ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಅವರನ್ನು ಕೆಳಗಿಳಿಸುವ ಪ್ರಯತ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಳೆಯದಿಂದ ನಿರಂತರವಾಗಿ ನಡೆದುಕೊಂಡೇ ಬರುತ್ತಿದೆ. ಆಗಾಗ ಅದು ಬಿರುಸಾಗಿ ಸಾಗುತ್ತದೆ. ಯಡಿಯೂರಪ್ಪ ತಮ್ಮ ನಾಲ್ಕು ದಶಕಗಳ ಅನುಭವವನ್ನು ಪಣಕ್ಕಿಟ್ಟು ಹೋರಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಮೂರು ದಿನ ಸಚಿವರು ಮತ್ತು ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಅರುಣ್ ಸಿಂಗ್ ಅವರೇ ‘ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ’ ಎಂದಿದ್ದರು. ಬಳಿಕ ಮೇಲ್ನೋಟಕ್ಕೆ ಎಲ್ಲವೂ ತಣ್ಣಗಾಗಿದೆ ಎನ್ನುವ ರೀತಿಯಲ್ಲೇ ಕಾಣುತ್ತಿದೆ. ಆದರೆ, ಸದ್ದಿಲ್ಲದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕೆಲಸ ಸಾಂಗವಾಗಿ ನಡೆಯುತ್ತಲೇ ಇದೆ. ಕೆಲ ಘಟನೆಗಳು ಅಂತಹ ಸುಳಿವುಗಳನ್ನು ನೀಡುತ್ತಿವೆ.

ಯೋಗೇಶ್ವರ್ ಸಿಡಿಸಿದ ಬಾಂಬ್
ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ‘ಪರೀಕ್ಷೆ ಬರೆದಿದ್ದೇವೆ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ. ‘ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಅವರು ಕೊಟ್ಟಿರುವ ದೂರನ್ನೇ ಪರೀಕ್ಷೆಗೆ ಹೋಲಿಸಿದ್ದಾರೆ. ಆಗ ಸಿ.ಪಿ. ಯೋಗೇಶ್ವರ್ ಮೂರು ಪುಟಗಳ ದೂರು ನೀಡಿದ್ದಾರೆ ಎನ್ನಲಾಗಿದೆ. ಈಗ ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ನಿರ್ಧಾರವನ್ನೇ ಫಲಿತಾಂಶಕ್ಕೆ ಹೋಲಿಕೆ ಮಾಡಿ ಅದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ನಾಯಕತ್ವ ಬದಲಾವಣೆಯನ್ನು ಎದುರು ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಸಿ.ಪಿ. ಯೋಗೇಶ್ವರ್ ಹೆಗಲಮೇಲಿರುವ ಕೋವಿ ಹಿಡಿದಿರುವುದು ಬಿ.ಎಲ್. ಸಂತೋಷ್ ಆಗಿರುವುದರಿಂದ ಯೋಗೇಶ್ವರ್ ‘ಪರೀಕ್ಷೆ-ಫಲಿತಾಂಶ’ದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಸಂತೋಷ್ ಯಾವಾಗ ಬೇಕಾದರೂ ‘ಗುಂಡು ಹಾರಿಸಬಹುದು’ ಎಂದೇ ಅರ್ಥ ಎನ್ನಲಾಗುತ್ತಿದೆ.
ಕೇಂದ್ರ ಸಂಪುಟಕ್ಕೆ ಬಿ.ವೈ. ರಾಘವೇಂದ್ರ!
ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ‘ರಾಜ್ಯದ ಖೋಟಾ’ ಬಿ.ಎಸ್. ಯಡಿಯೂರಪ್ಪ ಅವರ ಹಿರಿಯ ಪುತ್ರ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸಿಗಲಿದೆ ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಆಗಲಿದ್ದು ಆಗ ರಾಘವೇಂದ್ರಗೆ ಅವಕಾಶ ಮಾಡಿಕೊಡಲಾಗುತ್ತದೆ. ರಾಘವೇಂದ್ರರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಹೈಕಮಾಂಡ್ ‘ಒಂದೇ ಕಲ್ಲಿಗೆ ಮೂರು ಹಕ್ಕಿಗೆ ಹೊಡೆಯಲಿದೆ’. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಯಡಿಯೂರಪ್ಪ ಅವರನ್ನು ಸಾಮಾಧಾನ ಪಡಿಸುವುದು ಮೊದಲ ಗುರಿ.
ಯಡಿಯೂರಪ್ಪ ರಾಜೀನಾಮೆ ನೀಡುವಾಗ ಇನ್ನೊಬ್ಬ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಉಪ ಮುಖ್ಯಮಂತ್ರಿ ಸ್ಥಾನ ಕೇಳಬಹುದು (ಕಡೆಯ ಪಕ್ಷ ಮಂತ್ರಿ ಸ್ಥಾನ ಸಿಗುತ್ತದೆ ಎಂದು). ಆದರೆ ವಿಜಯೇಂದ್ರ ಬೆಳವಣಿಗೆಯನ್ನು ಬಿ.ಎಲ್. ಸಂತೋಷ್ ಬಿಲ್ ಕುಲ್ ಸಹಿಸುವುದಿಲ್ಲ. ಇದೇ ಕಾರಣಕ್ಕೆ ಹಿಂದೆ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ಅವಕಾಶ ನೀಡಲಿಲ್ಲ. ಬಸವಕಲ್ಯಾಣ ಉಪ ಚುನಾವಣೆಗೆ ಸ್ಫರ್ಧಿಸುವುದಕ್ಕೂ ಅಡ್ಡಗಾಲು ಹಾಕಿದರು. ಈಗ ರಾಘವೇಂದ್ರ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಂಡು ವಿಜಯೇಂದ್ರ ಅವರನ್ನು ಪಕ್ಕಕ್ಕೆ ಸರಿಸುವುದು ಎರಡನೇ ಗುರಿ.

ಯಡಿಯೂರಪ್ಪ ಅವರಿಗಿಂತ ಹೆಚ್ಚಾಗಿ ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಅನ್ಯಾಯ ಆಗಿಲ್ಲ. ಯಡಿಯೂರಪ್ಪ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಯಿತು. ಅವರ ಪುತ್ರನಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಮಾಡಿಕೊಡಲಾಯಿತು. ಜೊತೆಗೆ ಲಿಂಗಾಯತ ಸಮುದಾಯದ ಸುರೇಶ್ ಅಂಗಡಿ ಅವರಿಂದ ತೆರವಾಗಿದ್ದ ಸಚಿವ ಸ್ಥಾನವನ್ನು ಲಿಂಗಾಯತರಿಗೇ ನೀಡಲಾಯಿತು ಎಂಬ ಸಂದೇಶ ರವಾನಿಸುವುದು ಮೂರನೇಯ ಗುರಿ ಎನ್ನಲಾಗಿದೆ.
ರೆಸಾರ್ಟ್ ನಲ್ಲಿ ಸೀಕ್ರೆಟ್ ಸಭೆ
ಇತ್ತೀಚೆಗೆ ಯಡಿಯೂರಪ್ಪ ಕುಟುಂಬದವರು ರೆಸಾರ್ಟ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಸಭೆ ವೇಳೆ ಕೌಟುಂಬಿಕ ಕಲಹದ ಬಗ್ಗೆ ಚರ್ಚಿಸಲಾಗಿದೆ. ರಾಘವೇಂದ್ರಗೆ ಸಚಿವ ಸ್ಥಾನ ಕೊಡಿಸಲು ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರಿಂದಲೇ ಯಡಿಯೂರಪ್ಪ ಮತ್ತು ಕುಟುಂಬಕ್ಕೆ ಕೆಟ್ಟ ಹೆಸರು ಬಂತು ಎಂದು ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ನಾಯಕರು ಯಡಿಯೂರಪ್ಪ ಅವರಿಗೆ ‘ಏನೋ ಸಂದೇಶ’ ರವಾನಿಸಿದ್ದಾರೆ. ಅದನ್ನು ಕುಟುಂದವರಿಗೆ ತಿಳಿಸಿ ಅಂತಿಮ ನಿರ್ಧಾರ ಕೈಗೊಳ್ಳಲೆಂದೇ ಯಡಿಯೂರಪ್ಪ ಎಲ್ಲರನ್ನೂ ರೆಸಾರ್ಟ್ ಗೆ ಕರೆದೊಯ್ದಿದ್ದರು. ಅಲ್ಲಿನ ಘಟನಾವಳಿಗಳಿಂದ ವಿಜಯೇಂದ್ರ ವಿಚಲಿತರಾಗಿದ್ದಾರೆ. ಅದೇ ಕಾರಣಕ್ಕೆ ಮರುದಿನ ಬೆಳಿಗ್ಗೆಯೇ ದೆಹಲಿಗೆ ದೌಡಾಯಿಸಿದರು ಎಂಬ ಸಂಗತಿ ವ್ಯಾಪಕವಾಗಿ ಚರ್ಚೆ ಆಗುತ್ತಿದೆ.

ಈ ರಹಸ್ಯ ಸಭೆ, ಹೈಕಮಾಂಡ್ ಕಳಿಸಿದ ಸಂದೇಶ, ರಾಘವೇಂದ್ರ-ವಿಜಯೇಂದ್ರ ನಡುವಿನ ಜಗಳ, ವಿಜಯೇಂದ್ರ ದೆಹಲಿ ಭೇಟಿಗಳೆಲ್ಲವೂ ಯಡಿಯೂರಪ್ಪ ರಾಜೀನಾಮೆ ನೀಡುವ ಸುತ್ತಲೇ ಗಿರಕಿಹೊಡೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ ಹೈಕಮಾಂಡ್ ನಾಯಕರೊಬ್ಬರು ಇತ್ತಿಚೆಗೆ ಬೆಂಗಳೂರಿಗೆ ಬಂದು ಯಡಿಯೂರಪ್ಪ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಹೋಗಿದ್ದಾರೆ. ಆಗ ‘ರಾಜೀನಾಮೆ ನೀಡುವುದು ಅನಿವಾರ್ಯ’ ಎಂಬುದನ್ನು ತಿಳಿಸಿಹೋಗಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪ ಕುಟುಂಬದಲ್ಲೂ ತಲ್ಲಣ ಸೃಷ್ಟಿ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ‘ಏನೋ ಆಗುತ್ತಿದೆ’. ಅಥವಾ ಸದ್ದಿಲ್ಲದೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಕಸರತ್ತು ನಡೆಯುತ್ತಿದೆ ಎಂದೇ ಅರ್ಥ.






