ರಾಜ್ಯಾದ್ಯಂತ ಗೋ ಹತ್ಯೆ ನಿಷೇಧವಾದ ಹಿನ್ನೆಲೆಯಲ್ಲಿ ಅದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬಳಕೆದಾರರು ರೈತರು ಗೋ ಸಾಕಣೆದಾರರು ಎಲ್ಲರ ಮೇಲಷ್ಟೇ ಅಲ್ಲ ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಮೇಲೂ ಆಗಿದೆ. ಈ ನೂತನ ಕಾಯ್ದೆಯಿಂದಾಗಿ ಗೋಮಾಂಸದ ಕೊರತೆ ಎದುರಾದಲ್ಲಿ ಇಷ್ಟು ದಿನ ಗೋಮಾಂಸ ಸೇವಿಸುತ್ತಿದ್ದ ಮೃಗಾಲಯದಲ್ಲಿನ ಮಾಂಸಾಹಾರಿ ಪ್ರಾಣಿಗಳಿಗೆ ಇನ್ನುಮುಂದೆ ಕೋಳಿ ಮಾಂಸ ನೀಡಲಾಗುತ್ತದೆ. ಬ್ರಾಯ್ಲರ್ ಕೋಳಿಗಳನ್ನು ಮನುಷ್ಯನೇ ಸಾಕಾಣಿಕೆ ಮಾಡುವ ಕಾರಣ ಅದರ ಬೆಳವಣಿಗೆಗೆ ಕೃತಕ ಪ್ರೋಟೀನ್, ಹಾರ್ಮೋನ್ ಬದಲಾವಣೆ ಔಷಧಗಳನ್ನು ನೀಡಲಾಗಿರುತ್ತದೆ. ಹಾಗಾಗಿ ಇದರ ಪರಿಣಾಮ ಝೂನಲ್ಲಿರುವ ಪ್ರಾಣಿಗಳ ಮೇಲೂ ಬೀರುವ ಸಾಧ್ಯತೆಗಳು ಇವೆ. ಈ ಕುರಿತು ಮಾತನಾಡಿದ ಪಶು ವೈದ್ಯ ಡಾ. ನಾಗರಾಜ್ ಅವರು ಪ್ರಾಣಿಗಳು ಬ್ರಾಯ್ಲರ್ ಚಿಕನ್ ಸೇವನೆ ಮಾಡುವುದರಿಂದ ಅದರ ಪರಿಣಾಮವು ದೀರ್ಘಾವಧಿಯಲ್ಲಿ ಗೊತ್ತಾಗಲಿದೆ ಎಂದರು.
ಪ್ರಾಣಿಗಳ ಆಯುಷ್ಯ ಹತ್ತರಿಂದ ಹನ್ನೆರಡು ವರ್ಷಗಳಾಗಿವೆ. ಯಾವುದೇ ಆಹಾರವಾಗಲಿ ಅದರ ಪರಿಣಾಮ ಧನಾತ್ಮಕವಾಗಿದೆಯೋ ಅಥವಾ ಋಣಾತ್ಮಕವಾಗಿ ದೆಯೋ ಎಂಬುದನ್ನು ತಿಳಿಯಲು ಕನಿಷ್ಟ ಒಂದರಿಂದ ಎರಡು ವರ್ಷ ಬೇಕಾಗುತ್ತದೆ. ಹಾಗಾಗಿ ಗೋಮಾಂಸದ ಬದಲಾಗಿ ಚಿಕನ್ ನೀಡುತ್ತಿರುವುದಿರಿಂದ ಒಳ್ಳೆಯದಾಗಿದೆಯೋ ಅಥವಾ ಕೆಟ್ಟದ್ದಾಗಿದೆಯೋ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ ಎಂದು ಅವರು ಹೇಳುತ್ತಾರೆ. ಹುಲಿ, ಸಿಂಹಗಳ ಕೈಗೆ ಪಕ್ಷಿಗಳು ಸಿಗದ ಕಾರಣ ಅವನ್ನು ತಿನ್ನುವುದಿಲ್ಲ. ಒಂದು ವೇಳೆ ನವಿಲುಗಳು, ಕಾಡು ಕೋಳಿಗಳು ಕೈಗೆ ಸಿಕ್ಕರೆ ಖಂಡಿತ ಅವು ಬೇಟೆಯಾಡಿ ತಿನ್ನುತ್ತವೆ ಎಂದು ನಾಗರಾಜ್ ಹೇಳಿದರು.

ನಿರ್ವಹಣೆ ಮಾಡಲು ಸಾಧ್ಯವಾಗದ ಗೋವುಗಳು, ಹದಿನಾಲ್ಕು ವರ್ಷ ದಾಟಿದ ಎಮ್ಮೆಗಳು, ಗಂಭೀರವಾಗಿ ಗಾಯಗೊಂಡಿರುವ ರಾಸುಗಳನ್ನು ವಧೆ ಮಾಡಿ ಅದರ ಮಾಂಸವನ್ನು ಮೃಗಾಲಯದ ಪ್ರಾಣಿಗಳಿಗೆ ಪೂರೈಕೆ ಮಾಡಲು ಅನುಮತಿ ನೀಡಿದರೆ ಉತ್ತಮ ಎಂಬುದು ಪಶು ತಜ್ಞರ ಅಭಿಪ್ರಾಯವಾಗಿದೆ. ಕುರಿ, ಮೇಕೆ, ಕೋಳಿ, ಹಂದಿ ಇತರೆ ಪ್ರಾಣಿಗಳ ಮಾಂಸಕ್ಕೆ ಹೋಲಿಸಿದರೆ ಗೋಮಾಂಸವು ಒಂದು ಸಮತೋಲನ ಆಹಾರವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಅಂಶಗಳು ಹೆಚ್ಚಾಗಿರುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಗೋಮಾಂಸವನ್ನು ಬ್ಯಾಲೆನ್ಸ್ಡ್ ಡಯೆಟ್ ಫುಡ್ ಎಂದು ಹೇಳಲಾಗುತ್ತದೆ. ಕುರಿಗಿಂತ ಕಡಿಮೆ ಕೊಬ್ಬು ಗೋಮಾಂಸದಲ್ಲಿರುತ್ತದೆ. ಈ ಕುರಿತು ಮಾತನಾಡಿದ ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಅವರು ನೂತನ ಗೋಹತ್ಯೆ ನಿಷೇಧ ಕಾಯ್ದೆಯಿಂದ ಮೃಗಾಲಯದ ಪ್ರಾಣಿಗಳಿಗೆ ಯಾವುದೇ ಆಹಾರ ಕೊರತೆ ಎದುರಾಗುವುದಿಲ್ಲ ಎಂದು ಹೇಳಿದರು.
ಕೋಳಿ ತ್ವರಿತವಾಗಿ ಬೆಳೆಯಲು ಬಳಸಲಾಗುವ ರಸಾಯನಿಕಗಳಿಂದ ಮೃಗಾಲಯದ ಪ್ರಾಣಿಗಳ ಮೇಲೆ ಆಗುವ ಪರಿಣಾಮ ಕುರಿತು ಮಾತನಾಡಿದ ಅವರು ಮೃಗಾಲಯದಲ್ಲಿ ಸುಸಜ್ಜಿತ ಪ್ರಯೋಗಾಲಯವೂ , ವೈದ್ಯರೂ ಇದ್ದಾರೆ. ಸೂಕ್ತವಾಗಿ ಹಂತ ಹಂತದ ಅಮೂಲಾಗ್ರ ಪರೀಕ್ಷೆ ನಡೆಸಿದ ನಂತರವೇ ಕೋಳಿ ಮಾಂಶವನ್ನು ನೀಡಲಾಗುತ್ತದೆ ಎಂದರು. ಮಾರುಕಟ್ಟೆಯಲ್ಲಿ ಗೋಮಾಂಸ ಮತ್ತು ಕೋಳಿ ಮಾಂಸಕ್ಕೆ ಹೆಚ್ಚಿನ ದರ ವ್ಯತ್ಯಾಸ ಇಲ್ಲದಿರುವುದರಿಂದ ನಿರ್ವಹಣಾ ವೆಚ್ಚದಲ್ಲೀ ಹೆಚ್ಚಿನ ಏರಿಳಿತ ಉಂಟಾಗದು ಎಂದರು.ಏನೇ ಅದರೂ ಗೋ ಮಾಂಸವು ಗಟ್ಟಿ ಇರುತ್ತದೆ. ಆದರೆ ಬ್ರಾಯ್ಲರ್ ಕೋಳಿ ಮಾಂಸವು ಮೃದುವಾಗಿರುತ್ತದೆ. ಮಾಂಸಾಹಾರಿ ಪ್ರಾಣಿಗಳಾದ ಹುಲಿ , ಚಿರತೆ, ಮೊಸಳೆ ಇವುಗಳಿಗೆ ಗಟ್ಟಿ ಮಾಂಸ ನೀಡಿದರೆ ಅವುಗಳಿಗೆ ಬೇಗ ಹೊಟ್ಟೆ ಹಸಿಯುವುದಿಲ್ಲ. ಆಧರೆ ಬ್ರಾಯ್ಲರ್ ಆದರೆ ಬೇಗನೆ ಹೊಟ್ಟೆ ಹಸಿಯುತ್ತದೆ. ಹಾಗಾಗಿ ಜಾಸ್ತಿ ಮಾಂಸ ನೀಡಬೇಕಾಗುತ್ತದೆ.
ಇದು ಒಂದೆಡೆ ಆದರೆ ಮತ್ತೊಂದೆಡೆ ಜಾನುವಾರು ಸಾಕುವ ರೈತರ ಪಾಡು ಹೇಳತೀರದಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರೈತ ಚನ್ನಬಸಪ್ಪ ಅವರ ಪ್ರಕಾರ ರಾಜ್ಯ ಸರ್ಕಾರವು ಗೋಹತ್ಯಾ ನಿಷೇಧದಿಂದ ರೈತರನ್ನೂ ಸಂಕಷ್ಟಕ್ಕೆ ನೂಕಿದೆ. ವಯಸ್ಸಾದ ಜಾನುವಾರುಗಳನ್ನು ಮೊದಲೆಲ್ಲ ಉತ್ತಮ ಬೆಲೆಗೆ ಸಂತೆಗೆ ಸಾಗಿಸಿ ಮಾರಾಟ ಮಾಡುತಿದ್ದೆವು. ಈಗ ಅವುಗಳನ್ನು ಇಟ್ಟುಕೊಂಡರೆ ನಿತ್ಯವೂ ನಷ್ಟ. ಜತೆಗೆ ಮೊದಲೆಲ್ಲ ಕೇರಳದಿಂದ ಖರೀದಿದಾರರು ಬರುತಿದ್ದರು. ಈಗ ಅವರೂ ಬರುತ್ತಿಲ್ಲ . ಸ್ಥಳೀಯ ವ್ಯಾಪಾರಿಗಳು ಮೊದಲು 20 ಸಾವಿರಕ್ಕೆ ಕೇಳುತಿದ್ದ ದೊಡ್ಡ ಎತ್ತುಗಳನ್ನು ಈಗ ಕೇವಲ 6-8 ಸಾವಿರಕ್ಕೆ ಕೇಳುತಿದ್ದಾರೆ. ಕಡಿಮೆ ದರಕ್ಕೆ ನೀಡಿದರೂ ಖರೀದಿಸುವವರಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಜಾನುವಾರುಗಳನ್ನು ಸಾಕಲು ಯಾರೂ ಮುಂದೆ ಬಾರದೇ ಹಾಲಿನ ಕೊರತೆಯೇ ಸೃಷ್ಟಿಯಾಗಬಹುದು ಎಂದೂ ಅವರು ಹೇಳಿದರು. ಮೊದಲೆಲ್ಲ ಮೈಸೂರು , ಚಾಮರಾಜನಗರ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದ ಜಾನುವಾರುಗಳನ್ನು ಕೇರಳದ ಕಸಾಯಿ ಖಾನೆಗೆ ಕೊಂಡೊಯ್ಯಲಾಗುತಿತ್ತು. ಆದರೆ ಈಗ ಖರೀದಿಸುವವರು ಖರೀದಿಗೂ ಹೆದರುತಿದ್ದಾರೆ. ಏಕೆಂದರೆ ಅವರು ಸ್ಥಳೀಯ ಪೋಲೀಸರಿಗೆ ಮಾಮೂಲಿ ನೀಡಿ ದಾರಿಯಲ್ಲಿ ಸಿಗುವ ಗೋರಕ್ಷಕರ ಕಣ್ಣು ತಪ್ಪಿಸಿ ಸಾಗಿಸುವುದು ಕಷ್ಟಕರವಾಗಿದೆ. ಇದೀಗ ಕೇರಳದಿಂದ ಖರೀದಿದಾರರೂ ಮೊದಲಿನಂತೆ ವಾರದಲ್ಲೊಂದು ದಿನ ನಡೆಯುವ ಜಾನುವಾರುಗಳ ಸಂತೆಗೆ ಬರುತ್ತಿಲ್ಲ. ಒಟ್ಟಿನಲ್ಲಿ ಈ ಕಾಯ್ದೆಯಿಂದಾಗಿ ಹೆಚ್ಚು ನಷ್ಟ ಅನುಭವಿಸುತ್ತಿರುವವರು ರೈತಾಪಿ ವರ್ಗ ಆಗಿದೆ. ಆದರೆ ಕಾನೂನು ಮಾಡಿದವರಿಗೆ ಇದು ಅರ್ಥವಾಗದಿರುವುದು ವಿಷಾದನೀಯ.





