡಿ ಅಲ್ಲಿಂದ ಬಿಡಿಸಲಾಯಿತು.
ವಿಚಿತ್ರವೆಂದರೆ; ಜೈಲಿನಿಂದ ಹೊರಬರುತ್ತಲೇ ಮಾಧ್ಯಮದವರೊಂದಿಗೆ ಮಾತನಾಡಿದ ಆತ, ತನಗೆ ಜಾಮೀನು ಕೊಟ್ಟಿದ್ದು ಯಾರು ಎಂದು ಗೊತ್ತಿಲ್ಲ, ತನ್ನ ಲಾಯರ್ ಕೂಡ ಯಾರೆಂದು ಗೊತ್ತಿಲ್ಲ. ತಾನು ಹೇಗೆ ಬಿಡುಗಡೆಯಾದೆ ಎಂಬುದೇ ಒಂದು ಮ್ಯಾಜಿಕ್ ಎಂದು ಹೇಳಿಕೆ ನೀಡಿದ್ದಾನೆ!

ಇಂತಹ ಹೈಪ್ರೊಫೈಲ್ ಆರೋಪಿಯೊಬ್ಬನಿಗೆ ಜೈಲಿಗೆ ಹೋಗಿ 24 ತಾಸಿನಲ್ಲೇ ಬೇಲ್ ಸಿಗುತ್ತದೆ ಮತ್ತು ಆ ಬೇಲ್ ಕೊಟ್ಟವರು ಯಾರು ಎಂಬುದೂ ಸ್ವತಃ ಆತನಿಗೇ ಗೊತ್ತಾಗುವುದಿಲ್ಲ. ಪೊಲೀಸರು ಕೂಡ ಅಷ್ಟೊಂದು ಪ್ರಕರಣಗಳಲ್ಲಿ ಬೇಕಾದ ಆತನನ್ನು ತಕ್ಷಣವೇ ವಶಕ್ಕೆ ಪಡೆಯುವ ಪ್ರಯತ್ನವನ್ನೂ ಮಾಡದೆ ಆತನನ್ನು ಸಾದಾಸೀದಾ ಆಟೋದಲ್ಲಿ ಹತ್ತಿಸಿ ಕಳಿಸುತ್ತಾರೆ ಎಂದರೆ, ಇದಕ್ಕಿಂತ ಬೇರೆ ಜೋಕು ಬೇಕೆ?
ನಾಲ್ಕನೇ ಜೋಕು:
ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿಯನ್ನು ಇತ್ತೀಚೆಗೆ ಹೋಟೆಲ್ ಗಲಾಟೆ ಪ್ರಕರಣದಲ್ಲಿ ಬಂಧಿಸಿದ್ದ ಪೊಲೀಸರು, ಆತ ಮತ್ತು ಆತನ ಸಹಚರ ವಿಷ್ಣು ಭಟ್ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಮತ್ತು ವಿಷ್ಣುಭಟ್ ಮನೆಯಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಎಂದು ಹೇಳಿರುವುದು ವರದಿಯಾಗಿತ್ತು. “ವೈದ್ಯಕೀಯ ಪರೀಕ್ಷೆಯಲ್ಲಿ ವಿಷ್ಣು ಭಟ್, ಶ್ರೀಕೃಷ್ಣ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ. ಇದರ ಬೆನ್ನಲ್ಲೇ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದೆವು. ವಿಷ್ಣು ಭಟ್ ಮನೆಯಲ್ಲಿ ಗಾಂಜಾ, ಮಾದಕ ವಸ್ತು ಸಿಕ್ಕಿದೆ” ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಹೇಳಿಕೆ ನೀಡಿದ್ದರು.
ಆದರೆ, ಆ ಪ್ರಕರಣದಲ್ಲಿ ಬಂಧನವಾಗಿ ಮೂರೇ ದಿನದಲ್ಲಿ ಶ್ರೀಕಿ ಬಿಡುಗಡೆಯಾಗಿದೆ! ಆದರೆ, ಮುಂಬೈನ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಂಧಿಸಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ದಾಳಿಯ ವೇಳೆ ಮಾದಕವಸ್ತು ಸೇವಿಸಿರಲಿಲ್ಲ ಮತ್ತು ಆತನ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗಿರಲಿಲ್ಲ ಎಂಬುದನ್ನು ಸ್ವತಃ ದಾಳಿ ನಡೆಸಿದ ಇಡಿ ಅಧಿಕಾರಿಗಳೇ ಹೇಳಿದ್ದರು ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ಆತ ಮಾದಕ ವಸ್ತು ಸೇವಿಸಿಲ್ಲ ಎಂಬುದೇ ದೃಢಪಟ್ಟಿತ್ತು. ಆದರೂ ಆತನನ್ನು ಬರೋಬ್ಬರಿ 22 ದಿನಗಳ ಕಾಲ ಜಾಮೀನು ನಿರಾಕರಿಸಿ, ಜೈಲಿನಲ್ಲೇ ಕೊಳೆಸಲಾಗಿತ್ತು.
ಅಂದರೆ, ನಿಮ್ಮ ಬಳಿ ಒಂದು ಚಿಟಿಕೆ ಮಾದಕ ವಸ್ತು ಸಿಗದೇ ಹೋದರೂ, ನೀವು ಮಾದಕ ವಸ್ತು ಸೇವಿಸಿಲ್ಲದೇ ಹೋದರೂ, ಅದನ್ನು ಸೇವಿಸುವವರ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದಕ್ಕೆ ನೀವು ಜೈಲಿನಲ್ಲಿ ಕೊಳೆಯುವ ಶಿಕ್ಷೆ ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ವತಃ ಮಾದಕ ವಸ್ತು ಸೇವಿಸಿ, ಮಾದಕ ವಸ್ತು ಹೊಂದಿದ್ದು, ಜೊತೆಗೆ ಬಹುಕೋಟಿ ವಂಚನೆ, ಧೋಖಾ ಪ್ರಕರಣದಲ್ಲಿ ನಂಬರ್ ಒನ್ ಆರೋಪಿಯಾಗಿದ್ದರೂ ನಿಮಗೆ 24 ತಾಸನ್ನೇ ಜಾಮೀನು ಸಿಗುತ್ತದೆ ಮತ್ತು ಮಹಾರಾಜನಂತೆ ರಾಜಾರೋಷವಾಗಿ ಕೈಬೀಸಿಕೊಂಡು ಹೊರನಡೆಯಬಹುದು!

ಇದು ದೇಶದ ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯ ಮೇಲಿನ ಶತಮಾನದ ಜೋಕ್ ಅಲ್ಲದೆ ಮತ್ತೇನು? ಅಲ್ಲವಾ..
ಕಳೆದ ವಾರ, ನವೆಂಬರ್ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಣತಿಯ ಮೇರೆಗೆ ಸಿಬಿಐ, ಇಡಿ ಮತ್ತಿತರ ಉನ್ನತ ತನಿಖಾ ಸಂಸ್ಥೆಗಳ ಉನ್ನತಾಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿ ಬಿಟ್ ಕಾಯಿನ್ ಪ್ರಕರಣದ ಕುರಿತು ಮಾಹಿತಿ ಕಲೆಹಾಕಿ ಗೃಹ ಸಚಿವರಿಗೆ ವರದಿ ಸಲ್ಲಿದೆ ಎನ್ನಲಾಗಿದೆ. ಹಾಗೇ ಆ ಉನ್ನತ ಸಮಿತಿ ಭಾರೀ ರಹಸ್ಯವಾಗಿ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸಿದ ಬೆನ್ನಲ್ಲೇ ಇಡೀ ಪ್ರಕರಣದ ಸೂತ್ರಧಾರ ಎನ್ನಲಾಗುವ ಆರೋಪಿ ಪ್ರಕರಣವೊಂದರಲ್ಲಿ ಬಂಧಿತನಾಗುತ್ತಾನೆ ಮತ್ತು ಅಷ್ಟೇ ಬೇಗ ಬಿಡುಗಡೆಯಾಗಿ ಕೈಬೀಸಿಕೊಂಡು ಬೆಂಗಳೂರಿನ ರಸ್ತೆಗಳಲ್ಲಿ ಅಲೆಯುತ್ತಾನೆ!
ಇದು ಮತ್ತೊಂದು ಮಹಾ ಜೋಕ್!
ಹೀಗೆ ಶ್ರೀಕಿಯ ಬಿಟ್ ಕಾಯಿನ್ ಹಗರಣದ ವಿಷಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಭರ್ಜರಿ ಟಿಆರ್ ಪಿ ಪಡೆದುಕೊಂಡಿರುವ ಟಾಪ್ ಫೈವ್ ಜೋಕುಗಳು ಇವು. ಬಹುಶಃ ಈ ಬಿಟ್ ಕಾಯಿನ್ ಪ್ರಕರಣದಲ್ಲಿ ಆರಂಭದಿಂದ ಈವರೆಗೆ ನಡೆದಿರುವ ಇಂತಹ ಹಾಸ್ಯಾಸ್ಪದ ಸಂಗತಿಗಳನ್ನೆಲ್ಲಾ ಇಟ್ಟುಕೊಂಡು ಕಾಮಿಡಿ ಶೋ ಮಾಡಿದರೆ, ಸ್ಟ್ಯಾಂಡ್ ಅಪ್ ಕಮೀಡಿಯನ್ಗಳು ಕೆಲಸ ಕಳೆದುಕೊಳ್ಳಬಹುದು! ಅಷ್ಟು ಭೀಕರ ತಮಾಷೆ ಈ ಪ್ರಕರಣದ ಸುತ್ತಾ ಸುತ್ತಿಕೊಂಡಿದೆ!