‘ಕೇಂದ್ರ ಬಿಜೆಪಿ ಸರ್ಕಾರದ ಅಸಮರ್ಥತೆಯಿಂದಾಗಿ ಕೋವಿಡ್ ನಿಂದ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಜನ ಔಷಧಿ, ಆಕ್ಸಿಜನ್, ಲಸಿಕೆ ಸಿಗದೆ ಪರದಾಟ ನಡೆಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು 100 ಕೋಟಿ ಡೋಸ್ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಿಸಿ ಪ್ರಚಾರ ಪಡೆಯುವ ಬದಲು, ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಐಸಿಸಿ ವಕ್ತಾರ ಬಿ.ಕೆ. ಹರಿಪ್ರಸಾದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾತನಾಡಿದ ಹರಿಪ್ರಸಾದ್, ‘100 ಕೋಟಿ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಿಸುತ್ತಾ ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ ನೀಡಲಾಗಿದೆ ಎಂಬುದನ್ನು ಜನರಿಗೆ ತಿಳಿಸಲಿ’ ಎಂದು ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದಾರೆ.
‘100 ಕೋಟಿ ಲಸಿಕೆ ವಿಚಾರ ಸಂಭ್ರಮಿಸುವ ವಿಚಾರವಲ್ಲ. ಪ್ರತಿಯೊಬ್ಬ ನಾಗರೀಕನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೋವಿಡ್ ಮಹಾಮಾರಿ ಸಂಕಟ ತಟ್ಟಿದೆ. ಈ ಮಧ್ಯೆ ಎಷ್ಟು ಜನ ಸತ್ತಿದ್ದಾರೆ ಎಂಬ ನೈಜ ಅಂಕಿ ಅಂಶ ಸರ್ಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೋವಿಡ್ ಬಂದಾಗ ಅವೈಜ್ಞಾನಿಕವಾಗಿ ಗಂಟೆ, ತಟ್ಟೆ ಬಾರಿಸಿದರೆ ಹೊರತು, ಅದನ್ನು ಯಾವ ರೀತಿ ಎದುರಿಸಬೇಕು ಎಂದು ಹೇಳುವ ಪ್ರಯತ್ನ ಮಾಡಲಿಲ್ಲ. ಆರೋಗ್ಯ ಸಚಿವರು ಇಂದು ನೀಡಿರುವ ಮಾಹಿತಿಯಲ್ಲಿ ಈ 100 ಕೋಟಿ ಲಸಿಕೆ ಕೊಟ್ಟಿರೋದು 1 ಡೋಸ್ ಲಸಿಕೆ ಮಾತ್ರ. ಅದಕ್ಕೆ ಇವರು ಸಂಭ್ರಮಿಸುತ್ತಿದ್ದಾರೆ. 70 ಕೋಟಿ ಜನರಿಗೆ ಒಂದು ಡೋಸ್, ಕೇವಲ 20-30 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವದಲ್ಲೇ ಲಸಿಕೆ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತದಲ್ಲಿ ಇಷ್ಟು ದಿನಗಳಲ್ಲಿ ಕೇವಲ ಒಂದು ಡೋಸ್ ಮಾತ್ರ ನೀಡುತ್ತಿರುವುದು ಸಂಭ್ರಮಿಸುವ ವಿಚಾರವೇ?’ ಎಂದು ಪ್ರಶ್ನಿಸಿದ್ದಾರೆ.
‘ಬೇರೆ ರಾಷ್ಟ್ರಗಳಲ್ಲಿ ಈಗಾಗಲೇ ಎರಡು ಡೋಸ್ ಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡುತ್ತಿಲ್ಲ. ಇಂತಹ ವಿಚಾರವಾಗಿ ಅವರು ಮಾತನಾಡಿ ಜನರಿಗೆ ಧೈರ್ಯ ತುಂಬಬೇಕಾಗಿದೆ. ಎರಡು ವರ್ಷಗಳಿಂದ ಇವರು ಹೇಳುತ್ತಿರುವುದು 100 ಕೋಟಿ. ಕೇವಲ ಪದಪುಂಜಗಳ ಪ್ರಚಾರ ಆದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಮೆರಿಕದಲ್ಲಿ 85 ದಿನಗಳಲ್ಲಿ ಮೊದಲ ಡೋಸ್ ಆಗಿ, ನಂತರ ಎರಡನೇ ಡೋಸ್ ಆಗಿ, ಈಗ ಬೂಸ್ಟರ್ ಡೋಸ್ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಲಸಿಕೆ ಸಿಗದೆ ಜನ ಪ್ರಾಣ ಭಯದಿಂದ ಖಾಸಗಿ ಆಸ್ಪತ್ರೆಯಲ್ಲಿ 1500 ರಿಂದ 4000 ರೂ. ವರೆಗೂ ಹಣ ಪಾವತಿಸಿ ಲಸಿಕೆ ಪಡೆದಿದ್ದಾರೆ. ಹೀಗಾಗಿ ಪ್ರಧಾನಮಂತ್ರಿಗಳು ಸಂಭ್ರಮಿಸುವ ಬದಲು ದೇಶದ ಜನರಲ್ಲಿ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದ್ದಾರೆ.
‘ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರು, ನರ್ಸ್ ಸಿಬ್ಬಂದಿ, ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇವಲ ಅಭಿನಂದನೆ ಸಲ್ಲಿಸಿದರೆ ಸಾಲದು. ಕೋವಿಡ್ ಬಂದಾಗ ಇವರಿಗೆ ಸರಿಯಾದ ರೀತಿಯಲ್ಲಿ ಭತ್ಯೆ, ಇತರೆ ಅನುಕೂಲ ನೀಡುವುದಾಗಿ ಹೇಳಿತ್ತು. ಆದರೆ ಈವರೆಗೂ ಆ ಬಗ್ಗೆ ಚಕಾರ ಎತ್ತಿಲ್ಲ. ಕೇವಲ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಂಡರೆ ಪ್ರಯೋಜನೆವಿಲ್ಲ’ ಎಂದು ಕಿಡಿಕಾರಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿದ್ದು, ಕೋವ್ಯಾಕ್ಸಿನ್ ಗೆ ಮಾನ್ಯತೆ ನೀಡಿಲ್ಲ. ಹೀಗಾಗಿ 100 ಕೋಟಿ ಲಸಿಕೆಯಲ್ಲಿ ಕೋವಿಶೀಲ್ಡ್ ಪಡೆದವರು ಎಷ್ಟು? ಕೋವ್ಯಾಕ್ಸಿನ್ ತೆಗೆದುಕೊಂಡವರು ಎಷ್ಟು ಎಂದು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಕೋವ್ಯಾಕ್ಸಿನ್ ಪಡೆದವರಿಗೆ ವಿದೇಶಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ. ವಿದೇಶದಲ್ಲಿ ಓದಲು ತೆರಳಬೇಕಾಗಿದ್ದ ವಿದ್ಯಾರ್ಥಿಗಳು ಕೋವ್ಯಾಕ್ಸಿನ್ ಪಡೆದು ಅಲ್ಲಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಹೀಗಾಗಿ 100 ಕೋಟಿಯಲ್ಲಿ ಎಷ್ಟು ಕೋವಿಶೀಲ್ಡ್ ಲಸಿಕೆ ಕೊಟ್ಟಿದ್ದಾರೆ ಎಂಬುದು ಮುಖ್ಯ’ ಎಂದು ತಿಳಿಸಿದ್ದಾರೆ.
‘ವಿಕೃತ ಮನಸ್ಥಿತಿಯವರು ಮಾತ್ರ 100 ಕೋಟಿ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಪಟ್ಟು ಪ್ರಚಾರ ಪಡೆಯುತ್ತಾರೆ. ದೇಶದ ಜನರಿಗೆ ಇಷ್ಟು ದಿನವಾದರೂ 2 ಡೋಸ್ ನೀಡಲು ಆಗಿಲ್ಲ, ಜನರು ಕಷ್ಟ ಅನುಭವುಸಿದ್ದು, ಈಗ ಸಂಭ್ರಮಿಸುವ ಬದಲು ಕ್ಷಮೆ ಕೊರಲಿ’ ಎಂದಿದ್ದಾರೆ.
‘ಕುಣಿಯಲಾಗದವರು ನೆಲ ಡೊಂಕು ಎನ್ನುವ ಹಾಗೆ, ಕೋವಿಡ್ ಆರಂಭದಲ್ಲಿ ಸಗಣಿ ಬಳಿದುಕೊಳ್ಳಿ, ಗಂಜಲ ಕುಡಿಯಿರಿ, ಹಪ್ಪಳ ತಿನ್ನಿ, ಗಂಟೆ ಬಾರಿಸಿ, ದೀಪ ಹಚ್ಚಿ ಎಂದ ನೀವು ಎಂತಹ ಅವಿವೇಕಿಗಳು ಎಂದು ಇಡೀ ದೇಶ ನೋಡಿದೆ. ಭಾರತ ಸರ್ಕಾರದ ಈ ನಿರ್ಧಾರವನ್ನು ನೋಡಿ ಇಡೀ ಜಗತ್ತು ನಕ್ಕಿದೆ. ಮೋದಿ ಅವರ ಸ್ನೇಹಿತರಾದ ಬ್ರೆಜಿಲ್ ಅಧ್ಯಕ್ಷರು ಕೋವಿಡ್ ಸಮಯದಲ್ಲಿ ಇವರು ಮಾಡಿದ ಕ್ರಮಗಳು ಮಾನವೀಯತೆ ಮೇಲೆ ನಡೆದಿರುವ ದೌರ್ಜನ್ಯ ಎಂದು ಹೇಳಿದ್ದಾರೆ. ಹೀಗಾಗಿ ರವಿ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಕೊಂಡಿರಲಿ. ಈ ವಿಚಾರವನ್ನು ಪ್ರಧಾನಿ, ಆರೋಗ್ಯ ಸಚಿವರೇ ಮಾತನಾಡಲು ಬಿಡಲಿ’ ಎಂದು ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

‘ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮೊನ್ನೆ ಭ್ರಷ್ಟರನ್ನು ಬಿಡುವುದಿಲ್ಲ ಎಂದು ಪ್ರಚಾರ ಪಡೆದಿದ್ದಾರೆ. ಆದರೆ ನೀರವ್ ಮೋದಿ, ಚೋಕ್ಸಿ, ವಿಜಯ್ ಮಲ್ಯ ಅವರೆಲ್ಲ ವಿದೇಶದಲ್ಲಿ ಆರಾಮಾಗಿದ್ದಾರೆ. ತಮ್ಮನ್ನು ತಾವು ವಿಶ್ವಗುರು ಎಂದು ಕರೆದುಕೊಳ್ಳುವ ಮೋದಿ ಅವರು ಯಾಕೆ ಅವರನ್ನು ಕರೆತರುತ್ತಿಲ್ಲ. ಇವೆಲ್ಲವೂ ಪ್ರಚಾರ ನಡೆಸಲು ಹೇಳುತ್ತಾರೆಯೇ ಹೊರತು, ಜನರನ್ನು ಕಾಯುವ ವಿಚಾರವಾಗಿ ಯಾವ ಕ್ರಮವೂ ಇಲ್ಲ’ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ‘ಈ ವಿಚಾರವಾಗಿ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ವಿವರವಾಗಿ ಉತ್ತರಿಸುತ್ತೇನೆ. ಇತ್ತೀಚೆಗೆ ಅದಾನಿ ಪೋರ್ಟ್ ನಲ್ಲಿ 80 ಟನ್ ಹೆರಾಯಿನ್ ಸಿಕ್ಕಿತಲ್ಲ, ಅದರ ಡೀಲರ್ ಯಾರು? ಎಂಬುದಕ್ಕೆ ಕಟೀಲ್ ಅವರು ಮೊದಲು ಉತ್ತರ ನೀಡಲಿ. ಅವರು ಉತ್ತರ ನೀಡಿದ್ದೇ ಆದಲ್ಲಿ ನಾನು ರಾಜಕೀಯ ಬಿಡುತ್ತೇನೆ. ಈ ವಿಚಾರ ಬೇರೆಡೆಗೆ ಸೆಳೆಯಲು ಒಂದೆರಡು ಗ್ರಾಮ್ ಡ್ರಗ್ಸ್ ಇಟ್ಟುಕೊಂಡಿದ್ದ ಹುಡುಗನನ್ನು ಬಂಧಿಸಿದ್ದಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಿನಬೆಳಗಾಗುವುದರಲ್ಲಿ ಸರ್ಕಾರ, ನಾಯಕರು ಬಡಲಾಗುತ್ತಾರೆ ಎಂಬ ಅರಿವಿಲ್ಲ. ತಾವು 500 ವರ್ಷ ಬದುಕುವ ಭ್ರಮೆಯಲ್ಲಿದ್ದಾರೆ. ಜನ ಇವರಿಗೆ ಆದಷ್ಟು ಬೇಗ ಗಂಟೆ, ತಟ್ಟೆ ಬಾರಿಸಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.