ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ಇಡಿ ದೇಶವನ್ನು ಕಾರ್ಗತ್ತಲು ಆವರಿಸಿಕೊಳ್ಳೋ ಆತಂಕ ಎದುರಾಗಿದೆ. ಈ ನಡುವೆ ಕಲ್ಲಿದ್ದಲು ಕೊರತೆಗೆ ಕೇಂದ್ರ ಇಂಧನ ಇಲಾಖೆ ಕಾರಣಗಳನ್ನು ನೀಡಿದೆ. ಆದ್ರೆ ಕೇಂದ್ರ ಇಂಧನ ಸಚಿವರು ಮಾತ್ರ ಆತಂಕ ಪಡೋ ಅಗತ್ಯವಿಲ್ಲ ಎಂದಿದೆ.
ಕಲ್ಲಿದ್ದಲು ಬಿಕ್ಕಟ್ಟು ಕಳೆದೊಂದು ವಾರದಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚಿಸಲಾಗುತ್ತಿರುವ ವಿಷಯ. ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಭಾರೀ ಕಡಿತವಾಗಿದೆ. ಕಲ್ಲಿದ್ದಲಿನ ಕಂಟಕ ಹೀಗೆ ಮುಂದುವರೆದರೆ ಇಡಿ ದೇಶವೇ ಕತ್ತಲಿನ ಕಡಲಲ್ಲಿ ಮುಳುಗುವ ಆತಂಕವೂ ಎದುರಾಗಿದೆ. ಹೀಗಿರುವಾಗಲೇ ಈ ರೀತಿಯ ಬಿಕ್ಕಟ್ಟು ಎದುರಾಗೋಕ್ಕೆ ಕಾರಣವೇನು ಎಂಬುದನ್ನು ಕೇಂದ್ರ ಇಂಧನ ಇಲಾಖೆ ಬಿಚ್ಚಿಟ್ಟಿದೆ.
ಕಲ್ಲಿದ್ದಲು ಕೊರತೆಗೆ ಕಾರಣಗಳೇನು?
- ವಿದ್ಯುತ್ ಬೇಡಿಕೆಯಲ್ಲಿ ಅನಿರೀಕ್ಷಿತ ಹೆಚ್ಚಳವಾಗಿರೋದು
- ಸೆಪ್ಟೆಂಬರ್ನಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆ
- ಆಮದು ಮಾಡಿಕೊಳ್ಳುತ್ತಿರುವ ಕಲ್ಲಿದ್ದಲಿನ ಬೆಲೆಯಲ್ಲಿ ಹೆಚ್ಚಳ
- ಮುಂಗಾರಿಗೂ ಮುನ್ನ ಕಲ್ಲಿದ್ದಲು ಸಂಗ್ರಹಿಸದೇ ಇರುವುದು
ವಿದ್ಯುತ್ ಬೇಡಿಕೆಯಲ್ಲಿ ಅನಿರೀಕ್ಷಿತ ಹೆಚ್ಚಳವಾಗಿದೆ. ಹಾಗೆ ಸೆಪ್ಟೆಂಬರ್ನಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿರೋದು ಕಲ್ಲಿದ್ದಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಕಲ್ಲಿದ್ದಲು ಆಮದು ಬೆಲೆ ಏರಿಕೆಯಾಗಿರೋದು ಹಾಗೂ ಮುಂಗಾರಿಗೂ ಮುನ್ನ ಕಲ್ಲಿದ್ದಲು ಸಂಗ್ರಹಿಸದಿರುವುದು ಕಲ್ಲಿದ್ದಲಿನ ಕೊರತೆ ಉಂಟಾಗಲು ಕಾರಣ ಅನ್ನೋದು ಕೇಂದ್ರ ಇಂಧನ ಸಚಿವಾಲಯದ ವಿವರಣೆ.
ಇನ್ನು ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಬಗ್ಗೆ ಕೂಗು ಎದ್ದಿರುವುದರ ಬೆನ್ನಲ್ಲೇ ದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಇಂಧನ ಸಚಿವ ಆರ್ಕೆ ಸಿಂಗ್ ತಮ್ಮ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಪ್ರತಿನಿತ್ಯ ಕಲ್ಲಿದ್ದಲು ಸಂಗ್ರಹದ ಮೇಲ್ವಿಚಾರಣೆ ನಡೆಸಲಾಗುತ್ತಿದ್ದು, ದೇಶಕ್ಕೆ ಯಾವುದೇ ಬಿಕ್ಕಟ್ಟು ಎದುರಾಗಲ್ಲ ಅನ್ನೋದು ಕೇಂದ್ರ ಸಚಿವ ಆರ್ಕೆ ಸಿಂಗ್ ಮಾತು.

ನಮ್ಮಲ್ಲಿ ಸದ್ಯ ಒಂದು ವಾರಕ್ಕೆ ಹೆಚ್ಚಿನ ಕಾಲ ಸಾಕಾಗುವಷ್ಟು ಕಲ್ಲಿದ್ದಲಿನ ಸಂಗ್ರಹವಿದೆ. ಎಷ್ಟು ಖರ್ಚಾಗುತ್ತೊ ಅಷ್ಟು ಕಲ್ಲಿದ್ದಲಿನ ಸ್ಟಾಕ್ ಬರುತ್ತಲೇ ಇರುತ್ತದೆ. ಪ್ರತಿನಿತ್ಯ 1.75 ಮಿಲಿಯನ್ ಟನ್ ಕಲ್ಲಿದ್ದಲು ಖರ್ಚಾಗುತ್ತೆ ಎಂದಿದ್ದಾರೆ ಆರ್.ಕೆ ಸಿಂಗ್.
ಇನ್ನೊಂದೆಡೆ ರಾಜ್ಯದಲ್ಲಿ ಉಂಟಾಗಿರೋ ಕಲ್ಲಿದ್ದಲು ಕೊರತೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಕಲ್ಲಿದ್ದಲಿನ ಪೂರೈಕೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಇನ್ನು ಪ್ರಹ್ಲಾದ್ ಜೋಶಿ ಕಲ್ಲಿದ್ದಲು ಸಚಿವರಾದ ಮೇಲೆ ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆ ಆಗಿಲ್ಲ ಅನ್ನೋದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮಾತು.
ಸಚಿವ ಹಾಲಪ್ಪ ಆಚಾರ್ ಏನೋ ಕಲ್ಲಿದ್ದಲಿನ ಕೊರತೆ ಇಲ್ಲ ಎನ್ನುತ್ತಿದ್ದಾರೆ. ಆದರೆ, ಈ ನಡುವೆಯೇ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮತ್ತೊಂದು ಘಟಕ ಕಲ್ಲಿದ್ದಲಿನ ಕೊರತೆಯಿಂದಾಗಿ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಸದ್ಯ ಮೂರು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಆಗುತ್ತಿದೆ.

ಕಲ್ಲಿದ್ದಲಿನ ಕೊರತೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಅಭಾವ ಉಂಟಾಗಿದ್ದು, ವಿದ್ಯುತ್ ಬಿಕ್ಕಟ್ಟಿಗೆ ಭಾರತ ಸಿಲುಕುವ ಆತಂಕ ದಟ್ಟವಾಗಿದೆ. ಆದರೆ ಕರೆಂಟ್ ಶಾಕ್ ದೇಶಕ್ಕೆ ತಗುಲೋದಿಲ್ಲ ಅನ್ನೋದು ಕೇಂದ್ರ ಸರ್ಕಾರದ ವಾದ.