ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಆದರೂ ಸರ್ಕಾರ ಬಡವರಿಗೆ ಲಸಿಕೆ ಹಾಕಲು ₹900 ಶುಲ್ಕ ವಸೂಲಿ ಮಾಡುತ್ತಿದ್ದು, ರಾಜ್ಯದಲ್ಲಿ ಬಿಜೆಪಿಗೆ ಅಂತಿಮ ದಿನಗಳು ಸಮೀಪಿಸಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
]ರಾಜ್ಯಾದ್ಯಂತ ಸರಕಾರದ ಲಸಿಕಾ ಕಾರ್ಯಕ್ರಮ ಮಂದಗತಿಯಲ್ಲಿ ಸಾಗುತ್ತಿದ್ದು, ಸರ್ಕಾರ ನಮಗೆ ಅನುಮತಿ ನೀಡಿದರೆ ರಾಜ್ಯದ ಎಲ್ಲ ಜನರಿಗೂ ಉಚಿತ ಕೋವಿಡ್ ಲಸಿಕೆ ನೀಡುತ್ತೇವೆ ಎಂದಿದ್ದಾರೆ.
ಮೊನ್ನೆಯಷ್ಟೇ ನಾನು ದಾವಣಗೆರೆಯಲ್ಲಿ ನನ್ನ ಎರಡನೇ ಲಸಿಕೆ ತೆಗೆದುಕೊಳ್ಳುವ ಮೂಲಕ ಉಚಿತ 3 ಲಕ್ಷ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿದ್ದೇನೆ. ಕಾಂಗ್ರೆಸ್ ಪಕ್ಷ ಘೋಷಿಸಿರುವ ೧೦೦ ಕೋಟಿ ರೂ.ಗಳ ವಿಶೇಷ ಯೋಜನೆಗೆ ಸರ್ಕಾರ ಅನುಮತಿ ನೀಡಬೇಕು. ನಾವು ರಾಜ್ಯದ ಎಲ್ಲ ಜನರಿಗೂ ಉಚಿತ ಲಸಿಕೆ ನೀಡಲು ತಯಾರಿದ್ದೇವೆ. ಆದರೂ ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಅನುಮತಿ ನೀಡುತ್ತಿಲ್ಲ.

ಕಾಂಗ್ರೆಸ್ ನಾಯಕರು ಜನರ ಜೀವ ಉಳಿಸಲು ಕೈ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಲಸಿಕೆ ನೀಡುವುದರ ಜತೆಗೆ ಸಮಾಜದ ವಿವಿಧ ವರ್ಗದ ಜನರಿಗೆ ಉಚಿತ ಪಡಿತರ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಕೋವಿಡ್ ಪರಿಹಾರ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೂ ಸಹಾಯ ಮಾಡಲು ಈ ಕಾರ್ಯಕ್ರಮ ವಿಸ್ತರಿಸುತ್ತೇವೆಂಬ ಭರವಸೆ ನೀಡಿದ್ದಾರೆ.
ರಾಜ್ಯದ ಜನರ ಆರೋಗ್ಯ ರಕ್ಷಣೆ ಬಗ್ಗೆ ಅಸಡ್ಡೆ ತೋರಿಸಿ, ಈ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಸಮಯದಲ್ಲೂ ಬಡ ಜನರಿಂದ ಪ್ರತಿ ಲಸಿಕೆಗೆ ₹900 ಪಡೆದು ಪೋಸ್ಟರ್ ಗಳಲ್ಲಿ ಬಿಜೆಪಿ ನಾಯಕರು ತಮ್ಮ ಫೋಟೋ ಹಾಕಿಕೊಂಡು ಮಿಂಚುತ್ತಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ನಮ್ಮ ಪಕ್ಷದ ಕಾರ್ಯಕರ್ತರು ಜನರಿಗಾಗಿ ಉಚಿತ ವ್ಯಾಕ್ಸಿನೇಷನ್ ಶಿಬಿರಗಳನ್ನು ಆಯೋಜಿಸಲು ತಮ್ಮ ಜೇಬಿನಿಂದ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.