ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ, 1.78 ಕೋಟಿಗೂ ಅಧಿಕ ಮಂದಿಗೆ ತಗುಲಿದ ಕೋವಿಡ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದ ಈ ಸಂಧರ್ಭದಲ್ಲಿ ಯೋಗ ನಮ್ಮ ಜೀವನದ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
7 ನೆಯ ಅಂತರಾಷ್ಟ್ರೀಯ ಯೋಗದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಭಾರತ ಸೇರಿದಂತೆ ಬೇರೆ ರಾಷ್ಟ್ರಗಳಲ್ಲಿ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೆ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.

‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬುವುದು ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ. ಇತ್ತೀಚಿನ ಪರಿಸ್ಥಿತಿ ಹಾಗೂ ಆರೋಗ್ಯದ ಸ್ಥಿತಿಗತಿಯಿಂದಾಗಿ ಹೆಚ್ಚೆಚ್ಚು ಮಂದಿ ಯೋಗ ಮಾಡುವಂತೆ ಜನರನ್ನು ಪ್ರೇರೇಪಿಸುತ್ತದೆ. ಪ್ರತಿ ದೇಶಗಳು, ಪ್ರತಿ ಪ್ರದೇಶಗಳು, ಜನರು ಆರೋಗ್ಯಯುತವಾಗಿ ಬಾಳಲಿ ಎಂದು ನಾನು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದ ಅವರು, ರೋಗಿಗಳಿಗೆ ಚಿಕಿತ್ಸೆ ನೀಡಲು ಯೋಗ ಅಭ್ಯಾಸವನ್ನು ರಕ್ಷಾಕವಚವಾಗಿ ಬಳಸಿದ್ದಾರೆ ಎಂದು ಹೇಳಿದ್ದಾರೆ.

ಕರೋನಾ ಚಿಕಿತ್ಸೆಯ ಮಧ್ಯೆ ಇಂದು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ-ವಿಲೋಮ, ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮ ಮಾಡಿಸುತ್ತಿದ್ದಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಕೂಡಾ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ M-Yoga ಅಪ್ಲಿಕೇಶನ್ ತಯಾರಿಸಿದ್ದು, ಇದು ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ. ಇದು ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯವಾಕ್ಯದಲ್ಲಿ ಕೆಲಸ ಮಾಡಲು ನಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಜಗತ್ತಿನಲ್ಲಿ ಕೋವಿಡ್ ಸೋಂಕು ಪತ್ತೆಯಾದಾಗ, ಇದರ ವಿರುದ್ಧ ಹೇಗೆ ಹೋರಾಡಲು ಯಾವುದೇ ದೇಶ ಸಿದ್ಧವಾಗಿರಿಲಿಲ್ಲ. ಆದರೆ ಈ ವೈರಸ್ ವಿರುದ್ಧ ನಾವು ಹೋರಾಡಬಹುದು ಎಂದು ಅರಿತುಕೊಳ್ಳಲು ಯೋಗವು ನಮಗೆ ಸಹಾಯ ಮಾಡಿದೆ. ಯೋಗವು ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಸವಾಲಿನ ಕಾಲದಲ್ಲಿ ಒಬ್ಬರು ಹೇಗೆ ಬದುಕಬಹುದು ಎಂಬುದನ್ನು ಇದು ತೋರಿಸಿಕೊಡುತ್ತದೆ ಎಂದು ಮೋದಿ ಹೇಳಿದ್ದಾರೆ.