ಕಲ್ಕತ್ತಾ ಹೈಕೋರ್ಟ್’ನ ಐದು ಸದಸ್ಯರ ಪೀಠವು ವಿವಾದಿತ ನಾರದ ಪ್ರಕರಣಕ್ಕೆ ಸಂಬಂಧಪಟ್ಟ ಟಿಎಂಸಿಯ ಪ್ರಮುಖ ನಾಲ್ಕು ನಾಯಕರಿಗೆ ಮಧ್ಯಂತರ ಜಾಮೀನು ನೀಡಿದೆ. ಜಮೀನು ಪಡೆದವರಲ್ಲಿ ಇಬ್ಬರು ಪಶ್ಚಿಮ ಬಂಗಾಳದ ಸಚಿವರು, ಒಬ್ಬ ಶಾಸಕ ಹಾಗೂ ಕೊಲ್ಕತ್ತಾದ ಮಾಜಿ ಮೇಯರ್ ಸೇರಿದ್ದಾರೆ.
ರೂ. ಎರಡು ಲಕ್ಷ ಮೌಲ್ಯದ ಖಾಸಗಿ ಬಾಂಡ್ ನೀಡಿ ಜಾಮೀನು ಪಡೆಯಲು ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ. ಇನ್ನು ಈ ಪ್ರಕರಣದ ಕುರಿತಾಗಿ ಸಿಬಿಐ ತನ್ನ ತನಿಖೆ ಮುಂದುವರೆಸಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಟಿಎಂಸಿ ನಾಯಕರು ಹಾಜರಾಗಲಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಯನ್ನು ಕೊಡುವುದರಿಂದ ನಿರ್ಬಂಧವನ್ನೂ ಹೇರಲಾಗಿದೆ.

ಮೇ 17ರಂದು ನಾರದ ಸ್ಟಿಂಗ್ ಟೇಪ್ ಪ್ರಕರಣದಲ್ಲಿ ಟಿಎಂಸಿ ಮುಖಂಡರಾದ ಫಿರ್ಹಾದ್ ಹಕೀಮ್, ಮದನ್ ಮಿತ್ರಾ, ಸುಬ್ರತಾ ಮುಖರ್ಜಿ ಮತ್ತು ಸೋವನ್ ಚಟರ್ಜಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠದಿಂದ ಉನ್ನತ ಪೀಠಕ್ಕೆ ಹಸ್ತಾಂತರಿಸಿದ್ದರಿಂದ ಮೇ ೧೯ರಿಂದ ಇವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸಚಿವರು, ಶಾಸಕರು ಮತ್ತು ಸಂಸದರ ಹೆಸರು ಕೂಡಾ ಕೇಳಿ ಬಂದಿತ್ತು. ಟಿಎಂಸಿ ಪಕ್ಷದೊಳಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಈ ಸ್ಟಿಂಗ್ ಆಪರೇಷನ್ನಲ್ಲಿ ಹಲವು ನಾಯಕರು ಸಿಲುಕಿಕೊಂಡಿದ್ದರು.

56 ಗಂಟೆಗಳ ಈ ವೀಡಿಯೋವನ್ನು 2016ರಲ್ಲಿ ತೆಹೆಲ್ಕಾ ಬಹಿರಂಗಪಡಿಸಿತ್ತು. ಈ ವೀಡಿಯೋದಲ್ಲಿ ಈಗ ಬಿಜೆಪಿ ಶಾಸಕರಾಗಿರುವ ಸುವೆಂಧು ಅಧಿಕಾರಿ, ಮುಕುಲ್ ರಾಯ್, ಟಿಎಂಸಿ ನಾಯಕರಾದ ಸೌಗತಾ ರಾಯ್, ಕಾಕೋಲಿ ಘೋಷ್, ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಅಪರೂಪ ಪೊದ್ದಾರ್, ಸುಲ್ತಾನ್ ಅಹ್ಮದ್ (ಈಗ ನಿಧನರಾಗಿದ್ದಾರೆ), ಮದನ್ ಮಿತ್ರಾ, ಸೋವನ್ ಚಟರ್ಜಿ, ಫಿರ್ಹಾದ್ ಹಕೀಂ, ಸುಬ್ರತಾ ಮುಖರ್ಜಿ ಮತ್ತು ಈಗ ಅಮಾನತಿನಲ್ಲಿರುವ ಐಪಿಎಸ್ ಅಧಿಕಾರಿ ಹೆಚ್ ಎಂ ಎಸ್ ಮಿರ್ಜಾ ಅವರು ಕಾಣಿಸಿಕೊಂಡಿದ್ದರು.
ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ, ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಕೋಲಾಹಲ ಉಂಟುಮಾಡಿತ್ತು. ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯ ನಂತರ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿ ಟಿಎಂಸಿ ನಾಯಕರನ್ನು ಬಂಧಿಸಿತ್ತು. ಈ ವೇಳೆ ಕೇಂದ್ರ ಸರ್ಕಾರವು ಸಿಬಿಐ ಅನ್ನು ದಾಳವಾಗಿ ಉಪಯೋಗಿಸಿ ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಇದಕ್ಕೆ ಪೂರಕವಾಗಿ ಸ್ಟಿಂಗ್ ಆಪರೇಷನ್ ನಡೆಸಿದಂತಹ ಮ್ಯಾಥ್ಯೂ ಸ್ಯಾಮುಯೆಲ್ ಅವರು ಹೇಳಿಕೆ ನಿಡಿ, ಇದರಲ್ಲಿ ಬಿಜೆಪಿ ನಾಯಕರ ಮೇಲೆಯೂ ಆರೋಪ ಹೊರಿಸಲಾಗಿದೆ ಅವರ ಬಂಧನ ಯಾಕಾಗಿಲ್ಲ ಎಂದು ಪ್ರಶ್ನಿಸಿದ್ದರು.