ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಸಾರ್ವಜನಿಕ ಕುಂದುಕೊರತೆ ಪರಿಹರಿಸಲು ಮಲ್ಟಿ ಪ್ಲಾಟ್ ಫಾರ್ಮ್ ಯೋಜನೆಯಾಗಿರುವ ಜನಸ್ಪಂದನಕ್ಕೆ ಚಾಲನೆ ನೀಡುತ್ತಿದೆ. 2018ರ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ವೇಳೆ ಈ ಯೋಜನೆಯನ್ನು ಜಾರಿ ಮಾಡುವ ಘೋಷಣೆ ಮಾಡಲಾಗಿತ್ತು. ಅದನ್ನೀಗ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಆಗಿನ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಜುಲೈ 2018ರಲ್ಲಿ ಮಂಡಿಸಿದ ಬಜೆಟ್ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು.
ಜನಸ್ಪಂದನ ಎಂದು ಕರೆಯಲ್ಪಡುವ ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (IPGRS) ಇದಾಗಿದ್ದು, ಯಾವುದೇ ಸರ್ಕಾರಿ ಯೋಜನೆ ಅಥವಾ ಸೇವೆಯ ಮೇಲೆ ದೂರುಗಳನ್ನು ಸಲ್ಲಿಸಲು ನಾಗರಿಕರಿಗೆ ಒನ್ ಸ್ಟಾಪ್ ಶಾಪ್ ಸೇವೆ ಒದಗಿಸುವ ವ್ಯವಸ್ಥೆ ಈ ಮೂಲಕ ಸರ್ಕಾರ ತೆರಯಲಿದೆ.
ಈ ಮೂಲಕ ಸಾರ್ವಜನಿಕರು 1902 ಎಂಬ ಸಹಾಯವಾಣಿ ಸಂಖ್ಯೆ ಮೂಲಕ ತಮ್ಮ ಎದುರಾಗಿರುವ ಸಮಸ್ಯೆಯನ್ನು ವಿವರಿಸಿ, ದೂರು ದಾಖಲಿಸಬಹುದಾಗಿದೆ. ಕೇವಲ 1902 ಎಂಬ ಸಹಾಯವಾಣಿ ಮಾತ್ರವಲ್ಲದೆ ಈ ನೂತನ ಮಲ್ಟಿ ಪ್ಲಾಟ್ ಫಾರ್ಮ್ ಯೋಜನೆ ವೆಬ್ ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಲಭ್ಯವಿರಲಿದೆ. ಮೂಲಭೂತವಾಗಿ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಲು ವಿವಿಧ ಇಲಾಖೆಗಳಿಂದ ಸ್ಥಾಪಿಸಲಾದ ಹಲವಾರು ಸಹಾಯವಾಣಿಗಳು ಮತ್ತು ವೆಬ್ ಪೋರ್ಟಲ್ಗಳು ಇಲ್ಲಿ ಇರಲಿದೆ. ಅಂದಹಾಗೆ, ಈ ವರ್ಷದ ಏಪ್ರಿಲ್ನಲ್ಲಿ ಸಂವಹನ ಸಚಿವಾಲಯವು (Ministry of Communications) ರಾಜ್ಯಕ್ಕೆ ಈ ಸಹಾಯವಾಣಿ ಸಂಖ್ಯೆಯನ್ನು ನಿಗದಿಪಡಿಸಿತ್ತು.

ನಾಗರಿಕರಿಗೆ ಕೇಂದ್ರದಿಂದ ನಡೆಸಲ್ಪಡುವ 24/7 ಆನ್ಲೈನ್ ನಲ್ಲೇ ಎಲ್ಲವನ್ನೂ ಒದಗಿಸುವ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮಾನಿಟರಿಂಗ್ ಸಿಸ್ಟಮ್ (CPGRAMS) ಮಾದರಿಯಲ್ಲಯೇ ಈ ಸೇವೆಯೂ ಇರಲಿದೆ. ಈ ಯೋಜನೆ ಜನರನ್ನು ಮತ್ತು ಆಡಳಿತರೂಢ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ. ಅಲ್ಲದೆ ಸರ್ಕಾರದ ಕೆಲ ಯೋಜನೆಗಳನ್ನೂ ಜನರೆಡೆಗೆ ತಲುಪಿಸಲು ಈ ಸೇವೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. 2023ರ ವಿಧಾನಸಭಾ ಚುನಾಣೆಯ ಹೊತ್ತಿಗೆ ಈ ಯೋಜನೆ ಸಂಪೂರ್ಣವಾಗಿ ಜನರ ಕೈಗೆ ತಲುಪಿಸುವ ಉದ್ದೇಶ ಬಿಜೆಪಿ ಸರ್ಕಾರದ್ದು.
ಈಗಾಗಲೇ ಈ ಮಲ್ಟಿ ಪ್ಲಾಟ್ ಫಾರ್ಮ್ ಯೋಜನೆ (IPGRS) ಡ್ರೈ ರನ್ ಯಶಸ್ವಿಯಾಗಿ ನಡೆಸಲಾಗಿದೆ. ಡಮ್ಮಿ ದೂರುಗಳನ್ನು ಕೊಟ್ಟು ಇ ಆಡಳಿತಾಧಿಕಾರಿಗಳು ಈ ಸೇವೆಯ ಕಾರ್ಯಕ್ಷಮತೆ ಹಾಗೂ ಪರಿಣಾಮಕಾರಿತ್ವವನ್ನು ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಈ ಹೊಸ ತಂತ್ರಜ್ಞಾನ ಆಡಳಿತ ಯಂತ್ರ ಹಾಗೂ ಜನರ ನಡುವೆ ವಿಶೇಷ ರೂಪದಲ್ಲಿ ಕೆಲಸ ಮಾಡಲಿದೆ ಎಂದು ಷರಾ ಬರೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪತ್ರಿಕ್ರಿಯಿಸಿದ ರಾಜ್ಯ ಇ ಆಡಳಿತ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ʻʻಈ ವ್ಯವಸ್ಥೆ ಜನರಿಗೆ ತಮಗೆ ಬೇಕಾದ ಸೇವೆಯನ್ನು ಪಡೆದುಕೊಳ್ಳುವ ಹಾದಿ ಸುಗಮ ಮಾಡಲಿದೆ. ಡ್ರೈ ರನ್ ಯಶಸ್ವಿಯಾಗಿ ನಡೆದಿದೆ. ಯೋಜನೆ ಆರಂಭಗೊಂಡ ಬಳಿಕ ನಮ್ಮ ಇಲಾಖೆ ಇದರ ಮೇಲೆ ವಿಶೇಷ ನಿಗಾ ಇಡಲಿದ್ದಾರೆʼʼ ಎಂದರು.
ಇದರ ಪ್ರಾಯೋಗಿಕ ಹಂತವಾಗಿ, ಜನಸ್ಪಂದನ ಯೋಜನೆಯೂ 1,583 ಕುಂದುಕೊರತೆಗಳನ್ನು ಸ್ವೀಕರಿಸಿದೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಗೆ ಸಂಬಂಧಿಸಿದ ದೂರುಗಳೇ ಹೆಚ್ಚು. ಇನ್ನು ಜನಸ್ಪಂದನ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಐದರಲ್ಲಿ 3.3 ರೇಟಿಂಗ್ ಹೊಂದಿದೆ.

ಜನಸ್ಪಂದನವು ಸರ್ಕಾರದ 600 ಯೋಜನೆಗಳು ಮತ್ತು ಸೇವೆಗಳನ್ನು ಒಳಗೊಂಡಿರುತ್ತದೆ. ನಾಗರಿಕರು ಎತ್ತಿರುವ ಪ್ರತಿಯೊಂದು ಕುಂದುಕೊರತೆಗಳನ್ನು ನಿರ್ದಿಷ್ಟ ಯೋಜನೆ ಅಥವಾ ಸೇವೆಗಾಗಿ ಆಯಾ ಇಲಾಖೆಯ ನಿರ್ದಿಷ್ಟ ಲಾಸ್ಟ್ ಮೈಲ್ ಫಂಕ್ಷನರಿ ಗೆ (LMF) ಮ್ಯಾಪ್ ಮಾಡಲಾಗುತ್ತದೆ. ಅಲ್ಲದೆ, ಮೂರು ಹಂತದ ಅಧಿಕಾರಿಗಳು ಕುಂದುಕೊರತೆಗಳನ್ನು ಪರಿಶೀಲಿಸಿ ಕಾಲಮಿತಿಯೊಳಗೆ ಪರಿಹರಿಸುವ ವ್ಯವಸ್ಥೆ ಇದಾಗಿದೆ.
ಒಮ್ಮೆ ಕುಂದುಕೊರತೆ ನಿವಾರಿಸಿದ ನಂತರ, ದೂರಿನ ಸಂಕ್ಷಿಪ್ತ ವರದಿಯನ್ನು ರಚಿಸಿ, ಅದನ್ನು ಪೋರ್ಟಲ್ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಮತ್ತು ನಾಗರಿಕರ ಪ್ರತಿಕ್ರಿಯೆಯನ್ನು ಸಹ ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನಾಗರಿಕರ ಪ್ರತಿಕ್ರಿಯೆಯು ತೃಪ್ತಿಕರವಾಗಿಲ್ಲದಿದ್ದರೆ, ವ್ಯವಸ್ಥೆಯು ಸ್ವಯಂಚಾಲಿತವಾಗಿ ದೂರುಗಳನ್ನು ಉನ್ನತ ಅಧಿಕಾರಿಗೆ ಪರಿಶೀಲನೆಗಾಗಿ ರವಾನಿಸಲಿದೆ.
ಜನಸ್ಪಂದನ ವೆಬ್ಸೈಟ್ : ipgrs.karnataka.gov.in






