ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆ (Centre for Monitoring Indian Economy) ನೀಡುವ ವರದಿ ಪ್ರಕಾರ 2016ರಲ್ಲಿ ಇಡೀ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 10.3 ಲಕ್ಷ ಮಂದಿ ಕೆಲಸ ಮಾಡಿಕೊಂಡು ಅರ್ಥಿಕವಾಗಿ ಮಾಧ್ಯಮವನ್ನೇ ನಂಬಿಕೊಂಡಿದ್ದರು. ಅದರೆ 5 ವರ್ಷಗಳ ಬಳಿಕ ಅದರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಅಂದರೆ, 2021ರ ಅಗಸ್ಟ್ ಹೊತ್ತಿಗೆ 2.3 ಲಕ್ಷಕ್ಕೆ ಅದರ ಸಂಖ್ಯೆ ಕುಗ್ಗಿದೆ. ಸುಮಾರು 78% ರಷ್ಟು ಮಂದಿ ಮಾಧ್ಯಮ ಹಾಗೂ ಪ್ರಸಾರ ಕ್ಷೇತ್ರಗಳಿಂದ ದೂರ ಉಳಿದಿದ್ದಾರೆ. CMIE ಪ್ರಕಾರ ಮಾಧ್ಯಮದಲ್ಲಿದ್ದ ಪ್ರತಿ ಐದು ಮಂದಿಯಲ್ಲಿ ನಾಲ್ವರು, ಒಂದಾ ಅವರೇ ಈ ಕ್ಷೇತ್ರದಿಂದ ಹೊರಗುಳಿದಿದ್ದಾರೆ ಅಥವಾ ಕಾರಣಾಂತರಗಳಿಂದ ಇಲ್ಲಿಂದ ಹೊರಗುಳಿಯುವಂತಾಗಿದೆ. ಇದೇನು ಕೊರೋನಾ ಸಮಯದಲ್ಲಿ ಆಗಿರುವ ಬೆಳವಣಿಗೆಯಲ್ಲ. ಕೊರೋನಾಗೂ ಮೊದಲೇ ಅಂದರೆ, 2018ರ ಜನವರಿ ಹಾಗೂ ಡಿಸೆಂಬರ್ ನಡುವಣ ಸಮಯದಲ್ಲಿ ಈ ಬೆಳವಣಿಗೆಯಾಗಿದೆ ಎಂದು ಸಂಸ್ಥೆ ಸ್ಪಷ್ಟ ಪಡಿಸಿದೆ.
2018ರ ಜನವರಿ ಹಾಗೂ ಮಾರ್ಚ್ ಸಮಯದ ಹೊತ್ತಿಗೆ ಭಾರತೀಯ ಪತ್ರಿಕೋದ್ಯಮ ರಂಗದಲ್ಲಿ (MEDIA HOUSE) ಸುಮಾರು 8.3 ಲಕ್ಷ ಮಂದಿ ಕೆಲಸ ಮಾಡಿಕೊಂಡಿದ್ದರು. ಆದರೆ ಅದೇ ವರ್ಷದ ಅಕ್ಟೋಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ 8.3 ಲಕ್ಷದಿಂದ 3.7 ಲಕ್ಷದಷ್ಟಕ್ಕೆ ಇಳಿಕೆಯಾಗಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು 56%ದಷ್ಟು ಮಂದಿ ಪತ್ರಿಕೋದ್ಯಮದಿಂದ ಹೊರ ನಡೆದಿದ್ದಾರೆ. ಆದರೆ ಇದೊಂದು ಪೊಲಿಟಿಕಲ್ ಪ್ರೊಪಗಾಂಡ ಎನ್ನಲು ಸಾಧ್ಯವಿಲ್ಲ. ಯಾಕೆಂದರೆ, ಮೋದಿ ಪರವಾಗಿದ್ದ ಸುದ್ದಿ ಸಂಸ್ಥೆಗಳು ಕೂಡ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಅದ್ವಾನ ಸ್ಥಿತಿಗೆ ಬಂದು ನಿಂತ್ತಿತ್ತು.
ಮಾಧ್ಯಮದ ಸದ್ಯದ ಪರಿಸ್ಥಿತಿಗೆ ಮುನ್ನುಡಿ ಬರೆದಿದ್ದು 2000ನೇ ಇಸವಿಯಲ್ಲಿ. 2000ದಲ್ಲಿ ಉಂಟಾದ ಶೇರ್ ಮಾರ್ಕೆಟ್ ಏರುಗತಿ (Booming) ಜಗತ್ತಿನಾದ್ಯಂತ ಹಣದ ಹೊಳೆಯನ್ನೇ ಹರಿಯುವಂತೆ ಮಾಡಿತ್ತು. ದೊಡ್ಡ ದೊಡ್ಡ ಬ್ಯುಸಿನೆಸ್ (business) ಕುಳಗಳ ಖಜಾನೆ ದುಡ್ಡಿನಿಂದ ತುಂಬಿ ಹೋಗಿತ್ತು. ಈ ವೇಳೆ ದಲ್ಲಾಳಿಗಳಿಂದ ತಪ್ಪಿಸಿಕೊಳ್ಳಲು ಹೂಡಿಕೆದಾರರು ಪತ್ರಿಕೋದ್ಯಮ ವ್ಯಾಪ್ತಿಗೆ ಬರುವಂಥಾ ಉದ್ಯಮಗಳಿಗೆ ಇಳಿದು ಬಂಡವಾಳ ಹೂಡಿದರು. ಒಂದು ಹಂತಕ್ಕೆ ಹೂಡಿದ ದುಡ್ಡನ್ನು ಪತ್ರಿಕೋದ್ಯಮ ಊಹಿಸಿದ ವೇಗಕ್ಕಿಂತಲೂ ಹೂಡಿಕೆದಾರರಿಗೆ ಹಿಂತಿರುಗಿಸಿತ್ತು. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬುವುದಕ್ಕೆ ಮಾತ್ರ ಸೀಮಿತವಾಗಿದ್ದ ಪತ್ರಕರ್ತರು ನೋಡ ನೋಡುತ್ತಲೇ ಐಷಾರಾಮಿ ಬದುಕಿಗೆ ಒಗ್ಗಿಕೊಂಡರು. ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಜೇಬಿಗೆ ತುಂಬಿಕೊಂಡರು. ಕುಟುಂಬ ಸಮೇತ ವಿದೇಶಿ ಯಾತ್ರೆ ಶುರುವಿಟ್ಟುಕೊಂಡರು. ಅದು ಕೂಡ ಬ್ಯುಸಿನೆಸ್ ಕ್ಲಾಸ್ನಲ್ಲಿ. ಮತ್ತೊಂದೆಡೆ ಆಡಿ, ಬೆಂಜ್ನಂಥಾ (Benz) ಐಷಾರಾಮಿ ಕಾರು ಖರೀದಿಸಿ ಕಂಫರ್ಟ್ ಝೋನ್ ಸೇರಿಕೊಂಡರು. ಹೀಗೆ ಖಾತೆಯಲ್ಲಿ ಕೋಟಿ ಕೋಟಿ ಶೇಖರಿಸಿಕೊಂಡರು.

ಅಚ್ಚರಿಯ ಸಂಗತಿ ಎಂದರೆ, ಮಾಧ್ಯಮ ಏಕಾಏಕಿಯಾಗಿ ಇಷ್ಟೊಂದು ಶ್ರಿಮಂತಿಕೆ ಧಕ್ಕಿಸಿಕೊಂಡಿದ್ದು ಯಾವುದೇ ಜಾಹೀರಾತಿನಿಂದ ಬಂದ ಹಣದಿಂದಲ್ಲ. ಬದಲಿಗೆ, ಶೇರ್ ಮಾರ್ಕೆಟ್ನಲ್ಲಾದ (share market) ಎಕಾನಮಿ ಬೂಮಿಂಗ್ ಪತ್ರಿಕೋದ್ಯಮಕ್ಕೆ ಹೊಸದೊಂದು ಸ್ಥರವನ್ನು ದೊರಕಿಸಿಕೊಟ್ಟಿತು. ಇದೇ ಕಾರಣಕ್ಕೆ ಮಾಧ್ಯಮ ಕ್ಷೇತ್ರದ ಗಂಧಗಾಳಿ ಇಲ್ಲದ ಕಾರ್ಪೋರೇಟ್ ಕಂಪೆನಿಗಳೆಲ್ಲಾ ತಮ್ಮ ಸ್ಟಾಕ್ ಮಾರ್ಕೆಟ್ ಗಳಿಕೆಗಳನ್ನೆಲ್ಲಾ ತಂದು ಮಾಧ್ಯಮದ ಮೇಲೆ ಸುರಿದು ಬಿಟ್ಟವು. ಸುದ್ದಿ ಸಂಸ್ಥೆಗಳ ಶೇರ್ ಹೋಲ್ಡರ್ಗಳಾಗಿಯೇ (share holder) ಬಹುತೇಕ ಬಂಡವಾಳಗಳು ಹರಿದು ಬಂದವು. ಸಹಜವಾಗಿಯೇ ಇದು ಜಾಹೀರಾತಿನ ಮೌಲ್ಯವನ್ನು ಹೆಚ್ಚಿಸಿತು. 2012ರ ಹೊತ್ತಿಗೆಲ್ಲಾ ದೇಶದ ಪ್ರತಿಷ್ಟಿತ ಸುದ್ದಿ ಸಂಸ್ಥೆಯೊಂದು 350ಕ್ಕೂ ಹೆಚ್ಚಿನ ಕಾರ್ಪೊರೇಟ್ ಕಂಪೆನಿಗಳ ಜೊತೆ ʻಖಾಸಗಿ ಒಪ್ಪಂದʼವನ್ನು ಮಾಡಿಕೊಂಡಿದ್ದವು. ವಿಪರ್ಯಾಸ ಎಂದರೆ, ಪತ್ರಕರ್ತರಿಗೂ ಸಹ ತಮ್ಮ ಸಂಬಳದ ಒಂದು ಭಾಗವನ್ನು ಅವರ ಸ್ಟಾಕ್ ಮಾಲೀಕತ್ವದ (stock ownership) ಯೋಜನೆಗಳಲ್ಲಿ ನೀಡಲಾಗುತ್ತಿತ್ತು. ಇದು ಪತ್ರಿಕೋದ್ಯಮ ಮತ್ತು ಪತ್ರಕರ್ತರ Narration ಶೈಲಿಯನ್ನು ಬದಲಿಸುವಲ್ಲಿ ಯಶಸ್ವಿಯಾಯ್ತು. ಮುಂದುವರೆದ ಭಾಗವಾಗಿ ಕಂಪೆನಿಗಳು ತಮ್ಮ ಬ್ಯಾನರ್ ಅಡಿಯಲ್ಲೇ ಬ್ರಾಡ್ಕ್ಯಾಸ್ಟಿಂಗ್ (banner broadcasting) ಸಂಸ್ಥೆಗಳನ್ನು ಹುಟ್ಟುಹಾಕಿತು. ಇದು ಮನರಂಜನೆ, ಕ್ರೀಡೆ, ಮ್ಯೂಸಿಕ್, ಕಾಮಿಡಿ ಹಾಗೂ ಸುದ್ದಿ.. ಹೀಗೆ ಹೊಸ ಚಾನೆಲ್ ಸಂಸ್ಕೃತಿ ಪರಿಚಯಗೊಂಡಿತು.
ಶೇರು ಮಾರುಕಟ್ಟೆ ಕುಸಿತ.. ಬಣ್ಣ ಬದಲಿಸಿಕೊಂಡ ಪತ್ರಿಕೋದ್ಯಮ!
ಒಂದು ಹಂತಕ್ಕೆ ಶೇರು ಮಾರುಕಟ್ಟೆಯ ನೇರ ಕಾರಣದಿಂದ ದೇಶದ ಮಾಧ್ಯಮ ರಂಗ ಐಷಾರಾಮಿಯಾಗಿ ಮಾರ್ಪಾಡು ಹೊಂದಿತ್ತು. ಆದರೆ 2010ರ ಹೊತ್ತಿಗೆ ಅತ್ತ ಅಮೆರಿಕಾ ಹಾಗೂ ಯೂರೋಪ್ (America and Europe) ದೇಶದಲ್ಲಿ ಶೇರು ಮಾರುಕಟ್ಟೆ ಕುಸಿಯುವುದಕ್ಕೆ ಶುರುವಿಟ್ಟುಕೊಂಡಿತು. ಹಣದ ಹರಿವು ಕ್ರಮೇಣವಾಗಿ ಕುಗ್ಗುವುದಕ್ಕೆ ಶುರುವಾಯ್ತು. ಮಲ್ಟಿನ್ಯಾಷನಲ್ ಕಂಪೆನಿಗಳು (MNC) ವಿವಿಧ ಕ್ಷೇತ್ರಗಳಲ್ಲಿ ಹೂಡಿದ್ದ ಹೂಡಿಕೆ ಕ್ರಮೇಣವಾಗಿ ಇಳಿಮುಖವಾಗಲು ಪ್ರಾರಂಭಿಸಿತು. ಅದರಲ್ಲೂ ಉಟ್ಟ ಬಟ್ಟೆಗೆ ಮರು ಬಟ್ಟೆಯಿಲ್ಲದ ಸ್ಥಿತಿಯಲ್ಲಿದ್ದ ಪತ್ರಿಕೋದ್ಯಮ ಏಕಾಏಕಿಯಾಗಿ ಶ್ರೀಮಂತಿಕೆ ದಕ್ಕಿಸಿಕೊಂಡು ಇದೀಗ ಮತ್ತೆ ಹಳೆಯ ಸ್ಥಿತಿಯತ್ತ ಮುಖಮಾಡಿತು.
ಜಾಗತಿಕಮಟ್ಟದಲ್ಲಿ ಆರಂಭಗೊಂಡ ಈ ಬದಲಾವಣೆ 2011ರ ಸುಮಾರಿಗೆಲ್ಲಾ ಭಾರತಕ್ಕೂ ದಾಪುಗಾಲಿಟ್ಟಿತ್ತು. ಅದರೆ 2014ರ ಹೊತ್ತಿಗೆಲ್ಲಾ ಇದರ ಹೊಡೆತಕ್ಕೆ ಭಾರತೀಯ ಮಾಧ್ಯಮ ಕ್ಷೇತ್ರ ಸಂಪೂರ್ಣ ಸಿಕ್ಕಿ ವಿಲವಿಲ ಒದ್ದಾಡಿ ಹೋಯ್ತು. ಪಡೆಯುತ್ತಿದ್ದ ಸಂಬಳದಲ್ಲಿ ಪತ್ರಕರ್ತರು ಕಡಿತ ಎದುರಿಸಿದರು. ʻಕಾಸ್ಟ್ ಕಟ್ಟಿಂಗ್ʼ (cost cutting) ಹೆಸರಿನಲ್ಲಿ ಹಲವರು ಕೆಲಸ ಕಳೆದುಕೊಂಡರು. ಇದು ಸುದ್ದಿಗಾಗಿ ಚಾನೆಲ್ಗಳು ಏಜೆನ್ಸಿಗಳನ್ನು (channel agency) ಅವಲಂಬಿಸುವಂತೆ ಮಾಡಿತು. PTI ಹಾಗೂ ANI ಯಂತಹಾ ನ್ಯೂಸ್ ಏಜೆನ್ಸಿಗಳು Routine ಸುದ್ದಿಗಳನ್ನು ಸೆರೆ ಹಿಡಿದು ಸುದ್ದಿ ಸಂಸ್ಥೆಗಳಿಗೆ ನೀಡಲು ಶುರುವಿಟ್ಟುಕೊಂಡಿತು. ಹೀಗೆ ಆದರೆ ಮುಂದಿನ ದಿನಗಳು ಕಷ್ಟ ಎಂದು ಮನಗಂಡ ಭಾರತೀಯ ಪತ್ರೀಕೋದ್ಯಮ ತನ್ನ ಸುದ್ದಿ ಬಿತ್ತರಿಸುವ ಶೈಲಿಯನ್ನು ಬದಲಿಸಿಕೊಂಡಿತು. ತನಿಖಾ ಪತ್ರಿಕೋದ್ಯಮ ಹಾಗೂ ರಿಲಿಯಾಟಿ ಚೆಕ್ಗಳಂಥಾ (Investigative Journalism and Reality Check) ಮಾದರಿಯ ಖರ್ಚುವೆಚ್ಚ ಹೆಚ್ಚಿರುವ ಸುದ್ದಿಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ, ಗಾಸಿಪ್ (gossip), ನೋಡುಗರನ್ನು ಉದ್ವೇಗಗೊಳಿಸುವ ಹಾಗೂ Attractive Content ಗಳನ್ನಷ್ಟೇ ಸುದ್ದಿಯೆಂದು ನಂಬಿಸಿ ಬಿತ್ತರಿಸಲು ಶುರು ಮಾಡಿದವು. ಜೊತೆಗೆ ಜಾಹೀರಾತುದಾರನಿಗೆ ತನ್ನ ಬದ್ಥತೆಯನ್ನು ಅಡ ಇಟ್ಟು TRP ಜಿದ್ದಿಗೆ ಬಿದ್ದು ಬಿಟ್ಟವು. ಮಾದ್ಯಮಗಳ ಈ Transformation ಅಲ್ಪ ಮಟ್ಟಿನ ಜೀವಾಳವಾದವು. ಸಮಯದ ಹಿಟ್ಟನ್ನು ಸರಿಯಾಗಿ ಹೊಂದಿಸಿಕೊಳ್ಳುವಲ್ಲಿ ಈ ಬದಲಾವಣೆಯಿಂದ ಸಾಧ್ಯವಾಯಿತು. ಅದರೆ ಇದರಿಂದ ಹೆಚ್ಚಿನ ಗಳಿಕೆಯನ್ನೇನು ಪತ್ರಿಕೋದ್ಯಮ ಮಾಡುತ್ತಿಲ್ಲ ಎಂಬುವುದು ಕೂಡ ಸತ್ಯ. ಬಹುಶಃ ಈ ಬದಲಾವಣೆ ದೇಶದ ಅಧಪತನಕ್ಕೆ ಕಾರಣವಾಗಲಿದೆ ಎಂದು ಯಾರೂ ಅಂದು ಊಹಿಸಿರಲಿಲ್ಲ. ಇದರ ಜೊತೆಗೆ ರಾಜಕೀಯ ಪಕ್ಷವೊಂದರ ಅಜೆಂಡ ಹಾಗೂ ಪ್ರೊಪಗಾಂಡಕ್ಕೂ ಪತ್ರಿಕೋದ್ಯಮ ತನ್ನನ್ನು ತಾನು ಮಾರಿಕೊಂಡಿದ್ದು ಇಂದು ಇತಿಹಾಸ.

ಇದು 2018ರ ಸಮಯಕ್ಕೆಲ್ಲಾ ಮಾಧ್ಯಮ ಕ್ಷೇತ್ರವನ್ನು ಬಡವಾಗುವಂತೆ ಮಾಡಿತು. ಹಲವರು ಕೆಲಸ ಕಳೆದುಕೊಂಡು ದಿಕ್ಕಾಪಾಲಾದರು. ಇನ್ನೂ ಹಲವರು ಕ್ಷೇತ್ರ ತೊರೆಯುವ ಕಾರಣದಿಂದ ದೂರ ಉಳಿದರು. ಈ ಹೊತ್ತಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಗ್ರೂಪ್ ನಂಥಾ ಜೈಂಟ್ ಕಾರ್ಪೋರೆಟ್ ಕುಳಗಳು ದೃಶ್ಯ, ಮುದ್ರಣ, ಡಿಜಿಟಲ್ ಮಾಧ್ಯಮ (joint corperate visual media, digital media and print media) ಹೀಗೆ ಎಲ್ಲಾ ಸ್ಥರದಲ್ಲೂ ತಮ್ಮ ಹೆಗ್ಗುರುತು ಮೂಡುವಂತೆ ಮಾಡಿದರು. ಇದು ಪತ್ರಿಕೋದ್ಯಮ ತನ್ನ ಅಸಲಿ ಬದ್ಧತೆಯನ್ನು ಮರೆತು ಕಾರ್ಪೋರೇಟ್ ಹಾಗೂ ಈ ಕಾರ್ಪೊರೇಟ್ ಕುಳಗಳಿಗೆ ಒಲವಿರುವ ರಾಜಕೀಯ ಸಿದ್ಧಾಂತಗಳನ್ನು ಬಿತ್ತರಿಸುವ ಮುಖವಾಣಿಗಳಾಗಿ ಬದಲಾದವು. ಇದರ ಪರಿಣಾಮದಿಂದಾಗಿ ಓದುಗರು ಮತ್ತು ನೋಡುಗರು ಪ್ರತಿ ದಿನ News Excitationಗೆ ಒಳಗಾಗುತ್ತಿದ್ದಾರೆ.